ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೇಂದ್ರ ಬಜೆಟ್ ಮಂಡಿಸಿದ್ದಾರೆ. 86 ನಿಮಿಷಗಳಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಮುಗಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ 124 ಬಾರಿ ಮೇಜು ತಟ್ಟಿ ಅಭಿನಂದಿಸಿದ್ದಾರೆ.  

ನವದೆಹಲಿ(ಫೆ.01): ಭಾರಿ ಕುತೂಹಲ ಹಾಗೂ ನಿರೀಕ್ಷೆಯ ಬಜೆಟ್ ಮಂಡನೆಯಾಗಿದೆ. ಭಾರತದ ಅರ್ಥವ್ಯವಸ್ಥೆಗೆ ಹೊಸ ವೇಗ ನೀಡಲಿರುವ ಈ ಬಜೆಟ್ ಮೇಲೆ ಚರ್ಚೆ, ಪರ ವಿರೋಧಗಳು ಕೇಳಿಬರುತ್ತಿದೆ. ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದಾರೆ. 86 ನಿಮಿಷದಲ್ಲಿ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣವನ್ನು ಮುಗಿಸಿದ್ದಾರೆ. ಇತ್ತ ಪ್ರಧಾನಿ ಮೋದಿ ಹಾಗೂ ಎನ್‌ಡಿಎ ಕೂಟದ ನಾಯಕರು ಪ್ರತಿ ಘೋಷಣೆಗೆ ಮೇಜು ತಟ್ಟಿ ಅಭಿನಂದನೆ ಹಾಗೂ ಮೆಚ್ಚುಗೆ ಸಲ್ಲಿಸಿದ್ದಾರೆ. 86 ನಿಮಿಷದ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ವೇಳೆ ಪ್ರಧಾನಿ ನರೇಂದ್ರ ಮೋದಿ 124 ಬಾರಿ ಮೇಜು ತಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ. 

Add Asianetnews Kannada as a Preferred SourcegooglePreferred

ಈ ಬಾರಿಯ ಬಜೆಟ್‌ನಲ್ಲಿ ಹಲವು ಮಹತ್ವದ ಘೋಷಣೆಗಳು ಹೊರಬಿದ್ದಿದೆ. ಹೊಸ ಯೋಜನೆಗಳು ಜಾರಿಯಾಗಿದೆ. ಇನ್ನು ಮಧ್ಯಮ ವರ್ಗದ ಜನರ ತೆರಿಗೆ ವಿನಾಯಿತಿ ಘೋಷಣೆ ವೇಳೆ ಅತೀ ಹೆಚ್ಚು ಬಾರಿ ಮೋದಿ ಹಾಗೂ ಎನ್‌ಡಿಎ ನಾಯಕರು ಮೇಜು ತಟ್ಟಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಕಡಿಮೆ ಅವಧಿಯಲ್ಲಿ ಮುಗಿಸಿದ ಬಜೆಟ್ ಭಾಷಣವಾಗಿದೆ.

ಐತಿಹಾಸಿಕ ಬಜೆಟ್ ಎಂದ ಬಿಜೆಪಿಗೆ ವಿಪಕ್ಷಗಳ ತಿರುಗೇಟು!

2020ರಲ್ಲಿ ನಿರ್ಮಲಾ ಸೀತಾರಾಮನ್ ಅತೀ ದೊಡ್ಡ ಬಜೆಟ್ ಭಾಷಣ ಮಾಡಿ ದಾಖಲೆ ಬರೆದಿದ್ದಾರೆ. ಬರೋಬ್ಬರಿ 160 ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡಿದ್ದರು. ಆದರೆ 2021ರಲ್ಲಿ ನಿರ್ಮಲಾ ಸೀತಾರಾಮನ್ 110 ನಿಮಿಷದಲ್ಲಿ ಬಜೆಟ್ ಭಾಷಣ ಮುಗಿಸಿದ್ದರೆ. ಕಳೆದ ವರ್ಷ ಅಂದರೆ 2022ರಲ್ಲಿ 92 ನಿಮಿಷದಲ್ಲಿ ಬಜೆಟ್ ಭಾಷಣ ಮುಗಿಸಿದ್ದರು.

ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಬಳಿಕ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಇದು ಐತಿಹಾಸಿಕ ಬಜೆಟ್ ಎಂದು ಬಣ್ಣಿಸಿದ್ದಾರೆ. ಅಮೃತ ಕಾಲದಲ್ಲಿ ಮಂಡಿಸಿದ ಮೊದಲ ಬಜೆಟ್ ಹೊಸ ಭಾರತ ನಿರ್ಮಾಣ ಹಾಗೂ ಅಭಿವೃದ್ಧಿ ಭಾರತಕ್ಕೆ ಭದ್ರ ಬುನಾದಿಯಾಗಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಈ ಬಜೆಟ್ ಬಡವರು, ಮದ್ಯಮ ವರ್ಗದ ಜನ, ರೈತರು ಸೇರಿದಂತೆ ಎಲ್ಲಾ ವರ್ಗದ ಜನರ ಕನಸುಗಳನ್ನು ನನಸಾಗಿಸಲಿದೆ. ವಿಶ್ವಕರ್ಮ ಸಮುದಾಯಕ್ಕೆ ವಿಶೇಷ ಕೊಡುಗೆ ನೀಡಲಾಗಿದೆ. ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಮೂಲಕ ಈ ಸಮುದಾಯದಲ್ಲಿ ಬರವು 60ಕ್ಕೂ ಹೆಚ್ಚು ಜಾತಿಗಳ ಜನರಿಗೆ ಹಲವು ಅನಕೂಲಗಳು ಸಿಗಲಿದೆ ಎಂದು ಮೋದಿ ಹೇಳಿದ್ದಾರೆ.

Union Budget 2023 ಕೊಟ್ಟ ಮಾತಿನಂತೆ ನಡೆದುಕೊಂಡ ಮೋದಿ, ಉತ್ತಮ ಬಜೆಟ್ ಎಂದ ಯಡಿಯೂರಪ್ಪ!

ಗ್ರಾಮೀಣ ಹಾಗೂ ನಗರ ಪ್ರದೇಶದ ಮಹಿಳೆಯ ಸ್ವಾವಲಂಬನೆಗೆ ಹಲವು ಯೋಜನೆ ಜಾರಿಗೊಳಿಸಲಾಗಿದೆ. ಇದೀಗ ಈ ಬಜೆಟ್‌ನಲ್ಲಿ ಮಹಿಳಾ ಸ್ವಯಂ ಸೇವಾ ಸಂಘಗಳನ್ನು ಮತ್ತಷ್ಟು ಬಲಪಡಿಸಲು ಯೋಜನೆ ರೂಪಿಸಲಾಗಿದೆ. ಇನ್ನು ಗೃಹಿಣಿಯರಿಗಾಗಿ ವಿಶೇಷ ಉಳಿತಾಯ ಯೋಜನೆ ಆರಂಭಿಸಲಾಗಿದೆ. ಈ ಮೂಲಕ ಗೃಹಿಣಿಯರ ಠೇವಣಿ ಮೊತ್ತಕ್ಕೆ ಶೇಕಡಾ 7.5ರಷ್ಟು ಬಡ್ಡಿಪಡೆಯಲಿದ್ದಾರೆ ಎಂದು ಮೋದಿ ತಮ್ಮ ಭಾಷಣದಲ್ಲಿ ಯೋಜನೆ ಕುರಿತು ಉಲ್ಲೇಖಿಸಿದ್ದಾರೆ.

ಇದೀಗ ಬಜೆಟ್ ಕುರಿತು ಪರ ವಿರೋಧಗಳು ವ್ಯಕ್ತವಾಗುತ್ತಿದೆ.ವಿಪಕ್ಷಗಳು ಇದು ಸುಳ್ಳಿನ ಬಜೆಟ್, ಇದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಆರೋಪಿಸಿದೆ.