ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟ RCB;ಸೋತರೆ ಪ್ಲೇ-ಆಫ್ ರೇಸ್ನಿಂದ KXIP ಔಟ್?
ಗೆಲುವಿನ ಲಯದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದೆ. ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವು ದಾಖಲಿಸಿ ಪ್ಲೇ ಆಫ್ ಹಾದಿ ಸುಗಮಗೊಳಿಸುವ ಲೆಕ್ಕಾಚಾರದಲ್ಲಿದೆ. ಇತ್ತ ಪಂಜಾಬ್ ಮತ್ತೊಂದು ಸೋಲು ಕಂಡರೆ ಪ್ಲೇ ಆಫ್ ರೇಸ್ನಿಂದ ಬಹುತೇಕ ಹೊರಬೀಳಲಿದೆ.
ಶಾರ್ಜಾ(ಅ.15): ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ 13ನೇ ಆವೃತ್ತಿಯ ಪ್ಲೇ-ಆಫ್ ರೇಸ್ನಲ್ಲಿ ಉಳಿದುಕೊಳ್ಳಬೇಕಿದ್ದರೆ ಬಾಕಿ ಇರುವ ಎಲ್ಲಾ 7 ಪಂದ್ಯಗಳಲ್ಲಿ ಗೆಲ್ಲಲೇಬೇಕು. ತಂಡ ಆಡಿರುವ 7 ಪಂದ್ಯಗಳಲ್ಲಿ ಈಗಾಗಲೇ 6ರಲ್ಲಿ ಸೋಲುಂಡಿದೆ. ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಲಿದ್ದು, ಈ ಪಂದ್ಯದಲ್ಲಿ ಸೋಲುಂಡರೆ ತಂಡ ಪ್ಲೇ-ಆಫ್ ಪೈಪೋಟಿಯಿಂದ ಬಹುತೇಕ ಹೊರಬಿದ್ದಂತಾಗುತ್ತದೆ.
RCBಗೆ ಸೇಡಿನ ಪಂದ್ಯ, ಪಂಜಾಬ್ಗೆ ಗೆಲುವು ಅನಿವಾರ್ಯ: ರೋಚಕ ಫೈಟ್ಗೆ ವೇದಿಕೆ ರೆಡಿ!.
ಉತ್ಸಾಹದಲ್ಲಿ ಆರ್ಸಿಬಿ: ಮತ್ತೊಂದೆಡೆ ಆರ್ಸಿಬಿ ಜಯದ ಲಯದಲ್ಲಿದ್ದು, ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ವಿರಾಟ್ ಕೊಹ್ಲಿ ಪಡೆ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಜಯಿಸಿದ್ದು, ಪ್ಲೇ-ಆಫ್ನತ್ತ ದಾಪುಗಾಲಿರಿಸಿದೆ. ಕ್ರಿಸ್ ಮೋರಿಸ್ ಸೇರ್ಪಡೆ ತಂಡದ ಸಮತೋಲನ ಹೆಚ್ಚಿಸಿದೆ. ಅಗ್ರ ಕ್ರಮಾಂಕದ ಭರ್ಜರಿ ಬೌಲಿಂಗ್ ಜೊತೆಗೆ ಬೌಲರ್ಗಳು ಅಸಾಧಾರಣ ಪ್ರದರ್ಶನ ನೀಡುತ್ತಿದ್ದಾರೆ. ಪ್ರಮುಖವಾಗಿ ವಾಷಿಂಗ್ಟನ್ ಸುಂದರ್ ಹೆಚ್ಚು ಪರಿಣಾಮಕಾರಿಯಾಗಿದ್ದು, ಲೆಗ್ ಸ್ಪಿನ್ನರ್ ಚಹಲ್ ಸಹ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿದ್ದಾರೆ. ಆರ್ಸಿಬಿ ಮತ್ತೊಂದು ಭರ್ಜರಿ ಪ್ರದರ್ಶನದ ವಿಶ್ವಾಸದಲ್ಲಿದೆ.
ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಸಂಭಾವ್ಯ RCB ತಂಡ ಪ್ರಕಟ; ಒಂದು ಬದಲಾವಣೆ?
ಕಿಂಗ್ಸ್ಗೆ ಗೇಲ್ ಬಲ: ಅನಾರೋಗ್ಯದಿಂದ ಬಳಲುತ್ತಿದ್ದು ಕ್ರಿಸ್ ಗೇಲ್ ಚೇತರಿಸಿಕೊಂಡಿದ್ದು, ಈ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಲಯ ಕಂಡುಕೊಳ್ಳದ ಗ್ಲೆನ್ ಮ್ಯಾಕ್ಸ್ವೆಲ್ ಬದಲಿಗೆ ಗೇಲ್ರನ್ನು ಆಡಿಸುವುದು ಪಂಜಾಬ್ಗಿರುವ ಮೊದಲ ಆಯ್ಕೆ. ಇಲ್ಲವೇ ದುಬಾರಿಯಾಗುತ್ತಿರುವ ವಿದೇಶಿ ಬೌಲರ್ ಬದಲಿಗೆ ಗೇಲ್ರನ್ನು ಕಣಕ್ಕಿಳಿಸಬಹುದು. ಪಂಜಾಬ್ ತಂಡ ಟೂರ್ನಿಯಲ್ಲಿ ಒಂದೇ ಒಂದು ಗೆಲುವು ಕಂಡಿದ್ದು, ಅದು ಸೆ.24ರಂದು ಆರ್ಸಿಬಿ ವಿರುದ್ಧ ನಡೆದ ಪಂದ್ಯದಲ್ಲೇ ದಾಖಲಿಸಿದ್ದಾಗಿದೆ. ಹಿಂದಿನ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸಬಹುದು. ಸಹಜವಾಗಿಯೇ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೇಲೆ ಹೆಚ್ಚಿನ ಒತ್ತಡವಿದೆ.
ಒಟ್ಟು ಮುಖಾಮುಖಿ: 25
ಆರ್ಸಿಬಿ: 12
ಪಂಜಾಬ್: 13
ಸ್ಥಳ: ಶಾರ್ಜಾ, ಪಂದ್ಯ: ಸಂಜೆ 7.30ಕ್ಕೆ
ಪಿಚ್ ರಿಪೋರ್ಟ್
ಶಾರ್ಜಾ ಪಿಚ್ ಮೊದಲಿನಂತೆ ಸಂಪೂರ್ಣವಾಗಿ ಬ್ಯಾಟ್ಸ್ಮನ್ಗಳಿಗೆ ನೆರವಾಗುತ್ತಿಲ್ಲ. ಆರ್ಸಿಬಿ-ಕೆಕೆಆರ್ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಹೆಚ್ಚು ಪರಿಶ್ರಮ ವಹಿಸಬೇಕಾಯಿತು. ಸರಿಯಾದ ಲೈನ್ ಅಂಡ್ ಲೆಂಥ್ ಕಾಪಾಡಿಕೊಂಡರೆ ಎದುರಾಳಿಯನ್ನು 160-170ರೊಳಗೆ ಕಟ್ಟಿಹಾಕಲು ಸಾಧ್ಯ ಎನ್ನುವುದನ್ನು ಆರ್ಸಿಬಿ ಬೌಲರ್ಗಳು ತೋರಿಸಿಕೊಟ್ಟಿದ್ದಾರೆ. ಆದರೂ ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟ್ ಮಾಡಲು ಎದುರು ನೋಡುವ ಸಾಧ್ಯತೆ ಹೆಚ್ಚು.