ಪಶ್ಚಿಮ ಬಂಗಾಳ ಚುನಾವಣೆ, ಬಿಜೆಪಿಗೆ ಬಿಗ್ ಶಾಕ್!
ಪಶ್ಚಿಮ ಬಂಗಾಳ ರಾಜಕೀಯ ಕಣದಲ್ಲಿ ಮಹತ್ವದ ಬೆಳವಣಿಗೆ| ಸರ್ಕಾರಕ್ಕೆ ಶಾಕ್ ಕೊಡಲು ಮುಂದಾದ ರೈತ ನಾಯಕರು| ದೀದೀ ನಾಡಿನಲ್ಲಿ ಬಿಜೆಪಿಗೆಡ ಮುಳುವಾಗುತ್ತಾ ಕೃಷಿ ಕಾನೂನು?
ಕೋಲ್ಕತ್ತಾ(ಮಾ.13): ಪಶ್ಚಿಮ ಬಂಗಾಳ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿದ್ದು, ಇದು ಭಾರೀ ಕುತೂಹಲ ಮೂಡಿಸಿದೆ. ಅದರಲ್ಲೂ ನಂದಿಗ್ರಾಮ ಕ್ಷೇತ್ರ ಈ ರಾಜಕೀಯ ಕಣದ ಹಾಟ್ ಸೀಟ್ ಆಗಿ ಮಾರ್ಪಾಡಾಗಿದೆ. ಸದ್ಯ ರೈತ ನಾಯಕ ರಾಕೇಶ್ ಟಿಕಾಯತ್ ಇಲ್ಲಿನ ರೈತರ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ್ದು, ಇಂದು(ಶನಿವಾರ) ಸಂಜೆ ನಾಲ್ಕು ಗಂಟೆಗೆ ಕೇಂದ್ರದ ಕೃಷಿ ಕಾನೂನು ವಿರುದ್ಧ ಭಾಷಣ ಮಾಡಲಿದ್ದಾರೆ.
ಇನ್ನು ಶುಕ್ರವಾರವಷ್ಟೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಟಿಕಾಯತ್, ತನ್ನ ಈ ನಡೆಯಿಂದ ಯಾವುದೇ ರಾಜಕೀಯ ಪಕ್ಷಕ್ಕೆ ತಾನು ಹೆಗಲು ನೀಡುವುದಿಲ್ಲ. ಬಿಜೆಪಿಗೆ ಮತ ನೀಡಬೇಡಿ ಎನ್ನುವುದನ್ನು ತಾನು ವಿರೋಧಿಸುತ್ತೇನೆ ಎಂದೂ ಟಿಕಾಯತ್ ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿದ್ದ ಭಾರತೀಯ ರೈತ ಸಂಘಟನೆಯ ಪ್ರಾದೇಶಿಕ ಅಧ್ಯಕ್ಷ ರಾಜ್ಬೀರ್ ಸಿಂಗ್ ನಾವು ರಾಜಕೀಯ ಪಕ್ಷದ ಸಹಾಯ ಪಡೆಯುವಷ್ಟು ಬಲಹೀನರಲ್ಲ ಎಂದಿದ್ದರು.
ಇನ್ನು ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಆರಂಭವಾಗಿ 100ಕ್ಕೂ ಹೆಚ್ಚು ದಿನಗಳಾಗಿವೆ. ಈ ಕಾನೂನಿನ ಸಂಬಂಧ ರೈತರು ಹಾಗೂ ಸರ್ಕಾರದ ನಡುವೆ ಜನವರಿ ಬಳಿಕ ಯಾವುದೇ ಮಾತುಕತೆ ನಡೆದಿಲ್ಲ. ಹೀಗಾಗಿ ಸಹಜವಾಗೇ ಅಸಮಾಧಾನವಿದೆ. ಹೀಗಾಗೇ ರೈತ ನಾಯಕರು ಸದ್ಯ ಮಹಾಪಂಚಾಯತ್ಗಳ ಮೇಲೆ ಹೆಚ್ಚಿನ ಗಮನವಿಟ್ಟಿದ್ದಾರೆ. ಅಲ್ಲದೇ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ರೈತರು ಪಶ್ಚಿಮ ಬಂಗಾಳದಲ್ಲಿ ಕೇಂದ್ರದ ವಿರುದ್ಧ ಪ್ರಚಾರ ನಡೆಸಲು ಸಜ್ಜಾಗಿದ್ದಾರೆ. ಇದೇ ಕಾರಣದಿಂದ ಟಿಕಾಯತ್ ಸೇರಿ ಹಲವು ನಾಯಕರು ಇಂದು ಪಶ್ಚಿಮ ಬಂಗಾಳದಲ್ಲಿದ್ದಾರೆ.