ಅಬ್ಬಬ್ಬಾ...! ಹೆಂಡತಿ ಎದುರೇ ನಾದಿನಿಯ ಮದುವೆಯಾದ ಗಂಡ: ಕೇಂದ್ರ ಸಚಿವರೇ ಕೊಟ್ರು ಆಶೀರ್ವಾದ!
* ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹೆಂಡತಿ ತಂಗಿ ಜೊತೆ ಮದುವೆಯಾದ
* ನಾದಿನಿ ವರಿಸಲು ಹೆಂಡತಿಯ ಸಮ್ಮತಿ
* ಕೇಂದ್ರ ಸಚಿವರ ಸಮ್ಮುಖದಲ್ಲಿ ನಡೆದಿತ್ತು ವಿವಾಹ
ಲಕ್ನೋ(ಅ.19): ಉತ್ತರ ಪ್ರದೇಶದಲ್ಲಿ(Uttar Pradesh) ಮುಖ್ಯಮಂತ್ರಿ ಸಾಮೂಹಿಕ ವಿವಾಹ(Mass Wedding) ಯೋಜನೆಯಲ್ಲಿ ನಡೆದ ಶಾಕಿಂಗ್ ಘಟನೆಯೊಂದು ಸದ್ಯ ವೈರಲ್ ಆಗಿದೆ. ಹೌದು ಈ ಯೋಜನೆಯ ಲಾಭ ಪಡೆಯಲು ಮಹಾರಾಜಗಂಜ್ನಲ್ಲಿ ಒಬ್ಬ ವ್ಯಕ್ತಿ ತನ್ನ ಸ್ವಂತ ನಾದಿನಿಯನ್ನೇ ಮದುವೆಯಾಗಿದ್ದಾನೆ. ಅಚ್ಚರಿ ಎಂದರೆ ಈ ಮದುವೆ ನಡೆಯುತ್ತಿದ್ದ ವೇಳೆ ಆತನ ಪತ್ನಿಯೂ ಅಲ್ಲಿದ್ದರು, ಅಲ್ಲದೇ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿದ ಸಮಾಜ ಕಲ್ಯಾಣ ಇಲಾಖೆಯು ಅವರ ನೋಂದಣಿಗೆ ಮುದ್ರೆ ಹಾಕಿದೆ. ಧಾರೆ ಮದುವೆ ನಡೆದ ಬಳಿಕ ಈ ವಿಚಾರ ಬಹಿರಂಗಗೊಂಡಿದ್ದು, ಸದ್ಯ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ.
ಸೆಪ್ಟೆಂಬರ್ 13ರ ಪ್ರಕರಣ
ಜಿಲ್ಲಾ ಕೇಂದ್ರದ ಮಹಾಲಕ್ಷ್ಮಿ ಲಾನ್ನಲ್ಲಿ ಸೆಪ್ಟೆಂಬರ್ 13 ರಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ(Pankaj Chaudhari) ಸಮ್ಮುಖದಲ್ಲಿ, ಈಗಾಗಲೇ ಮದುವೆಯಾದ 233 ದಂಪತಿಯಲ್ಲಿ, ಕೆಲವರಿಗೆ ಮೊದಲೇ ಮದುವೆಯಾಗಿದ್ದರೆ, ಹಲವರಿಗೆ ಮಕ್ಕಳಿದ್ದಾರೆ. ಯೋಜನೆಯ ಅನುದಾನವನ್ನು ಪಡೆಯಲು ಅವರೆಲ್ಲರೂ ಮದುವೆಯಾಗುಲು ಮುಂದಾಗಿದ್ದಾರೆ. ಆದರೀಗ ಈ ಅಕ್ರಮ ಬೆಳಕಿಗೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿದಾಗ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಏನಿದು ಪ್ರಕರಣ?
ವಾಸ್ತವವಾಗಿ, ಸೆಪ್ಟೆಂಬರ್ 13 ರಂದು, ಸರ್ಕಾರದ ಸೂಚನೆ ಮೇರೆಗೆ, ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿ ಜಿಲ್ಲಾ ಕೇಂದ್ರದ ಮಹಾಲಕ್ಷ್ಮಿ ಲಾನ್ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮದುವೆಯಲ್ಲಿ 233 ಜೋಡಿಗಳ ನೋಂದಣಿ ಮತ್ತು ವೆರಿಫಿಕೇಷನ್ ಬಳಿಕ ಅವರ ಧರ್ಮ ಮತ್ತು ಪದ್ಧತಿ ಪ್ರಕಾರ ಸಾಮೂಹಿಕ ವಿವಾಹ ಮಾಡಿಸಲಾಗಿತ್ತು. ಕೇಂದ್ರ ಹಣಕಾಸು ಸಚಿವ ಪಂಕಜ್ ಚೌಧರಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ಉಜ್ವಲ್ ಕುಮಾರ್, ಸಿಡಿಒ ಗೌರವ್ ಸಿಂಗ್ ಸೊಗಾರ್ವಾಲ್ ಸೇರಿದಂತೆ ಅನೇಕ ಸಾರ್ವಜನಿಕ ಪ್ರತಿನಿಧಿಗಳು ವಧು -ವರರನ್ನು ಆಶೀರ್ವದಿಸಲು ಸ್ಥಳಕ್ಕೆ ಬಂದಿದ್ದರು. ಮದುವೆಯ ನಂತರ, ವಧು ಮತ್ತು ವರನಿಗೆ ನಿಗದಿತ ಅನುದಾನ ಮತ್ತು ಉಡುಗೊರೆಗಳನ್ನು ನೀಡಲಾಯಿತು.
ಸರ್ಕಾರಿ ಅನುದಾನಕ್ಕಾಗಿ ಅತ್ತಿಗೆಯನ್ನು ಮದುವೆಯಾದ
ಏತನ್ಮಧ್ಯೆ, ಸಾಮೂಹಿಕ ವಿವಾಹದಲ್ಲಿ ಭಾಗಿಯಾದ ದಂಪತಿಯ ನಕಲಿ ವಿವಾಹದ ಸತ್ಯ ಬಹಿರಂಗವಾಗಿದೆ. ಕೊಲ್ಹುಯಿ ಪೊಲೀಸ್ ಠಾಣೆ ವ್ಯಾಪ್ತಿಯ ಬದಹಾರಿ ನಿವಾಸಿ ಅಮರನಾಥ ಚೌಧರಿ ತನ್ನ ವಿವಾಹಿತ ನಾದಿನಿಯನ್ನೇ ಸರ್ಕಾರಿ ಅನುದಾನಕ್ಕಾಗಿ ಮದುವೆಯಾಗಿದ್ದಾನೆ. ಅವರು ಒಬ್ಬ ವಿವಾಹಿತನಾಗಿದ್ದು, ಮಕ್ಕಳೂ ಇದ್ದಾರೆ. ಈ ನಕಲಿ ಮದುವೆಯಲ್ಲಿ ಆತನ ಪತ್ನಿಯೂ ಶಾಮೀಲಾಗಿದ್ದಳು. ವಿಷಯ ಬೆಳಕಿಗೆ ಬಂದಾಗ, ಭಾರೀ ಕೋಲಾಹಲ ನಿರ್ಮಾಣವಾಗಿದೆ. ಜವಾಬ್ದಾರಿಯುತ ಅಧಿಕಾರಿಗಳು ಈ ವಿಷಯದಲ್ಲಿ ಮಾತನಾಡಲು ಹಿಂಜರಿದಿದ್ದಾರೆ. ಈ ವಿಷಯವು ಹಳ್ಳಿಯ ಮುಖ್ಯಸ್ಥ ಮುರಳೀಧರ್ ಚೌಧರಿಗೆ ತಡವಾಗಿ ತಿಳಿದಿದೆ. ನನಗೆ ಮೊದಲೇ ಮಾಹಿತಿ ಇದ್ದಿದ್ದರೆ, ನಾನು ಇದನ್ನು ಆಗಲು ಬಿಡುತ್ತಿರಲಿಲ್ಲ ಎಂದಿದ್ದಾರೆ ಚೌಧರಿ. ಅದೇ ಸಮಯದಲ್ಲಿ, ಸಿಡಿಒ ಗೌರವ್ ಸಿಂಗ್ ಸೊಗಾರ್ವಾಲ್ ಇದನ್ನು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.