ರಾಜ್ಯದಲ್ಲಿ ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನಿಲ್ಲದ ಪ್ರಯತ್ನ ಆರಂಭಿಸಿದೆ. ಏಳು ಮಂದಿ ಶಾಸಕರ ಕೊರತೆ ಎದುರಿಸುತ್ತಿರುವ ಬಿಜೆಪಿಗೆ ಅಧಿಕಾರಕ್ಕೇರಲು ಪ್ರತಿಪಕ್ಷದ ಶಾಸಕರಿಗೆ ಗಾಳ ಹಾಕುವುದು ಅನಿವಾರ್ಯವೆಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷದ ಪಾಳಯದಲ್ಲಿ ‘ಆಪರೇಷನ್ ಕಮಲ’ದ ಆತಂಕ ಶುರುವಾಗಿದೆ. 

ಬೆಂಗಳೂರು (ಮೇ 17) : ರಾಜ್ಯದಲ್ಲಿ ಅತಂತ್ರ ರಾಜಕೀಯ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನಿಲ್ಲದ ಪ್ರಯತ್ನ ಆರಂಭಿಸಿದೆ. ಏಳು ಮಂದಿ ಶಾಸಕರ ಕೊರತೆ ಎದುರಿಸುತ್ತಿರುವ ಬಿಜೆಪಿಗೆ ಅಧಿಕಾರಕ್ಕೇರಲು ಪ್ರತಿಪಕ್ಷದ ಶಾಸಕರಿಗೆ ಗಾಳ ಹಾಕುವುದು ಅನಿವಾರ್ಯವೆಂಬಂತಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷದ ಪಾಳಯದಲ್ಲಿ ‘ಆಪರೇಷನ್ ಕಮಲ’ದ ಆತಂಕ ಶುರುವಾಗಿದೆ. 

Add Asianetnews Kannada as a Preferred SourcegooglePreferred

ಮುಖ್ಯವಾಗಿ ಶಿವಾನಂದ ಪಾಟೀಲ, ದೇವಾನಂದ ಚವ್ಹಾಣ, ವೆಂಕಟರಮಣಪ್ಪ, ಬಿ. ಸತ್ಯನಾರಾಯಣ, ಸಿದ್ದು ನ್ಯಾಮೇಗೌಡ, ಸಿ.ಪುಟ್ಟರಂಗಶೆಟ್ಟಿ ಸೇರಿ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಇನ್ನೂ ನಾಲ್ಕು ಶಾಸಕರ ಹೆಸರು ಬಿಜೆಪಿಯ ಮುಖಂಡರ ಪಟ್ಟಿಯಲ್ಲಿದೆ ಎನ್ನುವ ಸುದ್ದಿ ಓಡಾಡುತ್ತಿದೆ. ಆದರೆ, ಇದರಲ್ಲಿ ಬಹುತೇಕರು ಬಿಜೆಪಿ ಸೇರುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. 

ವಿಜಯಪುರದಲ್ಲಿ ಇಬ್ಬರು: ವಿಜಯಪುರ ಜಿಲ್ಲೆಯಲ್ಲಿ ಬಸವನ ಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ, ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಸೇರಿ ಒಟ್ಟು ನಾಲ್ವರು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂಬ ಸುದ್ದಿ ಬುಧವಾರ ಬೆಳಗ್ಗೆಯಿಂದಲೇ ಓಡಾಡುತ್ತಿತ್ತು. ಕಳೆದ ಬಾರಿ ಶಿವಾನಂದ ಪಾಟೀಲರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬಂದರೆ ಈ ಬಾರಿಯೂ ಸಚಿವ ಸ್ಥಾನ ಸಿಗುವುದು ಅನುಮಾನ. ಬಿಜೆಪಿ ಅಂಥ ಅವಕಾಶ ನೀಡಿದರೆ ಆ ಕಡೆ ಹೋದರೂ ಅಚ್ಚರಿ ಇಲ್ಲ ಎನ್ನುವ ಲೆಕ್ಕಾಚಾರವನ್ನು ಸ್ಥಳೀಯವಾಗಿ ಮುಂದಿಡಿಲಾಗುತ್ತಿದೆ. 

ಅದೇ ರೀತಿ ನಾಗಠಾಣದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಇದೇ ಮೊದಲ ಬಾರಿ ಶಾಸಕರಾಗಿದ್ದಾರೆ. ಕಳೆದ ಬಾರಿ ಅವರು ಸ್ವಲ್ಪ ಮತಗಳಲ್ಲೇ ಸೋತಿದ್ದರು. ಒಂದು ವೇಳೆ ಕಾಂಗ್ರೆಸ್ ಜತೆ ದೋಸ್ತಿ ಮಾಡಿದರೆ ಕ್ಷೇತ್ರಕ್ಕೆ ಹೆಚ್ಚು ಲಾಭವಾಗದು ಎಂಬ ಲೆಕ್ಕಾಚಾರ ಮಾಡಿದರೆ ಬಿಜೆಪಿ ಜತೆ ಕೈಜೋಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಾದ ದದ್ದಲ ಬಸನಗೌಡ, ಪ್ರತಾಪಗೌಡ ಪಾಟೀಲ್ ಮತ್ತು ಡಿ.ಎಸ್. ಹುಲಗೇರಿ, ಜೆಡಿಎಸ್‌ನ ರಾಜಾ ವೆಂಕಟಪ್ಪ ನಾಯಕ ಮತ್ತು ವೆಂಕಟರಾವ್ ನಾಡಗೌಡ ಹೆಸರೂ ಆಪರೇಷನ್ ಕಮಲದ ಪಟ್ಟಿಯಲ್ಲಿದೆ ಎನ್ನಲಾಗುತ್ತಿದ್ದರೂ ಇದೆಲ್ಲ ಗಾಳಿ ಸುದ್ದಿ ಅಷ್ಟೆ ಎಂದೂ ವಿಶ್ಲೇಷಿಸಲಾಗುತ್ತಿದೆ. 

ಇನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕ್ಷೇತ್ರದ ‘ಕೈ’ ಶಾಸಕ ಸಿದ್ದು ನ್ಯಾಮಗೌಡ ಹೆಸರೂ ಬಿಜೆಪಿ ಪಟ್ಟಿಯಲ್ಲಿದೆ ಎನ್ನುವ ಊಹಾಪೋಹಗಳಿವೆ. ತುಮಕೂರು ಜಿಲ್ಲೆಯ ಶಿರಾ ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ ಹಾಗೂ ಪಾವಗಡದ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಅವರನ್ನು ಬಿಜೆಪಿಯವರು ಸಂಪರ್ಕಿ ಸಿದ್ದಾರೆ ಎಂಬ ವದಂತಿ ದೊಡ್ಡ ಮಟ್ಟದಲ್ಲಿ ಹಬ್ಬಿದೆ. ಆದರೆ ಇವರಿಬ್ಬರೂ ವದಂತಿಯನ್ನು ಅಲ್ಲಗೆಳೆದಿದ್ದಾರೆ.