Asianet Suvarna News Asianet Suvarna News

ಜಗಳ ಮಾಡ್ಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಅಜ್ಜ-ಅಜ್ಜಿ, ಪೊಲೀಸರು ಸಂಧಾನ ಮಾಡಿದ್ದು ಹೀಗೆ!

ಗಲಾಟೆ ಮಾಡಿಕೊಂಡು ಮೂರು ವರ್ಷಗಳಿಂದ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದ ಉತ್ತರಪ್ರದೇಶದ ಗೋಂಡಾ ಜಿಲ್ಲೆಯ ಅಜ್ಜ-ಅಜ್ಜಿಯ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಎಸ್ ಪಿ ಸಂತೋಷ್ ಮಿಶ್ರಾ, ಇವರಿಬ್ಬರ ಗಲಾಟೆಯನ್ನು ಸಿಹಿಯಾದ ಮಾತುಗಳಿಂದ ಮುಕ್ತಾಯ ಮಾಡಿದ್ದಾರೆ.

Uttar Pradesh dada dadi went to police station after a fight  What happened next is super adorable san
Author
Bengaluru, First Published Apr 14, 2022, 7:49 PM IST

ಲಕ್ನೋ (ಏ.14): ಯುದ್ಧ (War), ಹಣದುಬ್ಬರ (Inflation), ಅಪರಾಧ (Crime) ಸುದ್ದಿಗಳನ್ನು ಓದಿ ಓದಿ ನೀವು ಬೇಸರಗೊಂಡಿದ್ದರೆ, ಇಲ್ಲೊಂದು ಸಿಹಿಯಾದ ಸುದ್ದಿ ಇದೆ. ಇದರಲ್ಲೊಂದು ಸಿಹಿಯಾದ ಅಂತ್ಯದ ಕಥೆಯಿದೆ, ಖಂಡಿತವಾಗಿ ಈ ಸುದ್ದಿ ನಿಮ್ಮ ಮುಖದಲ್ಲಿ ಮುಗುಳ್ನಗೆಗೆ ಕಾರಣವಾಗುತ್ತದೆ. ಟ್ವಿಟರ್ ನಲ್ಲಿ (Twitter) ವೈರಲ್ ಆಗಿರುವ ಈ  ಸುದ್ದಿ ಉತ್ತರ ಪ್ರದೇಶದ (Uttar Pradesh) ಗೊಂಡಾ (Gonda) ನಗರದ ಕತ್ರಾಬಜಾರ್ (Katra Bazar) ನಿಂದ ಬಂದಿದೆ.

ಅಜ್ಜ ಅಜ್ಜಿ ಇಬ್ಬರಿಗೂ ಬಹುತೇಕ 75 ವರ್ಷಕ್ಕೂ ಮೀರಿದ ವಯಸ್ಸು. ಆದರೆ, ಯಾವುದೋ ಸಣ್ಣ ಕಾರಣಕ್ಕೆ ಮುನಿಸಿಕೊಂಡು ಇಬ್ಬರೂ ಕಳೆದ ಮೂರು ವರ್ಷಗಳಿಂದ ಬೇರೆ ಬೇರೆ ವಾಸವಾಗಿದ್ದರು. ಇತ್ತೀಚಿನ ದಿನಗಳಲ್ಲಿ ಕ್ರಿಮಿನಲ್ ಗಳನ್ನು ಮಟ್ಟಹಾಕುವ ವಿಚಾರದಲ್ಲಿ ಮಾತ್ರವೇ ಉತ್ತರ ಪ್ರದೇಶದ ಪೊಲೀಸ್ ಠಾಣೆಗಳು ಸುದ್ದಿಯಾಗುತ್ತಿದ್ದವು. ಈ ಬಾರಿ ಕತ್ರಾ ಬಜಾರ್ ಪೊಲೀಸ್ ಠಾಣೆಯಲ್ಲಿ ಎರಡು ಹಿರಿಯ ಜೀವಗಳನ್ನು ಒಂದು ಮಾಡುವ ಮೂಲಕ ಪೊಲೀಸರು ಗಮನಸೆಳೆದಿದ್ದಾರೆ. ಪೊಲೀಸರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.

ಕಳೆದ ಮೂರು ವರ್ಷಗಳಿಂದ ಬೇರೆ-ಬೇರೆಯಾಗಿ ವಾಸಿಸುತ್ತಿದ್ದ ಅಜ್ಜ-ಅಜ್ಜಿಯರ ವಿವಾದ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಈ ವೇಳೆ ಇಬ್ಬರನ್ನು ಠಾಣೆಗೆ ಕರೆಸಿದ ಎಸ್ ಪಿ ಸಂತೋಷ್ ಮಿಶ್ರಾ, ಮಾತುಕತೆಯ ಮೂಲಕ ಇಬ್ಬರ ನಡುವಿನ ಮನಸ್ತಾಪವನ್ನು ಬಗೆಹರಿಸಿದ್ದಾರೆ. ಈ ವೇಳೆ ಸಾಯುವ ವರೆಗೂ ತಾವು ಜೊತೆಯಾಗಿಯೇ ಬಾಳುತ್ತೇವೆ. ಏಳೇಳೂ ಜನ್ಮ ಕೂಡ ಜೊತೆಯಲ್ಲೇ ಇರ್ತೇವೆ ಎಂದು ವೃದ್ಧು ಹೇಳಿದಾಗ ಇಡೀ ಪೊಲೀಸ್ ಠಾಣೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದೆ.


75ರ ಹರೆಯದ ಶಿವನಾಥ್ ಮತ್ತು ಜಂಕಾದೇವಿ ದಂಪತಿಗಳು ಪೊಲೀಸ್ ಠಾಣೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿದಾಗ, ಅವರ ಎಲ್ಲಾ ಅಸಮಾಧಾನಗಳು ಖಂಡಿತವಾಗಿಯೂ ದೂರವಾದವು ಎನ್ನುವುದು ಸ್ಪಷ್ಟವಾಗಿತ್ತು. ಗಲಾಟೆಯ ಬಗ್ಗೆ ಜಂಕಾದೇವಿ ಕತ್ರಾ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪೊಲೀಸರು ಕೌನ್ಸಿಲಿಂಗ್ ಮಾಡಿದ್ದಾರೆ. ಈ ಕೌನ್ಸೆಲಿಂಗ್ ಮುಖಾಂತರ ಇಬ್ಬರೂ ಪರಸ್ಪರ ಮನಸ್ತಾಪ ಮರೆತು ಒಟ್ಟಿಗೆ ಸುಖವಾಗಿ ಬಾಳುವ ಮನಸ್ಸು ಮಾಡಿದರು. ಈ ಸಂದರ್ಭವನ್ನು ಐತಿಹಾಸಿಕವಾಗಿಸಲು, ಠಾಣೇದಾರರು ಲಡ್ಡುಗಳನ್ನು ಆರ್ಡರ್ ಮಾಡಿ ಪರಸ್ಪರ ತಿನ್ನುವಂತೆ ಕೇಳಿಕೊಂಡರು. ಲಡ್ಡು ತಿನ್ನುವುದರಲ್ಲಿ, ಉಣಿಸುವಲ್ಲಿಯೂ ಇಬ್ಬರ ನಡುವೆ ಪರಸ್ಪರ ಪ್ರೀತಿ ಮೂಡಿತ್ತು.

ಗಂಡ-ಹೆಂಡ್ತಿ ಜಗಳವಾಡದೆ ಯಾವಾಗ್ಲೂ ಖುಷಿಯಾಗಿರಬೇಕಾದ್ರೆ ಹೀಗೆ ಮಾಡಿ

ಕತ್ರಾ ಪೊಲೀಸ್ ಠಾಣೆಯ ಕೊತ್ವಾಲ್ ಸುಧೀರ್ ಕುಮಾರ್ ಮಾತನಾಡಿ, ಏಪ್ರಿಲ್ 12 ರಂದು ಈ ಕುರಿತಾಗಿ ವರದಿ ಬಂದಿತ್ತು. ವೃದ್ಧ ದಂಪತಿಯ ಮನೆಗೆ ಕಾನ್‌ಸ್ಟೆಬಲ್ ಒಬ್ಬರನ್ನು ಕಳುಹಿಸಿ ಠಾಣೆಗೆ ಕರೆಸಲಾಯಿತು. ಪೊಲೀಸರ ಕರೆಯ ಮೇರೆಗೆ ಶಿವನಾಥ್ ಮತ್ತು ಜಂಕಾ ಠಾಣೆಗೆ ಬಂದಿದ್ದರು. ಕೊತ್ವಾಲ್ ಅವರು ವೃದ್ಧ ದಂಪತಿಯೊಂದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ತಿಳಿದುಕೊಂಡರು. ಈ ವೇಳೆ ಇಬ್ಬರೂ ಪರಸ್ಪರ ಕ್ಷಮೆ ಕೇಳುವಂತೆ ಹೇಳಲಾಗಿತ್ತು.

Parenting An Angry Teen: ಹರೆಯದ ಮಕ್ಕಳು ಕೋಪ ತರಿಸುತ್ತಾರೆಯೇ? ಹೀಗ್ಮಾಡಿ

ಜಂಕಾ ಲಡ್ಡು ತಿನ್ನಿಸಲು ಬಂದಾಗ ಶಿವನಾಥ ಆಕೆ ಕೈ ಹಿಡಿದ. "ಲಡ್ಡು ತಿನ್ನುತ್ತಿದ್ದೇನೆ. ಇಲ್ಲಿ ಹೇಳಿರುವ ಮಾತನ್ನು ಪಾಲಿಸಬೇಕು' ಎಂದು ಶಿವನಾಥ ಹೇಳಿದಾಗ ಅದಕ್ಕೆ ಜಂಕಾ ಒಪ್ಪಿಗೆ ನೀಡಿದರು. ಅದರ ಬೆನ್ನಲ್ಲಿಯೇ ಶಿವನಾಥ ಲಡ್ಡು ತಿಂದಿದ್ದಾರೆ. ಆ ಬಳಿಕ ಶಿವನಾಥ ಕೂಡ ಜಂಕಾಗೆ ಲಡ್ಡು ತಿನ್ನಿಸಲು ಹೋದಾಗ, "ನನ್ನ ಕೈ ಮಾತ್ರ ಕಚ್ಚಬೇಡ' ಎಂದು ಹಿಂದಿಯಲ್ಲಿ ಹೇಳಿದಾಗ ಇಡೀ ಪೊಲೀಸ್ ಠಾಣೆ ನಗೆಗಡಲಲ್ಲಿ ತೇಲಿತು. ವೃದ್ಧ ದಂಪತಿ ನಡುವೆ ರಾಜಿ ಸಂಧಾನ ಮಾಡಿರುವ ಪೊಲೀಸರನ್ನು ಜನ ಶ್ಲಾಘಿಸಿದ್ದಾರೆ. #SPGonda @IPS_SantoshM ಅವರ ನಿರ್ದೇಶನದಲ್ಲಿ, ಗೊಂಡಾ ಪೊಲೀಸರು ಇದನ್ನು ಟ್ವೀಟ್ ಮಾಡಿದ್ದಾರೆ, ಪೊಲೀಸ್ ಠಾಣೆ ಕತ್ರಬಜಾರ್ 75 ವರ್ಷದ ವೃದ್ಧ ದಂಪತಿಗೆ ಸಿಹಿ ತಿನ್ನಿಸುವ ಮೂಲಕ ಇಬ್ಬರನ್ನು ಒಂದು ಮಾಡಲಾಯಿತು ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.

 

Follow Us:
Download App:
  • android
  • ios