ಪಠ್ಯಪುಸ್ತಕಗಳಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆ ಮಾಡಲಾಗಿದೆ. ಮೈಸೂರಿನ ಟಿಪ್ಪು ಸುಲ್ತಾನ ಅಥವಾ ಮೊಘಲ್‌ ದೊರೆ ಅಕ್ಬರನಿಗೆ ಕೊಡಲಾಗುತ್ತಿದ್ದ ‘ದಿ ಗ್ರೇಟ್‌’ ಎಂಬ ಅಭಿದಾನವನ್ನು ತೆಗೆದುಹಾಕಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಆರ್‌ಎಸ್‌ಎಸ್‌ ನಾಯಕ ಸುನೀಲ್‌ ಅಂಬೇಕರ್‌ ಸಂತಸ ವ್ಯಕ್ತಪಡಿಸಿದ್ದಾರೆ.

ನಾಗ್ಪುರ : ಇತಿಹಾಸದ ಪಠ್ಯಪುಸ್ತಕಗಳಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಗಳನ್ನು ಮಾಡಲಾಗಿದೆ. ಮೈಸೂರಿನ ಟಿಪ್ಪು ಸುಲ್ತಾನ ಅಥವಾ ಮೊಘಲ್‌ ದೊರೆ ಅಕ್ಬರನಿಗೆ ಕೊಡಲಾಗುತ್ತಿದ್ದ ‘ದಿ ಗ್ರೇಟ್‌’ ಎಂಬ ಅಭಿದಾನವನ್ನು ತೆಗೆದುಹಾಕಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಆರ್‌ಎಸ್‌ಎಸ್‌ ನಾಯಕ ಸುನೀಲ್‌ ಅಂಬೇಕರ್‌ ಶುಕ್ರವಾರ ಸಂತಸ ವ್ಯಕ್ತಪಡಿಸಿದ್ದಾರೆ.

ಆರೆಂಜ್ ಸಿಟಿ ಸಾಹಿತ್ಯ ಉತ್ಸವ

ಎಸ್‌ಜಿಆರ್‌ ನಾಲೆಜ್‌ ಫೌಂಡೇಶನ್‌ ಆಯೋಜಿಸಿದ್ದ ಆರೆಂಜ್ ಸಿಟಿ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು, ‘ಈಗ ಇತಿಹಾಸದ ಪಠ್ಯಪುಸ್ತಕಗಳು ಬದಲಾಗುತ್ತಿವೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) 15 ತರಗತಿಗಳಲ್ಲಿ 11 ತರಗತಿಗಳ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಮಾಡಿರುವುದು ಸಂತಸ ತಂದಿದೆ’ ಎಂದರು.

ಅನೇಕ ಬದಲಾವಣೆಗಳನ್ನು ತರಲಾಗಿದೆ

‘ಈಗ ಇತಿಹಾಸದ ಪಠ್ಯಗಳಲ್ಲಿ ‘ಅಕ್ಬರ್‌ ದಿ ಗ್ರೇಟ್‌’ ಅಥವಾ ‘ಟಿಪ್ಪು ಸುಲ್ತಾನ್‌ ದಿ ಗ್ರೇಟ್‌’ ಎಂಬುದಿಲ್ಲ. ಹಾಗಂತ ಪಠ್ಯಪುಸ್ತಕಗಳಿಂದ ಅವರ್‍ಯಾರನ್ನೂ ತೆಗೆದುಹಾಕಲಾಗಿಲ್ಲ, ಆದರೆ ಅನೇಕ ಬದಲಾವಣೆಗಳನ್ನು ತರಲಾಗಿದೆ. ಹೊಸ ಪೀಳಿಗೆಯು ಅವರ ಕ್ರೂರ ಕೃತ್ಯಗಳನ್ನು ತಿಳಿದುಕೊಳ್ಳಬೇಕು. ನಾವು ಯಾರಿಂದ ಬಲಿಪಶುಗಳಾಗಿದ್ದೇವೆ ಮತ್ತು ಯಾರಿಂದ ಮುಕ್ತರಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು’ ಎಂದು ಹೇಳಿದರು.