ಮೈತ್ರಿ ಇಷ್ಟವಿಲ್ಲದವರು ಬಿಜೆಪಿಗೆ ಬನ್ನಿ: ಬಿಎಸ್ವೈ
ಜೆಡಿಎಸ್ನೊಂದಿಗಿನ ಮೈತ್ರಿಯಿಂದ ಕಾಂಗ್ರೆಸ್ನ ಶೇ.90ರಷ್ಟುಶಾಸಕರು ಮುನಿಸಿಕೊಂಡಿದ್ದಾರೆ. ಮೈತ್ರಿ ಬಗ್ಗೆ ಬೇಸರಗೊಂಡಿರುವ ಶಾಸಕರು ಹಾಗೂ ಮುಖಂಡರು ಬಿಜೆಪಿಗೆ ಬರಲು ಅವಕಾಶವಿದೆ ಎಂದು ಯಡಿಯೂರಪ್ಪ ಮುಕ್ತ ಆಹ್ವಾನ ನೀಡಿದರು.
ಬೆಂಗಳೂರು : ಜೆಡಿಎಸ್ನೊಂದಿಗಿನ ಮೈತ್ರಿಯಿಂದ ಕಾಂಗ್ರೆಸ್ನ ಶೇ.90ರಷ್ಟುಶಾಸಕರು ಮುನಿಸಿಕೊಂಡಿದ್ದಾರೆ. ಮೈತ್ರಿ ಬಗ್ಗೆ ಬೇಸರಗೊಂಡಿರುವ ಶಾಸಕರು ಹಾಗೂ ಮುಖಂಡರು ಬಿಜೆಪಿಗೆ ಬರಲು ಅವಕಾಶವಿದೆ ಎಂದು ಯಡಿಯೂರಪ್ಪ ಮುಕ್ತ ಆಹ್ವಾನ ನೀಡಿದರು.
ಮೈತ್ರಿ ಸರ್ಕಾರದ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎನ್ಡಿಎಯೇತನ ನಾಯಕರು ಒಗ್ಗಟ್ಟಾಗಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಜನತೆ ಮನ್ನಣೆ ನೀಡುವುದಿಲ್ಲ. ಜೆಡಿಎಸ್- ಕಾಂಗ್ರೆಸ್ನ ದೊಂಬರಾಟಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸುವುದು ನಿಶ್ಚಿತ. ಲೋಕಸಭೆ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸುತ್ತಿದ್ದು, ಪ್ರವಾಸ ಕೈಗೊಳ್ಳಲಾಗಿದೆ. ಮೈತ್ರಿಗೆ ಬೇಸತ್ತಿರುವವರು ಬಿಜೆಪಿಗೆ ಸೇರಬಹುದು ಎಂದು ಹೇಳಿದರು.
ಸಿದ್ದು ಬಗ್ಗೆ ಬಿಎಸ್ವೈ ಮೃದು ಧೋರಣೆ : ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಕುರುಬ ಸಮುದಾಯವನ್ನು ಬಳಸಿಕೊಳ್ಳದಿದ್ದರೆ ಕಾಂಗ್ರೆಸ್ 50 ಸ್ಥಾನ ಕೂಡ ಗೆಲ್ಲುತ್ತಿರಲಿಲ್ಲ ಎಂದು ಯಡಿಯೂರಪ್ಪ ಹೇಳುವ ಮೂಲಕ ಸಿದ್ದರಾಮಯ್ಯ ಅವರ ಬಗ್ಗೆ ಮೃದು ಧೋರಣೆ ತೋರಿದರು.
ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಅವರನ್ನು ಹಣಕ್ಕಾಗಿ ದೆಹಲಿಗೆ ಕರೆಸಿಕೊಳ್ಳುತ್ತಿದ್ದ ಹೈಕಮಾಂಡ್, ಚುನಾವಣೆ ಬಳಿಕ ಕುಮಾರಸ್ವಾಮಿ ಅವರನ್ನು ಕರೆಸಿಕೊಂಡು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರಿಗೆ ಅಪಮಾನ ಮಾಡಿದೆ. ಸಿದ್ದರಾಮಯ್ಯ ಅವರನ್ನು ಸಂಪೂರ್ಣ ಮರೆತು ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿದರು.