ಕಾಶ್ಮೀರಿ ಪಂಡಿತ್ ಸರಳಾ ಭಟ್ ಪ್ರಕರಣ 36 ವರ್ಷ ಬಳಿಕ ಸದ್ದು ಮಾಡುತ್ತಿದೆ. ಕಾಶ್ಮೀರ ಕಣಿವೆಯಿಂದ ಪಂಡಿತರ ಓಡಿಸಲು ಉಗ್ರರು ನಡೆಸಿದ ನರಮೇಧಗಳಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಸರಳಾ ಭಟ್ ದಾರುಣವಾಗಿ ಅಂತ್ಯವಾಗಿದ್ದಳು. ಏನಿದು ಪ್ರಕರಣ, ಈಗಿನ ಬೆಳವಣಿಗೆ ಏನು?
ಕಾಶ್ಮೀರ (ಜೂ.29) ಭಾರತದ ಮೇಲೆ ಮೊಘಲರು, ಸುಲ್ತಾನರು, ಬ್ರಿಟೀಷರು ಸೇರಿದಂತೆ ಹಲವು ದಾಳಿಕೋರರ ದಾಳಿಯಲ್ಲಿ ನಲುಗಿದ ಅದೆಷ್ಟೋ ಘಟನೆಗಳು ಇತಿಹಾಸ ಪುಸ್ತಕದಲ್ಲಿ ಇಲ್ಲದಿದ್ದರೂ ಅಚ್ಚಳಿಯದೇ ಉಳಿದಿದೆ. ಸ್ವಾತಂತ್ರ್ಯ ಭಾರತದಲ್ಲಿ ಅದರಲ್ಲೂ 90ರ ದಶಕದಲ್ಲಿ ನಮ್ಮ ಕಣ್ಣಮುಂದೆ ನಡೆದ ಘನೋಘರ ಕಾಶ್ಮೀರ ಪಂಡಿತರ ನರಮೇಧಕ್ಕೆ ಇನ್ನು ನ್ಯಾಯ ಸಿಕ್ಕಿಲ್ಲ. ಅಂದು ಕಾಶ್ಮೀರದಿಂದ ಓಡಿ ಹೋದ ಪಂಡಿತರು ಇಂದಿಗೂ ಮರಳಲು ಸಾಧ್ಯವಾಗಿಲ್ಲ ಅನ್ನೋದು ದುರಂತ 90ರ ದಶಕದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾಜನೆ ಚಟುವಟಿಕೆ ತೀವ್ರವಾಗಿತ್ತು. ಈ ವೇಳೆ ಕಾಶ್ಮೀರಿ ಪಂಡಿತರನ್ನು ಉಗ್ರರು ಹುಡುಕಿ ಹುಡುಕಿ ಹತ್ಯೆ ಮಾಡಿದ್ದರು. ಈ ಪೈಕಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಸರಳಾ ಭಟ್ ಕೂಡ ದಾರುಣ ಅಂತ್ಯಕಂಡಿದ್ದರು. ಬರೋಬ್ಬರಿ 36 ವರ್ಷಗಳ ಬಳಿಕ ತನಿಖೆ ನಡೆಸಿದ ಪೊಲೀಸರು ಇದೀಗ ಜೈಲಿನಲ್ಲಿರುವ ಉಗ್ರ, ಹಾಗೂ ಮಾಸ್ಟರ್ ಮೈಂಡ್ ಯಾಸಿನ್ ಮಲಿಕ್ ಸೇರಿದಂತೆ ಐವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಸರಳಾ ಭಟ್ ಪ್ರಕರಣವನ್ನು ಜಮ್ಮು ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (SIA) ತನಖೆ ನಡೆಸಿ ಇದೀಗ ಶ್ರೀನಗರದ ವಿಶೇಷ ನ್ಯಾಯಲಯಕ್ಕೆ 737 ಪುಟುಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಸರಳಾ ಭಟ್ ಅಪಹರಣ, ಅತ್ಯಾ** ಹಾಗೂ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸದ್ಯ ಜೈಲಿನಲ್ಲಿರುವ ಉಗ್ರ ಯಾಸಿನ್ ಮಲಿಕ್ ಎಂದು ಉಲ್ಲೇಖಿಸಿದೆ. ಈತನೂ ಸೇರಿದಂತೆ ಐವರು ಉಗ್ರರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
ಏನಿದು ಘಟನೆ?
1989 ಹಾಗೂ 1990ರಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನು ಉಗ್ರರು ಟಾರ್ಗೆಟ್ ಮಾಡಿದ್ದರು. ಮಸೀದಿಗಳಲ್ಲಿ ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರವಾಗಬೇಕು, ಇಲ್ಲಾ ಕಾಶ್ಮೀರದಿಂದಲೇ ಈಗಲೇ ಹೊರಡಬೇಕು ಎಂದು ಕರೆ ನೀಡಲಾಗಿತ್ತು. ಮನೆ ಮನೆಗಳಿಗೆ ನುಗ್ಗಿ ಪುರುಷರ ಮೇಲೆ ಗುಂಡಿನ ದಾಳಿ, ಮಾರಾಕಾಸ್ತ್ರಗಳಿಂದ ದಾಳಿ ಮಾಡಲಾಗಿತ್ತು. ಮಹಿಳೆಯರನ್ನು ಹೊತ್ತೊಯ್ದು ಹಾಳು ಮಾಡಿ ಬಳಿಕ ಹತ್ಯೆ ಮಾಡಲಾಗುತ್ತಿತ್ತು. ಭಯೋತ್ಪಾದನೆ ಅತ್ಯಂತ ಉಚ್ಚಸ್ಥಿತಿಗೆ ತಲುಪಿತ್ತು. ಅಂದು ಎಪ್ರಿಲ್ 18, 1990. ಯಾಸಿನ್ ಮಲಿಕ್ ಮುಂದಾಳತ್ವದ ಜೆಕೆಎಲ್ಎಫ್ ಉಗ್ರರು SKIMS ಆಸ್ಪತ್ರೆಗೆ ನುಗ್ಗಿದ್ದರು. ಇಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಕಾಶ್ಮೀರಿ ಪಂಡಿತ್ ಸರಳಾ ಭಟ್ನ್ನ ಗನ್ ಪಾಯಿಂಟ್ನಲ್ಲಿ ಅಪಹರಿಸಿದ್ದರು.
ಕಾಶ್ಮೀರಿ ಪಂಡಿತರು ಕಾಶ್ಮೀರ ತೊರೆಯಲು ಎಚ್ಚರಿಕೆ ನೀಡಿದರೂ ಸರಳಾ ಭಟ್ ಧೈರ್ಯವಾಗಿ ಎದೆಗುಂದದೆ ಸೇವೆಗೆ ಹಾಜರಾಗುತ್ತಿದ್ದರು. ಇದನ್ನು ಅರಿತ ಉಗ್ರರು ಪಾಠ ಕಲಿಸಲು ಹಾಗೂ ಎಲ್ಲಾ ಪಂಡಿತರು ಭಯಬೀಳುವಂತೆ ಮಾಡಲು ಸರಳಾ ಭಟ್ ಅಪಹರಿಸಿದ್ದರು. ಬಳಿಕ ಯಾಸಿನ್ ಮಲಿಕ್ ಸೇರಿದಂತೆ ಜೆಕೆಎಲ್ಎಫ್ ಉಗ್ರರ ಒಬ್ಬರ ಮೇಲೊಬ್ಬರಂತೆ ಎರಗಿದ್ದರು. ಎಪ್ರಿಲ್ 19, 1990ರಂದು ಶ್ರೀನಗರದ ಮಲ್ಲಾಬಾಗ್ ಉಮರ್ ಕಾಲೋನಿ ರಸ್ತೆ ಬದಿಯಲ್ಲಿ ಸರಳಾ ಭಟ್ ಶವ ಪತ್ತೆಯಾಗಿತ್ತು. ಈಕೆಯ ಮೃತದೇಹದ ಮೇಲೆ ಪೊಲೀಸ್ಗೆ ಸೂಚನೆ ನೀಡುವಾಕೆ ಎಂದು ಬರೆಯಲಾಗಿತ್ತು.
ಸರಳಾ ಭಟ್ ಮನೆ ಮೇಲೆ ಗ್ರೇನೇಡ್ ದಾಳಿ ನಡೆಸಲಾಯಿತು. ಈ ಘಟನೆ ನೋಡಿದ ಬಹುತೇಕ ಕಾಶ್ಮೀರಿ ಪಂಡಿತರು ರಾತ್ರೋರಾತ್ರಿ ಮನೆ ತೊರೆದರು. ಪ್ರಾಣ ಉಳಿಸಿಕೊಳ್ಳಲು ಪಲಾಯನ ಮಾಡಿದರು. ಇತ್ತ ದಾರಿಯಲ್ಲಿ ಸಿಕ್ಕ ಮೃತೇದಹದ ಬಗ್ಗೆ ದೂರು ನೀಡಲು ಯಾರು ಇಲ್ಲದಾದರು. ಉಗ್ರರ ಭಯದಿಂದ ಸಾಕ್ಷಿ ನುಡಿಯಲು ಯಾರು ಮುಂದೆ ಬರಲಿಲ್ಲ.
2024ರ ಮಾರ್ಚ್ 18ರಂದು ಜಮ್ಮು-ಕಾಶ್ಮೀರ ಡಿಜಿಪಿ ಪ್ರಕರಣದ ತನಿಖೆಗೆ ಮರು ಆದೇಶ ನೀಡಿದ್ದರು. SIA ತನಿಖೆ ಜವಾಬ್ದಾರಿ ಹೊತ್ತುಕೊಂಡಿತ್ತು. ಕಳೆದ 10 ತಿಂಗಳಿನಿಂದ ಪೊಲೀಸರು 36 ವರ್ಷಗಳ ಹಿಂದಿನ ಪ್ರಕರಣದ ತನಿಖೆ ನಡೆಸಿದ್ದರು. ಹಲವು ಸಾಕ್ಷಿಗಳನ್ನು ಸಂದರ್ಶಿಸಿದ್ದರು, ಡಿಜಿಟಲ್ ಸಾಕ್ಷ್ಯ, ಪೊರೆನ್ಸಿಕ್ ಸಾಕ್ಷ್ಯ ಸೇರಿದಂತೆ ಮಹತ್ವದ ಸಾಕ್ಷಿ ಸಂಗ್ರಹಿಸಿದ್ದರು. ಇದೀಗ ಪೊಲೀಸರು 737 ಪುಟಗಳ ಚಾರ್ಜ್ಶೀಟ್ನ್ನು ಶ್ರೀನಗರ ನ್ಯಾಯಲಯಕ್ಕೆ ಸಲ್ಲಿಸಿದ್ದಾರೆ.
ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವ ಆರೋಪಿಗಳ ವಿವರ
- ಯಾಸಿನ್ ಮಲಿಕ್ (ಪ್ರಮುಖ ರೂವಾರಿ, ಸದ್ಯ ಜೈಲಿನಲ್ಲಿದ್ದಾನೆ).
- ಖುರ್ಷಿದ್ ಅಹ್ಮದ್ ಚಾಲ್ಕೂ (ಸರಳಾ ಭಟ್ ಅವರ ಮೇಲೆ ನೇರವಾಗಿ ಗುಂಡು ಹಾರಿಸಿದ ಉಗ್ರ, ಸದ್ಯ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತಲೆಮರೆಸಿಕೊಂಡಿದ್ದಾನೆ).
- ಅಬ್ದುಲ್ ಹಮೀದ್ ಶೇಖ್ (ಮೃತಪಟ್ಟಿದ್ದಾನೆ).
- ಮೊಹಮ್ಮದ್ ಯೂಸುಫ್ ಸೋಫಿ ಅಲಿಯಾಸ್ ಇದ್ರೀಸ್ (ಮೃತಪಟ್ಟಿದ್ದಾನೆ).
- ಗುಲಾಮ್ ಮೊಹಮ್ಮದ್ ತಪ್ಲೂ (ಮೃತಪಟ್ಟಿದ್ದಾನೆ).


