ಬಾಳಾ ಠಾಕ್ರೆ ಸ್ಮಾರಕಕ್ಕೆ 1000 ಮರ ಕಡಿಯಲು ಶಿವಸೇನೆ ನಿರ್ಧಾರ!
ಬಾಳಾ ಠಾಕ್ರೆ ಸ್ಮಾರಕಕ್ಕೆ 1000 ಮರ ಕಡಿಯಲು ಶಿವಸೇನೆ ನಿರ್ಧಾರ| ರೇ ಅರಣ್ಯ ಕಡಿತ ವಿರೋಧಿಸಿದ್ದ ಶಿವಸೇನೆಯ ತದ್ವಿರುದ್ಧ ನಿಲುವು| ಮರ ಕಡಿತಕ್ಕೆ ಸೇನೆ ಆಳ್ವಿಕೆಯ ಔರಂಗಾಬಾದ್ ಪಾಲಿಕೆ ತೀರ್ಮಾನ
ಮುಂಬೈ[ಡಿ.09]: 2600 ಮರಗಳ ಹನನಕ್ಕೆ ಕಾರಣವಾಗಿದ್ದ ಮುಂಬೈನ ಆರೇ ಅರಣ್ಯ ಪ್ರದೇಶದಲ್ಲಿ ಮೆಟ್ರೋ ರೈಲು ಡಿಪೋ ನಿರ್ಮಾಣ ವಿರೋಧಿಸಿ, ಆ ಯೋಜನೆಯನ್ನೇ ನಿಲ್ಲಿಸಿರುವ ಮಹಾರಾಷ್ಟ್ರದ ಶಿವಸೇನೆ ಸರ್ಕಾರ, ತನ್ನ ನಿಲುವಿಗೆ ವಿರುದ್ಧವಾದ ನಿರ್ಣಯವೊಂದನ್ನು ಕೈಗೊಂಡಿದೆ. ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಸ್ಮಾರಕ ನಿರ್ಮಾಣಕ್ಕಾಗಿ ಔರಂಗಾಬಾದ್ನಲ್ಲಿ 1000 ಮರಗಳನ್ನು ಕಡಿಯಲು ಶಿವಸೇನೆ ಆಳ್ವಿಕೆಯ ಔರಂಗಾಬಾದ್ ಮಹಾನಗರ ಪಾಲಿಕೆ ನಿರ್ಧರಿಸಿದೆ.
ಔರಂಗಾಬಾದ್ನ ಪ್ರಿಯದರ್ಶಿನಿ ಪಾರ್ಕ್ನಲ್ಲಿ 61 ಕೋಟಿ ರು. ವೆಚ್ಚದಲ್ಲಿ ಬಾಳಾ ಠಾಕ್ರೆ ಅವರ ಸ್ಮಾರಕ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಸ್ಮಾರಕದಲ್ಲಿ ಮ್ಯೂಸಿಯಂ, ನಾಟಕ ಗೃಹ ಹಾಗೂ ಫುಡ್ಕೋರ್ಟ್ ನಿರ್ಮಿಸುವ ಉದ್ದೇವಿದೆ.
17 ಎಕರೆ ವ್ಯಾಪ್ತಿಯಲ್ಲಿರುವ ಈ ಉದ್ಯಾನವು ನಗರದ ಹೃದಯಭಾಗದಲ್ಲಿದೆ. ಜನರು ವಾಕಿಂಗ್, ಜಾಗಿಂಗ್ ಹಾಗೂ ಇತರ ಆರಾಮದಾಯಕ ಚಟುವಟಿಕೆಗಳಿಗೆ ಉದ್ಯಾನವನ್ನು ಬಳಸುತ್ತಾರೆ.
ಅಲ್ಲದೆ, ಈ ಉದ್ಯಾನದಲ್ಲಿ 70 ಪ್ರಭೇದದ ಸಸ್ಯಗಳಿವೆ. 40 ಪ್ರಭೇದದ ಚಿಟ್ಟೆಗಳು, ಇತರ ಸರೀಸೃಪಗಳಿವೆ. ಇಂತಹ ಜನಪ್ರಿಯ ಉದ್ಯಾನದಲ್ಲಿನ 1000 ಮರಗಳ ಕಡಿತ ನಿರ್ಧಾರವು ಜನಾಕ್ರೋಶಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಪತ್ರಿಕೆಯೊಂದು ಭಾನುವಾರ ವರದಿ ಮಾಡಿದೆ. ಔರಂಗಾಬಾದ್ ನಗರಪಾಲಿಕೆ 25 ವರ್ಷದಿಂದ ಶಿವಸೇನೆ ಹಿಡಿತದಲ್ಲಿದೆ.