ಬಿಹಾರದಲ್ಲೊಂದು ಅಮಾನವೀಯ ಘಟನೆ| ತಲೆ ಬೋಳಿಸಿ, ಮೂತ್ರ ಕುಡಿಸಿ, ಚಪ್ಪಲಿ ಹಾರ ಹಾಕಿದ್ರು: ಯಾವ ತಪ್ಪಿಗೆ ಈ ಶಿಕ್ಷೆ?| ಆರೋಪಿಗಳಿಗಾಗಿ ಹುಡುಕಾಡುತ್ತಿದ್ದಾರೆ ಪೊಲೀಸರು

ಮಧೇಪುರ(ಏ.12): ಬಿಹಾರದ ಮಧೇಪುರದಲ್ಲಿ ಮನುಕುಲವೇ ತಲೆ ತಗ್ಗಿಸುವಂತಹ ಅಮಾನವೀಯ ಕೃತ್ಯ ನಡೆದಿದೆ. ಈ ಘಟನೆಯ ವಿವರವರಿತರೆ ಇಂತಹ ಸಮಾಜವೂ ಇದೆಯಾ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹೌದು ಇಲ್ಲೊಬ್ಬ ಯುವಕನ ತಲೆ ಬೊಳಿಸಿ, ಚಪ್ಪಲಿ ದ ಗಿಡವನ್ನು ಹಾರ ಹಾಕಿಸಿ ಆತನನ್ನು ಊರು ತುಂಬಾ ಮೆರವಣಿಗೆ ಮಾಡಿಸಿದ್ದಾರೆ. 

Add Asianetnews Kannada as a Preferred SourcegooglePreferred

ಇಷ್ಟೇ ಅಲ್ಲದೇ ಮೂತ್ರ ಕುಡಿಸಿ, ಶೌಚವನ್ನೂ ತಿನ್ನುವಂತೆ ಮಾಡಿದ್ದಾರೆ. ಯುವಕ ಕಳ್ಳತನ ಮಾಡಿದ್ದಕ್ಕೆ ಊರ ಮಂದಿ ಕೊಟ್ಟ ಶಿಕ್ಷೆ ಇದು ಎನ್ನಲಾಗಿದೆ. ಇನ್ನು ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಸಂತ್ರಸ್ತ ಯುವಕನ ತಂದೆಯನ್ನು ಪೊಲೀಸ್ ಠಾಣೆಗೆ ಕರೆಸಿ ದೂರು ದಾಖಲಿಸಿದ್ದಾರೆ. ಅಲ್ಲದೇ ಆರೋಪಿಗಳ ಹುಡುಕಾಟ ಆರಂಭಿಸಿದ್ದಾರೆ.

ಏನಿದು ಪ್ರಕರಣ?

ಬಿಹಾರಿಗಂಜ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಸ್ಥನ್‌ ಪಂಚಾಯತ್‌ ವಾರ್ಡ್‌ ನಂಬರ್ 2ರ ನಿವಾಸಿ ಪ್ರೇಮ್‌ಲಾಲ್‌ ಶರ್ಮಾರವರ ಇಪ್ಪತ್ತಮೂರು ವರ್ಷದ ಮಗ ಝಕಸ್‌ ಶರ್ಮಾ ವಿರುದ್ಧ ಅನೇಕ ಬಾರಿ ಕಳ್ಳತನದ ಆರೋಪ ಕೇಳಿ ಬಂದಿತ್ತು. ಇನ್ನು ಮಾಧ್ಯಮಗಳ ವರದಿಯನ್ವಯ ಈತ ಹೊಲವೊಂದರಲ್ಲಿದ್ದ ಜೋಳವನ್ನು ಕೊಯ್ದಿದ್ದ. ಹೀಗಾಗಿ ಆ ಪ್ರದೇಶದ ಕೆಲ ಯುವಕರು ಆತನನ್ನು ಹಿಡಿದಿದ್ದಾರೆ. ಬಳಿಕ ಆತನಿಗೆ ಥಳಿಸಿ, ರೇಜರ್‌ನಿಂದ ಅರ್ಧ ತಲೆಯನ್ನು ಬೋಳಿಸಿದ್ದಾರೆ. ಬಳಿಕ ಆತನಿಗೆ ಮೂತ್ರಕುಡಿಸ, ಶೌಚ ತಿನ್ನಿಸಿ, ಚಪ್ಪಲಿ ಹಾರ ತೊಡಿಸಿ ಊರು ತುಂಬಾ ಮೆರವಣಿಗೆ ಮಾಡಿಸಿದ್ದಾರೆನ್ನಲಾಗಿದೆ.

ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು

ಇನ್ನು ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರಿಗೂ ಲಭ್ಯವಾಗಿದೆ. ಸದ್ಯ ಈ ವಿಡಿಯೋ ಆಧಾರವಾಗಿಟ್ಟುಕೊಂಡು ಪೊಲೀಸರು ಆರೋಪಿಗಳ ಹುಡುಕಾಟ ಮುಂದುವರೆಸಿದ್ದಾರೆ.