ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಹೇಡಿತನದ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ನೀಡುವುದಾಗಿ ಮತ್ತು ಮುಂದೆ ಇಂತಹ ಕೃತ್ಯಕ್ಕೆ ಯಾರೂ ಧೈರ್ಯ ಮಾಡದಂತೆ ಪಾಠ ಕಲಿಸುವುದಾಗಿ ಖಡಕ್ ಎಚ್ಚರಿಕೆ 

ನವದೆಹಲಿ (ನ.13): ದೆಹಲಿಯ ಕೆಂಪು ಕೋಟೆ ಬಳಿ ನಡೆದ ಭಯೋತ್ಪಾದಕ ಕಾರು ಸ್ಫೋಟ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಯೋತ್ಪಾದಕರಿಗೆ ಕಠಿಣ ಸಂದೇಶವನ್ನು ನೀಡಿದ್ದಾರೆ. ಮುಂದೆ ಯಾವತ್ತೂ ಇಂಥ ಕೆಲಸ ಮಾಡಲು ಧೈರ್ಯ ಮಾಡಿರಬಾರದು' ಅಪರಾಧಿಗಳನ್ನ ಆ ರೀತಿ ಶಿಕ್ಷಿಸಲಿದ್ದೇವೆ ಎಂದು ಉಗ್ರರಿಗೆ ಎಚ್ಚರಿಕೆ ನೀಡಿದ್ದಾರೆ.

ದೆಹಲಿ ಕಾರ್ ಬಾಂಬ್ ಸ್ಫೋಟ ಸಂಬಂಧ ಗುರುವಾರ ಸಂಜೆ ಗೃಹ ಸಚಿವರ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ (ಐಬಿ) ಮುಖ್ಯಸ್ಥರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.

ಈ ಹೇಡಿತನದ ಕೃತ್ಯಕ್ಕೆ ಕಠಿಣ ಶಿಕ್ಷೆ:

ಈ ಹೇಡಿತನದ ಕೃತ್ಯ ಎಸಗಿದವರನ್ನು ಮತ್ತು ಅದರ ಹಿಂದಿರುವವರನ್ನು ಕಠಿಣವಾಗಿ ಶಿಕ್ಷಿಸಲಾಗುತ್ತದೆ. ಭಾರತ ಸರ್ಕಾರ ಮತ್ತು ಗೃಹ ಸಚಿವಾಲಯ ಈ ವಿಚಾರವಾಗಿ ಸಂಪೂರ್ಣ ಬದ್ಧದವಾಗಿದೆ. ಈ ಘಟನೆಯನ್ನು ದೇಶದ ಭದ್ರತೆಗೆ ಸವಾಲು ಎಂದು ಕರೆದ ಅವರು, 'ದೆಹಲಿ ಭಯೋತ್ಪಾದಕ ದಾಳಿಯ ಅಪರಾಧಿಗಳಿಗೆ ನೀಡಲಾಗುವ ಶಿಕ್ಷೆಯು ನಮ್ಮ ದೇಶದಲ್ಲಿ ಯಾರೂ ಅಂತಹ ದಾಳಿ ನಡೆಸುವ ಧೈರ್ಯ ಮಾಡಬಾರದು ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸುತ್ತದೆ. ಕಾರ್ ಬಾಂಬ್ ಸ್ಫೋಟಕ್ಕೆ ಕಾರಣರಾದ ಎಲ್ಲರಿಗೂ ಕಠಿಣ ಶಿಕ್ಷೆ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪ ಖಂಡಿತವಾಗಿಯೂ ಈಡೇರುತ್ತದೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ ಭಯೋತ್ಪಾದನೆ ವಿರುದ್ಧ ಸಮರ:

ಪ್ರಧಾನಿಯವರ ನೇತೃತ್ವದಲ್ಲಿ ಕಳೆದ 11 ವರ್ಷಗಳಲ್ಲಿ ಭಯೋತ್ಪಾದನೆಯ ವಿರುದ್ಧ ಭಾರತ ನಡೆಸಿದ ಹೋರಾಟವನ್ನು ಇಡೀ ಜಗತ್ತು ಗುರುತಿಸಿದೆ. ಗುಪ್ತಚರ ಹಂಚಿಕೆ, ಗಡಿ ಭದ್ರತೆ ಮತ್ತು ಜಂಟಿ ತನಿಖೆಗಳ ಕ್ಷೇತ್ರಗಳಲ್ಲಿ ಇತರ ದೇಶಗಳೊಂದಿಗೆ ಸಹಕಾರ ಹೆಚ್ಚಾಗಿದ್ದು, ಭಾರತದ ಕಾರ್ಯವನ್ನು ಜಾಗತಿಕ ಮಟ್ಟದಲ್ಲಿ ಗೌರವಕ್ಕೆ ಪಾತ್ರವಾಗಿದೆ ಎಂದರು. ಇಂತಹ ಘಟನೆಗಳನ್ನು ಪ್ರತ್ಯೇಕವಾಗಿ ನೋಡಲಾಗುವುದಿಲ್ಲ. ಅವುಗಳಿಗೆ ನಮ್ಮ ಪ್ರತಿಕ್ರಿಯೆಯು ಕಠಿಣವಾಗಿರುತ್ತದೆ. ದೇಶದ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ.

ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ತನಿಖೆಯನ್ನು ತೀವ್ರಗೊಳಿಸಿವೆ. ಈ ಸಭೆಯಲ್ಲಿ ಭಯೋತ್ಪಾದಕರ ವಿರುದ್ಧ ಭವಿಷ್ಯದ ಕ್ರಮಗಳು ಮತ್ತು ಭದ್ರತಾ ವ್ಯವಸ್ಥೆಯ ಬಲಪಡಿಕೆಯ ಬಗ್ಗೆ ವಿವರವಾದ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯಿಂದ ದೆಹಲಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಜನರಲ್ಲಿ ಆತಂಕ ಹರಡುವುದನ್ನು ತಡೆಯಲು ಪೊಲೀಸ್ ಇಲಾಖೆಗಳು ಸಜ್ಜುಗೊಂಡಿವೆ. ಈ ಸ್ಫೋಟಗಳು ಭಾರತದ ಭದ್ರತಾ ಸಂಸ್ಥೆಗಳಿಗೆ ಹೊಸ ಸವಾಲು ಹಾಕಿದೆ.