ಭಾರತದಲ್ಲಿ ಶೀಘ್ರ ದಾಳಿ: ಐಸಿಸ್ ಉಗ್ರರಿಂದ ಎಚ್ಚರಿಕೆ
* ಹಿಂದುಗಳ ಮೇಲೆ ಸೇಡು ತೀರಿಸಿಕೊಳ್ಳುವ ಬೆದರಿಕೆ
* ಪ್ರವಾದಿ ಅವಹೇಳನ ಬೆನ್ನಲ್ಲೇ ವಿಡಿಯೋ
* ಭಾರತದಾದ್ಯಂತ ಇರುವ ಮುಸ್ಲಿಮರು ನಮ್ಮ ಜತೆ ಕೈಜೋಡಿಸಬೇಕು
ನವದೆಹಲಿ(ಜೂ.17): ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ರನ್ನು ಅವಮಾನಿಸಿದ ವಿಷಯದಲ್ಲಿ ಅಲ್ಖೈದಾ ಉಗ್ರರ ನಂತರ ಇದೀಗ ಐಸಿಸ್ ಖೊರಾಸನ್ ಪ್ರಾವಿನ್ಸ್ (ಐಎಸ್ಕೆಪಿ) ಉಗ್ರರು ಕೂಡ ಹಿಂದುಗಳ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಸಂಘಟನೆ, ಭಾರತದ ಮೇಲೆ ಶೀಘ್ರದಲ್ಲೇ ಭಯೋತ್ಪಾದಕ ದಾಳಿ ನಡೆಸುವುದಾಗಿ ನೇರ ಎಚ್ಚರಿಕೆ ನೀಡಿದೆ.
ಖೊರಾಸನ್ ಡೈರಿ ಎಂಬ ನ್ಯೂಸ್ ವೆಬ್ಸೈಟಿನಲ್ಲಿ ಈ ಕುರಿತ ವಿಡಿಯೋ ಪ್ರಸಾರವಾಗಿದೆ. ಅದರಲ್ಲಿ ‘ಭಾರತದಾದ್ಯಂತ ಇರುವ ಮುಸ್ಲಿಮರು ನಮ್ಮ ಜೊತೆ ಕೈಜೋಡಿಸಬೇಕು. ಇಸ್ಲಾಮಿಕ್ ಸ್ಟೇಟ್ ಹಿಂದ್ ಪ್ರಾವಿನ್ಸ್ (ಐಎಸ್ಎಚ್ಪಿ) ತನ್ನ ಮೌನ ಮುರಿದು ಎದ್ದು ಕುಳಿತುಕೊಳ್ಳಬೇಕು’ ಎಂದು ಐಎಸ್ಕೆಪಿಯಿಂದ 55 ಪುಟಗಳ ಕರಪತ್ರ ಬಿಡುಗಡೆ ಮಾಡಿರುವುದಾಗಿ ಹೇಳಲಾಗಿದೆ. ಅಲ್ಲದೆ, ವಿಡಿಯೋದಲ್ಲಿ ತಾಲಿಬಾನ್ ಹಾಗೂ ಅಷ್ಘಾನಿಸ್ತಾನದ ಸಚಿವರು ಭಾರತದ ಜೊತೆ ಸಂಬಂಧ ಸ್ಥಾಪಿಸಿಕೊಳ್ಳಲು ಮುಂದಾಗಿರುವುದನ್ನು ಖಂಡಿಸಲಾಗಿದೆ. ಕೊನೆಯಲ್ಲಿ ಭಾರತದ ಮೇಲೆ ಶೀಘ್ರದಲ್ಲೇ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿಬೀಳಿಸುವ ದಂಧೆ: ಬೆಂಗ್ಳೂರಿಂದಲೇ ನಡೆಯುತ್ತಿದೆಯಾ ಐಸಿಸ್ ನೇಮಕಾತಿ?
ಅಲ್ಖೈದಾ ಕೂಡ ಬೆದರಿಕೆ ಹಾಕಿತ್ತು:
ದೆಹಲಿ, ಮುಂಬೈ, ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ದಾಳಿ ನಡೆಸುವುದಾಗಿ ಈ ಹಿಂದೆ ಅಲ್ಖೈದಾ ಭಯೋತ್ಪಾದಕ ಸಂಘಟನೆ ಕೂಡ ಎಚ್ಚರಿಕೆ ನೀಡಿತ್ತು. ‘ಪ್ರವಾದಿ ಮೊಹಮ್ಮದ್ರ ಘನತೆಯನ್ನು ರಕ್ಷಿಸಲು ಮುಸ್ಲಿಂ ಸಮುದಾಯ ಒಂದಾಗಬೇಕು. ಪ್ರವಾದಿಯ ನಿಂದಕರಿಗೆ ಕ್ಷಮೆಯಿಲ್ಲ. ಶಾಂತಿಯಾಗಲೀ ಭದ್ರತೆಯಾಗಲೀ ಅವರನ್ನು ರಕ್ಷಿಸಲಾಗದು. ಖಂಡನೆ ಅಥವಾ ದುಃಖದಿಂದ ಈ ವಿಷಯ ಬಗೆಹರಿಯುವುದಿಲ್ಲ’ ಎಂದು ಇತ್ತೀಚೆಗೆ ಅಲ್ಖೈದಾ ಸಂಘಟನೆ ಪತ್ರ ಬಿಡುಗಡೆ ಮಾಡಿತ್ತು.
ಈಗ ಐಸಿಸ್ ಉಗ್ರರು ಕೂಡ ಭಾರತ ಹಾಗೂ ಹಿಂದೂಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದು, ತಣ್ಣಗಾಗುತ್ತಿರುವ ವಿವಾದಕ್ಕೆ ತುಪ್ಪ ಸುರಿದಂತಾಗಿದೆ.
ವಿಡಿಯೋದಲ್ಲಿ ಏನಿದೆ?
- ಭಾರತದಾದ್ಯಂತ ಇರುವ ಮುಸ್ಲಿಮರು ನಮ್ಮ ಜತೆ ಕೈಜೋಡಿಸಬೇಕು
- ಇಸ್ಲಾಮಿಕ್ ಸ್ಟೇಟ್ ಹಿಂದ್ ಪ್ರಾವಿನ್ಸ್ ಮೌನ ಬಿಟ್ಟು ಎದ್ದು ಕೂರಬೇಕು
- ಭಾರತದ ಜತೆ ತಾಲಿಬಾನ್, ಅಫ್ಘನ್ ಸಚಿವರ ಸಂಬಂಧ ಖಂಡನಾರ್ಹ
- ಪ್ರವಾದಿ ಅವಹೇಳನ: ಅಲ್ಖೈದಾ ಬಳಿಕ ಈಗ ಐಸಿಸ್ನಿಂದ ಬೆದರಿಕೆ