ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಉನ್ನತ ಮಟ್ಟದ ಸಭೆ ನಡೆಸುವ ಮೂಲಕ ಈರುಳ್ಳಿ ಕೊಳ್ಳುವ ಗ್ರಾಹಕರ ಹೊರೆ ಇಳಿಸುವ ಯತ್ನಕ್ಕೆ ಮುಂದಾಗಿದ್ದಾರೆ.

ನವದೆಹಲಿ [ಡಿ.06]: ದೇಶಾದ್ಯಂತ ಈರುಳ್ಳಿ ಬೆಲೆ ಕೆಜಿಗೆ 150 ರು. ದಾಟಿ, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿರುವ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಉನ್ನತ ಮಟ್ಟದ ಸಭೆ ನಡೆಸುವ ಮೂಲಕ ಗ್ರಾಹಕರ ಹೊರೆ ಇಳಿಸುವ ಯತ್ನಕ್ಕೆ ಮುಂದಾಗಿದ್ದಾರೆ.

Add Asianetnews Kannada as a Preferred SourcegooglePreferred

ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌, ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ಸಂಪುಟ ಕಾರ್ಯದಶಿ ರಾಜೀವ್‌ ಗೌಬಾ, ಪ್ರಧಾನಿಗಳ ಸಲಹೆಗಾರ ಪಿ.ಕೆ.ಸಿನ್ಹಾ ಮತ್ತು ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿದ ಅಮಿತ್‌ ಶಾ, ಈರುಳ್ಳಿ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳು ಮತ್ತು ಅದರ ಪರಿಣಾಮ ಬಗ್ಗೆ ಮಾಹಿತಿ ಪಡೆದರು.

ಸಭೆಯಲ್ಲಿ ಸರ್ಕಾರ ಈಗಾಗಲೇ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ, ಸರ್ಕಾರಿ ಸ್ವಾಮ್ಯದ ಎಂಎಂಟಿಸಿಗೆ ಈಗಾಗಲೇ 21000 ಟನ್‌ಗಳನ್ನು ಈರುಳ್ಳಿಯನ್ನು ಈಜಿಪ್ಟ್‌ ಮತ್ತು ಟರ್ಕಿ ದೇಶಗಳಿಂದ ಆಮದು ಮಾಡಿಕೊಳ್ಳಲು ಸೂಚಿಸಲಾಗಿದೆ. ಈ ಎರಡೂ ದೇಶಗಳಿಂದ ಜನವರಿ ಮಧ್ಯಭಾಗದ ವೇಳೆಗೆ ಈರುಳ್ಳಿ ಭಾರತಕ್ಕೆ ಲಭ್ಯವಾಗುವ ಸಂಭವಿದೆ. ಆಮದು ಪ್ರಕ್ರಿಯೆ ತ್ವರಿತಗೊಳಿಸಲು ಕೆಲವೊಂದು ನಿಯಮಗಳನ್ನು ಸಡಿಲ ಮಾಡಲಾಗಿದೆ ಎಂದು ತಿಳಿಸಿದರು.

ಜೊತೆಗೆ ಚಿಲ್ಲರೆ ಮತ್ತು ಸಗಟು ವರ್ತಕರು ಈರುಳ್ಳಿ ಸಂಗ್ರಹಿಸಲು ಹೇರಲಾಗಿದ್ದ ಮಿತಿಯನ್ನು ಕ್ರಮವಾಗಿ 5 ಮತ್ತು 25 ಟನ್‌ಗೆ ಇಳಿಸಲಾಗಿದೆ. ಈರುಳ್ಳಿ ರಫ್ತನ್ನು ಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.