ಲೋಕಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿ ತಯಾರಾಗಿದೆ. ಇದೀಗ ಮತದಾರರಿಗೆ ಉಚಿತ ಆಫರ್ ಘೋಷಿಸಿದ್ದಾರೆ. ದಿಲ್ಲಿಯಲ್ಲಿ 7 ಸ್ಥಾನ ಗೆಲ್ಲಿಸಿದರೆ ಮತದಾರರಿಗೆ ಉಚಿತ ಕೊಡುಗೆಯೊಂದು ಘೋಷಿಸಿದ್ದಾರೆ. 

ನವದೆಹಲಿ(ಫೆ.26) ಲೋಕಸಭಾ ಚುನಾವಣೆ ಗೆಲ್ಲಲು ಭಾರಿ ಕಸರತ್ತು ನಡೆಯುತ್ತಿದೆ. ಉಚಿತ ಭಾಗ್ಯಗಳ ಘೋಷಣೆ, ಇರುವ ಭಾಗ್ಯಗಳ ಮುಂದುವರಿಕೆ ಸೇರಿದಂತೆ ನಾನಾ ರೀತಿಯಲ್ಲಿ ಮತದಾರರನ್ನು ಸೆಳೆಯಲು ಆಮಿಷ ಒಡ್ಡಲಾಗುತ್ತಿದೆ. ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಲೋಕಸಭಾ ಚುನಾವಣೆಗೂ ಹೊಸ ಉಚಿತ ಆಫರ್ ಘೋಷಿಸಿದ್ದಾರೆ. ದೆಹಲಿಯ 7 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲಿಸಿದರೆ ದಿಲ್ಲಿ ಜನತೆಯ ನೀರಿನ ಬಿಲ್ ಉಚಿತವಾಗಲಿದೆ ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ.

Add Asianetnews Kannada as a Preferred SourcegooglePreferred

ದಿಲ್ಲಿ ಜನತೆಗೆ ಉಚಿತ ನೀರು ಒದಗಿಸಲು ಎಲ್ಲಾ ಕೆಲಸ ಮಾಡಿದ್ದೇನೆ. ಇದಕ್ಕಾಗಿ ಅನುದಾನ, ನಿಯಮ ಸೇರಿದಂತೆ ಎಲ್ಲಾ ಕೆಲಸಗಳು ಮುಗಿದಿದೆ. ಇದೀಗ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಸದಸ್ಯರನ್ನು ಗೆಲ್ಲಿಸಬೇಕು. ದೆಹಲಿಯಲ್ಲಿನ ಎಲ್ಲಾ 7 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಪ್ರತಿ ತಿಂಗಳ ನೀರಿನ ಪಾವತಿ ತಪ್ಪಲಿದೆ. ಸಂಪೂರ್ಣವಾಗಿ ಉಚಿತವಾಗಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

7ನೇ ಬಾರಿ ಇಡಿ ವಿಚಾರಣೆಯಿಂದ ತಪ್ಪಿಸಿಕೊಂಡ ಸಿಎಂ ಕೇಜ್ರಿವಾಲ್, ಹೊಸ ದಾಳ ಉರುಳಿಸಿದ ಆಪ್!

ಎಲ್ಲಾ 7 ಸ್ಥಾನಗಳನ್ನು ಗೆದ್ದರೆ ಲೆಫ್ಟಿನೆಂಟ್ ಗವರ್ನರ್ ಯಾವುದೇ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಸಾಧ್ಯವಿಲ್ಲ. ದೆಹಲಿಯ ಅಭಿವೃದ್ಧಿ ಕಾರ್ಯಗಳು ಯಾವುದೇ ಅಡೆ ತಡೆ ಇಲ್ಲದೆ ಸಾಗಲಿದೆ. ಆದರೆ ನನಗೆ ಇನ್ನೂ ಅರ್ಥವಾಗುತ್ತಿಲ್ಲ, ನೀವೆಲ್ಲಾ ಯಾಕೆ ಬಿಜೆಪಿಗೆ ಮತ ಹಾಕುತ್ತೀದ್ದಿರಿ? ನೀವು ಆಯ್ಕೆ ಮಾಡಿದ ಸಂಸದರು ದೆಹಲಿಗೆ ಏನು ಮಾಡಿದ್ದಾರೆ? ಹೀಗಾಗಿ ನಮಗೆ ಮತ ನೀಡಿ, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ, 7 ಸ್ಥಾನ ಗೆದ್ದರೆ ಫಲಿತಾಂಶ ಬಂದ 15 ದಿನದ ಒಳಗೆ ನೀರಿನ ಬಿಲ್ ಸಂಪೂರ್ಣ ಉಚಿತವಾಗಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಹಳೇ ಬಿಲ್ ಪಾವತಿ ಮಾಡಬೇಕಿಲ್ಲ, ನೀರಿನ ಬಿಲ್ ಬಿಜೆಪಿ ಕಚೇರಿ ಎದರು ಹರಿದು ಹಾಕಿ ಅಥವಾ ಸುಟ್ಟು ಹಾಕಿ. ನಾನು ನಿಮ್ಮಜೊತೆಗಿದ್ದೇನೆ. ನಿಮ್ಮ ಕುಟುಂಬ ಸದಸ್ಯನಾಗಿ ಹೇಳುತ್ತಿದ್ದೇನೆ, ನಮ್ಮ ಅಭ್ಯರ್ಥಿಗಳ ಗೆಲ್ಲಿಸಿದರೆ ದೆಹಲಿಯಲ್ಲಿ ಪರ್ವಕಾಲ ಆರಂಭಗೊಳ್ಳಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದಿಲ್ಲಿ ಸರ್ಕಾರ ನಡೆಸುವ ನನಗೆ ನೊಬೆಲ್ ಪ್ರಶಸ್ತಿ ಕೊಡಬೇಕು, ಸಿಎಂ ಕೇಜ್ರಿವಾಲ್ ವಿಭಿನ್ನ ಆಗ್ರಹ!

ಇಂಡಿಯಾ ಒಕ್ಕೂಟದಿಂದ ದೂರ ಸರಿದಿದ್ದ ಆಪ್, ಇದೀಗ ಮತ್ತೆ ಮೈತ್ರಿ ಮುಂದುವರಿಸುತ್ತಿದೆ. ಕಾಂಗ್ರೆಸ್ ಜೊತೆ ಮೈತ್ರಿ ಮಾತುಕತೆ ನಡೆಸಿದೆ. ಸೀಟು ಹಂಚಿಕೆ ಅಂತಿಮಗೊಳಿಸಿದೆ. ಗುಜರಾತ್‌, ದಿಲ್ಲಿ, ಹರ್ಯಾಣ ಹಾಗೂ ಗೋವಾದಲ್ಲಿ ಒಟ್ಟಾಗಿ ಸ್ಪರ್ಧಿಸಲಿವೆ. ಆಮ್‌ ಆದ್ಮಿ ಪಕ್ಷವು ದೆಹಲಿಯಲ್ಲಿ ಕಾಂಗ್ರೆಸ್‌ಗೆ 3 ಕ್ಷೇತ್ರ ಬಿಟ್ಟುಕೊಡಲು ಒಪ್ಪಿಕೊಂಡಿವೆ. 4ರಲ್ಲಿ ತಾನು ಸ್ಪರ್ಧಿಸಲಿದೆ. ಸದ್ಯ ದಿಲ್ಲಿಯ ಎಲ್ಲ 7 ಸೀಟು ಬಿಜೆಪಿ ವಶದಲ್ಲಿದೆ.