* ಉತ್ತರ ಪ್ರದೆಶದಲ್ಲಿ 676 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ* ಸಿಎಂ ಯೋಗಿ, ಮೌರ‍್ಯ ಸೇರಿ ಘಟಾನುಘಟಿಗಳ ಭವಿಷ್ಯ ನಿರ್ಧಾರ* ಇಂದು ಉ.ಪ್ರ 6ನೇ ಹಂತದ ಚುನಾವಣೆ

ಲಖನೌ(ಮಾ.03): ತೀವ್ರ ಕುತೂಹಲ ಮೂಡಿಸಿರುವ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಣದಲ್ಲಿರುವ ಗೋರಖ್‌ಪುರ ಸೇರಿದಂತೆ ಉತ್ತರಪ್ರದೇಶದ 57 ವಿಧಾನಸಭಾ ಕ್ಷೇತ್ರಗಳಿಗೆ ಆರನೇ ಹಂತದ ಚುನಾವಣೆ ಗುರುವಾರ ನಡೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೋರಖ್‌ಪುರ, ಅಂಬೇಡ್ಕರ್‌ ನಗರ, ಬಲರಾಮ್‌ಪುರ, ಸಿದ್ಧಾರ್ಥ ನಗರ, ಬಸ್ತಿ, ಸಂತ ಕಬೀರ್‌ ನಗರ, ಮಹಾರಾಜಾ ಗಂಜ್‌, ಕುಶಿ ನಗರ, ದಿಯೋರಿಯಾ ಹಾಗೂ ಬಲ್ಲಿಯಾ ಈ 10 ಜಿಲ್ಲೆಗಳಲ್ಲಿ ಮುಂಜಾನೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಅಜಯ ಕುಮಾರ್‌ ಲಾಲು, ಸಮಾಜವಾದಿ ಪಕ್ಷದ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಸೇರಿ ಒಟ್ಟು 676 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಅಸೋಶಿಯೇಶನ್‌ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR) ವರದಿಯ ಪ್ರಕಾರ ಈ ಹಂತದ ಮೂರರಲ್ಲಿ ಎರಡು ಭಾಗ ವಿಧಾನಸಭಾ ಕ್ಷೇತ್ರಗಳು ರೆಡ್‌ ಅಲರ್ಟ್‌ ಕ್ಷೇತ್ರಗಳಾಗಿವೆ. ಏಕೆಂದರೆ ಇಲ್ಲಿಯ ಪ್ರತಿ ಮೂವರು ಅಭ್ಯರ್ಥಿಗಳ ಪೈಕಿ ಒಬ್ಬರು ಕ್ರಿಮಿನಲ್‌ ಕೇಸ್‌ಗಳನ್ನು ಎದುರಿಸುತ್ತಿದ್ದಾರೆ. ಬಿಜೆಪಿಯ ಭ್ರದ್ರಕೋಟೆ, ಸಿಎಂ ಯೋಗಿ ಆದಿತ್ಯನಾಥ್ ತವರು ಜಿಲ್ಲೆಯಾಗಿರುವ ಗೋರಖ್‌ಪುರದಲ್ಲಿ ಮತದಾನ ನಡೆಯಲಿದೆ. ಯೋಗಿ ಆದಿತ್ಯನಾಥ್ ಗೋರಕ್‌ ಪುರ ನಗರದಿಂದ ಕಣಕ್ಕಿಳಿದಿದ್ದರೆ, ಸಮಾಜವಾದಿ ಪಕ್ಷದಿಂದ ದಿವಂಗತ ಬಿಜೆಪಿ ನಾಯಕ ಉಪೇಂದ್ರ ದತ್ತಾ ಶುಕ್ಲಾರ ಮಡದಿ ಕಣದಲ್ಲಿದ್ದಾರೆ.

ಕಣದಲ್ಲಿರುವ ಇತರ ಪ್ರಮುಖರ ಪೈಕಿ ಸಿಎಂ ಯೋಗಿ ಆದಿತ್ಯನಾಥ್, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಜಯ್‌ ಕುಮಾರ್ ಲಲ್ಲು, ಯೋಗಿ ಸಂಪುಟ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿರುವ ಹಿಂದುಳಿದ ವರ್ಗದ ಪ್ರಭಾವಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ, ಸದನದಲ್ಲಿ ವಿಪಕ್ಷ ನಾಯಕ ಹಾಗೂ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ರಾಮ್‌ ಗೋವಿಂದ್‌ ಚೌಧರಿ ಕೂಡಾ ಇದ್ದಾರೆ. ಇನ್ನು, ಯೋಗಿ ಸಂಪುಟದ ಕೆಲವು ಸಚಿವರ ರಾಜಕೀಯ ಭವಿಷ್ಯವೂ ನಾಳೆ ನಿರ್ಧಾರವಾಗಲಿದೆ. ಅವರ ಪೈಕಿ ಸೂರ್ಯ ಪ್ರತಾಪ್ ಶಾಹಿ, ಸತೀಶ್ ಚಂದ್ರ ದ್ವಿವೇದಿ, ಜೈ ಪ್ರತಾಪ್ ಸಿಂಗ್, ಶ್ರೀರಾಮ್‌ ಸಿಂಗ್‌ ಚೌಹಾಣ್ ಹಾಗೂ ಪ್ರಕಾಶ್ ನಿಶಾದ್ ಕಣದಲ್ಲಿದ್ದಾರೆ.

6ನೇ ಹಂತದ ಚುನಾವಣೆಗೆ ಒಳಪಟ್ಟಈ 57 ಕ್ಷೇತ್ರಗಳಲ್ಲಿ 2017ರಲ್ಲಿ 46 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು. ರಾಜ್ಯ 403 ವಿಧಾನಸಭಾ ಕ್ಷೇತ್ರಗಳ ಪೈಕಿ ಈಗಾಗಲೇ 292 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಕೊನೆಯ ಹಂತದ ಚುನಾವಣೆಯು ಮಾ.10ರಂದು ನಡೆಯಲಿದೆ. ಇನ್ನು ಈ ಹಂತದ ಪ್ರಚಾರ ಸಭೆಗಳಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಪ್ರಿಯಾಂಕ ಗಾಂಧಿ, ಅಖಿಲೇಶ್ ಯಾದವ್‌ ಮುಂತಾದ ಘಟಾನುಘಟಿಗಳೇ ಪಾಲ್ಗೊಂಡಿದ್ದರು ಎಂಬುವುದು ಉಲ್ಲೇಖನೀಯ