ವಿವಾಹಿತೆಗೆ ಪ್ರೇಮಪತ್ರ ಕೊಡುವುದು ಅಪರಾಧ: ಬಾಂಬೆ ಹೈಕೋರ್ಟ್!
* ವಿವಾಹಿತ ಮಹಿಳೆಯತ್ತ ಪ್ರೇಮ ನಿವೇದನೆಯ ಚೀಟಿ ಎಸೆಯುವುದು ಆಕೆಯನ್ನು ಅವಮಾನಿಸಿದಂತೆ
* ಆಕೆಯ ಒಳ್ಳೆಯತನವನ್ನು ದುರುಪಯೋಗಪಡಿಸಿದಂತಾಗುತ್ತದೆ
* ಘನತೆ ಎಂಬುವುದು ಮಹಿಳೆಯ ಅತ್ಯುತ್ತಮ ಆಭರಣ
ನಾಗ್ಪುರ(ಆ.11): ವಿವಾಹಿತ ಮಹಿಳೆಯತ್ತ ಪ್ರೇಮ ನಿವೇದನೆಯ ಚೀಟಿ ಎಸೆಯುವುದು ಆಕೆಯನ್ನು ಅವಮಾನಿಸಿದಂತೆ ಎಂದು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ಹೇಳಿದೆ. ಅಲ್ಲದೆ, ಇದು ಆಕೆಯ ಒಳ್ಳೆಯತನವನ್ನು ದುರುಪಯೋಗಪಡಿಸಿದಂತಾಗುತ್ತದೆ. ಘನತೆ ಎಂಬುವುದು ಮಹಿಳೆಯ ಅತ್ಯುತ್ತಮ ಆಭರಣ ಎಂದು ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರದ ಅಕೋಲಾದಲ್ಲಿ 2011ರಲ್ಲಿ ವಿವಾಹಿತ ಮಹಿಳೆಯೋರ್ವರಿಗೆ ಶ್ರೀಕೃಷ್ಣ ತವರಿ ಎಂಬಾತ ಪ್ರೇಮಪತ್ರ ನೀಡಲು ಬಂದಿದ್ದ. ಆಕೆ ನಿರಾಕರಿಸಿದಾಗ ಲವ್ ಲೆಟರ್ ಎಸೆದು ಪ್ರೇಮ ನಿವೇದನೆ ಮಾಡಿದ್ದ. ನಂತರ ಅವಳತ್ತ ಅಶ್ಲೀಲ ಹಾವಭಾವ ಪ್ರದರ್ಶಿಸಿದ್ದ. ಈ ಬಗ್ಗೆ ಮಹಿಳೆ ನೀಡಿದ ದೂರಿನ ಅನ್ವಯ, ಸೆಷನ್ಸ್ ನ್ಯಾಯಾಲಯ ಶ್ರೀಕೃಷ್ಣಗೆ 2 ವರ್ಷ ಜೈಲು ಶಿಕ್ಷೆ ಹಾಗೂ ಭಾರೀ ದಂಡ ವಿಧಿಸಿತ್ತು. ಮಹಿಳೆಯ ವಿರುದ್ಧ ಯುವಕ ಪ್ರತಿದೂರು ನೀಡಿದರೂ ವಿಚಾರಣೆ ವೇಳೆ ಆತನ ಮೇಲಿನ ಆರೋಪ ಸಾಬೀತಾಗಿತ್ತು.
ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಆದರೆ ಮೇಲ್ಮನವಿ ವಜಾಗೊಳಿಸಿರುವ ಕೋರ್ಟ್, ಶ್ರೀಕೃಷ್ಣ ಮಾಡಿದ್ದು ಅಪರಾಧ ಎಂದು ಹೇಳಿದೆ.