ಗೆದ್ದ ಮೂರು ರಾಜ್ಯಗಳಿಗೂ ಹೊಸ ಸಿಎಂ ನೇಮಕಕ್ಕೆ ಮುಂದಾದ ಬಿಜೆಪಿ ಹೈಕಮಾಂಡ್!
ಮೂರು ರಾಜ್ಯಗಳಲ್ಲೂ ಈ ಹಿಂದೆ ಬಿಜೆಪಿಯಿಂದ ಮುಖ್ಯಮಂತ್ರಿಯಾದ ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೇ ಮತ್ತು ರಮಣ್ ಸಿಂಗ್ ಈ ಬಾರಿಯೂ ಜಯಗಳಿಸಿದ್ದಾರೆ. ಆದರೆ ಇವರನ್ನು ಬಿಟ್ಟು ಹೊಸಬರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.
![veterans in chief minister race in 3 states but bjp may go for new faces ash veterans in chief minister race in 3 states but bjp may go for new faces ash](https://static-ai.asianetnews.com/images/01hh082q2bcmc21bk73p39yyjd/modi-shah-bjp_363x203xt.jpg)
ನವದೆಹಲಿ (ಡಿಸೆಂಬರ್ 7, 2023): ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ 3 ರಾಜ್ಯಗಳಿಗೆ ಹೊಸ ಮುಖಗಳನ್ನು ಮುಖ್ಯಮಂತ್ರಿಗಳನ್ನಾಗಿ ನೇಮಕ ಮಾಡಲು ಬಿಜೆಪಿ ಚಿಂತನೆ ನಡೆಸಿದೆ. 2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಜಯ ಸಾಧಿಸಿತ್ತು. ಈ ಮೂರು ರಾಜ್ಯಗಳಲ್ಲೂ ಈ ಹಿಂದೆ ಬಿಜೆಪಿಯಿಂದ ಮುಖ್ಯಮಂತ್ರಿಯಾದ ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೇ ಮತ್ತು ರಮಣ್ ಸಿಂಗ್ ಈ ಬಾರಿಯೂ ಜಯಗಳಿಸಿದ್ದಾರೆ. ಆದರೆ ಇವರನ್ನು ಬಿಟ್ಟು ಹೊಸಬರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ಇದನ್ನು ಓದಿ: ತೆಲಂಗಾಣ ಮುಖ್ಯಮಂತ್ರಿಯಾಗಿ ಇಂದು ರೇವಂತ್ ರೆಡ್ಡಿ ಪ್ರಮಾಣ: ಸೋನಿಯಾ, ರಾಹುಲ್, ಖರ್ಗೆ ಭಾಗಿ!
ಮುಖ್ಯಮಂತ್ರಿ ಆಯ್ಕೆಯ ಕುರಿತಾಗಿ ಸುಮಾರು 4 ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಸಭೆ ನಡೆಸಲಾಗಿದ್ದು, ಇಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ವಿಷಯವನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಹ ಸ್ಪಷ್ಟಪಡಿಸಿದ್ದು, ಮುಖ್ಯಮಂತ್ರಿ ನೇಮಕ ಮಾಡುವ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಲಿದೆ ಎಂದಿದ್ದರು. ಇಲ್ಲಿ ಇವರು ಸೇರಿದಂತೆ ಕೇಂದ್ರ ಸಚಿವರಾದ ಪ್ರಹ್ಲಾದ್ ಪಟೇಲ್, ಜ್ಯೋತಿರಾದಿತ್ಯ ಸಿಂಧಿಯಾ, ನರೇಂದ್ರ ಸಿಂಗ್ ತೋಮರ್ ಮತ್ತು ಕೈಲಾಶ್ ವಿಜಯವರ್ಗೀಯಾ ರೇಸ್ನಲ್ಲಿದ್ದಾರೆ.
ರಾಜಸ್ಥಾನದಲ್ಲೂ ಸಹ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಓಂ ಬಿರ್ಲಾ, ಗಜೇಂದ್ರ ಸಿಂಗ್ ಶೇಖಾವತ್, ಅರ್ಜುನ್ ರಾಮ್ ಮೇಘವಾಲ್, ಸಿಪಿ ಜೋಶಿ, ದಿಯಾ ಕುಮಾರಿ, ಮಹಾಂತ ಬಾಲಕನಾಥ್ ಸೇರಿದಂತೆ ಹಲವರ ನಡುವೆ ಸ್ಪರ್ಧೆ ಇದೆ. ಛತ್ತೀಸ್ಗಢದಲ್ಲೂ ಮಾಜಿ ಸಿಎಂ ರಮಣ್ ಸಿಂಗ್, ಅರುಣ್ ಕುಮಾರ್ ಸಾಹೋ, ಧರಮಲಾಲ್ ಕೌಶಿಕ್ ರೇಸ್ನಲ್ಲಿದ್ದಾರೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಚುನಾವಣಾ ಭರವಸೆ: ಗ್ಯಾರಂಟಿ ಜಾರಿಗೆ ಹಣದ ಬರ?