ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅಮಾನತುಗೊಂಡ ಬೆನ್ನಲ್ಲೇ ಇದೀಗ ಮತ್ತೊಂದು ಶಾಕ್. ಅಶಿಸ್ತು ತೋರಿದ ಟಿಎಂಸಿ ಸಂಸದ ಡರೇಕ್ ಒಬ್ರಿಯಾನ್ ಅವರನ್ನು ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ.

ನವದೆಹಲಿ(ಡಿ.14) ಪ್ರಶ್ನೆಗಾಗಿ ಲಂಚ ಪ್ರಕರಣದಲ್ಲಿ ಸಿಲುಕಿದ ಸಂಸದೆ ಮಹುವಾ ಮೊಯಿತ್ರಾ ಲೋಕಸಭೆಯಿಂದ ಅಮಾನತುಗೊಂಡಿದ್ದಾರೆ. ಇದೀಗ ಟಿಎಂಸಿಗೆ ಮತ್ತೊಂದು ಆಘಾತ ಎದುರಾಗಿದೆ. ರಾಜ್ಯಸಭೆಯಲ್ಲಿ ಅಶಿಸ್ತು ತೋರಿದ ಮತ್ತೊರ್ವ ಟಿಎಂಸಿ ಸಂಸದ ಡರೇಕ್ ಒಬ್ರಿಯಾನ್ ಅವರನ್ನು ಅಮಾನತು ಮಾಡಲಾಗಿದೆ. ಸಂಸತ್ ಮೇಲಿನ ದಾಳಿ ವಿಚಾರ ಸಂಬಂಧ ಭಾರಿ ಪ್ರತಿಭಟನೆ ನಡೆಸಿದ ಡರೇಕ್ ಒಬ್ರಿಯಾನ್ ಅವರನ್ನು ಸಭಾಪತಿ ಜಗದೀಪ್ ಧನ್ಕರ್ ತಕ್ಷಣವೇ ಅಮಾನತು ಮಾಡಿದ್ದಾರೆ. ಚಳಿಗಾಲದ ಅಧಿವೇಶನ ಮುಗಿಯುವರೆಗೂ ರಾಜ್ಯಸಭೆ ಕಲಾಪದಲ್ಲಿ ಪಾಲ್ಗೊಳ್ಳದಂತೆ ಅಮಾನತು ಮಾಡಲಾಗಿದೆ.

Add Asianetnews Kannada as a Preferred SourcegooglePreferred

ಸಂಸತ್ ಭವನದ ಮೇಲೆ ದಾಳಿ ಮಾಡಿ ಘಟನೆ ಸಂಬಂಧಿಸಿ ಇಡೀ ದಿನ ಚರ್ಚೆಗೆ ಅವಕಾಶ ನೀಡುವಂತೆ ಟಿಎಂಸಿ ಸಂಸದ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸದನದ ಬಾವಿಗಿಳಿದು ಪ್ರತಿಭಟಿಸಿದ ಡರೇಕ್ ಒಬ್ರಿಯಾನ್ ಅತೀರೇಖವಾಗಿ ವರ್ತಿಸಿದ್ದಾರೆ. ಸಭಾಪತಿ ಧನ್ಕರ್ ಹಲವು ಭಾರಿ ಎಚ್ಚರಿಕೆ ನೀಡಿದರೂ ಡರೇಕ್ ಮಾತ್ರ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ನಿಯಮ ಪಾಲಿಸುವಂತೆ ಸೂಚಿಸಿದರೂ ಡರೇಕ್ ಮಾತ್ರ ಕಿವಿಗೆ ಹಾಕಿಲ್ಲ. 

ಸಂಸತ್‌ನಲ್ಲಿ ಭದ್ರತಾ ಲೋಪ: 8 ಲೋಕಸಭೆ ಸಿಬ್ಬಂದಿ ಅಮಾನತು, ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು

ಸಭಾಪತಿ ಮಾತನ್ನು ಧಿಕ್ಕರಿಸಿದ ಡರೇಕ್ ಒಬ್ರಿಯಾನ್ ಈ ವಿಚಾರದಲ್ಲಿ ಯಾವುದೇ ನಿಮಯ ಗೌರವಿಸುವುದಿಲ್ಲ ಎಂದಿದ್ದಾರೆ. ದುರ್ನಡತೆ, ಅಶಿಸ್ತಿನ ನಡೆಯಿಂದ ಕೆರಳಿದ ಸಭಾಪತಿ ತಕ್ಷಣವೇ ಸದನದಿಂದ ಹೊರನಡೆಯಲು ಸೂಚಿಸಿದ್ದಾರೆ. ಬಳಿಕ ಅಮಾನತು ನಿರ್ಧಾರ ಘೋಷಿಸಿದ್ದಾರೆ.

ಡರೇಕ್ ಒಬ್ರಿಯಾನ್ ಜೊತೆ ಹಲವು ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಡರೇಕ ಪ್ರತಿಭಟನೆಗೂ ಮೊದಲು ಸಭಾಪತಿ ಜಗದೀಪ್ ಧನ್ಕರ್, ಉನ್ನತ ಮಟ್ಟದ ತನಿಖೆ ಭರವಸೆ ನೀಡಿದ್ದರು. ಭದ್ರತಾ ಲೋಪ ವಿಚಾರದಲ್ಲಿ ತನಿಖೆ ನಡೆಯಲಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದರು. ಆದರೆ ಡರೇಕ್ ಮಾತ್ರ ಪ್ರತಿಭಟನೆ ಮುಂದುವರಿಸಿದ ಕಾರಣ ರಾಜ್ಯಸಭೆಯಿಂದ ಅಮಾನತಾಗಿದ್ದಾರೆ.

ಸಂಸತ್ ಭವನದ ಮೇಲೆ ನಡೆದ ದಾಳಿ ಕುರಿತು ವಿಪಕ್ಷಗಳು ಭಾರಿ ಗದ್ದಲ, ಪ್ರತಿಭಟನೆ ಸೃಷ್ಟಿಸಿದೆ. ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದ ದಾಳಿಕೋರರು ಲೋಕಸಭೆ ಒಳ ಪ್ರವೇಶಿಸಿದ್ದಾರೆ. ಹೀಗಾಗಿ ಸಂಸದ ಪ್ರತಾಪ್ ಸಿಂಗ್ ಸಂಸದ ಸ್ಥಾನ ರದ್ದು ಮಾಡಬೇಕು ಎಂದು ವಿಪಕ್ಷಗಳು ಆಗ್ರಹಿಸಿದೆ. ಇದೇ ವೇಳೆ ಗೃಹ ಸಚಿವ ಅಮಿತ್ ಶಾ ಈ ಘಟನೆ ಕುರಿತು ಉತ್ತರ ನೀಡುವಂತೆ ಆಗ್ರಹಿಸಿದ್ದಾರೆ. ತೀವ್ರ ಗದ್ದಲ, ಪ್ರತಿಭಟನೆಯಿಂದ ರಾಜ್ಯಸಭೆ ಹಾಗೂ ಲೋಕಸಭೆ ಕಲಾಪ ಮುಂದೂಡಲಾಗಿದೆ.

ಸದನದೊಳಗೆ ದುಷ್ಕರ್ಮಿ ಸ್ಮೋಕ್ ಬಾಂಬ್ ತಂದಿದ್ದೇಗೆ..? 2001ರ ಬಳಿಕ ಮತ್ತೆ ಪಾರ್ಲಿಮೆಂಟ್‌ನಲ್ಲಿ ಭದ್ರತಾ ಲೋಪ..!

ಇತ್ತೀಚೆಗೆ ಪ್ರಶ್ನೆಗಾಗಿ ಲಂಚ ತೆಗೆದುಕೊಂಡ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವಪನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ. ಈ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಮಹುವಾಗೆ ಆರಂಭಿಕ ಹಿನ್ನಡೆಯಾಗಿತ್ತು. ತ್ವರಿತ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ನೈತಿಕ ಸಮಿತಿಗೆ ನನ್ನನ್ನು ವಜಾ ಮಾಡುವ ಶಿಫಾರಸು ಮಾಡಲು ಅಧಿಕಾರವಿಲ್ಲ. ಅಲ್ಲದೆ ತಾನು ಹಿರಾನಂದಾನಿ ಅವರಿಂದ ಲಂಚ ತೆಗೆದುಕೊಂಡಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಲಭ್ಯವಿಲ್ಲ. ಸುಳ್ಳು ಆರೋಪದ ಮೇಲೆ ಅಮಾನತು ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.