ಪಾಕಿಸ್ತಾನದ ಹುಟ್ಟಡಗಿಸಿದ್ದ ಬಾಲಾಕೋಟ್ ವೈಮಾನಿಕ ದಾಳಿಗೆ 2 ವರ್ಷ!
ಬಾಲಾಕೋಟ್ ವೈಮಾನಿಕ ದಾಳಿಗೆ 2 ವರ್ಷ| ಪುಲ್ವಾಮ ದಾಳಿಗೆ ಪ್ರತಿಯಾಗಿ ವಾಯುಪಡೆ ನಡೆಸಿದ್ದ ದಾಳಿ
ನವದೆಹಲಿ(ಫೆ.27): 40ಕ್ಕೂ ಹೆಚ್ಚು ಯೋಧರ ಬಲಿಪಡೆದ ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆಯು ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ಸೇನಾ ನೆಲೆಗಳನ್ನು ಧ್ವಂಸ ಮಾಡಿದ ಬಾಲಾಕೋಟ್ ವೈಮಾನಿಕ ದಾಳಿಗೆ ಶುಕ್ರವಾರಕ್ಕೆ 2 ವರ್ಷ ಸಂದಿತು.
ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದರು. ಅಲ್ಲದೆ ಬಾಲಾಕೋಟ್ನಲ್ಲಿದ್ದ ಉಗ್ರರ ನೆಲೆಗಳನ್ನು ನೆಲಸಮಗೊಳಿಸಿದ ವಾಯುಪಡೆ ಸಾಮರ್ಥ್ಯದ ಬಗ್ಗೆ ಕೊಂಡಾಡಿದರು.
2019ರ ಫೆ.14ರಂದು ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಪುಲ್ವಾಮಾದಲ್ಲಿ ಎಸಗಿದ ವಿಧ್ವಂಸಕ ಕೃತ್ಯದಿಂದ 40ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ಬಲಿಯಾಗಿದ್ದರು. ಇದಕ್ಕೆ ಪ್ರತಿಯಾಗಿ ಫೆ.26ರಂದು ಭಾರತೀಯ ವಾಯುಪಡೆ ಪಾಕಿಸ್ತಾನದ ಗಡಿ ನುಗ್ಗಿ ಬಾಲಾಕೋಟ್ನಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು.
ಈ ಸಂಬಂಧ ಶುಕ್ರವಾರ ಟ್ವೀಟ್ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ‘ಪಾಕಿಸ್ತಾನದ ಭಾಗದಲ್ಲಿ ನೆಲೆಯೂರಿದ್ದ ಉಗ್ರರನ್ನು ಸಂಹಾರ ಮಾಡಿದ ಬಾಲಾಕೋಟ್ ದಾಳಿ ಘಟನೆಗೆ ಇಂದು 2ನೇ ವರ್ಷ. ಭಾರತದ ವಾಯುಪಡೆಯ ಧೈರ್ಯ ಮತ್ತು ಸಾಹಸಕ್ಕೆ ನಾನು ಸೆಲ್ಯೂಟ್ ಮಾಡುತ್ತೇನೆ. ಯಶಸ್ವಿ ಬಾಲಾಕೋಟ್ ಕಾರಾರಯಚರಣೆಯು ಭಯೋತ್ಪಾದನೆ ವಿರುದ್ಧದ ಭಾರತದ ಸಾಮರ್ಥ್ಯವನ್ನು ಎತ್ತಿ ತೋರಿದೆ. ನಮ್ಮ ದೇಶದ ರಕ್ಷಣೆಗಾಗಿ ಶ್ರಮಿಸುತ್ತಿರುವ ನಮ್ಮ ಸೈನಿಕರ ಬಗ್ಗೆ ಹೆಮ್ಮೆಯಿದೆ’ ಎಂದು ಹೇಳಿದ್ದಾರೆ.
ಈ ಘಟನೆಯು ಭಯೋತ್ಪಾದನೆ ವಿರುದ್ಧ ಹೊಸ ಭಾರತದ ನಿಲುವು ಏನು ಎಂಬ ಸ್ಪಷ್ಟಸಂದೇಶವನ್ನು ರವಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶ ಮತ್ತು ಯೋಧರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಲ್ಲದೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೂ ಶಾ ಗೌರವ ನಮನ ಸಲ್ಲಿಸಿದರು.