ಸರಸ್ವತಿ ದೇವಿಯ ಸೀರೆಯಿಲ್ಲದ ಮೂರ್ತಿ ಕಾಲೇಜಿನಲ್ಲಿ ಸ್ಥಾಪನೆ, ಎಬಿವಿಪಿ, ವಿಎಚ್ಪಿ ಆಕ್ರೋಶ!
ಕಾಲೇಜು ಪ್ರಾಧಿಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರನ್ನು ಎಬಿವಿಪಿ ಒತ್ತಾಯಿಸಿದೆ.
ನವದೆಹಲಿ (ಫೆ.15): ತ್ರಿಪುರಾದ ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜಿನಲ್ಲಿ ಸರಸ್ವತಿ ದೇವಿಯ ಸೀರೆಯಿಲ್ಲದ ವಿಗ್ರಹದ ಚಿತ್ರಗಳು ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ವರದಿಗಳ ಪ್ರಕಾರ, ವಿಗ್ರಹವನ್ನು ಕಾಲೇಜಿನ ವಿದ್ಯಾರ್ಥಿಗಳೇ ರಚಿಸಿದ್ದಾರೆ. ಈ ಚಿತ್ರಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಬಜರಂಗದಳ ಬೆಂಬಲಿಗರ ಗುಂಪು ಸರಸ್ವತಿ ದೇವಿಯ ವಿಗ್ರಹಕ್ಕೆ ಸೀರೆಯನ್ನು ಹೊದೆಸುವಂತೆ ಸಂಸ್ಥೆಯ ಅಧಿಕಾರಿಗಳನ್ನು ಒತ್ತಾಯಿಸಿದೆ. ಅದಲ್ಲದೆ, ಕಾಲೇಜು ಆವರಣಕ್ಕೆ ನುಗ್ಗಿ ಮೂರ್ತಿಗೆ ಸೀರೆ ಉಡಿಸಿರುವ ವಿಡಿಯೋ ಕೂಡ ವೈರಲ್ ಆಗಿದೆ. ವಿಗ್ರಹಕ್ಕೆ ಸೀರೆಯಿಲ್ಲದೆ ಬಿಡುವುದು ಅಶ್ಲೀಲ, ಇದು ಭಾರತೀಯ ಸಂಸ್ಕೃತಿ ಹಾಗೂ ಧಾರ್ಮಿಕ ಭಾವನೆಗಳಿಗೆ ವಿರುದ್ಧವಾಗಿದೆ ಎಂದು ವಿದ್ಯಾರ್ಥಿ ಸಂಘಟನೆ ಹೇಳಿದೆ. ತ್ರಿಪುರಾದ ಎಬಿವಿಪಿ ಘಟಕದ ಜಂಟಿ ಕಾರ್ಯದರ್ಶಿ ದಿಬಾಕರ್ ಆಚಾರ್ಜಿ, ಸಂಸ್ಥೆಯ ನಡೆ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.
ನಮಗೆಲ್ಲರಿಗೂ ತಿಳಿದಿರುವಂತೆ, ಇಂದು ವಸಂತ ಪಂಚಮಿ ಮತ್ತು ಸರಸ್ವತಿ ದೇವಿಯನ್ನು ದೇಶದಾದ್ಯಂತ ಪೂಜಿಸಲಾಗುತ್ತದೆ. ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜಿನಲ್ಲಿ ಸರಸ್ವತಿ ದೇವಿಯ ವಿಗ್ರಹವನ್ನು ಅತ್ಯಂತ ಅಶ್ಲೀಲವಾಗಿ ಕೆತ್ತಲಾಗಿದೆ ಎಂದು ನಮಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಆರಂಭಿಸಿದೆವು. ಕಾಲೇಜು ಆಡಳಿತ ಮಂಡಳಿಯವರು ಪೂಜೆಯನ್ನು ನಿಲ್ಲಿಸುವಂತೆ ಮಾಡಿದ್ದೇವೆ ಮತ್ತು ವಿಗ್ರಹದ ಮೇಲೆ ಸೀರೆ ಉಡಿಸುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸಿದ್ದೇವೆ. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಈ ರೀತಿಯ ಉಪಕ್ರಮದ ವಿರುದ್ಧ ನಾವು ಬಲವಾಗಿ ಪ್ರತಿಭಟಿಸುತ್ತೇವೆ ಎಂದು ತಿಳಿಸಿದ್ದಾರೆ. ವರದಿಯ ಪ್ರಕಾರ, ಕಾಲೇಜು ಪ್ರಾಧಿಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರಿಗೆ ಎಬಿವಿಪಿ ಒತ್ತಾಯಿಸಿದೆ.
Kalaburagi: ವಿಶ್ವವಿದ್ಯಾಲಯದ ಲೈಬ್ರೆರಿಯಲ್ಲಿ ಸರಸ್ವತಿ ಪೂಜೆಗೆ ವಿರೋಧ, 'ಇದೇನು ದೇವಸ್ಥಾನವಲ್ಲ' ಎಂದ ವಿದ್ಯಾರ್ಥಿ!
ವಿಗ್ರಹ ಚಿತ್ರಿಸಿರುವ ರೀತಿ "ಕಲೆ ಮತ್ತು ಕರಕುಶಲ ಕಾಲೇಜಿನ ವಿದ್ಯಾರ್ಥಿಗಳಿಂದ ನಿರೀಕ್ಷೆ ಮಾಡುವ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಮೌಲ್ಯಗಳಿಂದ ವಿಚಲನ ಇದಾಗಿದೆ" ಎಂದು ಬಜರಂಗದಳದ ತ್ರಿಪುರಾ ರಾಜ್ಯ ಸಂಯೋಜಕ ತುತಾನ್ ದಾಸ್ ಖಂಡಿಸಿದ್ದಾರೆ. “ಸರ್ಕಾರಿ ಕಲಾ ಮತ್ತು ಕರಕುಶಲ ಕಾಲೇಜಿನ ವಿದ್ಯಾರ್ಥಿಗಳು ದೇವಿ ಸರಸ್ವತಿಯ ಕಡೆಗೆ ತೋರಿದ ಸಭ್ಯತೆಯ ಕೊರತೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಹಿಂದೂ ದೇವತೆಗಳಿಗೆ ಯಾವುದೇ ಅಗೌರವವನ್ನು ವಿಎಚ್ಪಿ ಸಹಿಸುವುದಿಲ್ಲ ಎಂದು ವಿಎಚ್ಪಿಯ ಸಹಾಯಕ ಸಂಯೋಜಕ (ಪ್ರಚಾರ) ಸೌರಭ್ ದಾಸ್ ಹೇಳಿದ್ದಾರೆ. ಪೊಲೀಸರು ಸಂಸ್ಥೆಗೆ ಭೇಟಿ ನೀಡಿ ಪರಿಶೀಲಿಸಿದರಾದರೂ, ವಿದ್ಯಾರ್ಥಿ ಸಂಘಟನೆಗಳಿಗೆ ಯಾವುದೇ ದೂರು ದಾಖಲಾಗಿಲ್ಲ.
Chamarajanagar: ಪತ್ನಿಯ 'ಕರಿಮಣಿ ಮಾಲೀಕ ನೀನಲ್ಲ..' ರೀಲ್ಸ್, ಪತಿಯ ಆತ್ಮಹತ್ಯೆ!