Uttarakhand Avalanche: ಹಿಮಪಾತದಲ್ಲಿ ಸಿಲುಕಿದ 28 ಕ್ಕೂ ಹೆಚ್ಚು ಜನ; ಹಲವರು ಮೃತಪಟ್ಟಿರುವ ಶಂಕೆ
ಉತ್ತರಾಖಂಡದಲ್ಲಿ ಹಿಮಪಾತ ಸಂಭವಿಸಿದ್ದು, ಹಲವರು ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆ, ಭಾರತೀಯ ವಾಯುಪಡೆ ರಕ್ಷಣೆಗೆ ದೌಡಾಯಿಸಿದ್ದು, ಐಟಿಬಿಪಿ ಹೆಲಿಪ್ಯಾಡ್ ಮೂಲಕ ಹಿಮಪಾತದಲ್ಲಿ ಸಿಲುಕಿ ಬದುಕಿದವರನ್ನ ರಕ್ಷಿಸುವ ಯತ್ನ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಉತ್ತರಾಖಂಡದಲ್ಲಿ ಮತ್ತೆ ಭಾರಿ ಹಿಮಪಾತ (Avalanche) ಸಂಭವಿಸಿದ್ದು, ದ್ರೌಪದಿ (Draupadi) ಶಿಖರದ ದಾಂಡಾ - 2 (Danda - 2) ಪರ್ವತದಲ್ಲಿ ಕನಿಷ್ಠ 28 ಜನರು ಸಿಲುಕಿದ್ದು, ಈ ಪೈಕಿ ಹಲವರು ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಘಟನೆ ನಡೆದಾಗ 170 ಕ್ಕೂ ಹೆಚ್ಚು ಪರ್ವತಾರೋಹಿಗಳು ತರಬೇತಿ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನು, ಈ ಘಟನೆ ವರದಿಯಾಗುತ್ತಿದ್ದಂತೆ ದೆಹ್ರಾಡೂನ್ನ ಸಹಸ್ತ್ರಧಾರಾ ಹೆಲಿಪ್ಯಾಡ್ನಿಂದ ಎಸ್ಡಿಆರ್ಎಫ್ (SDRF) ತಂಡ ದೌಡಾಯಿಸಿದ್ದು, ಹಿಮಪಾತದಲ್ಲಿ ಸಿಲುಕಿದವರನ್ನು ರಕ್ಷಣಾ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ, ಭಾರತೀಯ ವಾಯುಪಡೆ (Indian Air Force) ಸಹ ರಕ್ಷಣೆಗೆ ದೌಡಾಯಿಸಿದ್ದು, ಐಟಿಬಿಪಿ (ITBP) ಹೆಲಿಪ್ಯಾಡ್ ಮೂಲಕ ಹಿಮಪಾತದಲ್ಲಿ ಸಿಲುಕಿ ಬದುಕಿದವರನ್ನ ರಕ್ಷಿಸುವ ಯತ್ನ ಮಾಡುತ್ತಿದೆ ಎಂದು ತಿಳಿದುಬಂದಿದೆ.
ಉತ್ತರಕಾಶಿ ಪ್ರದೇಶದಲ್ಲಿ ಭಾರತೀಯ ವಾಯುಪಡೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಈ ಕಾರ್ಯಕ್ಕೆ 2 ಚೀತಾ ಹೆಲಿಕಾಪ್ಟರ್ಗಳನ್ನು (Cheetah Helicopter) ನಿಯೋಜಿಸಲಾಗಿದೆ. ಇನ್ನು ಹಿಮಪಾತದಲ್ಲಿ ಸಿಲುಕಿದ್ದವರೆಲ್ಲ ನೆಹರೂ ಪರ್ವತಾರೋಹಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದವರು ಎಂದು ತಿಳಿದುಬಂದಿದೆ. ಹಾಗೂ, ಅಗತ್ಯವಿದ್ದಲ್ಲಿ ಹೆಚ್ಚು ಹೆಲಿಕಾಪ್ಟರ್ಗಳನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದೂ ಐಎಎಫ್ (IAF) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: Avalanche in Arunachal Pradesh : ಎಲ್ಲಾ ಏಳೂ ಸೈನಿಕರ ಸಾವು ಖಚಿತಪಡಿಸಿದ ಸೇನೆ!
ಈ ಘಟನೆ ಬಗ್ಗೆ ಟ್ವೀಟ್ ಮಾಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ‘’ಉತ್ತರಾಖಂಡದ ದ್ರೌಪದಿಯ ದಾಂಡಾ - 2 ಪರ್ವತ ಶಿಖರದಲ್ಲಿ ಹಿಮಪಾತದ ನಂತರ 28 ಮಂದಿ ಸಿಲುಕಿರುವ ಶಂಕೆ ಇದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಗಳವಾರ ಪ್ರಕಟಿಸಿದ್ದಾರೆ. ಹಿಮಪಾತಕ್ಕೆ ಉತ್ತರಕಾಶಿಯ ನೆಹರೂ ಪರ್ವತಾರೋಹಣ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವವರು ಸಿಕ್ಕಿಬಿದ್ದಿದ್ದು, ಅವರನ್ನು ರಕ್ಷಿಸಲು ಸದ್ಯಕ್ಕೆ ಕ್ಷಿಪ್ರ ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಈ ಶಿಖರವು ಉತ್ತರಾಖಂಡದ ಗರ್ವಾಲ್ ಹಿಮಾಲಯದ ಗಂಗೋತ್ರಿ ಶ್ರೇಣಿಯಲ್ಲಿದೆ’’ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಲ್ಲದೆ, ದ್ರೌಪದಿಯ ದಾಂಡಾದಲ್ಲಿ ಹಿಮಪಾತದಲ್ಲಿ ಸಿಲುಕಿರುವ ಪ್ರಶಿಕ್ಷಣಾರ್ಥಿಗಳನ್ನು ರಕ್ಷಿಸಲು ಜಿಲ್ಲಾಡಳಿತ, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸೇನೆ ಮತ್ತು ಐಟಿಬಿಪಿ ಸಿಬ್ಬಂದಿ ಕ್ಷಿಪ್ರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ಘಟನೆಗೆ ಸಂತಾಪ ಸೂಚಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉತ್ತರಾಖಂಡ ಸಿಎಂ ಜತೆ ಮಾತನಾಡಿ ಪರಿಸ್ಥಿತಿ ಅವಲೋಕಿಸಿರುವುದಾಗಿ ತಿಳಿಸಿದ್ದಾರೆ. “ರಕ್ಷಣೆ ಮತ್ತು ಪರಿಹಾರ ಕಾರ್ಯಗಳನ್ನು ಆರೋಹಿಸಲು ನಾನು IAF ಗೆ ಸೂಚನೆ ನೀಡಿದ್ದೇನೆ. ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ’’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Avalanche In Arunachal Pradesh: ಹಿಮಕುಸಿತದಲ್ಲಿ ಸಿಲುಕಿ 7 ಯೋಧರು ನಾಪತ್ತೆ
ಉತ್ತರಕಾಶಿಯಲ್ಲಿ ನೆಹರು ಪರ್ವತಾರೋಹಣ ಸಂಸ್ಥೆ ನಡೆಸಿದ ಪರ್ವತಾರೋಹಣ ಯಾತ್ರೆಯ ಮೇಲೆ ಭೂಕುಸಿತದಿಂದ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದರಿಂದ ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.