Asianet Suvarna News Asianet Suvarna News

Ankita Bhandari Murder: ಉತ್ತರಾಖಂಡ ಸಿಎಂ ಆದೇಶದ ಮೇರೆಗೆ ಆರೋಪಿ ಬಿಜೆಪಿ ಮುಖಂಡ ಪುತ್ರನ ರೆಸಾರ್ಟ್ ಧ್ವಂಸ

ಉತ್ತರಾಖಂಡದಲ್ಲಿ ರಿಸೆಪ್ಷನಿಸ್ಟ್‌ ಕೊಲೆ ಪ್ರಕರಣ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಈ ಹಿನ್ನೆಲೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಆದೇಶದ ಬಳಿಕ ಕೊಲೆ ಪ್ರಕರಣದ ಆರೋಪಿ ಬಿಜೆಪಿ ನಾಯಕನ ಪುತ್ರನಿಗೆ ಸೇರಿದ ರೆಸಾರ್ಟ್‌ ಅನ್ನು ಧ್ವಂಸಗೊಳಿಸಲಾಗಿದೆ. 

uttarakhand receptionist ankita bhandari murder resort of bjp leader son after cm pushkar singh dhami order ash
Author
First Published Sep 24, 2022, 10:29 AM IST

ಉತ್ತರಾಖಂಡದಲ್ಲಿ 19 ವರ್ಷದ ರಿಸೆಪ್ಷನಿಸ್ಟ್ (Rceptionist) ಅಂಕಿತಾ ಭಂಡಾರಿ ಕೊಲೆ (Murder) ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಿಜೆಪಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಒಡೆತನದಲ್ಲಿರುವ ಉತ್ತರಾಖಂಡದ ಋಷಿಕೇಶದಲ್ಲಿರುವ ವನತಾರಾ ರೆಸಾರ್ಟ್ (Resort) ಅನ್ನು ಧ್ವಂಸಗೊಳಿಸಲಾಗಿದೆ (Demolished). ಯುವತಿಯ ಹತ್ಯೆ ಬಳಿಕ ಉತ್ತರಾಖಂಡದಲ್ಲಿ ಪ್ರತಿಭಟನೆ ಹೆಚ್ಚಾಗಿದ್ದು, ಈ ನಂತರ ಉತ್ತರಾಖಂಡ್ ಸಿಎಂ ಪುಷ್ಕರ್ ಧಾಮಿ ರೆಸಾರ್ಟ್ ಧ್ವಂಸಕ್ಕೆ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ. "ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ನೀಡಿದ್ದ ರೆಸಾರ್ಟ್ ಆದೇಶಗಳನ್ನು ನೆಲಸಮಗೊಳಿಸುವ ಕಾರ್ಯ ನಡೆಯುತ್ತಿದೆ" ಎಂದು ಮುಖ್ಯಮಂತ್ರಿಯ ವಿಶೇಷ ಪ್ರಧಾನ ಕಾರ್ಯದರ್ಶಿ (Special Principal Secretary) ಅಭಿನವ್ ಕುಮಾರ್ ಮಾಹಿತಿ ನೀಡಿದ್ದಾರೆ.

ಉತ್ತರಾಖಂಡದ ರಿಷಿಕೇಶದಲ್ಲಿನ ಯಮಕೇಶ್ವರ ಬ್ಲಾಕ್‌ನಲ್ಲಿರುವ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಎಂಬ ಮೂವರು ಆರೋಪಿಗಳನ್ನು ನ್ಯಾಯಾಲಯವು ಈಗಾಗಲೇ 14 ದಿನಗಳ ನ್ಯಾಯಾಂಗ ಬಂಧನಕ್ಕೆ (Judicial Custody) ಕಳುಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೆ, ಯುವತಿಯ ಹತ್ಯೆಯ ಆರೋಪದ ನಂತರ ರಾಜ್ಯದ ಎಲ್ಲಾ ರೆಸಾರ್ಟ್‌ಗಳಲ್ಲಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಆದೇಶ ನೀಡಿದ್ದಾರೆ. 19 ವರ್ಷದ ಯುವತಿಯ ಹತ್ಯೆ ನಂತರ ಉತ್ತರಾಖಂಡದಲ್ಲಿ ಪ್ರತಿಭಟನೆಗಳು ಹೆಚ್ಚಾಗಿದ್ದು, ಈ ಹಿನ್ನೆಲೆ ಅಕ್ರಮ ನಡೆಸುತ್ತಿರುವ ರೆಸಾರ್ಟ್‌ಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸಿಎಂ ಪುಷ್ಕರ್‌ ಸಿಂಗ್ ಧಾಮಿ ಆದೇಶ ನೀಡಿದ್ದಾರೆ.

ಇದನ್ನು ಓದಿ: Crime News: ಅಮ್ಮ ತನ್ನಿಷ್ಟದ ಅಡುಗೆ ಮಾಡಲಿಲ್ಲವೆಂದು ಮಗಳು ಆತ್ಮಹತ್ಯೆ

ಅಂತಹ ಅಪರಾಧಗಳಿಗೆ ಕಠಿಣ ಶಿಕ್ಷೆ: ಸಿಎಂ ಎಚ್ಚರಿಕೆ
ಯುವತಿಯ ಹತ್ಯೆ ಪ್ರಕರಣದ ಬಳಿಕ ಪ್ರತಿಕ್ರಿಯೆ ನೀಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್ ಧಾಮಿ,  ಅಂತಹ ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು ಎಂದು ಹೇಳಿದರು. “ಇದು ದುರದೃಷ್ಟಕರ. ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ., ಅವರು ಬಂಧಿಸುವ ತಮ್ಮ ಕೆಲಸವನ್ನು ಮಾಡಿದ್ದಾರೆ. ಅಪರಾಧಿ ಯಾರೇ ಆಗಿರಲಿ, ಅಂತಹ ಘೋರ ಅಪರಾಧಗಳಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ”ಎಂದು ಪುಷ್ಕರ್‌ ಸಿಂಗ್ ಧಾಮಿ ಹೇಳಿದ್ದಾರೆ.

ಇನ್ನು, ''ಬಾಲಕಿಯ ಹತ್ಯೆಯ ನಂತರ, ಅಪರಾಧಿಗಳಲ್ಲಿ ಭಯ ಹುಟ್ಟಿಸಲು ಕಟ್ಟಡವನ್ನು ನೆಲಸಮಗೊಳಿಸಬೇಕು ಎಂದು ನಾನು ತಕ್ಷಣವೇ ಹೇಳಿದ್ದೆ'' ಎಂದು ಯಮಕೇಶ್ವರ ಶಾಸಕ ರೇಣು ಬಿಷ್ತ್ ಹೇಳಿದ್ದಾರೆ. ಹಾಗೂ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ಆದೇಶ ನೀಡಿದ ಸಿಎಂಗೆ ಧನ್ಯವಾದ ಅರ್ಪಿಸುತ್ತೇನೆ. ಸಂತ್ರಸ್ತೆಯ ಪೋಷಕರೊಂದಿಗೆ ಅನುಚಿತವಾಗಿ ವರ್ತಿಸಿದ ಕಂದಾಯ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ರನ್ನು ಅಮಾನತುಗೊಳಿಸಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದೂ ಶಾಸಕ ರೇಣು ಬಿಷ್ತ್ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರೇಮ ಗೀಮ ಜಾನೇದೋ ಅಂದ್ರೆ ಮೋಸವೋ...ನಗ್ನಚಿತ್ರಗಳಿಗೆ ನಾಶವಾಯ್ತು ಪ್ರೀತಿ..!

ಪುಲ್ಕಿತ್ ಆರ್ಯ ಹರಿದ್ವಾರದ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ. ವಿನೋದ್ ಆರ್ಯ ಅವರು ಈ ಹಿಂದೆ ಉತ್ತರಾಖಂಡದ ಮತಿ ಕಲಾ ಮಂಡಳಿಯ (Uttarakhand Mati Kala Board) ಅಧ್ಯಕ್ಷರಾಗಿ ರಾಜ್ಯ ಸಚಿವ ಶ್ರೇಣಿಯನ್ನು ಹೊಂದಿದ್ದರು. 6 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯನ್ನು ಹತ್ಯೆಗೈದ ಆರೋಪದ ಮೇಲೆ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಸೇರಿದಂತೆ ಮೂವರನ್ನು ಶುಕ್ರವಾರ ಬಂಧಿಸಲಾಗಿದೆ. ಸೆಪ್ಟೆಂಬರ್ 18 ರಿಂದಲೇ ಬಾಲಕಿ ಕಾಣೆಯಾಗಿದ್ದಳು. ಆರೋಪಿಗಳು ಬಾಲಕಿಗೆ ಕಿರುಕುಳ ನೀಡಿದ್ದಾರೆ ಎಂದು ಬಾಲಕಿಯ ತಂದೆ ಆರೋಪಿಸಿದ್ದು, ಘಟನೆಯ ಆಡಿಯೋವನ್ನು ರೆಕಾರ್ಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ. 

Follow Us:
Download App:
  • android
  • ios