ಪ್ರೀತಿಸಿ ಮದ್ವೆ, ಪತ್ನಿಯ ತಂದೂರಿಯಲ್ಲಿ ಸುಟ್ಟ ಕಾಂಗ್ರೆಸ್ ನಾಯಕ: ರಾಜಧಾನಿಯ ಬೆಚ್ಚಿ ಬೀಳಿಸಿದ ಮರ್ಡರ್ ಸ್ಟೋರಿ ಇದು
ಕಳೆದ ವರ್ಷ ದೆಹಲಿಯಲ್ಲಿ ನಡೆದ 31 ಫೀಸ್ ಮರ್ಡರ್ ಎಂದೇ ಕುಖ್ಯಾತಿ ಪಡೆದಿದ್ದ ಶ್ರದ್ಧ ವಾಕರ್ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಬಹುತೇಕರಿಗೆ ಗೊತ್ತೆ ಇದೆ. ಆದರೆ ಇದಕ್ಕೂ ಮೊದಲು ಸರಿಸುಮಾರು 30 ವರ್ಷಗಳ ಹಿಂದೆ ಇದೇ ಮಾದರಿಯ ಆದರೆ ಹೈ ಪ್ರೊಫೈಲ್ ಕೊಲೆಯೊಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದಿತ್ತು ಎಂಬುದು ನಿಮಗೆ ಗೊತ್ತಾ?

ಕಳೆದ ವರ್ಷ ದೆಹಲಿಯಲ್ಲಿ ನಡೆದ 31 ಫೀಸ್ ಮರ್ಡರ್ ಎಂದೇ ಕುಖ್ಯಾತಿ ಪಡೆದಿದ್ದ ಶ್ರದ್ಧ ವಾಕರ್ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಬಹುತೇಕರಿಗೆ ಗೊತ್ತೆ ಇದೆ. ಆದರೆ ಇದಕ್ಕೂ ಮೊದಲು ಸರಿಸುಮಾರು 30 ವರ್ಷಗಳ ಹಿಂದೆ ಇದೇ ಮಾದರಿಯ ಆದರೆ ಹೈ ಪ್ರೊಫೈಲ್ ಕೊಲೆಯೊಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದಿತ್ತು ಎಂಬುದು ನಿಮಗೆ ಗೊತ್ತಾ? ಈ ಪ್ರಕರಣದಲ್ಲಿ ಆಗಿನ ದೆಹಲಿ ಯೂತ್ ಕಾಂಗ್ರೆಸ್ ಮುಖ್ಯಸ್ಥನೇ ಅಪರಾಧಿಯಾಗಿದ್ದ, ಕೊಲೆಯಾದವಳು ಕೂಡ ದೆಹಲಿ ಯೂತ್ ಕಾಂಗ್ರೆಸ್ನ ಮಹಿಳಾ ವಿಂಗ್ನ ಜನರಲ್ ಸೆಕ್ರೆಟರಿಯಾಗಿದ್ದಾಕ್ಕೆ. ಆದರೆ ಅಂದು ಇಂದಿನಷ್ಟು ಮಾಧ್ಯಮಗಳು ಪ್ರಭಾವಶಾಲಿಯಾಗಿಲ್ಲದ ಕಾರಣ ಈ ಪ್ರಕರಣ ಶ್ರದ್ಧಾ ವಾಕರ್ ಪ್ರಕರಣದಂತೆ ಇಷ್ಟೊಂದು ದೊಡ್ಡ ಚರ್ಚೆಯಾಗಿರಲಿಲ್ಲ ಅನ್ನುವುದು ಸತ್ಯವೇ..!
ಪ್ರೀತಿಸಿ ಮದುವೆಯಾಗಿದ್ದ ಜೋಡಿ
ಅದು 1992ನೇ ಇಸವಿ, ದೆಹಲಿ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸುಶೀಲ್ ಶರ್ಮಾ (Sushil Sharma) ಹಾಗೂ ದೆಹಲಿ ವಿವಿಯ ಪದವೀಧರೆ, ದೆಹಲಿ ಯೂತ್ ಕಾಂಗ್ರೆಸ್ ಮಹಿಳಾ ವಿಭಾಗದ ಜನರಲ್ ಸೆಕ್ರೆಟರಿ ನೈನಾ ಸಹ್ನಿ (Naina sahni) ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ದೆಹಲಿಯ ಮಂದಿರ್ ಮಾರ್ಗ್ನಲ್ಲಿದ್ದ ಸುಶೀಲ್ ಶರ್ಮಾ ಮನೆಗೆ ಆಗಾಗ ಬರುತ್ತಿದ್ದರು ನೈನಾ ಸಹ್ನಿ, ಮತ್ತೊಂದು ದಿನ ಯಾರಿಗೂ ತಿಳಿಯದಂತೆ ರಹಸ್ಯವಾಗಿ ವಿವಾಹವಾಗಿದ್ದರು. ನಂತರ ಇವರ ಪೋಷಕರು ಕೂಡ ಈ ವಿವಾಹಕ್ಕೆ ಸಮ್ಮತಿ ಸೂಚಿಸಿದ್ದರು. ಇದಾದ ನಂತರ ಇಬ್ಬರೂ ಇದೇ ಪ್ಲಾಟ್ನಲ್ಲಿ ಜೊತೆಯಾಗಿ ವಾಸ ಮಾಡಲು ಆರಂಭಿಸಿದ್ದರು. ಕೊಲೆಯಾಗುವವರೆಗೂ ನೈನಾ ಇದೇ ಫ್ಲಾಟ್ನಲ್ಲಿದ್ದರು.
ಭಾರತದಲ್ಲಿ ಇಂದಿಗೂ ಬಗೆಹರಿಯದ 6 ಪ್ರಮುಖ ಕೊಲೆ ಪ್ರಕರಣಗಳಿವು!
ಮದುವೆಯ ರಹಸ್ಯವಾಗಿಡಲು ಮುಂದಾದ ಸುಶೀಲ್ ಶರ್ಮಾ
ಆದರೆ ರಾಜಕೀಯದಲ್ಲಿದ್ದ ಸುಶೀಲ್ ಶರ್ಮಾ, ಈ ಮದ್ವೆಯನ್ನು ರಹಸ್ಯವಾಗಿಡಬೇಕೆಂದು ಬಯಸಿದ್ದರು, ಆದರೆ ಪತ್ನಿ ನೈನಾಗೆ ಇದು ಇಷ್ಟವಿರಲಿಲ್ಲ, ಇದಾದ ನಂತರ ಪತಿ ಪತ್ನಿಯ ಮದುವೆ ಅಸಮಾಧಾನ ಶುರುವಾಗಿದ್ದು, ಪತ್ನಿಯ ಪ್ರತಿ ನಡೆಯನ್ನು ಅನುಮಾನದಿಂದ ಕಾಣಲು ಆರಂಭಿಸಿದ್ದ ಪತಿ ಸುಶೀಲ್, ಪತ್ನಿ ನೈನಾಳ ಎಲ್ಲಾ ಸ್ವಾತಂತ್ರವನ್ನು ನಿರ್ಬಂಧಿಸಿದ್ದ, ಇದರಿಂದ ಸಂಬಂಧ ಮತ್ತಷ್ಟು ಹದಗೆಟ್ಟು, ನೈನಾ ಪತಿಯನ್ನು ತೊರೆದು ಸ್ನೇಹಿತ ಮತ್ಲೂಬ್ ಎಂಬಾತನ ಸಹಾಯದಿಂದ ಆಸ್ಟ್ರೇಲಿಯಾಗೆ (Australia) ಹೊರಟು ಹೋಗಲು ಮುಂದಾಗಿದ್ದಳು ಎಂಬ ವಿಚಾರವು ಇತ್ತ ಸುಶೀಲ್ ಶರ್ಮಾ ತಲೆಕೆಡಿಸಿತು.
ಈ ಮಧ್ಯೆ ಈ ಮೂರು ವರ್ಷಗಳಲ್ಲಿ ಪತ್ನಿ ಮೇಲೆ ಅನುಮಾನದ ಭೂತ ಹಚ್ಚುತ್ತಲೇ ಇತ್ತು. ಅಂದು ಜುಲೈ 2 1995, ಎಲ್ಲೋ ಹೊರಗೆ ಹೋಗಿದ್ದ ಸುಶೀಲ್ ಶರ್ಮಾ ಮನೆಗೆ ಬರುವ ವೇಳೆ ನೈನಾ ಯಾರದೋ ಜೊತೆ ಫೋನ್ನಲ್ಲಿ ಧೀರ್ಘ ಮಾತುಕತೆಯಲ್ಲಿ ತೊಡಗಿದ್ದಳು. ಈ ವೇಳೆ ಪತಿಯ ನೋಡಿದ ನೈನಾ ಹೆದರಿ ಕೂಡಲೇ ಫೋನ್ ಕಟ್ ಮಾಡುತ್ತಾಳೆ. ಇದರಿಂದ ಮತ್ತಷ್ಟು ಅನುಮಾನಗೊಂಡ ಸುಶೀಲ್ ಶರ್ಮಾ ಆಕೆ ಮಾತನಾಡಿದ್ದ ನಂಬರ್ಗೆ ಮತ್ತೆ ಕರೆ ಮಾಡಿದ್ದ. ಅತ್ತ ನೈನಾ ಸ್ನೇಹಿತ ಮತ್ಲೂಬ್ ಮಾತನಾಡಿದ್...! ಇದಾದ ನಂತರ ಸುಶೀಲ್ ಅನುಮಾನ ಮತ್ತಷ್ಟು ಹೆಚ್ಚಾಗಿದ್ದು, ಪತ್ನಿ ನೈನಾ ಹಾಗೂ ಮತ್ಲೂಬ್ ಮಧ್ಯೆ ಸಂಬಂಧ ಇರುವ ಬಗ್ಗೆ ಅನುಮಾನಗೊಂಡಿದ್ದ. ಅಲ್ಲದೇ ಇದರಿಂದ ಒಮ್ಮೆಲೇ ಕುಪಿತಗೊಂಡ ಆತ ತನ್ನ ಬಳಿ ಇದ್ದ ಲೈಸೆನ್ಸ್ಡ್ ರಿವಾಲ್ವರ್ನಿಂದ (Revolver) ನೈನಾ ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದ. ಪರಿಣಾಮ ಅಲ್ಲೇ ನೈನಾ ಪ್ರಾಣ ಹಾರಿ ಹೋಗಿತ್ತು. ನಂತರ ನಡೆದಿದ್ದೆ ಈ ತಂದೂರಿ ಸ್ಟೈಲ್ ಫ್ರೈ....
ಪೊಲೀಸರಿಗೆ ದೂರು ಕೊಟ್ಟಳೆಂದು ಸ್ವಂತ ಅಜ್ಜಿಯನ್ನೇ ಕಾರು ಗುದ್ದಿಸಿ ಕೊಲೆಗೈದ ಮೊಮ್ಮಗ
ಪತ್ನಿ ಶವವನ್ನು ಯಮುನಾಗೆ ಎಸೆಯಲು ಮುಂದಾಗಿದ್ದ ಸುಶೀಲ್
ಕೊಲೆಯ ನಂತರ ಶವವನ್ನು ನೆಲಮಹಡಿಗೆ ತಂದ ಸುಶೀಲ್ ನೈನಾ ಶವವನ್ನು ಕಾರಿನಲ್ಲಿ ತುಂಬಿಸಿಕೊಂಡು ರಾಜಧಾನಿಯಲ್ಲಿ ಹರಿಯುವ ಯಮುನಾ ನದಿಗೆ ಎಸೆಯಲು ಮುಂದಾಗಿದ್ದ ಆದರೆ ಯಮುನಾ ನದಿಯ ಐಟಿಒ ಬ್ರಿಡ್ಜ್ನಲ್ಲಿ ಅಂದು ಟ್ರಾಫಿಕ್ ದಟ್ಟಣೆ ಸಾಕಷ್ಟಿತ್ತು. ಹೀಗಾಗಿ ಪ್ಲಾನ್ ಬದಲಿಸಿದ್ದ ಸುಶೀಲ್, ಪತ್ನಿಯ ಶವವನ್ನು ಸುಡಲು ಮುಂದಾಗಿದ್ದ.
ಅಶೋಕ್ ಯಾತ್ರಿ ನಿವಾಸದ ಬಾರ್-ಬಿ-ಕ್ಯೂ ರೆಸ್ಟೋರೆಂಟ್ನಲ್ಲಿ ದೇಹ ಸುಡಲು ಪ್ಲಾನ್
ಇದಕ್ಕಾಗಿ ದೆಹಲಿಯ ಹೋಟೆಲ್ ಅಶೋಕ್ ಯಾತ್ರಿ ನಿವಾಸ್ನಲ್ಲಿರುವ (Hotel Ashok Yatri Niwas) ಬಾಗಿಯಾ ಬಾರ್-ಬಿ-ಕ್ಯೂ ರೆಸ್ಟೋರೆಂಟ್ನ (Bagia Bar-B-Q Restaurant) ಮ್ಯಾನೇಜರ್ ಕೇಶವ್ ಕುಮಾರ್ ಸಹಾಯ ಪಡೆದ ಸುಶೀಲ್ ಶರ್ಮಾ ಅಲ್ಲಿ ತಂದೂರ್ ಮಾಡಲು ಬಳಸುವ ಮಣ್ಣಿನ ಒಲೆಯಲ್ಲಿ ನೈನಾ ದೇಹವನ್ನು ಸುಡಲು ಮುಂದಾಗಿದ್ದರು. ಸುಶೀಲ್ ಪ್ಲಾನ್ಗೆ ಸಹಾಯ ಮಾಡುವುದಕ್ಕಾಗಿ ಹೊಟೇಲ್ ಮುಚ್ಚಿ ಸಿಬ್ಬಂದಿಯನ್ನೆಲ್ಲಾ ಮನೆಗೆ ಕಳುಹಿಸಿದ ಕೇಶವ್ ಕುಮಾರ್, ನಂತರ ಹೊಟೇಲ್ನ ತಂದೂರ್ನಲ್ಲಿ ನೈನಾ ದೇಹವನ್ನು ಸುಡಲು ಶುರು ಮಾಡಿದ್ದರು. ಕೆಲವು ಮರದ ತುಂಡುಗಳು ಕಾಂಗ್ರೆಸ್ ಪಕ್ಷದ ಸಾಹಿತ್ಯ ಕೃತಿಗಳ ಬೆಂಕಿಯಲ್ಲಿ ನೈನಾ ದೇಹ ಭಸ್ಮವಾಗಲು ಆರಂಭವಾಗಿತ್ತು. ಇದೇ ವೇಳೆ ಆ ಮಾರ್ಗದಲ್ಲಿ ಗಸ್ತಿನಲ್ಲಿದ್ದ ಅಹ್ಮದ್ ನಜೀರ್ ಕುಂಜು ಎಂಬ ಪೊಲೀಸ್ ಕಾನ್ಸಟೇಬಲ್ ಹೊಟೇಲ್ನಲ್ಲಿ ಕಂಡ ಬೆಂಕಿಯ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಹಳೆಯ ಚುನಾವಣಾ ಪೋಸ್ಟರ್ಗಳನ್ನು ಸುಟ್ಟಿದ್ದಾಗಿ ಅವರಿಗೆ ಉತ್ತರಿಸಿದ್ದಾರೆ ಶರ್ಮಾ ಹಾಗೂ ಕುಮಾರ್.
ಆದರೆ ಈ ಹೊತ್ತಿ ಉರಿಯುತ್ತಿದ್ದ ಬೆಂಕಿ ನೋಡಿದ ತರಕಾರಿ ಮಾರುವ ಮಹಿಳೆಯೊಬ್ಬರು (vegetable vendor) ಜೋರಾಗಿ ಬೆಂಕಿ ಎಂದು ಬೊಬ್ಬೆ ಹೊಡೆದಿದ್ದು, ಪೊಲೀಸ್ ಪೇದೆ ಕುಂಜು ಅವರನ್ನು ಮತ್ತೆ ಅಲ್ಲಿಗೆ ಬರುವಂತೆ ಮಾಡಿತ್ತು. ಈ ವೇಳೆ ಹೊಟೇಲ್ ಗೋಡೆ ಹಾರಿ ಒಳ ನುಗ್ಗಿದ ಕುಂಜು ಅವರು ಅಲ್ಲಿ ಹೊತ್ತಿ ಉರಿಯುತ್ತಿದ್ದ ಸಹಜವಲ್ಲದ ಬೆಂಕಿ ಉರಿಯುತ್ತಿದ್ದರೆ ಕೇಶವ್ ಹಾಗೂ ಸುಶೀಲ್ ಅದರ ಮುಂದೆ ನಿಂತಿರುವುದನ್ನು ನೋಡಿದರು, ಜೊತೆಗೆ ಕೆಟ್ಟದಾದ ವಾಸನೆಯೊಂದು ಅಲ್ಲಿ ಆವರಿಸಿತ್ತು. ಹೀಗಾಗಿ ಮತ್ತಷ್ಟು ಹತ್ತಿರ ಹೋದಾಗ ಅಲ್ಲಿ ಮಾನವ ದೇಹವೊಂದು ಹೊತ್ತಿ ಉರಿಯುತ್ತಿರುವುದು ಕಂಡಿತ್ತು. ಕೂಡಲೇ ಅವರು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಅಲ್ಲದೇ ಕೂಡಲೇ ಹೊಟೇಲ್ ಮ್ಯಾನೇಜರ್ ಕೇಶವ್ ಕುಮಾರ್ನನ್ನು ಬಂಧಿಸಲಾಯಿತು. ಆದರೆ ಅಲ್ಲಿಗೆ ಹೆಚ್ಚಿನ ಪೊಲೀಸರು ಬರುವಷ್ಟರಲ್ಲಿ ಸುಶೀಲ್ ಪರಾರಿಯಾಗಿದ್ದರು.
ನಂತರ ಕೊಲೆಯಾದ 9 ದಿನಗಳ ನಂತರ ಬೆಂಗಳೂರಿನಲ್ಲಿ ಸುಶೀಲ್ ಶರ್ಮಾನನ್ನು ಬಂಧಿಸಿದ್ದರು ಪೊಲೀಸರು. ಪ್ರಾರಂಭದಲ್ಲಿ ತನಗೆ ಏನು ಗೊತ್ತಿಲ್ಲ, ನಾನು ತೀರ್ತಯಾತ್ರೆ ಹೋಗಿದ್ದೆ ಎಂದು ಹೇಳಿದ್ದ ಶರ್ಮಾ ಪೊಲೀಸರು ಬೆನ್ನು ಬಿಸಿ ಮಾಡುತ್ತಿದ್ದಂತೆ ಸತ್ಯ ಒಪ್ಪಿಕೊಂಡಿದ್ದರು. ಅಲ್ಲದೇ ತನ್ನ ವಿರೋಧಿ ಮನೀಂದರ್ಜಿತ್ ಸಿಂಗ್ ಬಿಟ್ಟ ಈ ಕೃತ್ಯ ಮಾಡಿದ್ದಾರೆ ಎಂದಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 2003ರಲ್ಲಿ ಶರ್ಮಾಗೆ ಮರಣದಂಡನೆ ಶಿಕ್ಷೆ ಘೋಷಣೆ ಮಾಡಿತ್ತು. ಅಲ್ಲದೇ ದೆಹಲಿ ಕೋರ್ಟ್ 2007ರಲ್ಲಿ ಅದನ್ನು ಎತ್ತಿ ಹಿಡಿದಿತ್ತು. ಆದರೆ ಸುಪ್ರೀಂ ಕೋರ್ಟ್ (Supreme court) ಅಕ್ಟೋಬರ್ 8, 2013 ರಂದು ಸುಶೀಲ್ ಕುಮಾರ್ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಿತು.
ಇದಾದ ನಂತರ 2018ರ ಡಿಸೆಂಬರ್ 21 ರಂದು ಸನ್ನಡತೆ ಆಧಾರದಲ್ಲಿ ಸುಶೀಲ್ ಶರ್ಮಾನನ್ನು ಬಿಡುಗಡೆಗೊಳಿಸಿದೆ. ದೇಶವನ್ನೇ ಬೆಚ್ಚಿ ಬೀಳಿಸಿದ ಈ ಕೊಲೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ ಮ್ಯಾಕ್ಸ್ವೆಲ್ ಪಿರೇರಾ ಎಂಬ ಪೊಲೀಸ್ ಅಧಿಕಾರಿ ತಮ್ಮ ಪುಸ್ತಕ 'ತಂದೂರ್ ಮರ್ಡರ್ ಕೇಸ್: ದಿ ಕ್ರೈಮ್ ದ ಷೂಕ್ ದಿಸ್ ನೇಷನ್ ಅಂಡ್ ಬ್ರೌಟ್ ಎ ಗವರ್ನಮೆಂಟ್ ಟು ಇಟ್ಸ್ ಮಂಡೀಸ್' ಎಂಬ ಪುಸ್ತಕದಲ್ಲಿ ವಿವರವಾಗಿ ತಿಳಿಸಿದ್ದಾರೆ.