‘ಸ್ವದೇಶಿ ಲಸಿಕೆ ಬಗ್ಗೆ ಆತಂಕ ಬೇಡ; ನಾನೇ ಮೊದಲು ಹಾಕಿಸಿಕೊಳ್ಳುವೆ’
‘ಸ್ವದೇಶಿ ಲಸಿಕೆ ಬಗ್ಗೆ ಆತಂಕ ಬೇಡ; ನಾನೇ ಮೊದಲು ಹಾಕಿಸಿಕೊಳ್ಳುವೆ’| ಜನ ಸಂವಾದ ಕಾರ್ಯಕ್ರಮದಲ್ಲಿ ಸಚಿವ ಡಾ.ಹರ್ಷವರ್ಧನ್| 2021ರ ಮೊದಲ ತ್ರೈಮಾಸಿಕದ ವೇಳೆಗೆ ದೇಶೀ ಲಸಿಕೆ ಬಳಕೆಗೆ
ನವದೆಹಲಿ(ಸೆ.14): ದೇಶದಲ್ಲಿ ದಿನಕ್ಕೆ ಸರಾಸರಿ 90 ಸಾವಿರಕ್ಕಿಂತ ಹೆಚ್ಚು ಕೊರೋನಾ ಪ್ರಕರಣ ಸಂಖ್ಯೆ ದಾಖಲಾಗುತ್ತಿರುವ ಬೆನ್ನಲ್ಲೇ, ಈ ವ್ಯಾಧಿಯ ನಿಗ್ರಹಕ್ಕೆ 2021ರ ಮೊದಲ ತ್ರೈಮಾಸಿಕ ಅವಧಿಯ ಒಳಗಾಗಿ ದೇಶೀ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಭರವಸೆ ನೀಡಿದ್ದಾರೆ.
ಅಲ್ಲದೆ, ಹೊಸ ಆವಿಷ್ಕಾರದ ಲಸಿಕೆಯ ಸುರಕ್ಷತೆ ಬಗ್ಗೆ ಜನರಲ್ಲಿನ ಭೀತಿ ನಿವಾರಣೆಗಾಗಿ ಆ ಲಸಿಕೆಯನ್ನು ಮೊದಲೇ ತಾವೇ ಸ್ವೀಕರಿಸುವುದು ಹರ್ಷದಾಯಕ ಸಂಗತಿಯಾಗಿದೆ ಎಂದಿದ್ದಾರೆ. ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಭಾನುವಾರ ನಡೆದ ‘ಜನ ಸಂವಾದ’ ಕಾರ್ಯಕ್ರಮದಲ್ಲಿ ಕೊರೋನಾ ಹಾಗೂ ಲಸಿಕೆಗೆ ಸಂಬಂಧಿಸಿದಂತೆ ಜನರು ಕೇಳಿದ ಹಲವು ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.
ಈ ವೇಳೆ ಭಾರತ ಸಿದ್ಧಪಡಿಸಿ ಪ್ರಯೋಗದ ಹಂತದಲ್ಲಿರುವ ಔಷಧಿಯ ಬಿಡುಗಡೆಗೆ ನಿರ್ದಿಷ್ಟದಿನಾಂಕ ಗುರಿಪಡಿಸಲಾಗಿಲ್ಲ. ಆದರೆ, 2021ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಈ ಕೊರೋನಾ ಲಸಿಕೆಯು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ. ಜೊತೆಗೆ, ಮೊದಲ ಹಂತದಲ್ಲಿ ಕೊರೋನಾದಿಂದ ಬಡವರು ಮತ್ತು ಶ್ರೀಮಂತರು ಎಂಬ ಯಾವುದೇ ಬೇಧವಿಲ್ಲದೆ ತೀವ್ರವಾಗಿ ಜರ್ಜರಿತರಾದವರಿಗೆ ಈ ಲಸಿಕೆ ಬಳಕೆಯಾಗುವಂತೆ ನೋಡಿಕೊಳ್ಳಲಾಗುತ್ತದೆ. ಈ ಪ್ರಕಾರ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.