ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು,  ಉದ್ರಿಕ್ತರ ಗುಂಪೊಂದು ರಾಜ​ಧಾ​ನಿ ಇಂಫಾ​ಲ್‌​ನ​ಲ್ಲಿ 2 ಮನೆಗಳಿಗೆ ಬೆಂಕಿ ಹಚ್ಚಿದೆ.

ಇಂಫಾಲ್‌: ಕುಕಿ-ಮೈತೇಯಿ ಸಮು​ದಾ​ಯ​ಗಳ ನಡುವೆ 2 ತಿಂಗ​ಳಿಂದ ಸಂಘ​ರ್ಷದ ಭೂಮಿಕೆ ಆಗಿ​ರುವ ಮಣಿ​ಪು​ರ​ದಲ್ಲಿ ಗುರುವಾರವೂ ಹಿಂಸಾಚಾರ ಮುಂದುವರೆದಿದ್ದು, ಉದ್ರಿಕ್ತರ ಗುಂಪೊಂದು ರಾಜ​ಧಾ​ನಿ ಇಂಫಾ​ಲ್‌​ನ​ಲ್ಲಿ 2 ಮನೆಗಳಿಗೆ ಬೆಂಕಿ ಹಚ್ಚಿದೆ. ಈ ವೇಳೆ ಗುಂಪು ಚದುರಿಸಲು ಪ್ರಯತ್ನಿಸಿದ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ಸಂಭವಿಸಿದೆ. ಪ್ರತಿಭಟನಾಕಾರರನ್ನು ಚುದುರಿಸುವುದಕ್ಕಾಗಿ ರಕ್ಷಣಾ ಪಡೆಗಳು ಬಲಪ್ರಯೋಗ ನಡೆಸಿದ್ದು, ಅಶ್ರುವಾಯು ಸಿಡಿಸಿದ ಘಟನೆ ಇಂಫಾಲ್‌ನ ಚೆಕೂನ್‌ ಪ್ರದೇ​ಶ​ದಲ್ಲಿ ನಡೆದಿದೆ. ಪ್ರತಿಭಟನಾಕಾರರು ಮತ್ತು ಶಸ್ತ್ರಧಾರಿಗಳನ್ನು ಹತ್ತಿಕ್ಕಲು ಕಾರ್ಯಾಚರಣೆಯನ್ನು ಸೇನೆ ಮತ್ತು ಅಸ್ಸಾಂ ರೈಫಲ್ಸ್‌ ಪಡೆಗಳು ತೀವ್ರಗೊಳಿಸಿವೆ ಎಂದು ಸೇನೆ ಹೇಳಿದೆ.

Add Asianetnews Kannada as a Preferred SourcegooglePreferred

ಕುಕಿ ಬಾಹು​ಳ್ಯದ ಪೂರ್ವ ಇಂಫಾಲ್‌ (Imphal)ಜಿಲ್ಲೆಯ ಖಮೆ​ನ್‌​ಲಾಕ್‌ ಗ್ರಾಮದ ಮೇಲೆ ಬುಧ​ವಾರ ನಡೆದ ದಾಳಿಯಲ್ಲಿ 9 ಮಂದಿ ಸಾವಿಗೀಡಾಗಿದ್ದರು. ಅಲ್ಲದೆ, ಬುಧವಾರ ಸಂಜೆ ವೇಳೆಗೆ ಸಚಿವೆ ನೇಮ್ಚಾ ಕಿಪ್‌ಜೆನ್‌ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ದುಷ್ಕೃತ್ಯ ಎಸಗಿದ್ದರು. ಹಿಂಸಾಚಾರ ಆರಂಭವಾದ ಬಳಿಕ ಸಚಿವರೊಬ್ಬರ ಮನೆಗೆ ಬೆಂಕಿ ಹಚ್ಚಿದ ಮೊದಲ ಉದಾಹರಣೆ ಇದಾಗಿದೆ. ಇದು ಮೈತೇಯಿ ಸಮುದಾಯದವರ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ. ಕೃತ್ಯ ಎಸಗಿದವರಿಗಾಗಿ ರಕ್ಷಣಾ ಪಡೆಗಳು ಹುಡುಕಾಟ ಆರಂಭಿಸಿವೆ. ದುರ್ಘಟನೆ ನಡೆದ ಸಮಯದಲ್ಲಿ ಮಣಿಪುರದ ಏಕೈಕ ಸಚಿವೆ ಮನೆಯಲ್ಲಿರಲಿಲ್ಲ ಎಂಬುದು ತಿಳಿದು ಬಂದಿದೆ.

ಮಣಿಪುರದಲ್ಲಿ ಸಂಘರ್ಷ ತಡೆಗೆ ಶಾಂತಿ ಸಮಿತಿ ರಚನೆ: ಸೈನಿಕರಿಂದ ಕಸಿದ ಗನ್‌ ಮರಳಿಸಲು ಡ್ರಾಪ್‌ಬಾಕ್ಸ್‌

ಮನೆ ತೊರೆದ 50000 ಜನ

ರಾಜ್ಯದಲ್ಲಿನ ಜನಾಂಗೀಯ ಸಂಘರ್ಷದಿಂದಾಗಿ 50,698 ಜನರು ತಮ್ಮ ಮನೆ ತೊರೆದಿದ್ದು, ಅವರಿಗೆ 349 ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ಮಣಿಪುರ ಸರ್ಕಾರ (Manipur Government) ತಿಳಿಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವ ಡಾ.ಆರ್‌.ಕೆ.ರಂಜನ್‌ (R K Ranjan), ರಾಜ್ಯದಲ್ಲಿ ಈಗಾಗಲೇ ಕೂಂಬಿಂಗ್‌ ಶುರು ಮಾಡಿದ್ದು, ಇದರಿಂದಾಗಿ ಒಟ್ಟು 53 ಆಯುಧಗಳು, 39 ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಘರ್ಷ ಕಾರಣ ನಿಂತಿದ್ದ ಶಾಲೆಗಳನ್ನು ಶೀಘ್ರ ತೆರೆಯಲಾಗುವುದು. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡದಂತೆ ಆದೇಶ ಮಾಡಲಾಗಿದೆ. ರಾಜ್ಯದಲ್ಲಿರುವ ಒಟ್ಟು 242 ಬ್ಯಾಂಕ್‌ ಶಾಖೆಗಳಲ್ಲಿ ಈಗಾಗಲೇ 198 ಶಾಖೆಗಳು ಮರಳಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಮಣಿಪುರ ಹಿಂಸಾಚಾರ,ಆಸ್ಪತ್ರೆ ತೆರಳುತ್ತಿದ್ದ ತಾಯಿ-ಮಗನ ಜೀವಂತ ಸುಟ್ಟ ಪ್ರತಿಭಟನಾಕಾರರು!