ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಸೋಮವಾರ ಲೋಕಸಭೆಯಲ್ಲಿ ನಿವೃತ್ತ ಸೇನಾ ಮುಖ್ಯಸ್ಥ ಜ। ಎಂ.ಎಂ. ನರವಣೆ ಅವರು ಭಾರತ-ಚೀನಾ ನಡುವೆ 2020ರಲ್ಲಿ ನಡೆದ ಗಲ್ವಾನ್‌ ಸಂಘರ್ಷದ ಬಗ್ಗೆ ಬರೆದಿರುವ ಇನ್ನೂ ಮುದ್ರಣವಾಗದ ಪುಸ್ತಕದ ಅಂಶಗಳನ್ನು ಪ್ರಸ್ತಾಪಿಸಿದ್ದು ಕೋಲಾಹಲ ಎಬ್ಬಿಸಿದೆ.

ನವದೆಹಲಿ : ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಸೋಮವಾರ ಲೋಕಸಭೆಯಲ್ಲಿ ನಿವೃತ್ತ ಸೇನಾ ಮುಖ್ಯಸ್ಥ ಜ। ಎಂ.ಎಂ. ನರವಣೆ ಅವರು ಭಾರತ-ಚೀನಾ ನಡುವೆ 2020ರಲ್ಲಿ ನಡೆದ ಗಲ್ವಾನ್‌ ಸಂಘರ್ಷದ ಬಗ್ಗೆ ಬರೆದಿರುವ ಇನ್ನೂ ಮುದ್ರಣವಾಗದ ಪುಸ್ತಕದ ಅಂಶಗಳನ್ನು ಪ್ರಸ್ತಾಪಿಸಿದ್ದು ಕೋಲಾಹಲ ಎಬ್ಬಿಸಿದೆ. ರಾಹುಲ್‌ ಮಾಡಿದ ಉಲ್ಲೇಖಗಳನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಈ ವೇಳೆ ಕೋಲಾಹಲ ಉಂಟಾಗಿ ಕಲಾಪ ಭಂಗವಾಗಿದೆ.

''''ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'''' ಎಂಬ ಶೀರ್ಷಿಕೆಯಲ್ಲಿ ಜ। ನರವಣೆ ಆತ್ಮಚರಿತ್ರೆ ಬರೆದಿದ್ದು, ಅದಿನ್ನೂ ಪ್ರಕಟವಾಗಿಲ್ಲ. ಆದರೆ ಅದರಲ್ಲಿ ಇವೆ ಎನ್ನಲಾದ ಕೆಲವು ಅಂಶಗಳು, ‘ಕಾರವಾನ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿವೆ.

ಅದರಲ್ಲಿ, ‘ಭಾರತ 2020ರಲ್ಲಿ 20 ಯೋಧರನ್ನು ಚೀನಾ ಜತೆಗಿನ ಸಂಘರ್ಷದಲ್ಲಿ ಕಳೆದುಕೊಂಡಿತು. 1962ರ ನಂತರ ಚೀನಾ ಜತೆಗಿನ ಯುದ್ಧದಲ್ಲಿ ಭಾರತ ಇಷ್ಟು ಸೈನಿಕರ ಕಳೆದುಕೊಂಡಿದ್ದು ಇದೇ ಮೊದಲು. ಭಾರತವು ಚೀನಾಕ್ಕೆ ತನ್ನ ನೆಲವನ್ನು ಬಿಟ್ಟುಕೊಟ್ಟಿದೆ. ಇದು ಭವಿಷ್ಯದ ಯಾವುದೇ ಗಡಿ ಇತ್ಯರ್ಥಕ್ಕೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಡೋಕ್ಲಾಮ್‌ನಲ್ಲೂ ಚೀನಾ ಗಡಿದಾಟಿ ಬಂದಿತ್ತು’ ಎಂದು ಬರೆದಿದ್ದನ್ನು ರಾಹುಲ್ ಪ್ರಸ್ತಾಪಿಸಿದಾಗ ಕೋಲಾಹಲವೆದ್ದಿತು.

ಸಚಿವರ ಕಿಡಿ:

ರಾಹುಲ್ ಕಾರವಾನ್‌ನ ಪ್ರತಿಯನ್ನು ಹಿಡಿದುಕೊಂಡುನೋದಲು ಯತ್ನಿಸಿದಾಗ ಸ್ಪೀಕರ್‌ ಓಂ ಬಿರ್ಲಾ ಅವರು, ‘ಸದನಕ್ಕೆ ಸಂಬಂಧಿಸದ ವಿಷಯಗಳ ಪತ್ರಿಕಾ ವರದಿಗಳನ್ನು ಇಲ್ಲಿ ಓದಬೇಡಿ’ ಎಂದರು. ತಕ್ಷಣ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕ್ಷಿಪ್ರಗತಿಯಲ್ಲಿ ಮಧ್ಯಪ್ರವೇಶಿಸಿ, ‘ಅಪ್ರಕಟಿತ ಪುಸ್ತಕವನ್ನು ಉಲ್ಲೇಖಿಸುವುದು ಸದನದ ನಿಯಮಗಳಿಗೆ ವಿರುದ್ಧವಾಗಿದೆ’ ಎಂದರು. ಗೃಹ ಸಚಿವ ಅಮಿತ್ ಶಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕೂಡ ರಾಹುಲ್‌ ಹೇಳಿಕೆಗಳನ್ನು ನಿರಾಕರಿಸಿದರು.

ರಾಹುಲ್‌ಗೆ ಎಸ್‌ಪಿ ಸಂಸದ ಅಖಿಲೇಶ್ ಯಾದವ್ ಬೆಂಬಲ ವ್ಯಕ್ತಪಡಿಸಿ, ‘ಚೀನಾಕ್ಕೆ ಸಂಬಂಧಿಸಿದ ವಿಷಯವು ತುಂಬಾ ಸೂಕ್ಷ್ಮವಾಗಿದೆ. ಮಾತನಾಡಲು ಅವರಿಗೆ ಅವಕಾಶ ನೀಡಬೇಕು’ ಎಂದರು. ‘ಪುಸ್ತಕ ಪ್ರಕಟವಾಗದೇ ಇರುವಾಗ, ಅವರು ಅದರಿಂದ ಹೇಗೆ ಉಲ್ಲೇಖಿಸಲು ಸಾಧ್ಯ?’ ಎಂದು ಶಾ ಪ್ರಶ್ನಿಸಿದರು.

ಪುನಃ ಮಾತನಾಡಿದ ರಾಹುಲ್, ‘ಬಿಜೆಪಿ ಸಂಸದರು ಹೆದರುತ್ತಿರುವುದೇಕೆ? ಹೆದರುವುದಿಲ್ಲ ಎಂದರೆ ನನಗೆ ಓದಲು ಅವಕಾಶ ನೀಡಬೇಕು. ನಾನು ಉಲ್ಲೇಖಿಸಿದ ಲೇಖನ ಮತ್ತು ಪುಸ್ತಕ 100% ಅಧಿಕೃತ. ‘ಈ ವಿಷಯದ ಬಗ್ಗೆ ನಾನು ಚರ್ಚಿಸಲು ಬಯಸಿರಲಿಲ್ಲ. ಆದರೆ ಚರ್ಚೆಯ ವೇಳೆ ಬಿಜೆಪಿಯ ತೇಜಸ್ವಿ ಸೂರ್ಯ ನನ್ನ ಮತ್ತು ಕಾಂಗ್ರೆಸ್ ಪಕ್ಷದ ದೇಶಭಕ್ತಿಯನ್ನು ಪ್ರಶ್ನಿಸಿದರು. ಹೀಗಾಗಿ ಮಾತನಾಡಬೇಕಾಯಿತು’ ಎಂದರು.

ಬಳಿಕ ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಆ ಪುಸ್ತಕದಲ್ಲಿ ಪ್ರಧಾನಿ ಮೋದಿ ಹಾಗೂ ರಾಜನಾಥ್‌ ಸಿಂಗ್‌ ಅವರ ಬಗ್ಗೆಯೂ ಇತ್ತು. ಆದ್ದರಿಂದಲೇ ಅವರು ಹೆದರಿದ್ದರು’ ಎಂದು ಹೇಳಿದರು.

ವಾಕ್ಸಮರ ಏಕೆ?

- ಗಲ್ವಾನ್‌ ಸಂಘರ್ಷದ ವೇಳೆ ಭಾರತದ ಭೂಮಿ ನಷ್ಟ

- ಜ। ನರವಣೆ ಬರೆದ ಅಪ್ರಕಟಿತ ಪುಸ್ತಕದ ಅಂಶ ಪ್ರಸ್ತಾಪ

- ಅಪ್ರಕಟಿತ ಪುಸ್ತಕದ ಅಂಶ ಪ್ರಸ್ತಾಪ ಸರಿಯಲ್ಲ: ಶಾ, ರಾಜನಾಥ್‌

- ನನ್ನ ಹೇಳಿಕೆ 100% ನಿಜ, ಸರ್ಕಾರಕ್ಕೇಕೆ ಅಂಜಿಕೆ?: ರಾಗಾ

-ಮೋದಿ, ರಾಜನಾಥ್‌ ಉಲ್ಲೇಖವೂ ಇತ್ತು: ವಿಪಕ್ಷ ನಾಯಕ