Asianet Suvarna News Asianet Suvarna News

UP Elections: ಯುಪಿಯಲ್ಲಿ ಮಹಿಳೆಯರು ಸೇಫ್, ಯೋಗಿ ಗೂಂಡಾಗಳನ್ನು ತಕ್ಕ ಸ್ಥಳಕ್ಕಟ್ಟಿದ್ದಾರೆ: ಮೋದಿ!

* ಮಹಿಳೆಯರಿಗೆ ಮೋದಿ ಸರ್ಕಾರದ ಗಿಫ್ಟ್

* ಯೋಗಿ ಸರ್ಕಾರದ ಆಡಳಿತವನ್ನು ಹೊಗಳಿದ ಮೋದಿ

* ವಿವಿಧ ಯೋಜನೆಗಳಿಗೆ ಮೋದಿ ಗ್ರೀನ್‌ ಸಿಗ್ನಲ್

Women biggest victims of lawlessness in UP before Yogi sent goons to their rightful place PM Modi pod
Author
Bangalore, First Published Dec 21, 2021, 4:10 PM IST | Last Updated Dec 21, 2021, 4:12 PM IST

ಲಕ್ನೋ(ಡಿ.21): ವಿಧಾನಸಭೆ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಹಲವು ಯೋಜನೆಗಳನ್ನು ಆರಂಭಿಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಪ್ರಯಾಗರಾಜ್‌ನಲ್ಲಿ ಮಹಿಳಾ ಕೇಂದ್ರಿತ ಯೋಜನೆಗಳಿಗೆ ಚಾಲನೆ ನೀಡಿದರು. ಈ ವೇಳೆ ಸ್ವಸಹಾಯ ಸಂಘಗಳನ್ನು ಆರ್ಥಿಕವಾಗಿ ಅವಲಂಬಿಸುವ ಯೋಜನೆಗೂ ಚಾಲನೆ ನೀಡಿದ್ದಾರೆ. ಪ್ರಧಾನ ಮಂತ್ರಿ ಮೋದಿ ಸ್ವಸಹಾಯ ಗುಂಪುಗಳಿಗೆ 1,000 ಕೋಟಿ ರೂ.ಗಳನ್ನು ವರ್ಗಾಯಿಸಿದರು. ಇದರಿಂದ 16 ಲಕ್ಷ ಮಹಿಳೆಯರು ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ವೇಳೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, 'ಸಾವಿರಾರು ವರ್ಷಗಳಿಂದ ಪ್ರಯಾಗ್‌ರಾಜ್ ನಮ್ಮ ಮಾತೃಶಕ್ತಿಯ ಪ್ರತೀಕವಾದ ಗಂಗಾ-ಯಮುನಾ-ಸರಸ್ವತಿ ಸಂಗಮ ಸ್ಥಳವಾಗಿದೆ. ಇಂದು ಈ ಯಾತ್ರಾ ನಗರಿಯು ಕೂಡ ಇಂತಹ ಸ್ತ್ರೀಶಕ್ತಿಯ ಅದ್ಭುತ ಸಂಗಮಕ್ಕೆ ಸಾಕ್ಷಿಯಾಗುತ್ತಿದೆ. ಯುಪಿಯಲ್ಲಿ ಮಹಿಳೆಯರ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಮಾಡಿರುವ ಕೆಲಸವನ್ನು ಇಡೀ ದೇಶ ಗಮನಿಸುತ್ತಿದೆ ಎಂದಿದ್ದಾರೆ. ಮಹಿಳಾ ಸ್ವ-ಸಹಾಯ ಗುಂಪುಗಳ ಸಹೋದರಿಯರನ್ನು ಸ್ವಾವಲಂಬಿ ಭಾರತದ ಚಾಂಪಿಯನ್ ಎಂದು ನಾನು ಪರಿಗಣಿಸುತ್ತೇನೆ, ಸ್ವಸಹಾಯ ಗುಂಪುಗಳು ವಾಸ್ತವವಾಗಿ ರಾಷ್ಟ್ರೀಯ ಸಹಾಯ ಗುಂಪುಗಳಾಗಿವೆ. 2014 ರ ಹಿಂದಿನ 5 ವರ್ಷಗಳಲ್ಲಿ ರಾಷ್ಟ್ರೀಯ ಜೀವನೋಪಾಯ ಮಿಷನ್ ಅಡಿಯಲ್ಲಿ ನೀಡಲಾದ ಸಹಾಯವನ್ನು ಕಳೆದ 7 ವರ್ಷಗಳಲ್ಲಿ ಸುಮಾರು 13 ಪಟ್ಟು ಹೆಚ್ಚಿಸಲಾಗಿದೆ ಎಂದಿದ್ದಾರೆ ಮೋದಿ.

ಪ್ರಧಾನಮಂತ್ರಿಯವರು ದೀನದಯಾಳ್ ಉಪಾಧ್ಯಾಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY) ಅಡಿಯಲ್ಲಿ ಸ್ವ-ಸಹಾಯ ಗುಂಪುಗಳಿಗೆ ಈ ವರ್ಗಾವಣೆಯನ್ನು ಮಾಡಿದ್ದಾರೆ ಎಂಬುವುದು ಉಲ್ಲೇಖನೀಯ. ಈ ಮಿಷನ್ ಅಡಿಯಲ್ಲಿ, 80,000 SHGಗಳು ಪ್ರತಿ ಗುಂಪಿಗೆ 1.10 ಲಕ್ಷ ರೂಪಾಯಿಗಳ ಸಮುದಾಯ ಹೂಡಿಕೆ ನಿಧಿಯನ್ನು (CIF) ಪಡೆಯುತ್ತವೆ ಮತ್ತು 60,000 SHG ಗಳಿಗೆ ಪ್ರತಿ ಗುಂಪಿಗೆ 15,000 ರೂಪಾಯಿಗಳ ಆವರ್ತ ನಿಧಿಯನ್ನು ನೀಡಲಾಗುತ್ತದೆ.

ಈ ಸಮಾವೆಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವನ್ನು ಶ್ಲಾಘಿಸಿದ ಪ್ರಧಾನಿ 5 ವರ್ಷಗಳ ಹಿಂದೆ ಯುಪಿಯ ಬೀದಿಗಳಲ್ಲಿ ಮಾಫಿಯಾರಾಜ್ ಇತ್ತು, ಆದರೆ ಸಿಎಂ ಯೋಗಿ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಗೂಂಡಾಗಳು ಮಾಯವಾಗಿದ್ದಾರೆ. ಯುಪಿಯ ನನ್ನ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಇದರ ದೊಡ್ಡ ಫಲಾನುಭವಿಗಳು. ಅವರಿಗೆ ರಸ್ತೆಯಲ್ಲಿ ಬರುವುದೇ ಕಷ್ಟವಾಗಿತ್ತು. ಶಾಲೆ, ಕಾಲೇಜಿಗೆ ಹೋಗುವುದು ಕಷ್ಟವಾಗಿತ್ತು, ಏನು ಹೇಳಲು ಸಾಧ್ಯವಾಗುತ್ತಿರಲಿಲ್ಲ, ಮಾತನಾಡಲು ಸಾಧ್ಯವಾಗುತ್ತಿರಲ್ಲ. ಏಕೆಂದರೆ ಸಂತ್ರಸ್ತೆಯರು ಠಾಣೆಗೆ ಹೋದಾಗ ಯಾರಾದರೂ ಅಪರಾಧಿ, ರೇಪಿಸ್ಟ್‌ಗಳನ್ನು ಬಿಡುವಂತೆ ಶಿಫಾರಸು ಕರೆ ಬರುತ್ತಿತ್ತು. ಆದರೆ ಯೋಗಿ ಜಿ ಈ ಗೂಂಡಾಗಳನ್ನು ಅವರ ಸರಿಯಾದ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮೋದಿ ಮತ್ತು ಯೋಗಿ ಸರ್ಕಾರದ ಸಾಧನೆಗಳನ್ನು ಬಣ್ಣಿಸಿದ ಪ್ರಧಾನಿ, 'ಹೆಣ್ಣು ಮಕ್ಕಳನ್ನು ಗರ್ಭದಲ್ಲಿ ಕೊಲ್ಲಬಾರದು, ಅವರು ಹುಟ್ಟಬೇಕು, ಇದಕ್ಕಾಗಿ ನಾವು 'ಬೇಟಿ ಬಚಾವೋ, ಬೇಟಿ ಪಢಾವೋ' ಅಭಿಯಾನದ ಮೂಲಕ ಸಮಾಜದ ಪ್ರಜ್ಞೆಯನ್ನು ಜಾಗೃತಗೊಳಿಸಲು ಪ್ರಯತ್ನಿಸಿದ್ದೇವೆ ಎಂದು ಹೇಳಿದರು. ಇದರ ಪರಿಣಾಮ ಇಂದು ದೇಶದ ಹಲವು ರಾಜ್ಯಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ ಎಂದಿದ್ದಾರೆ.

ಅಲ್ಲದೇ ಗರ್ಭಿಣಿಯರಿಗೆ ಚುಚ್ಚುಮದ್ದು, ಆಸ್ಪತ್ರೆಗಳಲ್ಲಿ ಹೆರಿಗೆ ಮತ್ತು ಗರ್ಭಾವಸ್ಥೆಯಲ್ಲಿ ಪೌಷ್ಟಿಕಾಂಶದ ಬಗ್ಗೆ ನಾವು ವಿಶೇಷ ಗಮನ ಹರಿಸಿದ್ದೇವೆ ಎಂದು ಪ್ರಧಾನಿ ಹೇಳಿದರು. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ, ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಸರಿಯಾದ ಆಹಾರ ಮತ್ತು ಪಾನೀಯವನ್ನು ನೋಡಿಕೊಳ್ಳಲು 5000 ರೂ.ಗಳನ್ನು ಬ್ಯಾಂಕ್ ಖಾತೆಗೆ ಠೇವಣಿ ಮಾಡಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೀಡಿದ 30 ಲಕ್ಷ ಮನೆಗಳಲ್ಲಿ 25 ಲಕ್ಷ ಮನೆಗಳು ಮಹಿಳೆಯರ ಹೆಸರಿನಲ್ಲಿ ನೋಂದಣಿಯಾಗಿವೆ ಎಂದೂ ಉಲ್ಲೇಖಿಸಿದ್ದಾರೆ.

ಹೆಣ್ಣುಮಕ್ಕಳ ವಿವಾಹಕ್ಕೆ ಕಾನೂನುಬದ್ಧ ವಯಸ್ಸಿನ ಮಿತಿಯನ್ನು ಹೆಚ್ಚಿಸುವ ಮಸೂದೆಯನ್ನು ಉಲ್ಲೇಖಿಸಿದ ಪ್ರಧಾನಿ, ಪ್ರತಿಪಕ್ಷಗಳನ್ನೂ ಗುರಿಯಾಗಿಸಿದರು. ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 21 ವರ್ಷಕ್ಕೆ ಏರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಹೆಣ್ಣು ಮಕ್ಕಳಿಗಾಗಿ ದೇಶ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ, ಆದರೆ ಇದರಿಂದ ಯಾರು ಬಳಲುತ್ತಿದ್ದಾರೆ, ಅವರು ಇದನ್ನೆಲ್ಲ ನೋಡುತ್ತಿದ್ದಾರೆ ಎಂದೂ ವಿಪಕ್ಷಗಳಿಗೆ ತಿವಿದಿದ್ದಾರೆ. 

Latest Videos
Follow Us:
Download App:
  • android
  • ios