ಬಿಎಂಸಿ ಚುನಾವಣೆಗೆ ಮೊದಲು ಶಿವಸೇನೆ ಸಂಸ್ಥಾಪಕ ಬಾಳ್‌ಠಾಕ್ರೆಯವರ ಹೆಸರಿನಲ್ಲಿ ಏಕ್‌ನಾಥ್ ಸಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ರಾಜ್ಯಾದ್ಯಂತ 700 ಸರ್ಕಾರಿ ಕ್ಲಿನಿಕ್‌ಗಳನ್ನು ತೆರೆಯಲು ಮುಂದಾಗಿದೆ.

ಮುಂಬೈ: ಶಿವಸೇನೆ ಸಂಸ್ಥಾಪಕ ಬಾಳ್‌ಠಾಕ್ರೆಯವರ ಹೆಸರಿನಲ್ಲಿ ಏಕ್‌ನಾಥ್ ಸಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ರಾಜ್ಯಾದ್ಯಂತ 700 ಸರ್ಕಾರಿ ಕ್ಲಿನಿಕ್‌ಗಳನ್ನು ತೆರೆಯಲು ಮುಂದಾಗಿದೆ. ಆರೋಗ್ಯ ಮೂಲ ಸೌಕರ್ಯವನ್ನು ಬಲಪಡಿಸುವುದು ತಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಮತ್ತು ಆರೋಗ್ಯ ಇಲಾಖೆಯ ಬಜೆಟ್ ಅನ್ನು ದ್ವಿಗುಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಸರ್ಕಾರವೂ ಶಿವಸೇನೆಯ ಸಂಸ್ಥಾಪಕ ಬಾಳ್‌ಠಾಕ್ರೆಯವರ ಹೆಸರಿನಲ್ಲಿ 700 ಆಪ್ಲಾ ದಾವಾಖಾನಾ(ಆರೋಗ್ಯ ಚಿಕಿತ್ಸಾಲಯ) ಸ್ಥಾಪಿಸುವುದಾಗಿ ಅವರು ಹೇಳಿದ್ದಾರೆ.

ಜನರಿಗೆ ತಮ್ಮ ಮನೆಯ ಸಮೀಪವೇ ವೈದ್ಯಕೀಯ ಸೌಲಭ್ಯ ಸಿಗುವಂತೆ ಮಾಡುವುದು ಈ ಆಪ್ಲಾ ದವಾಖಾನಾ (Aapla Davakhana) ಯೋಜನೆಯ ಉದ್ದೇಶವಾಗಿದೆ. ರಾಜ್ಯದಲ್ಲಿ ಇಂತಹ ಸುಮಾರು 700 ಕ್ಲಿನಿಕ್‌ಗಳನ್ನು ತೆರೆಯಲಾಗುವುದು. ಮುಂಬೈ (Mumbai) ಒಂದರಲ್ಲೇ ಇಂತಹ 227 ಚಿಕಿತ್ಸಾಲಯಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದು, ಅದರಲ್ಲಿ 50 ಕ್ಲಿನಿಕ್‌ಗಳನ್ನು ಈಗಾಗಲೇ ಅಕ್ಟೋಬರ್ 2 ರಂದು ಪ್ರಾರಂಭಿಸಲಾಗಿದೆ ಎಂದು ಸಿಎಂ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಆದರೆ ಮುಂಬರುವ ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ( Brihanmumbai Municipal Corporation election) ಹಿನ್ನೆಲೆಯಲ್ಲಿ ಸರ್ಕಾರದ ಈ ಘೋಷಣೆ ಭಾರಿ ಮಹತ್ವ ಪಡೆದಿದೆ. ಶಿವಸೇನೆಯ ಎರಡು ಪ್ರತಿಸ್ಪರ್ಧಿ ಬಣಗಳು ತಮ್ಮ ವಾರ್ಷಿಕ ದಸರಾ ಸಮಾವೇಶ ನಡೆಸುವ ಮೊದಲು ಸಿಎಂ ಏಕನಾಥ್ ಸಿಂಧೆ ಈ ಹೇಳಿಕೆ ನೀಡಿದ್ದಾರೆ.

ತಂದೆ ಕಟ್ಟಿದ್ದ ಶಿವಸೈನ್ಯವೇ ಮಗನಿಗೆ ಮುಳುವಾಗಿದ್ದು ಏಕೆ?

ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯುವಂತಾಗಲು, ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಶಿಂಧೆ ಹೇಳಿದ್ದಾರೆ. ಜಿಲ್ಲಾ ಮಟ್ಟದ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯಿಂದ ಗ್ರಾಮೀಣ ಪ್ರದೇಶಗಳಿಗೆ (rural areas) ಸಾಕಷ್ಟು ಸಂಖ್ಯೆಯಲ್ಲಿ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಪಡೆಯುವುದಕ್ಕೆ ಸಹಾಯವಾಗುತ್ತದೆ ಎಂದು ಅವರು ಹೇಳಿದರು.

ಇದಲ್ಲದೆ, ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು(infrastructure) ಬಲಪಡಿಸಲು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಣ್ಣ ಸಮುದಾಯ ಆಸ್ಪತ್ರೆಗಳು ಮತ್ತು ಗ್ರಾಮೀಣ ಆಸ್ಪತ್ರೆಗಳನ್ನು ಉನ್ನತೀಕರಿಸಲಾಗುವುದು. ಅಲ್ಲದೇ ಸರ್ಕಾರವು ರಾಜ್ಯದಲ್ಲಿ ಕ್ಯಾಥರೈಸೇಶನ್ ಪ್ರಯೋಗಾಲಯಗಳನ್ನು(catherisation laboratories) ಸಹ ತೆರೆಯುತ್ತದೆ ಎಂದು ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದ್ದಾರೆ.

Sena Vs Sena: ಕೈ ಮುರಿಯಲಾಗದಿದ್ದರೆ ಕಾಲು ಮುರಿಯಿರಿ ಎಂದ ಶಿಂಧೆ ಬಣದ ಶಾಸಕನ ವಿರುದ್ಧ ಕೇಸ್

ಮಹಾರಾಷ್ಟ್ರದಲ್ಲಿ ಪ್ರಸ್ತುತ ಸಿಎಂ ಆಗಿರುವ ಏಕನಾಥ್ ಅವರು ಬಾಳ್‌ಠಾಕ್ರೆ ಪುತ್ರ ಶಿವಸೇನೆಯ ಉದ್ಧವ್ ಠಾಕ್ರೆ ಜೊತೆ ಭಿನ್ನಮತದಿಂದ ಪರಸ್ಪರ ಕಿತ್ತಾಡಿಕೊಂಡು ಸರ್ಕಾರದಿಂದ ಹೊರಬಂದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದವರು. ಈಗ ಶಿವಸೇನೆ ಸಂಸ್ಥಾಪಕ ಒಂದು ಕಾಲದಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಹುಲಿಯಂತೆ ಮರೆದ ದಿವಂಗತ ಬಾಳ್‌ಠಾಕ್ರೆಯವರ ಹೆಸರಿನಲ್ಲಿ ರಾಜ್ಯಾದ್ಯಂತ 700 ಸರ್ಕಾರಿ ಕ್ಲಿನಿಕ್‌ಗಳನ್ನು ತೆರೆಯಲು ಮುಂದಾಗಿದ್ದು, ಇದು ಶಿವಸೇನೆ ನಮ್ಮದೇ ಎಂದು ಹೇಳಿಕೊಳ್ಳುವುದಕ್ಕೆ ಪೂರಕವಾದ ಯೋಜನೆಯ? ಇದನ್ನು ರಾಜಕೀಯ ವಿಶ್ಲೇಷಕರೇ ಬಣ್ಣಿಸಬೇಕು.

ಉದ್ಧವ್ ಠಾಕ್ರೆ ಶಿವಸೇನೆ ಬಣವನ್ನು ತೊರೆದು ಬಂದ ಬಳಿಕ ಏಕನಾಥ್ ಶಿಂಧೆ ಶಿವಸೇನೆ ನಮ್ಮದು ಎಂದು ಹೇಳಿಕೊಂಡಿದ್ದರು. ಬಾಳ್ ಠಾಕ್ರೆ ಸ್ಥಾಪಿಸಿದ ಈ ಶಿವಸೇನೆಯ ಮಾಲೀಕತ್ವಕ್ಕಾಗಿ ಏಕನಾಥ್ ಶಿಂಧೆ ಹಾಗೂ ಉದ್ದವ್ ಠಾಕ್ರೆ ಬಣದ ನಡುವೆ ಹಗ್ಗಜಗ್ಗಾಟವಿದ್ದು, ಸುಪ್ರೀಂಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ.