ಕೊರೋನಾಕ್ಕೆ ದುಬಾರಿ ಔಷಧ ಸೂಚನೆಗೆ ಸ್ಥಾಯಿ ಸಮಿತಿ ಕಿಡಿ| ಕಾಳಸಂತೆಯ ಔಷಧಕ್ಕೆ ಅಂಕುಶ ಹಾಕುವಂತೆ ಸೂಚನೆ| ಫಾರ್ಮಾಸ್ಯುಟಿಕಲ್‌ ಲಾಬಿಯಿಂದ ಅಗ್ಗದ ಔಷಧ ಮೂಲೆಗುಂಪು!

ನವದೆಹಲಿ(ಜು.16): ಕೊರೋನಾ ವೈರಸ್‌ ವಿರುದ್ಧ ಅಗ್ಗದ, ಸುಲಭ ಮತ್ತು ಸ್ಥಳೀಯವಾಗಿ ಲಭ್ಯವಿರುವ ದೇಶಿ ಔಷಧವನ್ನು ಉತ್ತೇಜಿಸುವಂತೆ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಈ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ಸೂಚನೆ ನೀಡಿದೆ. ಕೊರೋನಾ ವೈರಸ್‌ ನಿವಾರಣೆಗೆ ಕಾಳ ಸಂತೆಯಲ್ಲಿ ದುಬಾರಿ ಬೆಲೆಯಲ್ಲಿ ಬಿಕರಿಯಾಗುತ್ತಿರುವ ಔಷಧಗಳ ಮೇಲೆ ನಿಗಾ ವಹಿಸಲೂ ನಿರ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶದಲ್ಲಿ ಒಂದೇ ದಿನ ದಾಖಲೆಯ 32672 ಕೇಸು, 603 ಸಾವು!

ಕಾಂಗ್ರೆಸ್‌ ರಾಜ್ಯಸಭೆ ಸದಸ್ಯ ಆನಂದ್‌ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಈ ಸಭೆಯಲ್ಲಿ ಕೊರೋನಾ ಗುಣಪಡಿಸಲು ನೀಡಲಾಗುತ್ತಿರುವ ರೆಮ್‌ಡಿಸಿವಿರ್‌ ಹಾಗೂ ಟೊಸಿಲಿಜುಮಾಬ್‌ ಔಷಧಿಗಳು ಕಾಳ ಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ. ಇದರ ಬದಲಾಗಿ ಕೊರೋನಾಕ್ಕೆ ಸ್ಥಳೀಯ ಔಷಧವನ್ನು ಉತ್ತೇಜಿಸಬೇಕು. ಆದರೆ, ಸ್ಥಳೀಯ ಔಷಧದ ಮೂಲೆಗುಂಪಿಗೆ ಯತ್ನಿಸುತ್ತಿರುವ ಫಾರ್ಮಾಸ್ಯುಟಿಕಲ್‌ ಲಾಬಿ, ದುಬಾರಿ ಬೆಲೆಯ ಆಯ್ಕೆಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಸಮಿತಿ ಕಿಡಿಕಾರಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಫಾರ್ಮಾ ಕಂಪನಿಗಳ ಔಷಧ ಶಿಫಾರಸ್ಸು ಮತ್ತು ದುಬಾರಿ ಬೆಲೆಯ ಔಷಧಿ ಸೂಚಿಸಲಾಗುತ್ತಿರುವುದನ್ನು ಪರಿಶೀಲನೆಗೊಳಪಡಿಸಬೇಕು ಎಂದೂ ಸಮಿತಿ ಹೇಳಿದೆ ಎಂಬುದಾಗಿ ಮೂಲಗಳು ತಿಳಿಸಿವೆ.

ಖಾಸಗಿ ಆಸ್ಪತ್ರೆಗಳ ಶೇ.50 ಹಾಸಿಗೆ ಕೊರೋನಾ ಚಿಕಿತ್ಸೆಗೆ!

ಅಲ್ಲದೆ, ಕೊರೋನಾ ಅವಧಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವವರಿಗೆ ನೇರ ನಗದು ಹಾಗೂ ಆಹಾರ ದಾನ್ಯ ಪೂರೈಸಬೇಕು. ಇದರಿಂದ ಜನ ಸಾಮಾನ್ಯರ ಸಾಮಾಜಿಕ ಭದ್ರತೆ ಸುಧಾರಣೆ ಕಾಣಲಿದೆ. ಇದಕ್ಕಾಗಿ ಸರ್ಕಾರ ವಲಸೆ ಕಾರ್ಮಿಕರ ರಾಷ್ಟ್ರೀಯ ದತ್ತಾಂಶ ರಚನೆ ಮಾಡಬೇಕು ಎಂದು ಸಂಸದರು ತಮ್ಮ ಪಕ್ಷಭೇದ ಮರೆತು ಸಲಹೆ ನೀಡಿದರು.

ಈ ಸಭೆಯಲ್ಲಿ ಗೃಹ ಕಾರ‍್ಯದರ್ಶಿ ಸ್ಥಾಯಿ ಸಮಿತಿ ಸಭೆಯಲ್ಲಿ ಗೃಹ ಕಾರ‍್ಯದರ್ಶಿ ಅಜಯ್‌ ಬಲ್ಲಾಳ್‌, ಆರೋಗ್ಯ ಕಾರ‍್ಯದರ್ಶಿ ಲಾವ್‌ ಅಗರ್ವಾಲ್‌ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.