ತಮ್ಮ ಸಿಲಿಂಡರ್ ವಶಪಡಿಸಿಕೊಳ್ಳದಂತೆ ಅಧಿಕಾರಿಯ ಕಾಲಿಗೆ ಬಿದ್ದ ಬೀದಿಬದಿ ವ್ಯಾಪಾರಿ ಮಹಿಳೆಯ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಬೀದಿಬದಿ ವ್ಯಾಪಾರಿಗಳ ಸಂಕಷ್ಟ ಮತ್ತು ಎಲ್ಪಿಜಿ ಬೆಲೆ ಏರಿಕೆಯ ಚರ್ಚೆಯನ್ನು ಹುಟ್ಟುಹಾಕಿದೆ.
Viral Video: ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಮಳೆಗೆ ಬೌರಿಂಗ್ ಆಸ್ಪತ್ರೆಗೆ ಗೋಡೆ ಕುಸಿತದಿಂದ ವ್ಯಾಪಾರಿಗಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದರು. ಹಾಗಾಗಿ ರಾಜಧಾನಿಯಲ್ಲಿರುವ ಬೀದಿಬದಿ ವ್ಯಾಪಾರಿಗಳ ಜೀವ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡುತ್ತದೆ. ಮತ್ತೊಂದೆಡೆ ಬೀದಿಬದಿಯಲ್ಲಿರುವ ವ್ಯಾಪಾರಿಗಳ ಅಂಗಡಿಗಳನ್ನು ತೆರವು ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿರುತ್ತಾರೆ. ನಿನ್ನೆಯಿಂದ ರಸ್ತೆಬದಿ ವ್ಯಾಪಾರಿಯ ಅಂಗಡಿ ತೆರವುಗೊಳಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಹಾನಗರ ಪಾಲಿಕೆ ಅಧಿಕಾರಿಗಳು ಅಂಗಡಿಯಲ್ಲಿದ್ದ ಸಿಲಿಂಡರ್ ವಶಕ್ಕೆ ಪಡೆದುಕೊಳ್ಳಲು ಮುಂದಾಗುತ್ತಿದ್ದಂತೆ ವ್ಯಾಪಾರಿ ಮಹಿಳೆ, ಕಣ್ಣೀರು ಹಾಕುತ್ತಾ ಅಣ್ಣಾ ನಿಮ್ಮ ಕಾಲುಗಳಿಗೆ ಮುಗಿಯುತ್ತೇನೆ. ದಯವಿಟ್ಟು ಸಿಲಿಂಡರ್ ಬಿಡುವಂತೆ ಕೈ ಮುಗಿದು ಕೇಳಿಕೊಳ್ಳುತ್ತಾರೆ. ಆದ್ರೆ ಅಧಿಕಾರಿ ಮಾತ್ರ ಅತ್ತಿಂದಿತ್ತ ನಗುತ್ತಾ ತನ್ನ ಸಹೋದ್ಯೋಗಿಗಳನ್ನು ನೋಡುತ್ತಿರುತ್ತಾನೆ.
ಸಿಲಿಂಡರ್ ಬಿಡುವಂತೆ ಮಹಿಳೆಯ ಮನವಿ
@mktyaggi ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಮೇ 1ರಂದು ಶೇರ್ ಮಾಡಿಕೊಳ್ಳಲಾಗಿದ್ದು, 2.8 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಳ್ಳಲಾಗಿದೆ. ಪುರಸಭೆಯ ಅಧಿಕಾರಿ ಮಾನವೀಯತೆ ಹೊಂದಿರೋದಿಂದ ವ್ಯಾಪಾರಿಯ ಎಲ್ಪಿಜಿ ಸಿಲಿಂಡರ್ ಬಿಟ್ಟಿದ್ದಾರೆ ಎಂದು ಶೀರ್ಷಿಕೆಯೊಂದಿಗೆ ಶೇರ್ ಮಾಡಿಕೊಂಡಿದ್ದು, ಆದ್ರೆ ಈ ಘಟನೆ ನಿಖರವಾಗಿ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅಂತಿಮವಾಗಿ ಸಿಲಿಂಡರ್ ಬಿಟ್ಟು ಹೋದ್ರಾ ಅಥವಾ ಇಲ್ಲವಾ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಕೆಲವರು ಈ ವಿಡಿಯೋಗೂ ಜಾತಿ ಬಣ್ಣ ಕಟ್ಟುವ ಕೆಲಸವನ್ನು ಮಾಡಿದ್ದಾರೆ.
ಇದು ಒಬ್ಬ ಮಹಿಳೆಯ ಕಥೆ ಅಲ್ಲ!
Capt Vijay Saini (Retd) ಎಂಬ ಎಕ್ಸ್ ಖಾತೆಯಲ್ಲಿ ಇದು ಪುರಸಭೆಯ ನೌಕರರ ಮಾನವೀಯತೆಗೆ ಉದಾಹರಣೆಯಲ್ಲ. ಇದು ಸರ್ಕಾರ ಮತ್ತು ವ್ಯವಸ್ಥೆಯ ಮುಖದ ಮೇಲಿನ ಕಪ್ಪು ಕಲೆ? ಇದು ಕೇವಲ ಈ ಸಣ್ಣ ಅಂಗಡಿಯ ಮಹಿಳೆಯ ಕಥೆಯಲ್ಲ; ಲಕ್ಷಾಂತರ ಸಣ್ಣ ಅಂಗಡಿಯವರು ತಮ್ಮ ಕುಟುಂಬಗಳನ್ನು ಪೋಷಿಸಲು ಹೇಗಾದರೂ ಮಾಡುವ ವಾಸ್ತವ ಇದು? ನಿನ್ನೆಯಷ್ಟೇ, ಪಿಯೂಷ್ ಗೋಯಲ್ ಸಾಹಬ್ ಸಾಮಾಜಿಕ ಮಾಧ್ಯಮದಲ್ಲಿ ಬಡವರ ಮೆಸ್ಸೀಯನ ಪಾತ್ರವನ್ನು ನಿರ್ವಹಿಸುತ್ತಿದ್ದರು? ನಾನು ಕೇಳುತ್ತೇನೆ, ಈ ಮಹಿಳೆ 3 ಸಾವಿರ ರೂಪಾಯಿಗಳಿಗೆ ಸಿಲಿಂಡರ್ ಖರೀದಿಸುವ ಮೂಲಕ ತನ್ನ ಜೀವನೋಪಾಯವನ್ನು ಗಳಿಸಬಹುದೇ? ನಾಚಿಕೆಗೇಡು! ಪ್ರಧಾನಿ ಜಿ, ಇದು ಎಲ್ಲರಿಗೂ ಬೆಂಬಲವೂ ಅಲ್ಲ ಅಥವಾ ಎಲ್ಲರಿಗೂ ಅಭಿವೃದ್ಧಿಯೂ ಅಲ್ಲ - ಅಭಿವೃದ್ಧಿ ಇದ್ದರೆ, ಅದು ದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ
ಮಧ್ಯಪ್ರಾಚ್ಯಯುದ್ಧದ ಕಾರಣದಿಂದ ದೇಶದಲ್ಲಿ ತೈಲ ಬೆಲೆ ಏರಿಕೆಯಾಗಿದೆ. ನಿನ್ನೆಯಷ್ಟೇ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 991 ರು.ಗಳಷ್ಟು ಹೆಚ್ಚಳ ಮಾಡುವ ಮೂಲಕ ವ್ಯಾಪಾರಿಗಳಿಗೆ ದೊಡ್ಡ ಆಘಾತವನ್ನು ನೀಡಿದೆ. ಬೆಲೆ ಏರಿಕೆಗೆ ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ.


