* ಅಖಿಲ ಭಾರತ ಅಖಾಡ ಪರಿಷತ್‌ ಮುಖ್ಯಸ್ಥ ನರೇಂದ್ರ ಗಿರಿ ಆತ್ಮಹತ್ಯೆ* ಶಿಷ್ಯರು ಬ್ಲ್ಯಾಕ್‌ಮೇಲ್‌ ಮಾಡಿದ್ದೇ ಕಾರಣ ಎಂಬ ಅಂಶ ಬೆಳಕಿಗೆ* ಸಾವಿಗೂ ಮುನ್ನ ನರೇಂದ್ರ ಗಿರಿ ಬರದಿಟ್ಟಿದ್ದ ಪತ್ರದಲ್ಲಿ ಈ ಅಂಶ

ಪ್ರಯಾಗ್‌ರಾಜ್‌(ಸೆ.23): ಅಖಿಲ ಭಾರತ ಅಖಾಡ ಪರಿಷತ್‌(Akhil Bharatiya Akhada Parishad) ಮುಖ್ಯಸ್ಥ ನರೇಂದ್ರ ಗಿರಿ(Narendra Giri) ಆತ್ಮಹತ್ಯೆಗೆ, ಅವರ ಶಿಷ್ಯರು ಬ್ಲ್ಯಾಕ್‌ಮೇಲ್‌ ಮಾಡಿದ್ದೇ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ. ಸಾವಿಗೂ ಮುನ್ನ ನರೇಂದ್ರ ಗಿರಿ ಬರದಿಟ್ಟಿದ್ದ ಪತ್ರದಲ್ಲಿ ಈ ಅಂಶಗಳಿವೆ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.

‘ನಾನು ಮಹಿಳೆಯೊಂದಿಗಿರುವಂತೆ ತಿರುಚಿದ ಫೋಟೋ ಬಳಸಿ ನನ್ನ ಮೂವರು ಶಿಷ್ಯರು ಬೆದರಿಕೆ ಒಡ್ಡುತ್ತಿದ್ದಾರೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಇದು ನನ್ನನ್ನು ಅವಮಾನಕ್ಕೆ ನೂಕಿದೆ. ಹಾಗಾಗಿ ನಾನು ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ’ ಎಂದು ಸುಸೈಡ್‌ ನೋಟ್‌ನಲ್ಲಿ ನರೇಂದ್ರ ಗಿರಿ ಬರೆದಿದ್ದಾರೆ ಎಂದು ಮೂಲಗಳ ತಿಳಿಸಿವೆ.

ಮಠದಲ್ಲೇ ನರೇಂದ್ರ ಗಿರಿ ಆತ್ಮ​ಹತ್ಯೆ ಕೇಸು: ಮೂವರ ಬಂಧ​ನ

ಈ ಪ್ರಕರಣ ಸಂಬಂಧ ನರೇಂದ್ರ ಗಿರಿ ಅವರ ಶಿಷ್ಯರಾದ ಆನಂದಗಿರಿ, ಆದ್ಯ ತಿವಾರಿ ಮತ್ತು ಸಂದೀಪ್‌ ತಿವಾರಿ ಎಂಬ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ನಡುವೆ ಸ್ವಾಮಿಯಾಗಿದ್ದ ಆನಂದಗಿರಿ ಐಷಾರಾಮಿ ಜೀವನ ಸಾಗಿಸುತ್ತಿದ್ದ. ಆತ ಐಷಾರಾಮಿ ಕಾರುಗಳನ್ನು ಖರೀದಿಸಿದ್ದ. ವಿದೇಶಕ್ಕೆ ವಿಮಾನಗಳಲ್ಲಿ ಪ್ರಯಾಣ ಮಾಡುವಾಗ ಪಕ್ಕದಲ್ಲಿ ವಿಸ್ಕಿ ಬಾಟಲ್‌ಗಳನ್ನು ಇಟ್ಟುಕೊಂಡಿದ್ದ ಫೋಟೋಗಳು ಇದೀಗ ವೈರಲ್‌ ಆಗಿದ್ದು, ನರೇಂದ್ರ ಗಿರಿ ಸಾವಿನಲ್ಲಿ ಆನಂದ ಗಿರಿಯ ಪಾತ್ರದ ಬಗ್ಗೆ ಸಂಶಯ ಹೆಚ್ಚುವಂತೆ ಮಾಡಿದೆ. ಜೊತೆಗೆ ಮಠದ ಆಸ್ತಿ ವಿಷಯದಲ್ಲಿ ಹಿರಿಯ ಸ್ವಾಮೀಜಿ ಆತ ಹೊಂದಿದ್ದ ವಿರೋಧ ಕೂಡಾ ಆತನನ್ನು ಸಂಕಷ್ಟಕ್ಕೆ ಸಿಕ್ಕಿಸುವ ಸಾಧ್ಯತೆ ಇದೆ.

ಅಖಾಡ ಪರಿಷತ್‌ ಮುಖ್ಯಸ್ಥ ನರೇಂದ್ರ ಗಿರಿ ಆತ್ಮಹತ್ಯೆ, ಡೆತ್‌ನೋಟ್‌ ಪತ್ತೆ!

ಏನಿದು ಅಖಿಲ ಭಾರತ ಅಖಾಡ ಪರಿಷತ್‌?

ಅಖಿಲ ಭಾರತ ಅಖಾಡ ಪರಿಷತ್‌, ಭಾರತದಲ್ಲೇ ಸಂತರ ಅತಿದೊಡ್ಡ ಸಂಘಟನೆಯಾಗಿದೆ. ಇದು ವಿವಿಧ ಸಂಘಟನೆಗಳ ಒಕ್ಕೂಟವಾಗಿದ್ದು, ನರೇಂದ್ರ ಗಿರಿ ನಿರಂಜನಿ ಅಖಾಡದ ಮುಖ್ಯಸ್ಥರಾಗಿದ್ದರು, ಅದರ ಮೂಲಕ ಅಖಿಲ ಭಾರತ ಅಖಾಡ ಪರಿಷತ್‌ನ ಮುಖ್ಯಸ್ಥರಾಗಿಯೂ ಆಯ್ಕೆಯಾಗಿದ್ದರು.

ಕಳೆದ ಏಪ್ರಿಲ್‌ನಲ್ಲಿ ನರೇಂದ್ರ ಗಿರಿ ಕೋವಿಡ್‌ಗೆ ತುತ್ತಾಗಿದ್ದರು. ಬಳಿಕ ಅವರು ತಮ್ಮ ಕಾರ್ಯಚಟುವಟಿಕೆಯನ್ನು ಬಹುತೇಕ ಆಶ್ರಮಕ್ಕೆ ಸೀಮಿತಗೊಳಿಸಿದ್ದರು.