ಇತ್ತೀಚೆಗೆ ಆನ್ಲೈನ್ನಲ್ಲಿ ಸದ್ದು ಮಾಡುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ವಿರುದ್ಧದ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸಿಜೆಪಿ ಪಕ್ಷವನ್ನು ಅಷ್ಟೊಂದು ಭಾವನಾತ್ಮಕವಾಗಿ ನೋಡುವ ಅಗತ್ಯವಿಲ್ಲ ಎಂದು CJI ಸ್ಪಷ್ಟಪಡಿಸಿದರು.
ನವದೆಹಲಿ (ಮೇ.26): ಇತ್ತೀಚೆಗೆ ಆನ್ಲೈನ್ನಲ್ಲಿ ಭಾರೀ ಸುದ್ದಿ ಮಾಡಿರುವ ಕಾಕ್ರೋಚ್ ಜನತಾ ಪಾರ್ಟಿಯನ್ನು (ಸಿಜೆಪಿ) ಅಷ್ಟೊಂದು ಭಾವನಾತ್ಮಕವಾಗಿ ನೋಡಬೇಡಿ ಎಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.

ಸಿಜೆಪಿ ವಿರುದ್ಧ ಕ್ರಮ ಕೋರಿದ್ದ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ಸಿಜೆಐ ಅವರನ್ನೊಳಗೊಂಡ ಪೀಠ, ಅರ್ಜಿದಾರರು ಸಿಜೆಪಿ ಪಕ್ಷವನ್ನು ಅಷ್ಟೊಂದು ಭಾವನಾತ್ಮಕವಾಗಿ ನೋಡುವ ಅವಶ್ಯಕತೆ ಇಲ್ಲ. ಅರ್ಜಿಯ ತುರ್ತುವಿಚಾರಣೆ ಅವಶ್ಯಕತೆಯೂ ಇಲ್ಲ ಎಂದು ಹೇಳಿತು. ಇತ್ತೀಚೆಗೆ ನ್ಯಾ. ಸೂರ್ಯಕಾಂತ್ ನೀಡಿದ್ದ ಹೇಳಿಕೆಯನ್ನೇ ಆಧರಿಸಿ ಆನ್ಲೈನ್ನಲ್ಲಿ ಸಿಜೆಪಿ ಅಭಿಯಾನ ಆರಂಭವಾಗಿತ್ತು. ಈ ಹೇಳಿಕೆ ಕುರಿತು ಸ್ವತಃ ಸಿಜೆಐ ಸ್ಪಷ್ಟನೆ ನೀಡಿದ ಹೊರತಾಗಿಯೂ ಹೇಳಿಕೆ ದುರ್ಬಳಕೆ ಮಾಡಲಾಗುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.
ಏನಿದು ಸಿಜೆಪಿ?
ನಿರುದ್ಯೋಗಿ ಯುವಕರನ್ನು ಜಿರಳೆಗೆ ಹೋಲಿಸಿ ಸಿಜೆಐ ನ್ಯಾ। ಸೂರ್ಯಕಾಂತ್ ಅವರು ನೀಡಿದ ಹೇಳಿಕೆಯಿಂದ ಆಕ್ರೋಶಗೊಂಡ ದೀಪ್ಕೆ, ಸೋಮಾರಿ ಮತ್ತು ನಿರುದ್ಯೋಗಿಗಳನ್ನು ಪ್ರತಿನಿಧಿಸಲು ಸಾಮಾಜಿಕ ಮಾಧ್ಯಮದಲ್ಲಿ ಸಿಜೆಪಿ ಹುಟ್ಟುಹಾಕಿದ್ದರು. ಶುರುವಲ್ಲಿದು ತಮಾಷೆಯಂತೆ ಕಂಡರೂ ಕೆಲವೇ ದಿನಗಳಲ್ಲಿ ಕೋಟ್ಯಂತರ ಹಿಂಬಾಲಕರನ್ನು ಗಳಿಸಿತು. ಆದರೆ 4 ದಿನಗಳಲ್ಲಿ ಅದರ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ ಹಾಗೂ ಇನ್ಸ್ಟಾಗ್ರಾಂ ಖಾತೆಯನ್ನೂ ಹ್ಯಾಕ್ ಮಾಡಲು ಯತ್ನಿಸಲಾಗಿದೆ ಎಂದು ದೀಪ್ಕೆ ಹೇಳಿದ್ದಾರೆ. ಇದರ ಹೊರತಾಗಿಯೂ ಅವರು ಹೊಸ ಎಕ್ಸ್ ಖಾತೆ ತೆರೆದಿದ್ದಾರೆ.


