ಕೇರಳದಲ್ಲಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡುವುದಿಲ್ಲ, ಹಿಂದಿನಂತೆಯೇ ಮೊದಲ ಎರಡು ದ್ವಿಪದಿ ಮಾತ್ರ ಹಾಡಲಾಗುವುದು ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದ ಸೂಚನೆಯನ್ನು ಪಾಲಿಸುವುದಿಲ್ಲ ಎಂದು ಆರೋಗ್ಯ ಸಚಿವ ಕೆ. ಮುರಳೀಧರನ್‌ ಹೇಳಿಕೆ ನೀಡಿರುವುದು ಸಂಚಲನ ಮೂಡಿಸಿದೆ.

ತಿರುವನಂತಪುರಂ(ಆ.10): ‘ಕೇರಳದಲ್ಲಿ ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡುವುದಿಲ್ಲ. ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಹಿಂದಿನಂತೆಯೇ ಮೊದಲೆರಡು ದ್ವಿಪದಿಗಳನ್ನಷ್ಟೇ ಗಾಯನ ಮಾಡಲಾಗುತ್ತದೆ’ ಎಂದು ಆರೋಗ್ಯ ಸಚಿವ ಕೆ. ಮುರಳೀಧರನ್‌ ಹೇಳಿದ್ದಾರೆ.

ಗುಂಡಿಟ್ಟು ಕೊಂದರೂ ವಂದೇ ಮಾತರಂ ಪೂರ್ಣ ಹಾಡುವುದಿಲ್ಲ

ಕಾಂಗ್ರೆಸ್‌ ಸಂಸದ ರಾಜಮೋಹನ್ ಉನ್ನಿಥನ್‌ ಕೂಡ ಇದಕ್ಕೆ ದನಿಗೂಡಿಸಿದ್ದು, ‘ಈ ಜನ್ಮದಲ್ಲಿ ಇಡೀ ರಾಷ್ಟ್ರೀಯ ಗೀತೆ ಕೇರಳದಲ್ಲಿ ಮೊಳಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಗುಂಡಿಟ್ಟು ಕೊಲ್ಲುವುದಾಗಿ ಬೆದರಿಸಿದರೂ ಬಗ್ಗುವುದಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:Vande Mataram Row: 'ಗುಲಾಮಗಿರಿ ಬಿಟ್ಟು ಶಿಕ್ಷಣದತ್ತ ಗಮನಹರಿಸಿ', ಮದನಿಗೆ ತಿರುಗೇಟು ಕೊಟ್ಟ ಸಚಿವ ಓಪಿ ರಾಜ್‌ಭರ್!

ಆ.6ರಂದು ಕೇರಳದ ಮುಖ್ಯ ಕಾರ್ಯದರ್ಶಿ ಬಿಶ್ವನಾಥ್ ಸಿನ್ಹಾ ಅವರು, ‘ಈ ವರ್ಷದ ಆಜಾದಿ ಕಾ ಅಮೃತ್‌ ಮಹೋತ್ಸವ್‌ ಅನ್ನು ವಂದೇ ಮಾತರಂನ 150ನೇ ವರ್ಷದ ಆಚರಣೆಯ 3ನೇ ಹಂತದೊಂದಿಗೆ ಸಂಯೋಜಿಸಲಾಗಿದೆ. ಇದರ ಆಚರಣೆ ವೇಳೆ ವಂದೇ ಮಾತರಂನ ಸಮೂಹ ಗಾಯನವನ್ನೂ ಆಯೋಜಿಸಲಾಗುವುದು. ಅದನ್ನು ಭಾರತ ಸರ್ಕಾರದ ಸೂಚನೆಯಂತೆ ಹಾಡಬೇಕು’ ಎಂಬ ಪತ್ರವನ್ನು ಹೊರಡಿಸಿದ್ದರು.

ಇದನ್ನೂ ಓದಿ: Vande mataram: ವಂದೇ ಮಾತರಂ ಹಾಡುವುದು ಇಸ್ಲಾಂಗೆ ವಿರುದ್ಧ: ಮಸೂದೆಗೆ ಇಸ್ಲಾಮಿಕ್ ಸಂಘಟನೆ ಆಕ್ಷೇಪ

ನಾವು ಹಳೆಯ ಪದ್ಧತಿ ಪಾಲಿಸುತ್ತೇವೆ:

ಈ ಬಗ್ಗೆ ಮಾತನಾಡಿರುವ ಮುರಳೀಧರನ್‌, ‘ಕೇಂದ್ರ ಸರ್ಕಾರದ ಸೂಚನೆಯಂತೆ ಕೆಲ ಅಧಿಸೂಚನೆಗಳನ್ನು ಹೊರಡಿಸುವುದು ಮುಖ್ಯ ಕಾರ್ಯದರ್ಶಿಯ ಕರ್ತವ್ಯವಾಗಿರುತ್ತದೆ. ಆದರೆ ಕೇರಳ ಇದನ್ನು ಒಪ್ಪುವುದಿಲ್ಲ. ನಾವು ಹಳೆಯ ಪದ್ಧತಿ ಪಾಲಿಸುತ್ತೇವೆ’ ಎಂದರು.

ಇದೇ ವೇಳೆ ಪ್ರಮಾಣವಚನ ಸಮಾರಂಭದಲ್ಲಿ ರಾಷ್ಟ್ರೀಯ ಗೀತೆಯ ಪೂರ್ಣ ಗಾಯನವನ್ನು ಉಲ್ಲೇಖಿಸುತ್ತಾ, ‘ರಾಜ್ಯಪಾಲರು ಭಾಗಿಯಾಗುವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಶಿಷ್ಟಾಚಾರವನ್ನು ಪಾಲಿಸಿದೆವು. ಆದರೆ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ನಮ್ಮ ಶಿಷ್ಟಾಚಾರವೇ ಪಾಲನೆಯಾಗುವುದು’ ಎಂದರು.