Chikkamagaluru Arun Binnadi: ಚಿಕ್ಕಮಗಳೂರಿನ ಇಂಜಿನಿಯರ್ ಅರುಣ್ ಬಿನ್ನಡಿ ಅವರು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ತೆರೆಮರೆಯಲ್ಲಿ ಶ್ರಮಿಸಿದ್ದಾರೆ. ಸಿಲಿಗುರಿ ವಲಯದ ಉಸ್ತುವಾರಿಯಾಗಿ, ಅವರು ತಳಮಟ್ಟದಲ್ಲಿ ಪಕ್ಷ ಸಂಘಟಿಸಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಚಿಕ್ಕಮಗಳೂರು (ಮೇ.7): ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಊಹಿಸಲಾದ್ಯ ರೀತಿಯಲ್ಲಿ ಗೆಲುವು ತನ್ನದಾಗಿಸಿಕೊಂಡ ಬಗ್ಗೆ ಎಲ್ಲರಲ್ಲಿ ಅಚ್ಚರಿ ಮೂಡಿರುವ ಹೊತ್ತಿನಲ್ಲೇ, ಇಂಥದ್ದೊಂದು ಗೆಲುವಿನಲ್ಲಿ ಕನ್ನಡಿಗ ಅರುಣ್‌ ಬಿನ್ನಡಿ ಅವರ ಪಾತ್ರವೂ ಬೆಳಕಿಗೆ ಬಂದಿದೆ. ಕಳೆದ 6 ತಿಂಗಳಿನಿಂದ ಬಂಗಾಳದ ಗುಡ್ಡಗಾಡು ಪ್ರದೇಶಗಳಲ್ಲಿ ಬೀಡುಬಿಟ್ಟು ಅಲ್ಲೇ ಮನೆ ಮನೆ ಸುತ್ತಿ ಪ್ರಚಾರ ಮಾಡಿದ ತಂಡದ ಉಸ್ತುವಾರಿಯಾಗಿದ್ದ ಅರುಣ್‌ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅರುಣ್ ಬಿನ್ನಡಿಗೆ ಸಿಲಿಗುರಿ ಹೊಣೆ:

ಬಂಗಾಳದ ಚುನಾವಣೆಯಲ್ಲಿ ಅರುಣ್‌ಗೆ ಸಿಲಿಗುರಿ ನಾರ್ತ್ ಜೋನ್ ನ ಸಂಘಟನಾ ಪ್ರಭಾರಿಯಾಗಿ ಹೊಣೆಗಾರಿಕೆ ನೀಡಲಾಗಿತ್ತು. ಬಂಗಾಳದ ಕಠಿಣ ರಾಜಕೀಯ ಪರಿಸ್ಥಿತಿ ಮತ್ತು ಅಡೆತಡೆಗಳ ನಡುವೆಯೂ 6 ತಿಂಗಳು ಕಾಲ ತಮ್ಮ ತಂಡದೊಡಗೂಡಿ ತಳಮಟ್ಟದಲ್ಲಿ ಕೆಲಸ ಮಾಡಿದ ಅರುಣ್‌ ಮನೆ ಮನೆಗೂ ತೆರಳಿ ಪಕ್ಷವನ್ನು ಸಂಘಟಿಸಿದ್ದರು. ಸ್ಥಳೀಯ ಸಮಸ್ಯೆ ಅರಿತು, ಅವುಗಳಿಗೆ ತಕ್ಕಂತೆ ಅರುಣ್‌ ಗೆಲುವಿನ ಮಂತ್ರ ರೂಪಿಸಿದ್ದರು. ಅದು ಇದೀಗ ಉತ್ತಮ ಫಲಿತಾಂಶದ ರೂಪದಲ್ಲಿ ಪ್ರತಿಫಲಿಸಿದೆ.

ಹಿಂದೆಯೂ ಸಂಘಟನೆ:ಅರುಣ್ ಅವರ ಸಾಧನೆ ಕೇವಲ ಬಂಗಾಳಕ್ಕೆ ಸೀಮಿತವಾಗಿಲ್ಲ. 2019ರ ಲೋಕಸಭಾ ಚುನಾವಣೆ ವೇಳೆ ಕಲಬುರಗಿ ಕ್ಷೇತ್ರದಲ್ಲಿನ ಪಕ್ಷದ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಕೆಲಸ ಬಿಟ್ಟು ದೇಶಸೇವೆ:

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದ ಯುವಕ ಅರುಣ್ ಅವರು ವೃತ್ತಿಯಲ್ಲಿ ಪ್ರತಿಭಾವಂತ ಎಂಜಿನಿಯರ್. ಆರಂಭದಲ್ಲಿ ಕೈತುಂಬಾ ಸಂಬಳ ಬರುವ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದರು. ಆದರೆ, ದೇಶಸೇವೆ ಮತ್ತು ರಾಷ್ಟ್ರೀಯ ಸಿದ್ಧಾಂತದ ಮೇಲಿದ್ದ ಅತೀವ ಆಸಕ್ತಿಯಿಂದಾಗಿ ಆ ಉದ್ಯೋಗವನ್ನು ತ್ಯಜಿಸಿ, ಸಕ್ರಿಯ ರಾಜಕೀಯ ಸಂಘಟನೆಗೆ ಇಳಿದಿದ್ದರು.

ತವರಲ್ಲಿ ಸನ್ಮಾನ:

ಬಂಗಾಳದ ಯಶಸ್ಸಿನ ಬಳಿಕ ತವರು ಗ್ರಾಮ ಬಿನ್ನಡಿಗೆ ಆಗಮಿಸಿದ ಅರುಣ್ ಅವರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಬುಧವಾರ ಸನ್ಮಾನಿಸಿದ್ದಾರೆ.