ಹೇಡಿತನದ ಕೃತ್ಯ ಯಾವತ್ತೂ ಮರೆಯಲ್ಲ: 2001ರ ಸಂಸತ್ ದಾಳಿ ನೆನಪಿಸಿಕೊಂಡ ಮೋದಿ!
ಸಂಸತ್ ಮೇಲೆ ಉಗ್ರ ದಾಳಿ| ಭಯಾನಕ ದಾಳಿಯಾಗಿ ಹತ್ತೊಂಭತ್ತು ವರ್ಷ| ಈ ಹೇಡಿತನದ ಕೃತ್ಯ ಯಾವತ್ತಿಗೂ ಮರೆಯಲ್ಲ ಎಂದ ಪಿಎಂ ಮೋದಿ
ನವದೆಹಲಿ(ಡಿ.13): ಡಿಸೆಂಬರ್ 13, 2001ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಸಂಸತ್ತಿನ ಮೇಲೆ ಉಗ್ರರು ನಡೆಸಿದ ದಾಳಿಯನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಡಿತನದ ಕೃತ್ಯ ನಾವು ಯಾವತ್ತೂ ಮರೆಯಲ್ಲ ಎಂದು ಹೇಳಿದ್ದಾರೆ.
ದೇಶದ ಶಕ್ತಿ ಕೇಂದ್ರ ಸಂಸತ್ ಭವನದ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಭಯಾನಕ ದಾಳಿ ನಡೆಸಿ ಇಂದಿಗೆ 19 ವರ್ಷ. ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕರು ನಡೆಸಿದ್ದ ಈ ದಾಳಿಯಲ್ಲಿ ಆರು ಪೊಲೀಸರು ಸೇರಿದಂತೆ ಒಟ್ಟು 79 ಮಂದಿ ಭಯೋತ್ಪಾಕರ ಕೌರ್ಯಕ್ಕೆ ಬಲಿಯಾಗಿ, 22 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
2001ರ ಈ ಉಗ್ರ ದಾಳಿಯಾಗಿ ಹತ್ತೊಂಭತ್ತು ವರ್ಷ ಕಳೆದ ಹಿನ್ನೆಲೆ, ಟ್ವೀಟ್ ಮಾಡಿದ ಪಿಎಂ ಮೋದಿ ಈ ಕೃತ್ಯವನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ 2001 ರಲ್ಲಿ ಈ ದಿನ ನಮ್ಮ ಸಂಸತ್ತಿನ ಮೇಲೆ ನಡೆದ ಹೇಡಿತನದ ದಾಳಿಯನ್ನು ನಾವು ಎಂದಿಗೂ ಮರೆಯುವುದಿಲ್ಲ. ನಮ್ಮ ಸಂಸತ್ತನ್ನು ರಕ್ಷಿಸುವ ಸಲುವಾಗಿ ಪ್ರಾಣ ಕಳೆದುಕೊಂಡವರ ಶೌರ್ಯ ಮತ್ತು ತ್ಯಾಗವನ್ನು ನಾವು ನೆನೆಯುತ್ತಿದ್ದೇವೆ. ವೀರ ಯೋಧರಿಗೆ ನಾವೆಂದಿಗೂ ಕೃತಜ್ಞರಾಗಿರಬೇಕೆಂದು ಬರೆದಿದ್ದಾರೆ.