Asianet Suvarna News Asianet Suvarna News

ಬೆಳಗಾವಿ : ಗಡಿನಾಡಲ್ಲಿ ಕಾಂಗ್ರೆಸ್ - ಬಿಜೆಪಿಗೆ ಬಂಡಾಯದ ಛಡಿ

ಒಂದೆಡೆ ಮಲೆನಾಡು, ಇನ್ನೊಂದೆಡೆ ಬಯಲು ಸೀಮೆ ಹೊಂದಿರುವ ಗಡಿ ಜಿಲ್ಲೆ ಬೆಳಗಾವಿ ಸಕ್ಕರೆ ನಾಡು. ಬೆಳಗಾವಿ, ಚಿಕ್ಕೋಡಿ ಮತ್ತು ಕೆನರಾ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಇದು ಹೊಂದಿದ್ದು, ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ 18 ವಿಧಾನಸಭಾ ಕ್ಷೇತ್ರಗಳು ಜಿಲ್ಲೆಯಲ್ಲಿವೆ.

Belagavi 18 Constituency Election

ಬೆಳಗಾವಿ : ಒಂದೆಡೆ ಮಲೆನಾಡು, ಇನ್ನೊಂದೆಡೆ ಬಯಲು ಸೀಮೆ ಹೊಂದಿರುವ ಗಡಿ ಜಿಲ್ಲೆ ಬೆಳಗಾವಿ ಸಕ್ಕರೆ ನಾಡು. ಬೆಳಗಾವಿ, ಚಿಕ್ಕೋಡಿ ಮತ್ತು ಕೆನರಾ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಇದು ಹೊಂದಿದ್ದು, ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲೇ ಅತೀ ಹೆಚ್ಚು ಅಂದರೆ 18 ವಿಧಾನಸಭಾ ಕ್ಷೇತ್ರಗಳು ಜಿಲ್ಲೆಯಲ್ಲಿವೆ. ಕಳೆದ ಬಾರಿ 9 ಕ್ಷೇತ್ರಗಳಲ್ಲಿ ಬಿಜೆಪಿ, 6 ಕಡೆ ಕಾಂಗ್ರೆಸ್, 2 ಕ್ಷೇತ್ರಗಳಲ್ಲಿ ಎಂಇಎಸ್ ಹಾಗೂ ಒಂದು ಕ್ಷೇತ್ರದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಗೆಲವು ಸಾಧಿಸಿತ್ತು. ಈ ಬಾರಿ ಕಾಂಗ್ರೆಸ್- ಬಿಜೆಪಿ ನಡುವೆ ನೇರ ಹಣಾಹಣಿ ಇದೆ. 

ಶ್ರೀ ಶೈಲ ಮಠದ


ಬೆಳಗಾವಿ ಉತ್ತರ
ಹಾಲಿ ಶಾಸಕ ಕಾಂಗ್ರೆಸ್‌ನ ಫಿರೋಜ್ ಸೇಠ್ ಹಾಗೂ ಬಿಜೆಪಿ ಅಭ್ಯರ್ಥಿ ಅನಿಲ ಬೆನಕೆ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಫಿರೋಜ್ ಸೇಠ್ ಅವರು ಮುಸ್ಲಿಂ ಮತಗಳನ್ನು 
ಬುಟ್ಟಿಗೆ ಹಾಕುವಲ್ಲಿ ಸಿದ್ಧಹಸ್ತರು. ಜತೆಗೆ ಅವರಿಗೆ ಲಿಂಗಾಯತ ಸಮುದಾಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕ್ರೈಸ್ತರ ಮತ ಸೆಳೆಯುವ ಸಾಮರ್ಥ್ಯವೂ ಇದೆ. ಈ ಬಾರಿ
ಎಂಇಪಿ ಮತ್ತು ಜೆಡಿಎಸ್ ಪಕ್ಷದ ಆಶ್ಪಾಕ ಮಡಕೆ ಸ್ಪರ್ಧೆಯಿಂದ ಮುಸ್ಲಿಂ ಮತ ವಿಭಜನೆ ಸಾಧ್ಯತೆಯಿದೆ. ಮರಾಠ ಸಮುದಾಯಕ್ಕೆ ಸೇರಿದ ಬಿಜೆಪಿಯ ಅನಿಲ ಬೆನಕೆ ಅವರಿಗೆ
ಕ್ಷೇತ್ರದ ಮೇಲೆ ಬಿಗಿ ಹಿಡಿತವಿದೆ. ಎಲ್ಲ ಸಮುದಾಯದ ಮತ ಸೆಳೆಯುವ ಸಾಮರ್ಥ್ಯ ಅವರಿಗೂ ಇದೆ. ಮರಾಠಿ ಮತಗಳೇ ಬಿಜೆಪಿಗೆ ಪ್ಲಸ್ ಪಾಯಿಂಟ್. ಲಿಂಗಾಯತರು ಇಲ್ಲಿ
ನಿರ್ಣಾಯಕರು. ಎಂಇಎಸ್ ಬೆಂಬಲಿತ ಶಾಸಕ ಸಂಭಾಜಿ ಪಾಟೀಲ, ಬಾಳಾಸಾಹೇಬ ಕಾಕತಕರ ಕಣಕ್ಕಿಳಿದಿದ್ದು, ಮರಾಠ ಮತಗಳನ್ನು ಅವರು ಒಡೆದರೆ ಬಿಜೆಪಿ ಅಭ್ಯರ್ಥಿ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಆ ಮತಗಳು ಬಿಜೆಪಿಗೆ ಬಂದರೆ ಅನುಕೂಲವಾಗಲಿದೆ.

ಬೆಳಗಾವಿ ದಕ್ಷಿಣ
ಬಿಜೆಪಿಯ ಅಭಯ ಪಾಟೀಲ ಮತ್ತು ಎಂಇಎಸ್ ಬೆಂಬಲಿತ ಅಭ್ಯರ್ಥಿ ಕಿರಣ ಸಾಯಿನಾಯಿಕ್ ನಡುವೆ ಜಿದ್ದಾಜಿದ್ದಿನ ಕಾಳಗ ಸಾಧ್ಯತೆ ಇದೆ. ಕಾಂಗ್ರೆಸ್ ಅನ್ನೂ  
ಅಲ್ಲ ಗಳೆಯುವಂತಿಲ್ಲ. ಈ ಮಧ್ಯೆ ಪಕ್ಷೇತರರಾಗಿ ಮರಾಠಿ ಭಾಷಿಕ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಎಂಇಎಸ್‌ಗೆ ಮುಳುವಾದರೆ, ಅದರಿಂದ ತನಗೆ
ಲಾಭವಾಗಲಿದೆ ಎಂದು ಬಿಜೆಪಿ ವಿಶ್ವಾಸದಲ್ಲಿದೆ. ನೇಕಾರರ ಮತಗಳೇ ಇಲ್ಲಿ ನಿರ್ಣಾಯಕವಾಗಿವೆ. ನೇಕಾರ ಸಮುದಾಯಕ್ಕೆ ಸೇರಿದ ತುಮಕೂರು ಮೂಲದ 
ಎಂ.ಡಿ. ಲಕ್ಷ್ಮಿನಾರಾಯಣ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಲಕ್ಷ್ಮಿನಾರಾಯಣ ಅವರು ಹೊರಗಿನವರು ಎಂಬುದೇ ಎದುರಾಳಿಗಳ ಪ್ರಮುಖ ಅಸ್ತ್ರ. ಎಂಇಎಸ್
ಅಭ್ಯರ್ಥಿ ಬಂಡಾಯ ಬಿಸಿ ಎದುರಿಸುತ್ತಿರುವುದರಿಂದ ತಮಗೆ ವರವಾಗಲಿದೆ ಎಂದು ಲಕ್ಷ್ಮೀನಾರಾಯಣ ನಂಬಿದ್ದಾರೆ. ಎಲ್ಲ ಸಮುದಾಯಗಳ ಮತ ಸೆಳೆಯುವ ಸಾಮರ್ಥ್ಯ
ಹೊಂದಿರುವ ಬಿಜೆಪಿಯ ಅಭಯ ಪಾಟೀಲ ಪೈಪೋಟಿ ಒಡ್ಡುತ್ತಿದ್ದಾರೆ.

ಬೆಳಗಾವಿ ಗ್ರಾಮೀಣ
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ, ಹಾಲಿ ಬಿಜೆಪಿ ಶಾಸಕ ಸಂಜಯ ಪಾಟೀಲ ಮತ್ತು ಎಂಇಎಸ್ ಅಭ್ಯರ್ಥಿ
ಮನೋಹರ ಕಿಣೇಕರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬೆಳಗಾವಿ ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಸಂಜಯ ಪಾಟೀಲ ಅವರನ್ನು ಮಣಿಸಲು ಪ್ರಯತ್ನಿಸುತ್ತಿರುವ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಜೆಡಿಎಸ್ ಅಭ್ಯರ್ಥಿ ತೊಡಕಾಗುವ
ಸಾಧ್ಯತೆ ಇದೆ. ಲಕ್ಷ್ಮಿ ಹಾಗೂ ಶಿವನಗೌಡ ಇಬ್ಬರೂ ಲಿಂಗಾಯತರಾಗಿದ್ದು, ಆ ಮತಗಳು ವಿಭಜನೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಎಂಇಎಸ್‌ನಲ್ಲಿ
ಬಂಡಾಯವಿದ್ದು, ಮರಾಠಾ ಮತ ವಿಭಜನೆಯಾದಲ್ಲಿ ಕಾಂಗ್ರೆಸ್ಸಿಗೆ ಲಾಭ. ಬಿಜೆಪಿಗೆ ತನ್ನದೇ ಆದ ಮತದಾರರಿದ್ದು, ಇತರ ವರ್ಗಗಳ ಬೆಂಬಲ ಗಳಿಸಿ ಗೆಲ್ಲುವ ವಿಶ್ವಾಸದಲ್ಲಿ
ಸಂಜಯ ಪಾಟೀಲ್ ಅವರು ಇದ್ದಾರೆ.


ಖಾನಾಪುರ
ಕಾಂಗ್ರೆಸ್, ಬಿಜೆಪಿ, ಎಂಇಎಸ್‌ಗೆ ಬಂಡಾಯ ಕಾಡುತ್ತಿದೆ. ಜೆಡಿಎಸ್‌ನಿಂದ ನಾಶೀರ ಬಾಗವಾನ್ ಅಭ್ಯರ್ಥಿಯಾಗಿದ್ದರೂ ಪೈಪೋಟಿ ನೀಡುವಷ್ಟು ಶಕ್ತರಾಗಿಲ್ಲ. ಎಂಇಎಸ್
ಹಾಲಿ ಶಾಸಕ ಅರವಿಂದ ಪಾಟೀಲ ಪುನರಾಯ್ಕೆ ಬಯಸಿರುವ ಈ ಕ್ಷೇತ್ರದಲ್ಲಿ ಯಾರೇ ಗೆದ್ದರೂ ಅಂತರ ಕಡಿಮೆ ಎಂಬಂತಹ ವಾತಾವರಣವಿದೆ. ಕಳೆದ ಬಾರಿ ಅಂಜಲಿ
ನಿಂಬಾಳ್ಕರ್ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಈ ಬಾರಿ ಕಾಂಗ್ರೆಸ್ಸಿನ ಅಧಿಕೃತ ಹುರಿಯಾಳು. ಮಾಜಿ ಶಾಸಕ ಪ್ರಹ್ಲಾದ ರೇಮಾನಿ ಅವರ
ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ವಿಠ್ಠಲ ಹಲಗೇಕರ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಆದರೆ, ಪ್ರಹ್ಲಾದ ರೇಮಾನಿ ಅವರ ಪುತ್ರ ಜ್ಯೋತಿಬಾ ಅವರಿಗೆ ಬಿಜೆಪಿ
ಕೈಕೊಟ್ಟಿರುವುದರಿಂದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದು ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ. ಇಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಎಂಇಎಸ್
ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಚನ್ನಮ್ಮನ ಕಿತ್ತೂರು
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳು ಪ್ರಬಲವಾಗಿದ್ದು ರೋಚಕ ಹಣಾ ಹಣಿ ನಿರೀಕ್ಷೆ ಇದೆ. ಹಾಲಿ ಶಾಸಕ ಡಿ.ಬಿ. ಇನಾಮದಾರ ಅವರ ಅಳಿಯ ಬಾಬಾಸಾಹೇಬ
ಪಾಟೀಲ ಅವರು ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಟಿಕೆಟ್ ಮಾವನ ಪಾಲಾದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರಿ, ಬಿಫಾರ್ಮ್ ಪಡೆದಿದ್ದರು. ಆದರೆ ಬಿಜೆಪಿ ಟಿಕೆಟ್
ವಂಚಿತ ಸುರೇಶ ಮಾರಿಹಾಳ ಅವರಿಗೆ ಸಿ ಫಾರಂ ನೀಡಿ ಅವರನ್ನೇ ಜೆಡಿಎಸ್ ಅಭ್ಯರ್ಥಿ ಮಾಡಿತು. ಬಿಜೆಪಿಯಿಂದ ಮಹಾಂತೇಶ ದೊಡ್ಡಗೌಡರ ಅಭ್ಯರ್ಥಿ. ಅವರು ಪೈಪೋಟಿ
ನೀಡುವುದರಲ್ಲಿ ಅನುಮಾನವಿಲ್ಲ. ಬಿಎಸ್ಪಿ ಮೈತ್ರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಸಾಂಪ್ರದಾ ಯಿಕ ಮತಗಳನ್ನು ಜೆಡಿಎಸ್ ಸೆಳೆಯುವ ಸಾಧ್ಯತೆ ಇದೆ. ಹೀಗಾದಲ್ಲಿ ಬಿಜೆಪಿಗೆ
ಅನುಕೂಲ. ಆದರೆ ಮಾರಿಹಾಳ ಬಿಜೆಪಿ ಮತಗಳನ್ನೂ ಕಿತ್ತುಕೊಂಡರೆ ಆ ಪಕ್ಷಕ್ಕೆ ನಷ್ಟವಾಗಲಿದೆ. ಟಿಕೆಟ್ ಹಣಾಹಣಿಯಲ್ಲಿ ಅಳಿಯನ ಮಣಿಸಿದ ಇನಾಮದಾರ ಅವರು

ಗೋಕಾಕ
ಎರಡು ದಶಕಗಳಿಂದ ಗೋಕಾಕ ಕ್ಷೇತ್ರ ಕಾಂಗ್ರೆಸ್ ಪಕ್ಷದ ಹಿಡಿತದಲ್ಲಿದೆ. ಸತತ 5ನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ
ರಮೇಶ ಜಾರಕಿಹೊಳಿ ಮತ್ತೆ ಕಣಕ್ಕಿಳಿದಿದ್ದಾರೆ. ಅದನ್ನು ತಪ್ಪಿಸಲು ಬಿಜೆಪಿ ಶತಾಯಗತಾಯ ಹೋರಾಡುತ್ತಿದೆ. ಜೆಡಿಎಸ್‌ನಿಂದ ಎರಡು ಬಾರಿ ಸ್ಪರ್ಧಿಸಿ, ಪರಾಭವಗೊಂಡಿದ್ದ ಅಶೋಕ ಪೂಜಾರಿ ಈ ಬಾರಿ ಬಿಜೆಪಿ ಅಭ್ಯರ್ಥಿ. ಪೂಜಾರಿ ಅವರಿಂದಾಗಿ ಜೆಡಿಎಸ್‌ನ ಮತಗಳೂ ಬಿಜೆಪಿಗೆ ಹರಿದುಬರಬಹುದು ಎನ್ನಲಾಗುತ್ತಿದೆ. ಜೆಡಿಎಸ್‌ನಿಂದ ಕೆ.ಎಲ್. ತಳವಾರ ಅಖಾಡದಲ್ಲಿದ್ದರೂ, ಕಾಂಗ್ರೆಸ್- ಬಿಜೆಪಿ ನಡುವೆಯೇ ನೇರ ಹಣಾಹಣಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಲಿಂಗಾಯತ ಮತಗಳೇ ಇಲ್ಲಿ ನಿರ್ಣಾಯಕವಾಗಿವೆ. ಮುಸಲ್ಮಾನರು, ಎಸ್ಸಿ, ಎಸ್ಟಿಯಂತಹ ಸಾಂಪ್ರದಾಯಿಕ ಮತಗಳನ್ನು ಕಾಂಗ್ರೆಸ್ ನೆಚ್ಚಿಕೊಂಡಿದೆ. ಆ ಮತಗಳನ್ನು ವಿಭಜನೆ ಮಾಡಿ, ಜೆಡಿಎಸ್ ಮತಗಳನ್ನು ಪಡೆದರೆ ಬಿಜೆಪಿಗೆ ಅನುಕೂಲವಿದೆ.

ಅರಬಾವಿ
ಹಾಲಿ ಶಾಸಕ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಅವರು ಸತತ 5ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಕ್ಷೇತ್ರದ ಮೇಲೆ ಬಾಲಚಂದ್ರ ಜಾರಕಿಹೊಳಿ ಪ್ರಬಲ
ಹಿಡಿತ ಸಾಧಿಸಿದ್ದು, ಇಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸೇ ಪ್ರಮುಖವಾಗಿದೆ. ಮೂಡಲಗಿ ತಾಲೂಕಿಗಾಗಿ ಪ್ರಬಲ ಹೋರಾಟ ಮಾಡಿದವರಲ್ಲಿ ಶಾಸಕರು ಕೂಡ ಒಬ್ಬರು. ಹೀಗಾಗಿ ಅವರಿಗೆ ಇದು ಈ ಬಾರಿ ಪ್ಲಸ್ ಆಗುವ ಸಾಧ್ಯತೆ ಇದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಅರವಿಂದ ದಳವಾಯಿ ಕಣಕ್ಕಿಳಿದಿದ್ದಾರೆ. ಎಂಇಪಿ ಸ್ಪರ್ಧೆಯಿಂದ ಕಾಂಗ್ರೆಸ್‌ನ ಮತ ವಿಭಜನೆಯಾಗುವ ಸಂಭವವಿದೆ. ಹಾಗಾದಲ್ಲಿ ಬಿಜೆಪಿಗೆ ವರದಾನ. ಮಾಹಿತಿ ಹಕ್ಕು ಕಾರ‌್ಯಕರ್ತ ಭೀಮಪ್ಪ ಗಡಾದ ಪಕ್ಷೇತರರಾಗಿ ಕಣಕ್ಕಿಳಿದಿದ್ದರೆ, ಜೆಡಿಎಸ್ ಅಭ್ಯರ್ಥಿಯಾಗಿ ಪ್ರಕಾಶ ಸೋನವಾಲ್ಕರ್ ಸ್ಪರ್ಧಿಸಿ, ಕಣದಿಂದ ಹಿಂದೆ ಸರಿದಿದ್ದಾರೆ. ಭೀಮಪ್ಪ ಗಡಾದಗೆ ಜೆಡಿಎಸ್ ಬೆಂಬಲಿಸಿದೆ. ಇಲ್ಲಿ ಹಾಲುಮತ ಸಮಾಜದವರೇ ನಿರ್ಣಾಯಕರು. ಮೇಲ್ನೋಟಕ್ಕೆ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ  ಕಂಡುಬರುತ್ತದೆ.

ಬೈಲಹೊಂಗಲ
2013 ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಜಯ ಸಾಧಿಸಿದ್ದ ಹಾಲಿ ಶಾಸಕ ವಿಶ್ವನಾಥ ಪಾಟೀಲ ಈಗ ಇಲ್ಲಿ ಬಿಜೆಪಿ ಅಭ್ಯರ್ಥಿ. ಬಿಜೆಪಿ ಟಿಕೆಟ್‌ನಿಂದ ವಂಚಿತವಾಗಿ
ರುವ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಪಕ್ಷೇತರರಾಗಿ ಕಣಕ್ಕಿಳಿಯುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ. ಕಾಂಗ್ರೆಸ್‌ನಿಂದ ಮಹಾಂತೇಶ ಕೌಜಲಗಿ 
ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ಆದರೆ, ಜಗದೀಶ ಮೆಟಗುಡ್ಡ ಅವರು ಬಿಜೆಪಿ ಬಂಡುಕೋರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದರಿಂದ ಬಿಜೆಪಿ
ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ. ಇದು ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್. ಜೆಡಿಎಸ್‌ನಿಂದ ಶಂಕರ ಮಾಡಲಗಿ ಕಣದಲ್ಲಿದ್ದಾರೆ. ಬಿಜೆಪಿ ಹಿಡಿತದಲ್ಲಿರುವ ಈ
ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳು ಪ್ರಯತ್ನಿಸುತ್ತಿದ್ದಾರೆ. ಲಿಂಗಾಯತರ ಮತಗಳೇ ಇಲ್ಲಿ ನಿರ್ಣಾಯಕ. ಬಿಜೆಪಿ, ಕಾಂಗ್ರೆಸ್ ಮತ್ತು ಬಿಜೆಪಿ ಬಂಡುಕೋರ ಅಭ್ಯರ್ಥಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಸವದತ್ತಿ ಯಲ್ಲಮ್ಮ
ಹಾಲಿ ಶಾಸಕ ಬಿಜೆಪಿಯ ವಿಶ್ವನಾಥ (ಆನಂದ) ಮಾಮನಿ ಅವರು ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಿಶ್ವಾಸ ವೈದ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಮಾಡಿ, ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರ ಸಮಾರಂಭದ ಹೊಣೆ ಹೊತ್ತಿದ್ದ ಆನಂದ ಛೋಪ್ರಾ ಅವರಿಗೆ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಕೈಕೊಟ್ಟಿದೆ. ಇದರಿಂದ ಅಸಮಾಧಾನಗೊಂಡಿರುವ ಆನಂದ ಛೋಪ್ರಾ ಅವರು ಕಾಂಗ್ರೆಸ್ ವಿರುದ್ಧ ತೊಡೆತಟ್ಟಿದ್ದು, ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತಗಳು ವಿಭಜನೆಯಾಗಬಹುದು. ಇದು ಬಿಜೆಪಿಗೆ ಲಾಭವಾಗುವುದರಲ್ಲಿ ಅನುಮಾನವಿಲ್ಲ. ದೊಡ್ಡನಗೌಡ ಫಕೀರಗೌಡ ಪಾಟೀಲ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಆದರೆ, ಇಲ್ಲಿ ಜೆಡಿಎಸ್ ಅಷ್ಟೊಂದು ಪ್ರಬಲವಾಗಿಲ್ಲ. ಇಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕವಾಗಿವೆ. ಮೇಲ್ನೋಟಕ್ಕೆ ಇಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಕದನ ನಡೆಯಲಿದೆ.

ರಾಮದುರ್ಗ
ಹಾಲಿ ಶಾಸಕ ಕಾಂಗ್ರೆಸ್‌ನ ಅಶೋಕ ಪಟ್ಟಣ, ಬಿಜೆಪಿಯ ಮಹಾದೇವಪ್ಪ ಯಾದವಾಡ ಮತ್ತು ಜೆಡಿಎಸ್‌ನ ಎಂ. ಜಾವೀದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಬಾರಿ
ಕೆಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ರಮೇಶ ಪಂಚಗಟ್ಟಿಮಠ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಟಿಕೆಟ್ ದೊರೆಯದೇ ಇರುವುದರಿಂದ ಅವರು
ಬಿಜೆಪಿ ಬಂಡುಕೋರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಲಿಂಗಾಯತ ಮತಗಳೇ ಇಲ್ಲಿ ನಿರ್ಣಾಯಕ. ಶಾಸಕ ಅಶೋಕ ಪಟ್ಟಣ ಅವರಿಗೆ ಬಿಜೆಪಿಯ ಬಂಡಾಯ ಲಾಭ
ತರುವುದರಲ್ಲಿ ಅನುಮಾನವಿಲ್ಲ. ಎರಡು ಬಾರಿ ಇವರನ್ನು ಕೈ ಹಿಡಿದಿರುವ ಮತದಾರ ಈ ಬಾರಿಯೂ ಕೈ ಹಿಡಿಯುತ್ತಾನೆಯೇ ಎಂಬುದೇ ಕುತೂಹಲ. ಬಿಜೆಪಿ ವಿರುದ್ಧ
ಬಂಡಾಯ ಎದ್ದಿರುವುದರಿಂದ ಮತ ವಿಭಜನೆಯಾಗುತ್ತವೆ. ಕಾಂಗ್ರೆಸ್‌ನ ಸಂಪ್ರದಾಯಿಕ ಮುಸ್ಲಿಂ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಜೆಡಿಎಸ್ ಪ್ರಯತ್ನಿಸುತ್ತಿದೆ.

ಚಿಕ್ಕೋಡಿ - ಸದಲಗ
ಕುಟುಂಬ ರಾಜಕಾರಣಕ್ಕೆ ಹೆಸರಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ನೇರಾನೇರ ಸ್ಪರ್ಧೆ ನಡೆಯಲಿದೆ. ಹಾಲಿ ಶಾಸಕ ಕಾಂಗ್ರೆಸ್‌ನ ಗಣೇಶ ಹುಕ್ಕೇರಿ ಮತ್ತೆ
ಸ್ಪರ್ಧಿಸಿದ್ದಾರೆ. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾಸಾಹೇಬ ಜೊಲ್ಲೆ ಇಲ್ಲಿ ಬಿಜೆಪಿ ಅಭ್ಯರ್ಥಿ. ಜೆಡಿಎಸ್ ಈ ಕ್ಷೇತ್ರವನ್ನು ಬಿಎಸ್ಪಿಗೆ ಬಿಟ್ಟುಕೊಟ್ಟಿದ್ದು,
ಸದಾಶಿವಪ್ಪ ಮಾರುತಿ ವಾಳಕೆ ಅಭ್ಯರ್ಥಿ ಆಗಿದ್ದಾರೆ. ಇಲ್ಲಿ ಏನಿದ್ದರೂ ವೈಯಕ್ತಿಕ ಪ್ರತಿಷ್ಠೆ ಹಾಗೂ ವರ್ಚಸ್ಸೇ ಪ್ರಮುಖ ಅಸ್ತ್ರಗಳು. ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಈ ಹಿಂದೆ ಸಂಸದ ಪ್ರಕಾಶ ಹುಕ್ಕೇರಿ ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ಈಗ ಅವರ ಪುತ್ರ ಗಣೇಶ ಹುಕ್ಕೇರಿ ಶಾಸಕರಾಗಿದ್ದಾರೆ. ಪ್ರಕಾಶ ಅವರು ಈಗಲೂ ಬಿಗಿ ಹಿಡಿತ ಹೊಂದಿದ್ದಾರೆ. ಈ ಬಾರಿ ಕಾಂಗ್ರೆಸ್‌ಗೆ ಬಿಜೆಪಿ ಪ್ರಬಲ ಪೈಪೋಟಿ ನೀಡುವುದರಲ್ಲಿ ಅನುಮಾನವಿಲ್ಲ. ಬಿಎಸ್ಪಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಸೆಳೆಯಬಹುದು. ಇದು ಬಿಜೆಪಿಗೆ ಅನುಕೂಲವಾಗಬಹುದು. 

ನಿಪ್ಪಾಣಿ
ಕಳೆದ ಬಾರಿ ಜಿಲ್ಲೆಯಿಂದ ಮಹಿಳೆಯೊಬ್ಬರು ಆಯ್ಕೆಯಾದ ಏಕೈಕ ಕ್ಷೇತ್ರವಿದು. ಹಾಲಿ ಶಾಸಕಿ ಬಿಜೆಪಿಯ ಶಶಿಕಲಾ ಜೊಲ್ಲೆ, ಕಾಂಗ್ರೆಸ್‌ನ ಕಾಕಾಸಾಹೇಬ ಪಾಟೀಲ ನಡುವೆ
ಜಿದ್ದಾಜಿದ್ದಿನ ಕಾಳಗ ಏರ್ಪಟ್ಟಿದೆ. ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ ಎದುರಾದರೆ, ಕಾಂಗ್ರೆಸ್‌ಗೆ ಕ್ಷೇತ್ರ ಮರಳಿ ಪಡೆಯುವ ಪ್ರತಿಷ್ಠೆ. ಚುನಾವಣಾ ಕಣ ಈ ಬಾರಿ ತುರುಸು ಕಾಣುವ 
ಸಾಧ್ಯತೆ ಇದೆ. ಎಂಇಎಸ್ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಬಿಎಸ್ಪಿಯಿಂದ ರಮೇಶ ಕಾಮತ ಕಣದಲ್ಲಿದ್ದಾರೆ. ಮರಾಠಿಗರ ಮತಗಳೇ ಇಲ್ಲಿ ನಿರ್ಣಾಯಕ. ಆದರೂ ಇಲ್ಲಿನ
ಮತದಾರ ಮಾತ್ರ ರಾಷ್ಟ್ರೀಯ ಪಕ್ಷಗಳತ್ತ ಒಲವು ತೋರುತ್ತಿದ್ದಾರೆ. ಬಿಜೆಪಿ ವಶದಲ್ಲಿರುವ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಮರಾಠ ಸಮುದಾಯದವರು. ಗೆಲ್ಲಲೇ ಬೇಕೆಂಬ ಹಟಕ್ಕೆ ಬಿದ್ದಿದ್ದಾರೆ. ಬಿಜೆಪಿ-ಕೆಜೆಪಿ ಒಂದಾಗಿರುವುದರಿಂದ ಇದರ ಲಾಭ ತನಗೆ
ದೊರೆಯುತ್ತದೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ ಶಶಿಕಲಾ ಜೊಲ್ಲೆ.

ಯಮನಕರಡಿ
ಜಾರಕಿಹೊಳಿ ಸಹೋದರರ ಸವಾಲು- ಪ್ರತಿ ಸವಾಲಿನಿಂದ ರಾಜ್ಯದ ಗಮನ ಸೆಳೆದ ಯಮಕನಮರಡಿ ಕ್ಷೇತ್ರ ಬೆಳಗಾವಿ ಜಿಲ್ಲೆಯ ಏಕೈಕ ಪರಿಶಿಷ್ಟ ಪಂಗಡ (ಎಸ್‌ಟಿ)
ಮೀಸಲು ಕ್ಷೇತ್ರ. ಹಾಲಿ ಶಾಸಕ, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಕಾಂಗ್ರೆಸ್‌ನಿಂದ ಮೂರನೇ ಸಲ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇವರಿಗೆ ಬಿಜೆಪಿಯ
ಮಾರುತಿ ಅಷ್ಟಗಿ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಈ ಕ್ಷೇತ್ರದಲ್ಲಿ ಸೋದರನ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದ ಲಖನ್ ಜಾರಕಿಹೊಳಿ ಕೊನೆ ಗಳಿಗೆಯಲ್ಲಿ ಹಿಂದೆ
ಸರಿದರು. ಹೀಗಾಗಿ ಸತೀಶ ಅವರಿಗೆ ಹಾದಿ ಸುಗಮವಾಯಿತು. ಸತೀಶ ಜಾರಕಿಹೊಳಿ ಅವರು ಕ್ಷೇತ್ರದಲ್ಲಿ ಪ್ರಚಾರ ಮಾಡದೇ ಗೆಲ್ಲುವುದಾಗಿ ಹೇಳಿದ್ದಾರೆ. ಆದರೆ, ಬಿಜೆಪಿಯ
ಮಾರುತಿ ಅಷ್ಟಗಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿದ್ದಾರೆ. ಇಲ್ಲಿ ಪರಿಶಿಷ್ಟ ಜನಾಂಗದ ಮತಗಳೇ ನಿರ್ಣಾಯಕ. ಕಾಂಗ್ರೆಸ್-
ಬಿಜೆಪಿ ನಡುವೆ ಜಿದ್ದಾಜಿದ್ದಿನ ಕಾಳಗ ನಡೆಯಲಿದೆ. 


ಹುಕ್ಕೇರಿ
ಕಾಂಗ್ರೆಸ್‌ನಿಂದ ಮಾಜಿ ಸಚಿವ ಎ.ಬಿ. ಪಾಟೀಲ ಮತ್ತು ಬಿಜೆಪಿಯಿಂದ ಉಮೇಶ ಕತ್ತಿ ಅವರು ಅಖಾಡಕ್ಕೆ ಇಳಿದಿರುವುದರಿಂದ ಮದಗಜಗಳ ಕಾದಾಟದ ಜಿದ್ದಾಜಿದ್ದಿನ
ಕಣವಾಗಿ ಕ್ಷೇತ್ರ ಮಾರ್ಪಟ್ಟಿದೆ. ಇಬ್ಬರೂ ನಾಯಕರು ಮೂಲತಃ ಜನತಾ ಪರಿವಾರದವರು. ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್ ಎ.ಬಿ. ಪಾಟೀಲ ಅವರನ್ನು ಕಣಕ್ಕಿಳಿಸಿದೆ. ಉಮೇಶ ಕತ್ತಿ ೮ ಬಾರಿ ಸ್ಪರ್ಧಿಸಿ, 7 ಬಾರಿ ಶಾಸಕರಾಗಿದ್ದಾರೆ. ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳೇ
ಇಲ್ಲಿಯವರೆಗೇ ಮತದಾರರು ಅವರನ್ನು ಕೈ ಹಿಡಿಯಲು ಕಾರಣವಾಗಿದೆ. ಜತೆಗೆ ಇಲ್ಲಿ ಸಕ್ಕರೆ ಕಾರ್ಖಾನೆ ಲಾಬಿಯೂ ಕೂಡ ಕೆಲಸ ಮಾಡಿದೆ. ಈ ಬಾರಿ ಮತ್ತೊಮ್ಮೆ ಅದೃಷ್ಟ
ಪರೀಕ್ಷೆಗೆ ಇಳಿದಿದ್ದಾರೆ. 10 ವರ್ಷಗಳ ಬಳಿಕ ಎ.ಬಿ. ಪಾಟೀಲ ಮತ್ತೆ ಚುನಾವಣಾ ರಾಜಕೀಯಕ್ಕಿಳಿದಿದ್ದಾರೆ. ಜೆಡಿಎಸ್‌ನಿಂದ ಬಸವರಾಜ ಪಾಟೀಲ ಸ್ಪರ್ಧಿಸಿದ್ದಾರೆ. ಇಲ್ಲಿ
ಕಾಂಗ್ರೆಸ್- ಬಿಜೆಪಿ ನಡುವೆ ಜಿದ್ದಾಜಿದ್ದಿನ ಕಾಳಗ ನಡೆಯಲಿದೆ. 

ಅಥಣಿ
ಅಥಣಿ ಕ್ಷೇತ್ರ ಕಳೆದ 15 ವರ್ಷಗಳಿಂದ ಬಿಜೆಪಿಯ ಹಿಡಿತದಲ್ಲಿದೆ. ಇಲ್ಲಿಯವರೆಗೆ ಅದನ್ನು ಕಿತ್ತುಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಹಾಲಿ ಶಾಸಕ ಬಿಜೆಪಿಯ ಲಕ್ಷ್ಮಣ 
ಸವದಿ ಅವರು ಈಗ ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಹೇಶ ಕುಮಟಳ್ಳಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಗಿರೀಶ ಬೂಟಾಳೆ ಜೆಡಿಎಸ್ ಅಭ್ಯರ್ಥಿ.
ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್, ಜೆಡಿಎಸ್ ಇತರೇ ಅಭ್ಯರ್ಥಿಗಳು ಪ್ರಯತ್ನಿಸುತ್ತಿದ್ದಾರೆ. ಕ್ಷೇತ್ರದಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಮತ್ತು ಜೆಡಿಎಸ್ ಸ್ಪರ್ಧೆಯಿಂದ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ವಿಭಜನೆಯಾಗಿ ಲಾಭ ಆಗಬಹುದು ಎಂದು ಲಕ್ಷ್ಮಣ ಸವದಿ ವಿಶ್ವಾಸದಲ್ಲಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ನಾಯಕರಲ್ಲಿನ ಆಂತರಿಕ ಕಲಹ ಪಕ್ಷದ ಗೆಲವಿಗೆ ಮುಳುವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಲಿಂಗಾಯತ ಮತಗಳೇ ಇಲ್ಲಿ ನಿರ್ಣಾಯಕ. ಕಾಂಗ್ರೆಸ್- ಬಿಜೆಪಿ ನಡುವೆಯೇ ತೀವ್ರ ಹಣಾಹಣಿ ನಡೆದಿದೆ.

ಕಾಗವಾಡ
ಹಾಲಿ ಶಾಸಕ ಬಿಜೆಪಿಯ ಭರಮಗೌಡ (ರಾಜು) ಕಾಗೆ, ಕಾಂಗ್ರೆಸ್‌ನ ಶ್ರೀಮಂತ ಪಾಟೀಲ ಮತ್ತು ಮಾಜಿ ಶಾಸಕ, ಜೆಡಿಎಸ್‌ನ ಕಲ್ಲಪ್ಪ ಮಗೆಣ್ಣವರ ಅವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ಸಾಧಿಸಿದೆ. ಅದನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್, ಜೆಡಿಎಸ್ ವಿವಿಧ ಕಸರತ್ತು ನಡೆಸುತ್ತಿವೆ. ಕಳೆದ ಬಾರಿ 
ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಶ್ರೀಮಂತ ಪಾಟೀಲ ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಆದರೆ, ಶ್ರೀಮಂತ ಪಾಟೀಲ ವಿರುದ್ಧ ಅವರ ಸಹೋದರ
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಸಡ್ಡುಹೊಡೆದಿದ್ದಾರೆ. ಪಾಟೀಲ ಸಹೋದರರ ಸ್ಪರ್ಧೆಯಿಂದ ಕಾಂಗ್ರೆಸ್ ಪಕ್ಷದ ಮತ ಹರಿದುಹಂಚಿ ಹೋಗಬಹುದು.
ಇದರ ಲಾಭ ಬಿಜೆಪಿಗೆ ಆಗಬಹುದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇಲ್ಲಿಯೂ ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವೆ
ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆ. 

ರಾಯಬಾಗ
ದಲಿತರ ಪ್ರಾಬಲ್ಯದ ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಕಾಳಗ ನಡೆಯುವ ಸಾಧ್ಯತೆ ಇದೆ. ಈ ಕ್ಷೇತ್ರ ಬಿಜೆಪಿ ಹಿಡಿತದಲ್ಲಿದ್ದು, ಹಾಲಿ ಶಾಸಕ ಬಿಜೆಪಿಯ ದುರ್ಯೋಧನ ಐಹೊಳೆ ಅವರು ಮೂರನೇ ಬಾರಿಗೆ ಅದೃಷ್ಟ  ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಪ್ರದೀಪಕುಮಾರ ಮಾಳಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಹಾವೀರ ಮೋಹಿತೆ
ಅವರಿಗೆ ಟಿಕೆಟ್ ದೊರೆಯದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್ ಗೆ ಬಂಡಾಯದ ಬಾವುಟ ಹಾರಿಸಿದ್ದಾರೆ. ಇದು ಬಿಜೆಪಿಗೆ ವರದಾನವಾಗಬಹುದು.
ಕ್ಷೇತ್ರದಲ್ಲಿ ಈ ಬಾರಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯ ಆಗದಿರುವುದು ಬಿಜೆಪಿಗೆ ಮೈನಸ್ ಪಾಯಿಂಟ್. ರಾಜೀವ ಕಾಂಬಳೆ ಬಿಎಸ್ಪಿ ಅಭ್ಯರ್ಥಿ. ದಲಿತರ ಮತಗಳೇ ಇಲ್ಲಿ
ನಿರ್ಣಾಯಕ. ಇಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಕಂಡುಬರುತ್ತಿದೆ.

ಕುಡಚಿ
ಈ ಕ್ಷೇತ್ರ ಕೂಡ ದಲಿತರ ಪ್ರಾಬಲ್ಯದ ಎಸ್‌ಸಿ ಮೀಸಲು ಕ್ಷೇತ್ರ. ಕಳೆದ ಬಾರಿ ಬಿಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಹಾಲಿ ಶಾಸಕ ಪಿ. ರಾಜೀವ ಈ ಬಾರಿ
ಬಿಜೆಪಿ ಅಭ್ಯರ್ಥಿ. ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡ ಮಾಜಿ ಶಾಸಕ ಶ್ಯಾಮ ಘಾಟಗೆ ಅವರ ಪುತ್ರ ಅಮಿತ ಘಾಟಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ
ಕಣಕ್ಕಿಳಿದ್ದಾರೆ. ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಶಾಸಕ ಪಿ.ರಾಜೀವ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಹೇಳಿ  ಕ್ಷೇತ್ರದಲ್ಲಿ ಸರ್ಕಾರದಿಂದ ಅಭಿವೃದ್ಧಿ ಕಾರ್ಯ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಅಭಿವೃದ್ಧಿ ಕಾರ್ಯ ಬಿಜೆಪಿಗೆ ವರವಾಗಲೂ ಬಹುದು. ಆದರೆ, ಚುನಾವಣೆ ಹತ್ತಿರ
ಬರುತ್ತಿದ್ದಂತೆಯೇ ಬಿಜೆಪಿಗೆ ಹಾರಿ, ಆ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ರಾಜೇಂದ್ರ ಐಹೊಳೆ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿ- ಕಾಂಗ್ರೆಸ್ ನಡುವೆ
ಜಿದ್ದಾಜಿದ್ದಿ ಕಾಳಗ ಏರ್ಪಟ್ಟಿದೆ. 

Follow Us:
Download App:
  • android
  • ios