Asianet Suvarna News Asianet Suvarna News

ಇದು ಬೃಹತ್ ಬೆಂಗಳೂರು ಮತ ಕದನ

ಕರುನಾಡಿನ ಚುಕ್ಕಾಣಿ ಹಿಡಿಯಲು ರಾಜಧಾನಿ ಬೆಂಗಳೂರು ನಗರ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಗ್ರಾಮಾಂತರ ಜಿಲ್ಲೆ ಅತ್ಯಂತ ಪ್ರಮುಖವಾದವು. ಏಕೆಂದರೆ ಬೆಂಗಳೂರು ನಗರವೊಂದರಲ್ಲೇ 28 ವಿಧಾನಸಭಾ ಕ್ಷೇತ್ರಗಳು ಇವೆ. ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಇಷ್ಟೊಂದು ಕ್ಷೇತ್ರಗಳು ಇಲ್ಲ. ಗ್ರಾಮಾಂತರ ಜಿಲ್ಲೆಯಲ್ಲಿ 4 ಕ್ಷೇತ್ರಗಳು ಇವೆ. ಇವೆರಡರನ್ನೂ ಒಗ್ಗೂಡಿಸಿದರೆ 32 ಕ್ಷೇತ್ರಗಳಾಗುತ್ತವೆ. 

Bangalore Constituency Fight

ಬೆಂಗಳೂರು : ಕರುನಾಡಿನ ಚುಕ್ಕಾಣಿ ಹಿಡಿಯಲು ರಾಜಧಾನಿ ಬೆಂಗಳೂರು ನಗರ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಗ್ರಾಮಾಂತರ ಜಿಲ್ಲೆ ಅತ್ಯಂತ ಪ್ರಮುಖವಾದವು. ಏಕೆಂದರೆ ಬೆಂಗಳೂರು ನಗರವೊಂದರಲ್ಲೇ 28 ವಿಧಾನಸಭಾ ಕ್ಷೇತ್ರಗಳು ಇವೆ. ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಇಷ್ಟೊಂದು ಕ್ಷೇತ್ರಗಳು ಇಲ್ಲ. ಗ್ರಾಮಾಂತರ ಜಿಲ್ಲೆಯಲ್ಲಿ 4 ಕ್ಷೇತ್ರಗಳು ಇವೆ. ಇವೆರಡರನ್ನೂ ಒಗ್ಗೂಡಿಸಿದರೆ 32 ಕ್ಷೇತ್ರಗಳಾಗುತ್ತವೆ. 

ಜಯನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ 31 ಕ್ಷೇತ್ರಗಳ ಸದ್ಯದ ಸ್ಥಿತಿಯನ್ನು ಇಲ್ಲಿ ನೀಡಲಾಗಿದೆ. ಬೆಂಗಳೂರು, ಗ್ರಾಮಾಂತರ ಜಿಲ್ಲೆಯಲ್ಲಿ ಅಧಿಕ ಸ್ಥಾನಗಳನ್ನು ಗೆದ್ದರೆ ಬಹುಮತ ಪಡೆಯುವ ಯಾವುದೇ ಪಕ್ಷದ ಹಾದಿ ಸುಲಭವಾಗುತ್ತದೆ. ಹೀಗಾಗಿ ಇಲ್ಲಿ ಬೃಹತ್ ಕದನವೇ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ ನಡುವೆ ನೇರ ಹಣಾಹಣಿ ಇದ್ದರೆ, ಕೆಲವೊಂದು ಕ್ಷೇತ್ರಗಳಲ್ಲಿ ಜೆಡಿಎಸ್ ಕೂಡ ಫೈಟ್ ನೀಡುತ್ತಿದೆ.


ಶಿವಾಜಿನಗರದಲ್ಲಿ ಹಲವು ದಶಕಗಳ ಸ್ನೇಹಿತರ ನಡುವೆ ಕಾಳಗ ಏರ್ಪಟ್ಟಿದೆ. ಹಾಲಿ ಶಾಸಕ ರೋಷನ್ ಬೇಗ್ ಮತ್ತೆ ಕಣಕ್ಕೆ ಇಳಿದಿದ್ದು, ಅವರಿಗೆ ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಮುಸ್ಲಿಂ ಮತ್ತು ತಮಿಳರು ಹೆಚ್ಚಿದ್ದಾರೆ. ಮುಸ್ಲಿಂ ಸಮುದಾಯದ ಆರು ಮಂದಿ ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ. ಈ ಹಿಂದೆ ಎರಡು ಬಾರಿ ಶಿವಾಜಿನಗರ ನಗರದಿಂದ ಆರಿಸಿ ಬಂದಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಹೆಬ್ಬಾಳ ಕ್ಷೇತ್ರಕ್ಕೆ ಹೋಗಿದ್ದರು. ಆದರೆ ಪುನಃ ಕ್ಷೇತ್ರಕ್ಕೆ ಮರಳಿದ್ದು, ರೋಷನ್ ಅವರಿಗೆ ನೇರ ಸ್ಪರ್ಧಿಯಾಗಿದ್ದಾರೆ. ಕ್ಷೇತ್ರದ ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಕಟ್ಟಾ ಅವರಿಗೆ ಅನುಕೂಲವಾಗಲಿದೆ. ಶೇಕ್ ಮಸ್ತಾನ್ ಅಲಿ ಜೆಡಿಎಸ್ ಅಭ್ಯರ್ಥಿ. ಮುಸ್ಲಿಂ ಮತಗಳನ್ನೇ ನೆಚ್ಚಿಕೊಂಡಿರುವ ಮುಸ್ಲಿಂ ಮತಗಳು ವಿಭಜನೆಯಾಗಲಿವೆ ಎಂಬ ಆತಂಕದಲ್ಲಿ ಬೇಗ್ ಇದ್ದಾರೆ.


ಬಿಟಿಎಂ ಲೇ ಔಟ್ : ಆರು ಬಾರಿ ಗೆಲುವು ಸಾಧಿಸಿ, ಒಮ್ಮೆ ಮಾತ್ರ ಸೋತಿರುವ ಹಿರಿಯ ರಾಜಕಾರಣಿ, ಗೃಹಮಂತ್ರಿ ರಾಮಲಿಂಗಾರೆಡ್ಡಿ ಅವರ ಕ್ಷೇತ್ರವಿದು. ಗಣಿಧಣಿ ಜನಾರ್ದನ ರೆಡ್ಡಿ ಸಂಬಂಧಿ ಲಲ್ಲೇಶ್ ರೆಡ್ಡಿ ಬಿಜೆಪಿ ಅಭ್ಯರ್ಥಿ. ಬಿಟಿಎಂ ಲೇಔಟ್ ವಾರ್ಡ್ ಬಿಬಿಎಂಪಿ
ಸದಸ್ಯ ಕೆ. ದೇವದಾಸ್ ಜೆಡಿಎಸ್ ಹುರಿಯಾಳು. ಈ ಬಾರಿ ರಾಮಲಿಂಗಾರೆಡ್ಡಿ ಅವರಿಗೆ ಪ್ರಬಲ ಪೈಪೋಟಿ ನೀಡುವಂತಹ ಅಭ್ಯರ್ಥಿ ಕಣದಲ್ಲಿ ಇಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಆದರೆ, ಮೋದಿ ಅಲೆಯಲ್ಲಿ ಬಿಜೆಪಿ ಮತ್ತು ತಮ್ಮ ಕಾರ್ಯವೈಖರಿಯಿಂದ ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್ ಮತಗಳನ್ನು ಸೆಳೆಯುವ ತಂತ್ರಗಾರಿಕೆ ರೂಪಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದು, ಕಾಂಗ್ರೆಸ್ ಗೆಲುವಿನ ಓಟಕ್ಕೆ ಅಡ್ಡಿಯಾಗುವ ಸಾಧ್ಯತೆ ಇದ್ದರೂ, ನುರಿತ ರಾಜಕಾರಣಿ ರಾಮಲಿಂಗಾರೆಡ್ಡಿ ಯಾವ ರಾಜಕೀಯ ಪಟ್ಟು ಹಾಕುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಪದ್ಮನಾಭನಗರ : ಒಂದು ಕಾಲದ ಗುರು- ಶಿಷ್ಯರಾಗಿದ್ದ ಎಂ. ಶ್ರೀನಿವಾಸ್ ಹಾಗೂ ಆರ್. ಅಶೋಕ ನಡುವೆ ತೀವ್ರ ಪೈಪೋಟಿ ಇದೆ. ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಶ್ರೀನಿವಾಸ್ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್‌ಗೆ ಜಿಗಿದು ಶಿಷ್ಯನ ವಿರುದ್ಧ ಸ್ಪರ್ಧೆಗೆ ನಿಂತಿದ್ದಾರೆ. ಮತ್ತೊಂದೆಡೆ ಗುತ್ತಿಗೆದಾರ ಜೆಡಿಎಸ್ ಅಭ್ಯರ್ಥಿ ವಿ.ಕೆ.ಗೋಪಾಲ್ ಅವರು ಕ್ಷೇತ್ರದಲ್ಲಿ ನೆಲೆಸಿರುವ ಎಚ್.ಡಿ.ದೇವೇಗೌಡ ಅವರ  ವರ್ಚಸ್ಸನ್ನು ಮುಂದಿಟ್ಟು ಮತಯಾಚನೆಗೆ ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗರು, ಬ್ರಾಹ್ಮಣರು, ನಾಯ್ಡು ಸಮುದಾಯದವರು ಹೆಚ್ಚಿದ್ದಾರೆ. ಜೆಡಿಎಸ್‌ನಿಂದ ನಾಯ್ಡು ಹಾಗೂ ಕಾಂಗ್ರೆಸ್ ನಿಂದ ಒಕ್ಕಲಿಗ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಮತ  ಹಂಚಿಕೆಯ ತಂತ್ರಗಾರಿಕೆ ಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹೆಣೆದಿವೆ. ಒಕ್ಕಲಿಗ ಮತಗಳು ಹಂಚಿಕೆಯಾಗುವ ಮೂಲಕ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆ.


ಚಾಮರಾಜಪೇಟೆ
ಮುಸ್ಲಿಮರ ಪ್ರಾಬಲ್ಯವಿರುವ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿಯಿದೆ. ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಶಾಸಕ ಜಮೀರ್ ಅಹಮದ್ ಖಾನ್ ಜೆಡಿಎಸ್ ವಿರುದ್ಧ ಬಂಡೆದ್ದು ಕಾಂಗ್ರೆಸ್ಸಿಂದ ಸ್ಪರ್ಧೆಗಿಳಿದಿದ್ದಾರೆ. ಕಾಂಗ್ರೆಸ್ ನಲ್ಲಿದ್ದ ಮುಸ್ಲಿಂ ನಾಯಕ ಅಲ್ತಾಫ್ ಖಾನ್‌ರನ್ನು ಜೆಡಿಎಸ್ ಸ್ಪರ್ಧೆಗಿಳಿಸಿದೆ. ಇದು ಪಕ್ಕಾ ಜಮೀರ್ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಪ್ರತಿಷ್ಠೆಯ ಕಣ. ಇಬ್ಬರೂ ಪ್ರಭಾವಿ ಮುಸ್ಲಿಂ ಅಭ್ಯರ್ಥಿಗಳೇ ಆಗಿರುವುದರಿಂದ ಮತ ವಿಭಜನೆಯಾಗಬಹುದು. 2ನೇ ಅತಿ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಮತದಾರರನ್ನು ಯಾರು ಹೆಚ್ಚಾಗಿ ಸೆಳೆಯುವರೋ ಅವರ ಗೆಲುವು ನಿರಾಯಾಸ. ಮಾಜಿ ಉಪಮೇಯರ್ ಲಕ್ಷ್ಮೀನಾರಾಯಣ ಅವರನ್ನು ಬಿಜೆಪಿ ಅಖಾಡಕ್ಕಿಳಿಸಿದೆ. ಸಾಂಪ್ರದಾಯಿಕ ಮತಗಳ ಜತೆಗೆ ಹಿಂದುಳಿದ ಹಾಗೂ ಪರಿಶಿಷ್ಟರ ಮತಗಳನ್ನು
ಬಿಜೆಪಿ ಹೆಚ್ಚಾಗಿ ಪಡೆದರೆ ಲಾಭವಾಗುವ ದೂರದ ಅವಕಾಶವೂ ಅವರಿಗಿದೆ.

ಬ್ಯಾಟರಾಯನಪುರ
ೀತ್ರದಲ್ಲಿ ಒಕ್ಕಲಿಗ ಅಭ್ಯರ್ಥಿಗಳ ನಡುವೆ ಮತ್ತೆ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದೆ. ಹಾಲಿ ಕೃಷಿ ಸಚಿವ ಕೃಷ್ಣಬೈರೇಗೌಡ ಮತ್ತೆ ಕಾಂಗ್ರೆಸ್ಸಿನಿಂದ ಅದೃಷ್ಟ ಪರೀಕ್ಷೆಗಿಳಿದಿದ್ದು, 5ನೇ ಬಾರಿಗೆ ಶಾಸಕ ಸ್ಥಾನಕ್ಕೆ ಆಯ್ಕೆ ಬಯಸಿದ್ದಾರೆ. ಇವರ ವಿರುದ್ಧ ಕಳೆದೆರಡು ಬಾರಿ ಸ್ಪರ್ಧಿಸಿ ಸೋತಿದ್ದ ಬಿಜೆಪಿ ಅಭ್ಯರ್ಥಿ ಎ. ರವಿ ಹೇಗಾದರೂ ಮಾಡಿ ಗೆಲುವು ಸಾಧಿಸಬೇಕೆಂದು ಮೂರನೇ ಬಾರಿಗೆ ಅಖಾಡಕ್ಕಿಳಿದಿದ್ದಾರೆ. ಕೃಷ್ಣಬೈರೇಗೌಡರಿಗೆ ಅಭಿವೃದ್ಧಿ ಕಾರ್ಯಗಳು, ಕಳಂಕರಹಿತ ಸ್ವಚ್ಛ ರಾಜಕಾರಣ ವರವಾಗಬಹುದು. ಎ.ರವಿ ಅವರಿಗೆ ಸತತ ಎರಡು ಬಾರಿ ಸೋಲಿನ ಅನುಕಂಪ, ಹಾಲಿ ಒಕ್ಕಲಿಗರ ಸಂಘದ ನಿರ್ದೇಶಕರಾಗಿರುವುದು ಲಾಭ ತರಬಹುದು. ಆದರೆ, ಇವರ ವಿರುದ್ಧ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಕೆಲವರ ಬಂಡಾಯವಿದೆ. ಜೆಡಿಎಸ್ ನಿಂದ ಟಿ.ಜಿ. ಚಂದ್ರು ಅವರನ್ನು ಮೊದಲ ಬಾರಿಗೆ ಸ್ಪರ್ಧೆಗಿಳಿಸಲಾಗಿದೆ.

ಪುಲಕೇಶಿನಗರ
ಜೆಡಿಎಸ್ ವಿರುದ್ಧ ಬಂಡೆದ್ದು, ಕಾಂಗ್ರೆಸ್ ಸೇರಿರುವ ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಆ ಪಕ್ಷದಿಂದ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಬಿ. ಪ್ರಸನ್ನಕುಮಾರ್ ಜೆಡಿಎಸ್ ಹುರಿಯಾಳಾಗಿದ್ದಾರೆ. ಈ ಇಬ್ಬರ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಮುಸ್ಲಿಂ ಬಾಹುಳ್ಯದ ಕ್ಷೇತ್ರವಾದ ಪುಲಕೇಶಿನಗರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಮತದಾರರೇ ನಿರ್ಣಾಯಕ. ಅಭ್ಯರ್ಥಿಗಳು ಹಳಬರೇ ಆಗಿದ್ದರೂ ಪಕ್ಷ ಮಾತ್ರ ಅದಲು ಬದಲಾಗಿದೆ. ಇಲ್ಲಿ ಕಾಂಗ್ರೆಸ್ ಮತಬ್ಯಾಂಕ್ ಮೇಲೆ ಕಣ್ಣಿಟ್ಟು ಬಂದ ಅಖಂಡ ಶ್ರೀನಿವಾಸ್ ತಂತ್ರಗಾರಿಕೆ ಸರಿಯೋ ಅಥವಾ ಈ ಕ್ಷೇತ್ರದಲ್ಲಿ ಜೆಡಿಎಸ್ ನ ಬೇರು ಗಟ್ಟಿಯಾಗಿದೆಯೋ ಎಂಬುದನ್ನು ಈ ಬಾರಿಯ ಹಣಾಹಣಿ ನಿರ್ಧರಿಸಲಿದೆ. ಇವರಿಬ್ಬರ ನಡುವೆ ಬಿಜೆಪಿ ಮಾಜಿ ಕಾರ್ಪೊರೇಟರ್ ಸುಶೀಲಾ ದೇವರಾಜ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ವಿಜಯನಗರ
 ಶ್ರೀನಿವಾಸಮೂರ್ತಿ ಬಿ. ಪ್ರಸನ್ನಕುಮಾರ್ ಸುಶೀಲಾ ದೇವರಾಜ್ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಕಾಂಗ್ರೆಸ್ ಅಭ್ಯರ್ಥಿ ಹಾಲಿ ವಸತಿ ಸಚಿವ ಎಂ. ಕೃಷ್ಣಪ್ಪ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇವರ ವಿರುದ್ಧ ಬಿಜೆಪಿಯಿಂದ ಕ್ಷೇತ್ರದಲ್ಲಿ 3 ಬಾರಿ ಬಿಬಿಎಂಪಿ ಸದಸ್ಯರಾಗಿದ್ದ ಎಚ್. ರವೀಂದ್ರ ಕಣದಲ್ಲಿದ್ದಾರೆ. ಜೆಡಿಎಸ್  ನಿಂದ ಎನ್.ಇ. ಪರಮಶಿವ ಸ್ಪರ್ಧೆಗಿಳಿದಿದ್ದಾರೆ. ಮೂವರೂ ಒಕ್ಕಲಿಗರೇ ಆಗಿರುವುದರಿಂದ ಮತ ವಿಭಜನೆ ಸಂಭವವಿದೆ. ಹಾಗಾಗಿ ದಲಿತರು, ಕುರುಬರು ಮತ್ತು ಅಲ್ಪಸಂಖ್ಯಾತರು ನಿರ್ಣಾಯಕ. ಇಲ್ಲಿ ಬಿಜೆಪಿ ಕಾರ್ಪೊರೇಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಪರೋಕ್ಷವಾಗಿ ಕೃಷ್ಣಪ್ಪ ಬೆಂಬಲಕ್ಕೆ ನಿಂತಿದ್ದಾರೆ. ಪಕ್ಷದ ವರ್ಚಸ್ಸಿನಿಂದ ಒಕ್ಕಲಿಗರೇನಾದರೂ ಸಾಮೂಹಿಕವಾಗಿ ಜೆಡಿಎಸ್ ಕೈ ಹಿಡಿದರೆ ಲೆಕ್ಕಾಚಾರ ತಲೆಕೆಳಗಾಗಬಹುದು. ಆದರೆ, ಕೃಷ್ಣಪ್ಪ ಅವರು ದೇವೇಗೌಡರ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ.


ಯಶವಂತಪುರ
ಹಾಲಿ ಶಾಸಕ ಎಸ್.ಟಿ. ಸೋಮಶೇಖರ್ ಮತ್ತೆ ಕಾಂಗ್ರೆಸ್‌ನಿಂದ ಕಣದಲ್ಲಿದ್ದಾರೆ. ಅವರಿಗೆ ಜೆಡಿಎಸ್‌ನ ಜವರಾಯಿಗೌಡ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಎಸ್ .ಟಿ. ಸೋಮಶೇಖರ್ ತಮ್ಮ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಿದ್ದಾರೆ. ಒಕ್ಕಲಿಗ ಮತಗಳ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ೨೦೦೮ರಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಗೆದ್ದಿದ್ದರು. ಈ ಬಾರಿ ಕೊನೆ ಕ್ಷಣದವರೆಗೆ ಶೋಭಾ ಅವರನ್ನೇ ಕಣಕ್ಕಿಳಿಸುವ ತಂತ್ರದಲ್ಲಿ ಬಿಜೆಪಿ ಇತ್ತು. ಆದರೆ, ಶೋಭಾ ಸ್ಪರ್ಧಿಸುವುದಿಲ್ಲ ಎಂಬ ಸಂದೇಶ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಆಸರೆ ಪಡೆದರು. ಹೀಗಾಗಿ ಕಡೆ ಕ್ಷಣದಲ್ಲಿ ಅಭ್ಯರ್ಥಿಯಾದ ನಟ ಜಗ್ಗೇಶ್ ಇಲ್ಲಿ ಜೆಡಿಎಸ್‌ಗೆ ಪೂರಕವಾದ ಅಭ್ಯರ್ಥಿಯಂತೆ ಕಾಣುತ್ತಾರೆ. ಕಾಂಗ್ರೆಸ್‌ನ ಎಸ್.ಟಿ. ಸೋಮಶೇಖರ್ ಕ್ಷೇತ್ರದಲ್ಲಿ ತಮ್ಮದೇ ಆದ ವ್ಯವಸ್ಥಿತ ಜಾಲ ಹೊಂದಿರುವುದು ಅವರಿಗೆ ಲಾಭ ತರಬಹುದು.


ಹೆಬ್ಬಾಳ
ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಹಣಾಹಣಿ ನಡೆಯುತ್ತಿದೆ. ಬಿಜೆಪಿ ಶಾಸಕ ಜಗದೀಶ್ ಕುಮಾರ್ ನಿಧನದಿಂದ 2016 ರಲ್ಲಿ ನಡೆದ ಉಪಚುನಾ ವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಹಾಲಿ ಶಾಸಕ ವೈ.ಎ. ನಾರಾಯಣಸ್ವಾಮಿ ಮತ್ತೆ ಕಣದಲ್ಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಬಿ.ಎಸ್. ಸುರೇಶ್ (ಬೈರತಿ ಸುರೇಶ್) ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಳಿದಿದ್ದಾರೆ. ಜೆಡಿಎಸ್‌ನ ಹೆಬ್ಬಾಳ ಕ್ಷೇತ್ರದ ಅಧ್ಯಕ್ಷ ಹನುಮಂತೇಗೌಡ ಸ್ಪರ್ಧೆಯಲ್ಲಿದ್ದಾರೆ. ಉಪಚುನಾವಣೆ ಗೆಲುವಿನ ನಂತರ ನಾರಾಯಣ ಸ್ವಾಮಿ ಕ್ಷೇತ್ರದಲ್ಲಿ ಮತ್ತಷ್ಟು ಹಿಡಿತ ಸಾಧಿಸಿದ್ದಾರೆ. ಕಾಂಗ್ರೆಸ್‌ನ ಸುರೇಶ್ ಮಾಜಿ ಕೇಂದ್ರ ಸಚಿ ಜಾಫರ್ ಷರೀಫ್ ಮೊಮ್ಮಗ ಉಪಚುನಾವಣೆಯಲ್ಲಿ ಸೋತ ಬಳಿಕ ಟಿಕೆಟ್ ಆಕಾಂಕ್ಷೆಯಿಂದ ಕ್ಷೇತ್ರದಲ್ಲಿ ಒಂದಷ್ಟು ಹಿಡಿತ ಸಾಧಿಸಿದ್ದಾರೆ. ಇವರು ಸಿಎಂ ಬೆಂಬಲಿಗ ಎನ್ನುವುದು ವರವಾಗಬಹುದು.

ದೇವನಹಳ್ಳಿ
ನಾರಾಯಣಸ್ವಾಮಿ ಬಿ.ಎಸ್. ಸುರೇಶ್ ಹನುಮಂತೇಗೌಡ ಜೆಡಿಎಸ್, ಕಾಂಗ್ರೆಸ್ ಪ್ರಬಲವಾಗಿರುವ ಈ ಮೀಸಲು ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯಿಲ್ಲ. ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಗೆದ್ದ ಇತಿಹಾಸವಿಲ್ಲ. ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆಯೇ ನೇರ ಹಣಾ ಹಣಿ.4 ವರ್ಷಗಳ ಹಿಂದೆ ದೇವನಹಳ್ಳಿ ರಾಜಕೀಯಕ್ಕೆ ಬಂದ ನಿಸರ್ಗ ನಾರಾಯಣಸ್ವಾಮಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದೆ. ಇದು ಜೆಡಿಎಸ್‌ನ ಹಾಲಿ ಶಾಸಕ ಪಿಳ್ಳಮುನಿಶ್ಯಾಮಪ್ಪ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ಬಾರಿ ಜೆಡಿಎಸ್ ವಿರುದ್ಧ ಸೋತಿದ್ದ ಕಾಂಗ್ರೆಸ್‌ನ ವೆಂಕಟಸ್ವಾಮಿಗೆ ಅನುಕಂಪದ ಅಲೆಯಿದೆ. ಆದರೆ ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸಿದ್ದ ಛಲವಾದಿ ನಾರಾಯಣಸ್ವಾಮಿ ಬಿಜೆಪಿಗೆ ಹೋಗಿರು ವುದರಿಂದ ಅವರು ಕಾಂಗ್ರೆಸ್ ಮತ ಸೆಳೆಯಬಹುದು. ಬಿಜೆಪಿ ಅಭ್ಯರ್ಥಿ ನಾಗೇಶ್ ಯಾರ ಮತ ಬುಟ್ಟಿಯಿಂದ ಹೆಚ್ಚು ಮತಗಳನ್ನು ಕಸಿಯುತ್ತಾರೆ ಎಂಬುದರ ಮೇಲೆ ವಿಜೇತರು ಯಾರು ಎಂಬುದು ನಿರ್ಧಾರವಾಗುತ್ತದೆ. 

ರಾಜಾಜಿನಗರ
ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಮತ್ತು ಮಾಜಿ ಮೇಯರ್ ಕಾಂಗ್ರೆಸ್ ಅಭ್ಯರ್ಥಿ ಜಿ.ಪದ್ಮಾವತಿ ನಡುವೆ ನೇರ ಪೈಪೋಟಿ ಇದೆ. ಇಲ್ಲಿ ಜಾತಿ ಪ್ರಾಬಲ್ಯಕ್ಕಿಂತ ಅಭ್ಯರ್ಥಿಗಳ ನಡುವೆ ಹಣಾಹಣಿ ಏರ್ಪಟ್ಟಿದೆ. ಸುರೇಶ್ ಅವರಿಗೆ ಸ್ವಪಕ್ಷಿಯರ ಭಿನ್ನಮತ ತುಸು  ಸಮಸ್ಯೆಯಾಗಿದೆ. ಉಳಿದಂತೆ ಕಳೆದ ಚುನಾವಣೆಯಲ್ಲಿ ಕೆಜೆಪಿಗೆ ಹಂಚಿ ಹೋಗಿದ್ದ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ವಿಶ್ವಾಸದಲ್ಲಿದ್ದು, ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನೇ ನೆಚ್ಚಿಕೊಂಡಿದ್ದಾರೆ. ಪದ್ಮಾವತಿ ಅವರು ಕ್ಷೇತ್ರದಲ್ಲಿನ ಪಾಲಿಕೆ ಸದಸ್ಯರಾಗಿರುವುದು, ಮೇಯರ್ ಆದ ಬಳಿಕ ಕ್ಷೇತ್ರದ ಎಲ್ಲ ಜನರ ಜತೆ ಸಂಪರ್ಕ ಸಾಧಿಸಿರುವುದು ಪ್ಲಸ್ ಪಾಯಿಂಟ್. ಇನ್ನು ಕಾಂಗ್ರೆಸ್ ಟಿಕೆಟ್ ವಂಚಿತ ಮಂಜುಳಾ ನಾಯ್ಡು ಪರೋಕ್ಷವಾಗಿ ಬಿಜೆಪಿ ಬೆಂಬಲಿಸುತ್ತಿದ್ದಾರೆ. ಇದು ಬಿಜೆಪಿಗೆ ವರದಾನವಾಗಬಹುದು. ಜೆಡಿಎಸ್ ಅಭ್ಯರ್ಥಿಯಾಗಿ ಎಚ್.
ಎಂ. ಕೃಷ್ಣಮೂರ್ತಿ ಸ್ಪರ್ಧಿಸಿದ್ದು, ಅಷ್ಟಾಗಿ ಪ್ರಭಾವ ಕಂಡು ಬರುತ್ತಿಲ್ಲ. 

ಮಲ್ಲೇಶ್ವರ
ದಶಕದಿಂದ ಬಿಜೆಪಿ ಕೋಟೆಯಾಗಿರುವ ಇಲ್ಲಿ ಡಾ.ಸಿ.ಎನ್.ಅಶ್ವತ್ಥ್‌ನಾರಾ ಯಣ್ ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿ ಕಣಕ್ಕೆ ಇಳಿದಿದ್ದಾರೆ. ಇಲ್ಲಿ ಕಾಂಗ್ರೆಸ್ ಅಂತಿಮ ಹಂತದಲ್ಲಿ ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ಕೆಂಗಲ್ ಶ್ರೀಪಾದ ರೇಣುಗೆ ಟಿಕೆಟ್ ನೀಡಿದೆ. ಜೆಡಿಎಸ್ ಇಲ್ಲಿ ನೆಪ ಮಾತ್ರಕ್ಕೆ ಎಂಬಂತೆ ಇದ್ದು, ಮಧುಸೂದನ್ ಎಂಬುವರನ್ನು ಕಣಕ್ಕೆ ಇಳಿಸಿದೆ. ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೊಸ ಮುಖವಾಗಿರುವ ಕಾರಣ ಅಶ್ವತ್ಥ್ ನಾರಾಯಣ್ ವರ್ಸಸ್ ಕಾಂಗ್ರೆಸ್ ನಡುವಿನ ಸ್ಪರ್ಧೆ ಎಂಬಂತಾಗಿದೆ. ಬ್ರಾಹ್ಮಣರು ಮತ್ತು ಒಕ್ಕಲಿಗರೇ
ಅಧಿಕ ಸಂಖ್ಯೆಯಲ್ಲಿದ್ದು, ಅಭ್ಯರ್ಥಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸ ಲಿದ್ದಾರೆ. ಎರಡೂ ಪಕ್ಷಗಳಲ್ಲಿ ಅತೀವ ಉತ್ಸಾಹ ಕಾಣದ ಹಿನ್ನೆಲೆಯಲ್ಲಿ ಬಿಜೆಪಿ  ಅಭ್ಯರ್ಥಿಗೆ ಸುಲಭ ಗೆಲುವಿನ ವಾತಾವರಣ ನಿರ್ಮಾಣವಾಗಿದೆ. ಅಶ್ವತ್ಥನಾರಾಯಣಗೆ ಪ್ರಬಲ ಪೈಪೋಟಿ ಎದುರಾಗುವ ಸನ್ನಿವೇಶ ಕಂಡು ಬಂದಿಲ್ಲ.


ದಾಸರಹಳ್ಳಿ
ಹಾಲಿ ಶಾಸಕ ಬಿಜೆಪಿಯ ಮುನಿರಾಜು, ಜೆಡಿಎಸ್‌ನ ಆರ್. ಮಂಜುನಾಥ್ ಹಾಗೂ ಕಾಂಗ್ರೆಸ್‌ನ ಪಿ.ಎನ್. ಕೃಷ್ಣಮೂರ್ತಿ ನಡುವೆ ತ್ರಿಕೋನ ಸ್ಪರ್ಧೆ ಇದೆ. ಮೂವರೂ ಒಕ್ಕಲಿಗರೇ ಆಗಿದ್ದಾರೆ. ಮುನಿರಾಜು ಹ್ಯಾಟ್ರಿಕ್ ಗೆಲವಿಗೆ ಎದುರು ನೋಡುತ್ತಿದ್ದಾರೆ. 2 ಬಾರಿ ಪಾಲಿಕೆ ಚುನಾವಣೆಯಲ್ಲಿ ಸೋತಿರುವ ಮಂಜುನಾಥ್ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ದಶಕಗಳಿಂದ ಕಾಂಗ್ರೆಸ್ ಕಾರ್ಯಕರ್ತರಾಗಿರುವ ಕೃಷ್ಣಮೂರ್ತಿ ಇದೇ ಮೊದಲ ಬಾರಿ ಸ್ಪರ್ಧಿಸಿದ್ದಾರೆ. ಮುನಿರಾಜು ವೈಫಲ್ಯಗಳನ್ನೇ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಮತ್ತು  ಜೆಡಿಎಸ್‌ಗೆ ಲಾಭ ತಂದುಕೊಡಬಹುದು. ಎರಡು ಬಾರಿ ಶಾಸಕರಾಗಿ ರಾಜಕೀಯ ಅನುಭವವುಳ್ಳ ಮುನಿರಾಜು ಕ್ಷೇತ್ರದ ಮೇಲೆ ಹಿಡಿತ ಸಾಧಿಸಿರುವುದು ಉಳಿದ ಪ್ರತಿಸ್ಪರ್ಧಿಗಳಿಗೆ ಹೊಡೆತ ನೀಡಬಹುದು. ಕಾಂಗ್ರೆಸ್ಸಿನಲ್ಲಿಯೇ ಇದ್ದ ಮಂಜುನಾಥ್ ಜೆಡಿಎಸ್
ನಿಂದ ಕಣಕ್ಕಿಳಿದಿರುವುದು ಮತ ವಿಭಜನೆಗೆ ಎಡೆಮಾಡಿಕೊಡಲಿದೆ. 

ಯಲಹಂಕ
ಎರಡು ಬಾರಿ ಶಾಸಕರಾಗಿರುವ ಎಸ್.ಆರ್. ವಿಶ್ವನಾಥ್ ಅವರು ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಅಧಿಕ ಸಂಖ್ಯೆಯಲ್ಲಿರುವ ಪ.ಜಾತಿ-ಪ.ಪಂ. ಸಮುದಾಯದ ಮತಗಳೇ ನಿರ್ಣಾಯಕ. ವಿಶ್ವನಾಥ್ ರೆಡ್ಡಿ ಸಮುದಾಯಕ್ಕೆ ಸೇರಿದ್ದು, ಜೆಡಿಎಸ್ ಅಭ್ಯರ್ಥಿ ಹನು ಮಂತೇಗೌಡ ಒಕ್ಕಲಿಗ ಮತಗಳನ್ನೇ ನೆಚ್ಚಿಕೊಂಡಿದ್ದಾರೆ. ಒಕ್ಕಲಿಗ ಮತದಾರರನ್ನು ಗುರಿಯಾಗಿಸಿಕೊಂಡು ಜೆಡಿಎಸ್ ಅಭ್ಯರ್ಥಿ ಮತಯಾಚಿಸುತ್ತಿದ್ದಾರೆ. ವಿಶ್ವನಾಥ್ ಎಲ್ಲ ಸಮುದಾಯದ ಜತೆ ಸಂಪರ್ಕದಲ್ಲಿರುವುದು ಅವರಿಗೆ ಅನುಕೂಲಕಾರಿ.
ಕಾಂಗ್ರೆಸ್ ಕಳೆದ ಬಾರಿ ಸೋಲನ್ನಪ್ಪಿದ್ದ ಗೋಪಾಲಕೃಷ್ಣ ಅವರಿಗೆ ಈ ಬಾರಿಯೂ ಟಿಕೆಟ್ ನೀಡಿದೆ. ಕಾಂಗ್ರೆಸ್ ಅಭ್ಯರ್ಥಿ ಪ.ಜಾತಿ ಮತ್ತು ಪ.ಪಂಗಡ ಅಭ್ಯರ್ಥಿಗಳನ್ನು ಪಡೆದರೆ ಜೆಡಿಎಸ್ ಅಭ್ಯರ್ಥಿಗೆ ಇಲ್ಲಿ ಅನುಕೂಲವಾಗಲಿದೆ. ಒಕ್ಕಲಿಗ ಮತಗಳನ್ನು ಹೆಚ್ಚಾಗಿ ಪಡೆಯುವವರು ಗೆಲುವು ಸಾಧಿಸಲಿದ್ದಾರೆ. 

ಸಿ.ವಿ.ರಾಮನ್‌ನಗರ
ಎಸ್.ಆರ್. ವಿಶ್ವನಾಥ್ ಗೋಪಾಲಕೃಷ್ಣ ಹನುಮಂತೇಗೌಡ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರವಾದ ಸಿ.ವಿ.ರಾಮನ್‌ನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಹಾಲಿ ಶಾಸಕ ಎಸ್.ರಘು ಮೂರನೇ ಗೆಲುವಿನ ಉತ್ಸುಕದಲ್ಲಿದ್ದು, ಕಾಂಗ್ರೆಸ್‌ನಿಂದ ಮೇಯರ್ ಸಂಪತ್ ರಾಜ್ ಕಣದಲ್ಲಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಿ.ರಮೇಶ್ ಜೆಡಿಎಸ್‌ನಿಂದ ಕಣಕ್ಕೆ ಇಳಿದು ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಮೇಯರ್ ಹುದ್ದೆಯ ಪ್ರಭಾವ, ರಾಜ್ಯ ಸರ್ಕಾರ ಮತ್ತು ಪಾಲಿಕೆಯ ಜನಪರ ಯೋಜನೆಗಳು, ಪಕ್ಷೇತರ ವಾರ್ಡ್ ಸದಸ್ಯರೊಬ್ಬರ ಬೆಂಬಲ ಸಂಪತ್‌ರಾಜ್ ಅವರಿಗೆ ನೆರವಾಗಬಹುದು. ಎರಡು ಬಾರಿ ಗೆಲುವು ಸಾಧಿಸಿರುವ ರಘು ಅವರಿಗೆ ಪ್ರತಿ ಚುನಾವಣೆಯಲ್ಲಿ ಗೆಲುವಿನ ಅಂತರ ಕಡಿಮೆಯಾಗಿದೆ. ಹೀಗಾಗಿ ಅವರ ಗೆಲುವು ಈ ಬಾರಿ ಸುಲಭವಾಗಿಲ್ಲ ಎನ್ನಲಾಗಿದೆ. ಕಳೆದ ಬಾರಿ ಮತಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ರಮೇಶ್ ಸ್ಪರ್ಧೆ ಕಾಂಗ್ರೆಸ್ ಮತ ವಿಭಜನೆಗೆ ಕಾರಣವಾಗಬಹುದು.

ಗೋವಿಂದರಾಜನಗರ
ವಿ.ಸೋಮಣ್ಣ ಅವರಿಗೆ ಈ ಬಾರಿಯ ಚುನಾವಣೆ ‘ಮಾಡು ಇಲ್ಲವೇ ಮಡಿ’ ಎಂಬಂತಾಗಿದೆ. ಅವರಿಗೆ ಹಾಲಿ ಶಾಸಕ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಎದುರಾಳಿ ಆಗಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ, ಕುರುಬ ಹಾಗೂ ಮುಸ್ಲಿಂ ಮತ ನಿರ್ಣಾಯಕ. 2009 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪ್ರಿಯಕೃಷ್ಣ ವಿರುದ್ಧ ಸೋಲು ಅನುಭವಿಸಿದ್ದ ಸೋಮಣ್ಣ ಈ ಬಾರಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಗೋವಿಂದರಾಜನಗರದ 6 ವಾರ್ಡ್‌ಗಳಲ್ಲಿ ಬಿಜೆಪಿ ಇರುವುದು ಹಾಗೂ ಸೋಲಿನ ಅನುಕಂಪದ ಮೇಲೆ ಜನ ಕೈ ಹಿಡಿಯುತ್ತಾರೆ ಎಂಬ
ವಿಶ್ವಾಸದಲ್ಲಿ ಸೋಮಣ್ಣ ಇದ್ದಾರೆ. ಇನ್ನು ಜೆಡಿಎಸ್‌ನಿಂದ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ನಾಗೇಂದ್ರ ಪ್ರಸಾದ್ ಎಂಬುವರು ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚು ಸಂಖ್ಯೆಯಲ್ಲಿಲ್ಲದ ವೀರಶೈವ ಅಭ್ಯರ್ಥಿಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲಿಸಿದೆ ಎನ್ನಲಾಗುತ್ತಿದೆ. ಬಸವನಗುಡಿ ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಹ್ಯಾಟ್ರಿಕ್ ಗೆಲವಿಗೆ ಎದುರು ನೋಡುತ್ತಿದ್ದಾರೆ. ಕಳೆದ ಬಾರಿ ಸೋಲು ಕಂಡಿರುವ ಜೆಡಿಎಸ್‌ನ ಬಾಗೇಗೌಡ ಒಕ್ಕಲಿಗ ಮತಗಳನ್ನೇ ನೆಚ್ಚಿಕೊಂಡು ರವಿ ಸುಬ್ರಹ್ಮಣ್ಯ ಎದುರು ಪೈಪೋಟಿ ನೀಡುತ್ತಿದ್ದಾರೆ. ಕಾಂಗ್ರೆಸ್‌ನ ಬೋರೇಗೌಡ ಕ್ಷೇತ್ರಕ್ಕೆ ಹೊಸ ಮುಖವಾಗಿರುವ ಕಾರಣ ಮೂರನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆಗಳಿವೆ. ಕ್ಷೇತ್ರದಲ್ಲಿ ಬ್ರಾಹ್ಮಣ ಮತ್ತು ಒಕ್ಕಲಿಗ ಸಮುದಾಯ ಗಳ ಮತದಾರರು ಸಮನಾಗಿರುವುದರಿಂದ ಈ ಎರಡು ಸಮುದಾಯಗಳ 
ಮತಗಳೇ ನಿರ್ಣಾಯಕ ಪಾತ್ರ ವಹಿಸಲಿವೆ. 10 ವರ್ಷಗಳಿಂದ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿರುವುದು ಹಾಗೂ ಮೂರನೇ ಒಂದು ಭಾಗ ಬ್ರಾಹ್ಮಣ ಮತದಾರರು ಇರುವುದರಿಂದ ರವಿ ಸುಬ್ರಹ್ಮಣ್ಯ ಗೆಲವಿನ ಹಾದಿ ಸುಗಮವಾಗುವ ನಿರೀಕ್ಷೆ ಇದೆ. ಕಸ ನಿರ್ವಹಣೆ, ಕೊಳಚೆ ನೀರು ಸಂಸ್ಕರಣೆ, ಪಾರಂಪರಿಕ ಸ್ಥಳಗಳ ರಕ್ಷಣೆಗೆ ಕೈಗೊಳ್ಳದಿರುವುದು ರವಿ ಸುಬ್ರಹ್ಮಣ್ಯಗೆ ಸವಾಲೊಡ್ಡಬಹುದು.

ಸರ್ವಜ್ಞ ನಗರ
 ಮರುವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಸರ್ವಜ್ಞನಗರ ಪ್ರಸ್ತುತ ಕಾಂಗ್ರೆಸ್ ಭದ್ರಕೋಟೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರನ್ನು ಎರಡು ಬಾರಿ ಗೆಲ್ಲಿಸಿದ ಇಲ್ಲಿನ ಮತದಾರ ಹ್ಯಾಟ್ರಿಕ್ ಗೆಲುವು ನೀಡುತ್ತಾನಾ ಕಾದು ನೋಡಬೇಕು. ೨೦೦೮ರಲ್ಲಿ ಜೆಡಿಎಸ್ ಮತ್ತು 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪದ್ಮನಾಭರೆಡ್ಡಿ ಈ ಬಾರಿ ಕೆ.ಜೆ. ಜಾರ್ಜ್ ವಿರುದ್ಧ ಕಣಕ್ಕೆ ಇಳಿದಿದ್ದರೆ, ಚುನಾವಣೆ ಚಿತ್ರಣವೇ ಬೇರೆ ಇರುತ್ತಿತ್ತು. ಆದರೆ, ರಾಮಚೈತನ್ಯ ವರ್ಧಿನಿ ಟ್ರಸ್ಟ್ ಅಧ್ಯಕ್ಷ ಮುನಿನಾಗರೆಡ್ಡಿ ಈಗ ಬಿಜೆಪಿ ಅಭ್ಯರ್ಥಿ. ಅನ್ವರ್ ಷರೀಫ್ ಎಂಬುವರನ್ನು ಜೆಡಿಎಸ್ ಕಣಕ್ಕೆ ಇಳಿಸಿದೆ. ಅಲ್ಪಸಂಖ್ಯಾತ ಮತದಾರರೇ ಹೆಚ್ಚಿರುವ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮತಗಳು ಛಿದ್ರವಾಗುವ ಸಾಧ್ಯತೆ ಇದೆ. ಈ  ನಡುವೆ ಆಮ್ ಆದ್ಮಿ ಪಕ್ಷದ ಪೃಥ್ವಿರೆಡ್ಡಿ ಕೂಡ ಸ್ಪರ್ಧೆಗೆ ಇಳಿದಿದ್ದಾರೆ. ಹೀಗಾಗಿ
ಕೆ.ಜೆ. ಜಾರ್ಜ್ ಅವರಿಗೆ ಹ್ಯಾಟ್ರಿಕ್ ಗೆಲುವು ಸುಲಭ ತುತ್ತಲ್ಲ.


ಕೆ.ಆರ್.ಪುರಂ
2008ರಲ್ಲಿ ಬಿಜೆಪಿ ಅಭ್ಯರ್ಥಿ ನಂದೀಶ್ ರೆಡ್ಡಿ ಇಲ್ಲಿಂದ ಗೆಲವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಕ್ಷೇತ್ರದ ಮತದಾರ ಕಾಂಗ್ರೆಸ್ ಅಭ್ಯರ್ಥಿ ಭೈರತಿ ಬಸವರಾಜ ಅವರಿಗೆ ಮಣೆ ಹಾಕಿದ್ದರು. ಈ ಬಾರಿ ಮತ್ತೊಮ್ಮೆ ಈ ಇಬ್ಬರು ನಡುವೆ ನೇರ ಹಣಾಹಣಿ ಇದ್ದು, ಕಳೆದ ಬಾರಿಯ ಸೋಲಿಗೆ ಸೇಡು ತೀರಿಸಿ ಕೊಳ್ಳುವ ತವಕದಲ್ಲಿ ಬಿಜೆಪಿಯ ನಂದೀಶ್‌ರೆಡ್ಡಿ ಇದ್ದಾರೆ. ಕ್ಷೇತ್ರದ ಸಮಸ್ಯೆ, ಅಪರಾಧ ಕೃತ್ಯಗಳ ಸರಮಾಲೆಯನ್ನೇ ಪ್ರಚಾರದ ಮುಖ್ಯ ವಿಷಯವಾಗಿಸಿ ಕೊಂಡು ಹಾಲಿ ಶಾಸಕರ ವಿರುದ್ಧ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸರ್ಕಾರದ ಸಾಧನೆ, ತಮ್ಮ ಅಭಿವೃದ್ಧಿ ಕಾರ್ಯಗಳ ಮೇಲೆ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಜಿದ್ದಾಜಿದ್ದಿನ ಹೋರಾಟದ ನಡುವೆ ಜೆಡಿಎಸ್ ಅಭ್ಯರ್ಥಿ ಬಿ.ಎ.ಗೋಪಾಲ್ ಪ್ರಚಾರದಲ್ಲಿ ತೊಡಗಿದ್ದು, ರಾಷ್ಟ್ರೀಯ ಪಕ್ಷಗಳಿಗೆ ಸ್ಪರ್ಧೆಯೊಡ್ಡಲು ಪ್ರಯತ್ನಿಸುತ್ತಿದ್ದಾರೆ. 

 

ನೆಲಮಂಗಲ
ಹಾಲಿ ಜೆಡಿಎಸ್ ವಶದಲ್ಲಿರುವ ಈ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಮತ್ತೊಮ್ಮೆ ಸ್ಪರ್ಧೆಯಲ್ಲಿದ್ದಾರೆ. ಅವರಿಗೆ ಬಿಜೆಪಿಯ ಎಂ.ವಿ. ನಾಗರಾಜ, ಕಾಂಗ್ರೆಸ್‌ನ ನಾರಾಯಣಸ್ವಾಮಿ ತೀವ್ರ ಪೈಪೋಟಿ ಒಡ್ಡುತ್ತಿದ್ದಾರೆ. ನಾರಾಯಣಸ್ವಾಮಿ ಅವರು ದಲಿತ ಸಮುದಾಯದ ಎಡಗೈ ಮತಗಳ ಮೇಲೆ ಕಣ್ಣಿಟ್ಟು ಪ್ರಚಾರ ನಡೆಸುತ್ತಿರುವುದು ಜೆಡಿಎಸ್ ನಿದ್ದೆಗೆಟ್ಟಿಸಿದೆ. ಶ್ರೀನಿವಾಸಮೂರ್ತಿ, ನಾರಾಯಣಸ್ವಾಮಿ ನಡುವಿನ ಮತಗಳ ವಿಭಜನೆಯ ಲಾಭ ಪಡೆಯಲು ಬಿಜೆಪಿಯ ಎಂ.ವಿ. ನಾಗರಾಜ ತಂತ್ರ ಹೆಣೆದಿದ್ದಾರೆ.
ಹೀಗಾಗಿ ಬಿಜೆಪಿಯೂ ಪೈಪೋಟಿ ನೀಡುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಬಂಡಾಯದ ಕೂಗು ಕೇಳಿ ಬಂದಿತ್ತಾದರೂ ತಣ್ಣಗಾಗಿದೆ. ಕ್ಷೇತ್ರದ ಜನರಲ್ಲಿ ಮಾತ್ರ ಕಾಂಗ್ರೆಸ್‌ನ ನಾರಾಯಣಸ್ವಾಮಿ ಹೊರಗಿನವರು ಎಂಬ ಭಾವನೆ ಇದೆ. ಒಕ್ಕಲಿಗ, ಎಸ್‌ಸಿ,ಎಸ್‌ಟಿ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರ ಇದಾಗಿದೆ. 


ಶಾಂತಿನಗರ
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯೊಂದಿಗೆ ಕಾಂಗ್ರೆಸ್‌ನ ಎನ್.ಎ. ಹ್ಯಾರಿಸ್ ಕಣದಲ್ಲಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ. ವಾಸುದೇವಮೂ ರ್ತಿಗೆ ಬಿಜೆಪಿ ಟಿಕೆಟ್ ನೀಡಿದೆ. ತಿಗಳ ಸಮುದಾಯದ ವಾಸುದೇವಮೂರ್ತಿ ತಮಿಳಿನಲ್ಲಿ ಅಬ್ಬರದ ಪ್ರಚಾರ ನಡೆಸುವ ಮೂಲಕ ತಮಿಳರ ಮತಗಳಿಗೆ ಕೈ ಹಾಕಿರುವುದು ಕಾಂಗ್ರೆಸ್‌ಗೆ ತಲೆನೋವಾಗಿದೆ. ಹ್ಯಾರಿಸ್ ಪುತ್ರನಿಂದಾದ ವಿದ್ವತ್ ಮೇಲೆ ನಡೆದಿರುವ ಹಲ್ಲೆ ಬಿಜೆಪಿಗೆ ಮತ್ತೊಂದು ಪೂರಕ ಅಂಶವಾಗಿ ಕೆಲಸ ಮಾಡುತ್ತಿದೆ. ಆದರೆ, ಕ್ಷೇತ್ರದ ಮೇಲೆ ಎನ್.ಎ. ಹ್ಯಾರಿಸ್ ಹಿಡಿತ  ಸಾಧಿಸಿ ರುವುದು ಹಾಗೂ ವಿದ್ವತ್ ಹಲ್ಲೆ ಪ್ರಕರಣವನ್ನು ಅನುಕಂಪದ ಅಲೆಯಾಗಿ ಬದಲಿಸಿಕೊಳ್ಳುತ್ತಿರುವುದು ವಾಸುದೇವಮೂರ್ತಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದ ಶ್ರೀಧರರೆಡ್ಡಿ ಜೆಡಿಎಸ್‌ನಿಂದ ಕಣಕ್ಕಿಳಿದಿರುವುದು ಬಿಜೆಪಿಯ ಮತ ವಿಭಜನೆ ಮಾಡುವ ಸಾಧ್ಯತೆ ಇದೆ. 

 

ಗಾಂಧಿನಗರ
ಸತತ ನಾಲ್ಕು ಬಾರಿ ಗೆದ್ದಿರುವ ದಿನೇಶ್ ಗುಂಡೂರಾವ್ ಅವರ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿಲ್ಲ ಎಂಬ ಮಾತಿದೆ. ಬಿಜೆಪಿಯಿಂದ ಮೇಲ್ಮನೆ ಸದಸ್ಯ ರಾಮಚಂದ್ರೇಗೌಡ ಪುತ್ರ ಸಪ್ತಗಿರಿಗೌಡ ಕಣಕ್ಕಿಳಿದಿದ್ದಾರೆ. ಅವರಿಗೆ ಚಿಕ್ಕಪೇಟೆ ವಾರ್ಡ್ ಸುತ್ತಮುತ್ತ ಇರುವ ಸಂಘಪರಿವಾರದ ಸಾಂಪ್ರ ದಾಯಿಕ ಮತ, ಪಿ.ಸಿ. ಮೋಹನ್ ಬೆಂಬಲ ಹಾಗೂ ತಂದೆಯ ವರ್ಚಸ್ಸು ತಕ್ಕ ಮಟ್ಟಿಗೆ ವರವಾಗಲಿದೆ. ಕ್ಷೇತ್ರದಲ್ಲಿನ ಬಂಡಾಯ, ಸ್ವಪಕ್ಷೀಯ ನಾಯಕರಿಂದಲೇ ಬೆಂಬಲ ಇಲ್ಲದಿರುವುದು ಸಪ್ತಗಿರಿಗೌಡಗೆ ಹಿನ್ನಡೆ ಉಂಟು ಮಾಡಲಿದೆ. ಜೆಡಿಎಸ್‌ನಿಂದ ನಾರಾಯಣಸ್ವಾಮಿ ಕಣದಲ್ಲಿದ್ದಾರೆ. ಈ ನಡುವೆ 2013ರಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ೧೦,೮೭೫ ಮತ ಗಳಿಸಿದ್ದ ವಿ. ನಾಗರಾಜ (ನೋಟು ನಾಗ) ಕಣಕ್ಕಿಳಿರುವುದರಿಂದ ಮತ ವಿಭಜನೆಯ ಭಯ ಹುಟ್ಟಿಸಿದ್ದಾರೆ. ಒಟ್ಟಾರೆ
ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. 

ಮಹಾಲಕ್ಷೀ ಬಡಾವಣೆ
ಹಾಲಿ ಜೆಡಿಎಸ್ ಶಾಸಕ ಕೆ. ಗೋಪಾಲಯ್ಯ ಪುನರ್ ಆಯ್ಕೆ ಬಯಸಿದ್ದಾರೆ. ಅವರಿಗೆ ಪೈಪೋಟಿ ನೀಡಲು ಕಾಂಗ್ರೆಸ್ ೨೮ ವರ್ಷದ ಯುವಕ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಅವರನ್ನು ಕಣಕ್ಕಿಳಿಸಿದೆ. 2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಈ ಬಾರಿ ಬಿಜೆಪಿ ಅಭ್ಯರ್ಥಿ. ಇವರಿಗೆ ಬಿಜೆಪಿ ಮುಖಂಡರಾದ ಎಸ್. ಹರೀಶ್, ಎಂ. ನಾಗರಾಜ್ ಮುನಿಸು ತಲೆನೋವಾಗಿದೆ. ಕ್ಷೇತ್ರದಲ್ಲಿ ನಾಲ್ಕು ಪಾಲಿಕೆ ಸದಸ್ಯರನ್ನು ಹೊಂದಿರುವ ಹಾಗೂ ಕ್ಷೇತ್ರದಲ್ಲಿ ಪ್ರಭುತ್ವ ಸಾಧಿಸಿರುವ ಶಾಸಕ ಕೆ. ಗೋಪಾಲಯ್ಯ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಬೆಂಬಲದೊಂದಿಗೆ ಕಣದಲ್ಲಿರುವ ಮಂಜುನಾಥ್, ನೆ.ಲ. ನರೇಂದ್ರ ಬಾಬು ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿನ ಬಂಡಾಯ 
ನರೇಂದ್ರಬಾಬು ಅವರ ಪಾಲಿಗೆ ನುಂಗಲಾರದ ತುತ್ತಾಗಿದೆ.

ಬೆಂಗಳೂರು ದಕ್ಷಿಣ
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಇದೆ. ಎರಡು ಬಾರಿ ಗೆದ್ದಿರುವ ಹಾಲಿ ಬಿಜೆಪಿ ಶಾಸಕ ಎಂ.ಕೃಷ್ಣಪ್ಪ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ ಯೊಂದಿಗೆ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಳೆದ ಬಾರಿ ಕೃಷ್ಣಪ್ಪ ಅವರಿಗೆ ಫೈಟ್ ನೀಡಿದ್ದ ಜೆಡಿಎಸ್ ಅಭ್ಯರ್ಥಿ ಆರ್. ಪ್ರಭಾಕರ ರೆಡ್ಡಿ ಮತ್ತೆ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ. ರಮೇಶ್ ಅಖಾಡಕ್ಕಿಳಿದಿ ದ್ದಾರೆ. ಕೃಷ್ಣಪ್ಪ ಅವರು ಎರಡು ಅವಧಿಯಿಂದ ಹೊಂದಿರುವ ಕ್ಷೇತ್ರದ ಹಿಡಿತ, ಅಭಿವೃದ್ಧಿ ಕಾರ್ಯಗಳನ್ನು ನಂಬಿದ್ದಾರೆ. ಪ್ರಭಾಕರರೆಡ್ಡಿ ಅವರಿಗೆ ಕಳೆದ ಬಾರಿ ಸೋಲುಂಡರೂ ಕ್ಷೇತ್ರ ತೊರೆಯದೆ ನಿಂತಿರುವುದು ಹಾಗೂ ದೇವೇಗೌಡರು ಮತ್ತು ಕುಮಾರಸ್ವಾಮಿ ಕೃಪಾಶೀರ್ವಾದ ನೆರವಾಗಬಹುದು. ಇನ್ನು ಆರ್.ಕೆ. ರಮೇಶ್ ಕ್ಷೇತದಲ್ಲಿ ನಡೆಸಿರುವ ಕಾರ್ಯಕರ್ತರ ಸಂಘಟನೆ, ಅನ್ಯಪಕ್ಷದವರನ್ನು ಕಾಂಗ್ರೆಸ್‌ಗೆ ಸೆಳೆದಿರುವುದು ಲಾಭ ತರಬಹುದು.

ಚಿಕ್ಕಪೇಟೆ
ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಆರ್.ವಿ. ದೇವರಾಜ್‌ಗೆ ಮುಸ್ಲಿಂ ಸಮುದಾಯ, ತಮಿಳು ಹಾಗೂ ಕೊಳಗೇರಿ ಮತದಾರರು ಕೈಹಿಡಿಯಬಹುದು. ಕಳೆದ ಬಾರಿ ಸೋಲು ಕಂಡಿದ್ದ ಉದಯ್ ಗರುಡಾಚಾರ್ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ನಗರ ಘಟಕದ ವಕ್ತಾರ ಎನ್.ಆರ್. ರಮೇಶ್‌ಗೆ ಟಿಕೆಟ್ ಕೈ ತಪ್ಪಿದ್ದು, ಬಿಜೆಪಿಯ ಒಂದಿಷ್ಟು ಮತಗಳು ವಿಭಜನೆಗೆ ಎಡೆ ಮಾಡಿಕೊಡುವ ಸಂಭವವಿದೆ. ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರೇ ಇರುವುದರಿಂದ ಜಿಎಸ್‌ಟಿ ಜಾರಿ ಪರಿಣಾಮ ಬಿಜೆಪಿ ಮತಗಳ ಮೇಲೆ ಬೀರಬಹುದು. ೨೦೦೮ರಲ್ಲಿ ಡಾ. ಡಿ. ಹೇಮಚಂದ್ರಸಾಗರ್ ಬಿಜೆಪಿಯಿಂದ ಸ್ಪರ್ಧಿಸಿ ಗೆಲವು ಕಂಡಿದ್ದರು. ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಐದು ವರ್ಷಗಳಲ್ಲಿ ಕ್ಷೇತ್ರ ಬಿಟ್ಟಿರುವುದು ಮತ್ತು ಪಕ್ಷ ಬದಲಾಯಿಸಿರುವುದರಿಂದ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲಿ ದ್ದಾರೆಯೇ ಎಂಬುದನ್ನು ಕಾಯ್ದು ನೋಡಬೇಕಿದೆ.

ರಾಜರಾಜೇಶ್ವರಿ ನಗರ
ಆರ್.ವಿ. ದೇವರಾಜ್ ಗರುಡಾಚಾರ್ ಹೇಮಚಂದ್ರ ಸಾಗರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುನಿರತ್ನ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಬಿಜೆಪಿಯಿಂದ ಮುನಿರಾಜುಗೌಡ ಕಣಕ್ಕಿಳಿದಿದ್ದಾರೆ. ತಮಗೆ ಟಿಕೆಟ್ ಸಿಗದ ಕಾರಣ ಮುನಿಸಿಕೊಂಡ ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರ ಅವರು ಬಿಜೆಪಿ ತೊರೆದು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಇದು ಬಿಜೆಪಿಗೆ ತುಸು ಹಿನ್ನಡೆ ಉಂಟು ಮಾಡಬಹುದಾ ಎಂಬ ಕುತೂಹಲವಿದೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಮುನಿರತ್ನಗೆ ನೆರವಾಗಬಹುದಾದರೂ ಬಿಬಿಎಂಪಿಯ ಮಹಿಳಾ 
ಸದಸ್ಯರಿಂದ ಕೇಳಿಬಂದ ಕಿರುಕುಳದ ಆರೋಪಗಳು ತಿರುಗುಬಾಣವಾಗಬಹುದು. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಆ ಮತಗಳು ವಿಭಜನೆಯಾದಲ್ಲಿ ಕಾಂಗ್ರೆಸ್ಸಿಗೆ ಅನುಕೂಲವಾಗಬಹುದು. ಮತದಾರರ ಗುರುತಿನ ಚೀಟಿ ಸಿಕ್ಕ ಪ್ರಕರಣವು ಕಾಂಗ್ರೆಸ್‌ಗೆ ತಲೆನೋವಾಗಿದೆ.


ಹೊಸಕೋಟೆ
ಗೋವಿಂದರಾಜನಗರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ನಂತರ ಎರಡನೇ ಅತಿ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿರುವ ಎಂಟಿಬಿ ನಾಗರಾಜು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಬಿ.ಎನ್. ಬಚ್ಚೇಗೌಡ ಈ ಬಾರಿ ತನ್ನ ಪುತ್ರ ಶರತ್‌ಕುಮಾರ್ ಬಚ್ಚೇಗೌಡ ಅವರನ್ನು ಕಣಕ್ಕೆ ಇಳಿಸುವ ಮೂಲಕ ಬದಲಾವಣೆ ಪರ್ವಕ್ಕಾಗಿ ಮತ ಕೇಳುತ್ತಿದ್ದಾರೆ. ಯುವಕರನ್ನು ಸೆಳೆಯುವುದಕ್ಕಾಗಿ ಸತತವಾಗಿ ಹಳ್ಳಿ ಹಳ್ಳಿಗೆ ಸುತ್ತಾಡಿ ಶರತ್ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ವಿ. ಶ್ರೀಧರ್‌ಗೆ ಕೊನೇ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಸ್ವತಂತ್ರ ಅಭ್ಯರ್ಥಿ ಬಿ.ವಿ. ಮಂಜುನಾಥ್‌ಗೆ ಬೆಂಬಲ ಸೂಚಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಆರ್. ಕೃಷ್ಣಮೂರ್ತಿ ಹೊಸ ಮುಖವಾಗಿರುವ ಕಾರಣ ಗೆಲವು ಸಾಧಿಸುವುದು ಕಷ್ಟಸಾಧ್ಯ. ಎಂಟಿಬಿ ನಾಗರಾಜು, ಶರತ್ ನಡುವೆ ನೇರ ಹಣಾಹಣಿ ಇದೆ. 

ಮಹದೇವಪುರ
ಎಂಟಿಬಿ ನಾಗರಾಜು ಶರತ್ ಬಚ್ಚೇಗೌಡ ಆರ್. ಕೃಷ್ಣಮೂರ್ತಿ ಅತಿಹೆಚ್ಚು ಬಹುರಾಷ್ಟ್ರೀಯ ಕಂಪನಿಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿರುವ ಮಹದೇವಪುರ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಆಮ್ ಆದ್ಮಿ ಪಕ್ಷವೂ ಕ್ಷೇತ್ರದಲ್ಲಿ ಸವಾಲು ಹಾಕಿದೆ ಎಂಬ ಮಾತುಗಳು ಕೇಳಿಬಂದಿವೆ. ಎರಡು ಬಾರಿ ಕ್ಷೇತ್ರದಿಂದ ಜಯಗಳಿಸಿರುವ ಬಿಜೆಪಿ ಅಭ್ಯರ್ಥಿ ಅರವಿಂದ ಲಿಂಬಾವಳಿ ಮತ್ತೊಮ್ಮೆ ಕೇಸರಿ ಪತಾಕೆ ಹಾರಿಸುವಪ್ರಯತ್ನದಲ್ಲಿದ್ದಾರೆ. ಕಾಂಗ್ರೆಸ್‌ನ ಅಭ್ಯರ್ಥಿ ಎ.ಸಿ. ಶ್ರೀನಿವಾಸ್ ಕಳೆದ
ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸತೀಶ್ ಪರ ಜನರ ಒಲವು ಅಷ್ಟಕಷ್ಟೇ. ಆಪ್‌ನಿಂದ ಕಣದಿಳಿದಿರುವ ಬಿ.ಆರ್. ಭಾಸ್ಕರ್ ಪ್ರಸಾದ್ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸ್ಪರ್ಧೆ ನೀಡುವ ಸಾಧ್ಯತೆ ಇದೆ. ದಲಿತ ಮತಗಳೇ ಇಲ್ಲಿ ನಿರ್ಣಾಯಕ. ಕ್ಷೇತ್ರದಲ್ಲಿ 15-20 ಸಾವಿರ ಮಾತ್ರ ಭೋವಿ ಜನಾಂಗಕ್ಕೆ ಸೇರಿದವರಿದ್ದಾರೆ. ಎಡ ಮತ್ತು ಬಲ ಜನಾಂಗದ ಸುಮಾರು ಒಂದೂವರೆ ಲಕ್ಷ ಮಂದಿ ಇದ್ದಾರೆ. ಅಭಿವೃದ್ಧಿ ಕೆಲಸಗಳ ಜೊತೆ ಮೋದಿ ಅಲೆ ಕೆಲಸ ಮಾಡಿದರೆ ಜನರು ಲಿಂಬಾವಳಿ ಕೈಹಿಡಿಯಬಹುದು.


ಆನೇಕಲ್
ಬಿಜೆಪಿ, ಕಾಂಗ್ರೆಸ್ ನಡುವೆ ನೇರನೇರಾ ಜಿದ್ದಾಜಿದ್ದಿ ಏರ್ಪಟ್ಟಿದೆ. ಬೆಂಗಳೂರು ನಗರಕ್ಕೆ ಸೇರ್ಪಡೆಯಾದರೂ ಹೊರಗಿನ ಕ್ಷೇತ್ರ ಎಂಬ ಟ್ಯಾಗ್ ಹೊತ್ತುಕೊಂಡಿದೆ. ನಗರೀಕರಣದತ್ತ ಸಾಗುತ್ತಿದ್ದರೂ ಗ್ರಾಮೀಣ ಸೊಬಗು ಬದಲಿಸಿಕೊಳ್ಳದ ಕ್ಷೇತ್ರವು ಇನ್ನೂ ಅಭಿವೃದ್ಧಿ ಪಥದತ್ತ ಸಾಗಬೇಕಿದೆ. ಬಿಜೆಪಿ ಹಿಡಿತದಲ್ಲಿದ್ದ ಕ್ಷೇತ್ರವನ್ನು 2013ರಲ್ಲಿ ಕಾಂಗ್ರೆಸ್ ತನ್ನ ತೆಕ್ಕೆಗೆ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಕ್ಷೇತ್ರದಲ್ಲಿ ಸದ್ಯಕ್ಕೆ ಆಡಳಿತ ವಿರೋಧಿ ಹೇಳಿಕೊಳ್ಳುವಂತಹದ್ದೇನು ಇಲ್ಲದ ಕಾರಣ ಕಾಂಗ್ರೆಸ್ ಅಭ್ಯರ್ಥಿಯನ್ನು ಮಣಿಸುವುದು ಬಿಜೆಪಿಗೆ ಸವಾಲಿನ ವಿಷಯವಾಗಿದೆ. ಕ್ಷೇತ್ರದಲ್ಲಿ ಬಿಎಸ್‌ಪಿ ಪ್ರಾಬಲ್ಯ ಹೊಂದಿದೆಯಾದರೂ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಬಿ.ಶಿವಣ್ಣ ಮತ್ತು ಬಿಜೆಪಿಯ ಎ.ನಾರಾಯಣಸ್ವಾಮಿ ನಡುವೆ ನೇರ ಹಣಾಹಣಿ ಇದೆ. ಜೆಡಿಎಸ್-ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದ್ದು, ಬಿಎಸ್‌ಪಿ ಅಭ್ಯರ್ಥಿಯಾಗಿ ಜಿ.ಶ್ರೀನಿವಾಸ ಅಖಾಡದಲ್ಲಿದ್ದಾರೆ. ಕಾಂಗ್ರೆಸ್‌ನ ಶಿವಣ್ಣ ಕಾವೇರಿ ನೀರಿನ ಸೌಲಭ್ಯ ಒದಗಿಸಿರುವುದು ಮತ್ತು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರ ಮೆಚ್ಚುಗೆ ಇದೆ. 

ಬೊಮ್ಮನಹಳ್ಳಿ
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವು ಬಡ, ಮಧ್ಯಮ, ಶ್ರೀಮಂತ ವರ್ಗದ ಮಿಶ್ರಿತ ಕ್ಷೇತ್ರವಾಗಿದೆ. ಬಿಜೆಪಿಯಿಂದ ಸ್ಪರ್ಧಿಸಿ ಸತತ ಎರಡು ಬಾರಿ ಕ್ಷೇತ್ರದಿಂದ ಗೆದ್ದು ಶಾಸಕರಾಗಿರುವ ಸತೀಶ್ ರೆಡ್ಡಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಎರಡು ಬಾರಿ ಇವರನ್ನು ಮಣಿಸುವಂತಹ ಪ್ರಬಲ ಅಭ್ಯರ್ಥಿಯನ್ನು ಕಾಂಗ್ರೆಸ್, ಜೆಡಿಎಸ್ ಅಖಾಡಕ್ಕಿಳಿಸಿರಲಿಲ್ಲ ಎಂಬ ಮಾತಿವೆ. ಈ ಬಾರಿ ಕಾಂಗ್ರೆಸ್ ಸುಷ್ಮಾ ರಾಜಗೋಪಾಲರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಇನ್ನು ಜೆಡಿಎಸ್‌ನಿಂದ ಟಿ.ಆರ್.ಪ್ರಸಾದ್ ಅವರು ಅಖಾಡಕ್ಕಿಳಿದಿದ್ದಾರೆ. ಈ ಕ್ಷೇತ್ರದಲ್ಲಿ  ಪ್ರತಿಷ್ಠಿತ ಗಾರ್ಮೆಂಟ್ಸ್‌ಗಳು ಹೆಚ್ಚಾಗಿವೆ. ಜತೆಗೆ ಕೈಗಾರಿಕೆಗಳೂ ಹೆಚ್ಚಿವೆ. ಗಾರ್ಮೆಂಟ್ಸ್ ಸೇರಿದಂತೆ ಸಣ್ಣಪುಟ್ಟ ವ್ಯಾಪಾರಿ ವರ್ಗದವರು ಅಧಿಕವಾಗಿದ್ದಾರೆ. ಕ್ಷೇತ್ರದಲ್ಲಿ ಕನ್ನಡಿಗರ ಜತೆಗೆ ತಮಿಳು, ಮಲಯಾಳಂ, ತೆಲುಗು ಭಾಷಿಕರು ಸೇರಿದಂತೆ ಉತ್ತರ ಭಾರತದಿಂದ ಉದ್ಯೋಗ ಅರಸಿ ಕ್ಷೇತ್ರದಲ್ಲಿ ಬಾಡಿಗೆ ಮನೆಗಳಲ್ಲಿ ನೆಲೆಸಿ ಜೀವನ ನಡೆಸುವವರು ಹೆಚ್ಚಾಗಿದ್ದಾರೆ. ಒಕ್ಕಲಿಗ, ಎಸ್‌ಸಿ, ಎಸ್ಟಿ, ಮುಸ್ಲಿಂ, ರೆಡ್ಡಿ ಸಮುದಾಯಕ್ಕೆ ಸೇರಿದವರಿದ್ದು, ಅವರೇ ನಿರ್ಣಾಯಕರೂ ಆಗಿದ್ದಾರೆ.

ದೊಡ್ಡಬಳ್ಳಾಪುರ
ರಾಜ್ಯದ ನೇಕಾರಿಕೆ ತೊಟ್ಟಿಲು ದೊಡ್ಡಬಳ್ಳಾಪುರದಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಟಿ. ವೆಂಕಟರಮಣಯ್ಯ, ಬಿಜೆಪಿಯಿಂದ ಮಾಜಿ ಶಾಸಕ ಜೆ. ನರಸಿಂಹಸ್ವಾಮಿ, ಜೆಡಿಎಸ್‌ನಿಂದ ಬಿ. ಮುನೇಗೌಡ ಕಣದಲ್ಲಿದ್ದಾರೆ. ಮೂವರು ಕಳೆದ ಬಾರಿಯೂ ಎದುರಾಳಿಯಾಗಿದ್ದವರು. ಈ ಬಾರಿಯ ಚುನಾವಣೆ ತ್ರಿಕೋನ ಸ್ಪರ್ಧೆಯಿಂದ ಕೂಡಿದೆ. ಕ್ಷೇತ್ರದಲ್ಲಿ ಒಕ್ಕಲಿಗ, ದೇವಾಂಗ(ನೇಕಾರ), ಪರಿಶಿಷ್ಟ ಜಾತಿ-ಸಮುದಾಯಗಳ ಮತಗಳು ಗಣನೀಯ ಸಂಖ್ಯೆಯಲ್ಲಿದ್ದು, ನಿರ್ಣಾಯಕ ಪಾತ್ರ ನಿರ್ವಹಿಸಲಿವೆ. ಉಳಿದಂತೆ ಮುಸ್ಲಿಂ, ಲಿಂಗಾಯತ, ಕುರುಬ, ಬಣಜಿಗ ಸಮುದಾಯಗಳೂ ಪ್ರಬಲ ವರ್ಗಗಳೇ ಆಗಿದ್ದು, ಫಲಿತಾಂಶ ಪ್ರಭಾವಿಸುವ ಸಾಮರ್ಥ್ಯ ಹೊಂದಿವೆ. ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳು, ದಲಿತ ಮತ್ತು ಅಲ್ಪಸಂಖ್ಯಾತ ಮತದಾರರೇ ಅಧಿಕ. ಹೀಗಾಗಿ ಅಹಿಂದ ವೋಟ್ ಬ್ಯಾಂಕ್ ತಂತ್ರ ಈವರೆಗೆ ಕ್ಷೇತ್ರದಲ್ಲಿ ಫಲಕಾರಿಯಾಗಿದೆ. ಈ ಬಾರಿ ಮೂವರು ಅಭ್ಯರ್ಥಿಗಳೂ ಪ್ರಬಲವಾಗಿದ್ದು, ಯಾರೇ ಗೆದ್ದರೂ ಗೆಲುವಿನ ಅಂತರ ತೀರಾ ಕಡಿಮೆ ಇರಲಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.

Follow Us:
Download App:
  • android
  • ios