ದೇಶವನ್ನು ವಿಭಜನಕಾರಿ ರಾಜಕೀಯದಿಂದ ಮುಕ್ತಗೊಳಿಸುವ ಗುರಿ : ಕಾಂಗ್ರೆಸ್
ಎನ್ಡಿಎ ಮೈತ್ರಿಕೂಟದ ವಿರುದ್ಧ ರಚನೆಯಾಗಿರುವ ಇಂಡಿಯಾ ಮೈತ್ರಿಕೂಟವನ್ನು ಸೈದ್ಧಾಂತಿಕವಾಗಿ ಮತ್ತು ಚುನಾವಣಾ ರಾಜಕೀಯದಲ್ಲಿ ಯಶಸ್ವಿಗೊಳಿಸುವ ಹಾಗೂ ದೇಶವನ್ನು ವಿಭಜನೆಕಾರಿ ರಾಜಕೀಯದಿಂದ ಮುಕ್ತಗೊಳಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಣಯ ಅಂಗೀಕರಿಸಿದೆ.

ಹೈದರಾಬಾದ್: ಎನ್ಡಿಎ ಮೈತ್ರಿಕೂಟದ ವಿರುದ್ಧ ರಚನೆಯಾಗಿರುವ ಇಂಡಿಯಾ ಮೈತ್ರಿಕೂಟವನ್ನು ಸೈದ್ಧಾಂತಿಕವಾಗಿ ಮತ್ತು ಚುನಾವಣಾ ರಾಜಕೀಯದಲ್ಲಿ ಯಶಸ್ವಿಗೊಳಿಸುವ ಹಾಗೂ ದೇಶವನ್ನು ವಿಭಜನೆಕಾರಿ ರಾಜಕೀಯದಿಂದ ಮುಕ್ತಗೊಳಿಸುವ ಮೂಲಕ ದೇಶದ ಜನತೆಗೆ ಸಂವೇದನಾ ಶೀಲ, ಹೊಣೆಗಾರಿಕೆಯ ಸರ್ಕಾರವನ್ನು ನೀಡುವ ನಿರ್ಣಯವನ್ನು ಶನಿವಾರ ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಅಂಗೀಕರಿಸಿದೆ.
ಇತ್ತೀಚೆಗಷ್ಟೇ ಪುನರ್ ರಚನೆಗೊಂಡ ಸಿಡಬ್ಲ್ಯುಸಿಯ ಮೊದಲ ಸಭೆ ಶನಿವಾರ ಹೈದ್ರಾಬಾದ್ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯಿತು. ಸೋನಿಯಾ (Sonia), ರಾಹುಲ್ (Rahul Gandhi), ಪ್ರಿಯಾಂಕಾ ಗಾಂಧಿ (Priyankha Gandhi) ಸೇರಿದಂತೆ ಸಮಿತಿಯ ಎಲ್ಲ ಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪಕ್ಷವು 14 ನಿರ್ಣಯಗಳನ್ನು ಅಂಗೀಕರಿಸಿತು.
ಇಂಡಿಯಾ ಒಕ್ಕೂಟ ಬಲಪಡಿಸಲು ನೀರು ಬಿಡುತ್ತಿದ್ದಾರೆ: ಯಡಿಯೂರಪ್ಪ
ಇತ್ತೀಚೆಗೆ ರಚನೆಯಾದ ಇಂಡಿಯಾ ಮೈತ್ರಿಕೂಟ ವಿಪಕ್ಷಗಳನ್ನು ಒಗ್ಗೂಡಿಸುವ ಕೆಲಸವನ್ನು ಯಶಸ್ವಿಯಾಗಿ ಮುಂದುವರೆಸಿದೆ. ಕೂಟವು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ತಲ್ಲಣಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಭೆ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೇ ಮುಂಬರುವ ಹಲವು ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗಾಗಿ ಹಲವು ರಣತಂತ್ರಗಳ ಕುರಿತಾಗಿ ಚರ್ಚಿಸಲಾಗಿದೆ.
ಇನ್ನು ಸಭೆಯು, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬೆಲೆ ಏರಿಕೆ ಸಮಸ್ಯೆ ಬಗ್ಗೆ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ‘ಪ್ರಧಾನಿ ಮೋದಿಯವರ ರೋಜ್ಗಾರ್ ಮೇಳ ಕೇವಲ ನೆಪವಷ್ಟೇ ಆಗಿದ್ದು, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ವಿಫಲವಾಗಿದೆ. 2021ರಲ್ಲಿ ರಾಷ್ಟ್ರೀಯ ಜನಗಣತಿ ನಡೆಸದಿರುವುದು ದೇಶಕ್ಕೆ ಅಂತಾರಾಷ್ಟ್ರೀಯ ಅವಮಾನವಾಗಿದೆ. ಮೋದಿ ಸರ್ಕಾರ ಹಿಂದುಳಿದ ವರ್ಗಗಳು, ಬುಡಕಟ್ಟು ಜನಾಂಗ ಮತ್ತು ದಲಿತರ ವಿರುದ್ಧ ತನ್ನ ಪಕ್ಷಪಾತವನ್ನು ತೋರಿಸಿದೆ. ಇನ್ನು ದೇಶದಲ್ಲಿನ ಎಸ್ಟಿ, ಎಸ್ಸಿ ಮತ್ತು ಒಬಿಸಿಗಳಿಗಿರುವ ಪ್ರಸ್ತುತ ಮೀಸಲಾತಿಯ ಮಿತಿ ಹೆಚ್ಚಳ ಮಾಡಬೇಕಾಗಿದೆ. ಸರ್ಕಾರದ ಬೆಂಬಲದ ಕೊರತೆಯಿಂದ ಗ್ರಾಮೀಣ ಆರ್ಥಿಕತೆ ಹಾಗೂ ವ್ಯವಸಾಯ ಕ್ಷೇತ್ರದ ಪ್ರಗತಿ ಕ್ಷೀಣಿಸಿದೆ’ ಎಂದು ನಿರ್ಣಯ ಕೈಗೊಳ್ಳಲಾಗಿದೆ.
ಇಂಡಿಯಾ ಮೈತ್ರಿ ಒಕ್ಕೂಟದ ಮೊದಲ ಚುನಾವಣಾ ರ್ಯಾಲಿ ಘೋಷಣೆ, ಭೋಪಾಲ್ನಿಂದ ಆರಂಭ!
ಅಲ್ಲದೇ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಕಾಂಗ್ರೆಸ್ ಒತ್ತಾಯಿಸುತ್ತದೆ. ಕೇಂದ್ರೀಯ ಚುನಾವಣಾ ಆಯೋಗ ಮತ್ತು ಚುನಾವಣಾ ಆಯೋಗಗಳ ನೇಮಕಾತಿ ಮಸೂದೆಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗದ ಸ್ವಾತಂತ್ರ್ಯದೊಂದಿಗೆ ರಾಜಿ ಮಾಡಿಕೊಳ್ಳುತ್ತದೆ. ದೇಶದಲ್ಲಿ ವಿಭಜನೆ ಮಾಡುವ ಆಡಳಿತಾರೂಡ ರಾಜಕೀಯದಿಂದ ದೇಶವನ್ನು ಮುಕ್ತಗೊಳಿಸಲು ಚುನಾವಣೆಯಲ್ಲಿ ಯಶಸ್ಸು ಗಳಿಸುವ ಸೈದ್ಧಾಂತಿಕ ಸಂಕಲ್ಪ ಮಾಡಬೇಕಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
ಬಿಜೆಪಿ ಸರ್ಕಾರವು ಸಹಕಾರಿ ವ್ಯವಸ್ಥೆಯ ಎಲ್ಲ ನಿಯಮಗಳು ಮತ್ತು ಕಾನೂನುಗಳನ್ನು ನಾಶಪಡಿಸಿದೆ. ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ, ಶ್ರೀಮಂತ, ಬಡವರು, ಯುವಕರು ಮತ್ತು ಹಿರಿಯರು ಹೆಮ್ಮೆ ಪಡುವಂತಹ ರಾಷ್ಟ್ರವನ್ನು ಪುನಸ್ಥಾಪಿಸಲು ಕಾಂಗ್ರೆಸ್ ಪ್ರತಿಜ್ಞೆ ಮಾಡುತ್ತದೆ. ಭಾರತದ ಸಂವಿಧಾನದ ಮೇಲೆ ಪ್ರಧಾನಿ ಮೋದಿ ಸರ್ಕಾರದ ದಬ್ಬಾಳಿಕೆಯನ್ನು ಖಂಡಿಸಲು ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒತ್ತಾಯಿಸುವುದು’ ಎಂದು ನಿರ್ಣಯ ಕೈಗೊಳ್ಳಲಾಗಿದೆ.