Asianet Suvarna News Asianet Suvarna News

Karnataka Civil Services : ಸಿವಿಲ್‌ ಸೇವೆ ಹುದ್ದೆ ಭರ್ತಿಗೆ ಹೊಸ ಮಾರ್ಗಸೂಚಿ

  •  ಸಿವಿಲ್‌ ಸೇವೆ ಹುದ್ದೆ ಭರ್ತಿಗೆ ಹೊಸ ಮಾರ್ಗಸೂಚಿ
  • ಮಂಜೂರಾದ ಸ್ಥಾನಗಳ ಬದಲಾಗಿ ಹುದ್ದೆಗಳ ಆಧಾರದ ಮೇಲೆ ವರ್ಗೀಕರಿಸಿ ನೇಮಕಾತಿ
  • ಸರ್ಕಾರದ ನಿರ್ಧಾರದಿಂದ ಮುಂಬಡ್ತಿ ಅವಕಾಶ ಹೆಚ್ಚು
New Guidelines For Civil Services  Appointment  snr
Author
Bengaluru, First Published Dec 11, 2021, 9:54 AM IST

 ಬೆಂಗಳೂರು (ಡಿ.11):  ರಾಜ್ಯ ಸಿವಿಲ್‌ ಸೇವೆಗಳಲ್ಲಿನ (Civil Service ) ಹುದ್ದೆ ಭರ್ತಿಗೆ, ಮಂಜೂರಾದ ಸ್ಥಾನಗಳ ಆಧಾರದ ವರ್ಗೀಕರಣದ ಬದಲಿಗೆ ಹುದ್ದೆಗಳ ಆಧಾರದ ಮೇಲೆ ವರ್ಗೀಕರಣ ಮಾಡಿ ನೇಮಕಾತಿ ಮಾಡುವಂತೆ ಸರಕಾರ ಆದೇಶ ಹೊರಡಿಸಿದೆ. ಅಂದರೆ, ನೇಮಕಾತಿ ಹಾಗೂ ಮುಂಬಡ್ತಿ ಮೂಲಕ ನೇಮಕವಾಗಬೇಕಿರುವ ಅನುಪಾತಕ್ಕಾಗಿಯೇ ಕಾಯದೆ ನೇಮಕಾತಿ ಮೂಲಕ ಭರ್ತಿ ಮಾಡುವ ಹುದ್ದೆಗಳನ್ನು ನೇಮಕಾತಿ ಹಾಗೂ ಮುಂಬಡ್ತಿ ಆಧಾರದ ಮೇಲೆ ಭರ್ತಿ ಮಾಡಬೇಕಿರುವ ಹುದ್ದೆಗಳನ್ನು ಪ್ರತ್ಯೇಕವಾಗಿ ಮುಂಬಡ್ತಿ ಹುದ್ದೆಗಳಾಗಿ ವರ್ಗೀಕರಣ ಮಾಡಿ ನೇಮಕಾತಿ ಮಾಡುವಂತೆ ತಿಳಿಸಲಾಗಿದೆ.

ರಾಜ್ಯದ (Karnataka ) ವಿವಿಧ ಇಲಾಖೆಗಳಲ್ಲಿ ಸದ್ಯ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನೇರ ನೇಮಕಾತಿ ಹಾಗೂ ಮುಂಬಡ್ತಿಗೆ (ಅನುಪಾತ/ ಶೇಕಡಾವಾರು) ಲಭ್ಯವಾಗುವಂತಹ ಹುದ್ದೆಗಳನ್ನು ಮಂಜೂರಾದ ಹುದ್ದೆಗಳಿಂದೇ ಪರಿಗಣಿಸಿ ಬಡ್ತಿ ನೀಡಲಾಗುತ್ತಿತ್ತು. ಇದರಿಂದ ಬಡ್ತಿ ಹಾಗೂ ನೇಮಕಾತಿ ಮೂಲಕ ಬಡ್ತಿ ಪಡೆಯುವವರು ಪರಸ್ಪರ ಜ್ಯೇಷ್ಠತೆ ಹಾಗೂ ನೇಮಕಾತಿ ಸಮಯ ಬರುವವರೆಗೂ ಎರಡೂ ಹುದ್ದೆಗಳವರೂ ಕಾಯಬೇಕಾಗುತ್ತಿತ್ತು. ಈ ವಿಧಾನದಿಂದ ನೌಕರರಿಗೆ ಹೆಚ್ಚಿನ ಪ್ರಮಾಣದಲ್ಲಿ ಬಡ್ತಿ ಅವಕಾಶ ಸಿಗುತ್ತಿರಲಿಲ್ಲ. ಹಾಗಾಗಿ ಈ ವಿಧಾನದಲ್ಲಿ(Vidhan soudha) ಬದಲಾವಣೆಗೆ ನೌಕರರ ಸಂಘಟನೆಗಳು ಒತ್ತಾಯಿಸಿದ್ದವು. ಅಲ್ಲದೆ ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿದ್ದವು.

ನ್ಯಾಯಾಲಯದ ನಿರ್ದೇಶನದಂತೆ ಸಚಿವ ಸಂಪುಟ ಸಭೆಯಲ್ಲೂ ಈ ವಿಚಾರವಾಗಿ ಚರ್ಚೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಪಿ. ಹೇಮಲತಾ (P Hemalatha) ಅವರು ಇದೀಗ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಇದರ ಅನ್ವಯ ರಾಜ್ಯ  ಸಿವಿಲ್‌ ಸೇವೆಗಳಲ್ಲಿನ (Civil Service) ಹುದ್ದೆ ಭರ್ತಿ ಸಂದರ್ಭದಲ್ಲಿ ಮಂಜೂರಾದ ಸ್ಥಾನ ಆಧಾರಿತ ವರ್ಗೀಕರಣಕ್ಕೆ ಬದಲಾಗಿ ಹುದ್ದೆ ಆಧಾರಿತ ವರ್ಗೀಕರಣ ಪಾಲಿಸುವಂತೆ ತಿಳಿಸಲಾಗಿದೆ.

ಒಂದೊಮ್ಮೆ ಹಳೆಯ ವಿಧಾನದಂತೆ ಮಂಜೂರಾದ ಸ್ಥಾನ ಆಧಾರಿತ ವರ್ಗೀಕರಣದಡಿ ಕೈಗೊಂಡು ಈವರೆಗೆ ಭರ್ತಿಯಾಗದಿದ್ದರೆ ತಕ್ಷಣದಿಂದ ಜಾರಿಗೆ ಬರುವಂತೆ ಅದನ್ನು ರದ್ದುಪಡಿಸಬೇಕು. ಮುಂದೆ ಹುದ್ದೆ ಆಧಾರಿತ ಪದ್ಧತಿಯಂತೆ ವರ್ಗೀಕರಣ ಮಾಡಿ ಭರ್ತಿ ಮಾಡಬೇಕು ಎಂದು ಸೂಚಿಸಲಾಗಿದೆ.

ಪರಿಶಿಷ್ಟಜಾತಿ/ ಪಂಗಡ/ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ನೇರ ನೇಮಕಾತಿ ಬ್ಯಾಕ್‌ಲಾಗ್‌ ಹಾಗೂ ಪರಿಶಿಷ್ಟಜಾತಿ/ ಪಂಗಡಗಳಿಗೆ ಸೇರಿದ ಮುಂಬಡ್ತಿ ಬ್ಯಾಕ್‌ ಲಾಕ್‌ ಹುದ್ದೆ ಬಾಕಿಯಿದ್ದರೆ ಅವು ರದ್ಧಾಗುವುದಿಲ್ಲ. ಆದರೆ ನೇರ ನೇಮಕಾತಿ ಹಾಗೂ ಮುಂಬಡ್ತಿಯಲ್ಲಿ ಗುರುತಿಸಲಾದ ಬ್ಯಾಕ್‌ ಲಾಗ್‌ ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ಮುಂಬಡ್ತಿಗೆ ನಿಗದಿಪಡಿಸಲಾದ ಅನುಪಾತ/ ಶೇಕಡಾವಾರು ಪರಿಮಿತಿಯಲ್ಲೇ ಭರ್ತಿ ಮಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಅಲ್ಲದೆ, ಈ ಆದೇಶ ಜಾರಿಗೆ ಬರುವ ಮೊದಲು ನಿರ್ಧರಿಸಲಾದ ಜೇಷ್ಠತೆ ಹಾಗೂ ಅಂತಿಮಗೊಳಿಸಲಾದ ಜೇಷ್ಠತಾ ಪಟ್ಟಿಗಳ ಮೇಲೆ ಈ ಹೊಸ ಮಾರ್ಗಸೂಚಿಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಇನ್ನು ಮುಂದೆ ಕರ್ನಾಟಕ ಸರಕಾರಿ ನೌಕರರ (ಜೇಷ್ಠತೆ) ನಿಯಮಗಳು 1957ರ ನಿಯಮ 10ರಡಿ ಜೇಷ್ಠತಾ ಪಟ್ಟಿಸಿದ್ಧಪಡಿಸುವಾಗ ಪರಿಷ್ಕೃತ ನಮೂನೆಗಳಲ್ಲಿ ಪ್ರತಿವರ್ಷ ಡಿ.31ಕ್ಕೆ ಅಂತ್ಯಗೊಂಡಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿಸಿದ್ಧಪಡಿಸಬೇಕು. ಆಕ್ಷೇಪಣೆಗಳನ್ನು ಆಹ್ವಾನಿಸಿ, ನಿಯಮಾನುಸಾರ ಪರಿಶೀಲಿಸಿ ಮಾ. 31ರೊಳಗೆ ಅಂತಿಮ ಜೇಷ್ಠತಾ ಪಟ್ಟಿಪ್ರಕಟಿಸಬೇಕು ಎಂದು ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ತಿಳಿಸಲಾಗಿದೆ.

ಸರ್ಕಾರದ (Govt) ಈ ಆದೇಶದಿಂದ ರಾಜ್ಯ ಸರ್ಕಾರಿ ನೌಕರರಿಗೆ ಶೇ.25-30ರಷ್ಟು ಮುಂಬಡ್ತಿ ಅವಕಾಶಗಳು ಹೆಚ್ಚಾಗಲಿವೆ, ನೇರ ನೇಮಕಾತಿ-ಮುಂಬಡ್ತಿ ಹುದ್ದೆಗಳ ವರ್ಗಿಕರಣದಲ್ಲಿದ್ದ ಅಸಮತೋಲನ ಸರಿಯಾಗಲಿದೆ, ಸಂಘದ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ (CM), ಸಚಿವ ಸಂಪುಟದ ಸಚಿವರು, ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯ ಸರ್ಕಾರಿ ನೌಕರರ ಪರವಾಗಿ ಅಭಿನಂದನೆ ಹೇಳುತ್ತೇವೆ

-ಸಿ.ಎಸ್‌. ಷಡಕ್ಷರಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

Follow Us:
Download App:
  • android
  • ios