26/11 ದಾಳಿಯ ಉಗ್ರ ತಹಾವುರ್ ರಾಣಾನನ್ನು ಎನ್ಐಎ ಕಸ್ಟಡಿಗೆ ಪಡೆದಿದ್ದು, ವಿಚಾರಣೆ ಆರಂಭವಾಗಿದೆ. ಮುಂಬೈ ಮಾತ್ರವಲ್ಲದೆ ಇತರ ನಗರಗಳ ಮೇಲೂ ದಾಳಿಗೆ ಸಂಚು ರೂಪಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
-ಮುಂಬೈ ದಾಳಿ ಬಳಿಕ ‘ಭಾರತೀಯರಿಗೆ ಶಾಸ್ತಿ ಆಗಿದೆ’ ಎಂದಿದ್ದ
-ಹೆಡ್ಲಿ-ರಾಣಾ ಸಂಭಾಷಣೆ ವಿಷಯ ಬಹಿರಂಗಪಡಿಸಿದ ಅಮೆರಿಕ
ನವದೆಹಲಿ: ಅಮೆರಿಕದಿಂದ ಭಾರತಕ್ಕೆ ಗಡೀಪಾರಾಗಿರುವ 26/11 ದಾಳಿಯ ಉಗ್ರ ತಹಾವುರ್ ರಾಣಾನನ್ನು ಎನ್ಐಎ 18 ದಿನ ತನ್ನ ಕಸ್ಟಡಿ ಪಡೆದಿದ್ದು, ಡಿಐಜಿ ಜಯ್ ರಾಯ್ ನೇತೃತ್ವದ ತಂಡ , ಶುಕ್ರವಾರ ದೆಹಲಿಯ ಎನ್ಐಎ ಪ್ರಧಾನ ಕಚೇರಿಯಲ್ಲಿ ಬಿಗಿ ಭದ್ರತೆಯ ನಡುವೆ ವಿಚಾರಣೆ ಆರಂಭಿಸಿದೆ.
ಎನ್ಐಎ ಕಚೇರಿಯ ನೆಲಮಹಡಿಯಲ್ಲಿ ಆತನ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಹಾಗೂ ವಿಚಾರಣೆ 3ನೇ ಮಹಡಿಯಲ್ಲಿ ನಡೆದಿದೆ. ದಿನದ 24 ಗಂಟೆಯೂ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಎನ್ಐಎ ಕಚೇರಿ ಸುತ್ತಲೂ ಭಾರಿ ಬಿಗಿಭದ್ರತೆ ಹಮ್ಮಿಕೊಳ್ಳಲಾಗಿದೆ. ರಾಣಾ ಇರುವ ಸೆಲ್ 14/14 ವಿಸ್ತೀರ್ಣದ್ದಾಗಿದೆ ಹಾಗೂ ಸಿಸಿಟೀವಿ ಕ್ಯಾಮರಾ ಕಣ್ಗಾವಲಿನ ಜೊತೆಗೆ ಭದ್ರತಾ ಸಿಬ್ಬಂದಿಯ ಬಿಗಿ ಕಾವಲಿದೆ. ಅಲ್ಲದೇ ಈ ಕೊಠಡಿಯೊಳಗೆ ಎನ್ಐಎನ ಉನ್ನತ ಶ್ರೇಣಿಯ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ನ್ಯಾಯಾಲಯ ನೀಡಿರುವ 18 ದಿನಗಳ ಕಸ್ಟಡಿ ಅವಧಿ ಮುಗಿಯುವ ತನಕ ರಾಣಾ ಇದೇ ಸೆಲ್ನಲ್ಲಿ ಇರಲಿದ್ದಾನೆ.
ಆತನಿಗೆ ಆಹಾರ ಮತ್ತು ಮೂಲಭೂತ ಅಗತ್ಯಗಳನ್ನು ಸೆಲ್ನೊಳಗೇ ಪೂರೈಕೆಯಾಗುತ್ತಿದೆ. ಇನ್ನು ಎನ್ಐಎ ಆವರಣದೊಳಗೆ ಆತನ ಚಲನವಲನಗಳು ಕಡಿಮೆ ಇರಲಿದೆ. ಎಲ್ಲಾ ವಿಚಾರಣೆಗಳು 3ನೇ ಮಹಡಿಯಲ್ಲಿರುವ ಸೆಲ್ನ ಪಕ್ಕದ ಕೋಣೆಯಲ್ಲಿ ನಡೆದಿದೆ. ಅಲ್ಲಿ 2 ಕ್ಯಾಮೆರಾಗಳು ವಿಚಾರಣೆಯನ್ನು ಚಿತ್ರೀಕರಿಸಲಿವೆ. ವಿಚಾರಣೆ ಮುಗಿದ ಬಳಿಕ ನೆಲಮಹಡಿಯ ಸೆಲ್ಗೆ ಸ್ಥಳಾಂತರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ವಿಚಾರಣೆ ವೇಳೆ 26/11 ಉಗ್ರ ರಾಣಾ ಮೊಂಡಾಟ
ಅಮೆರಿಕದಿಂದ ಭಾರತಕ್ಕೆ ಗಡೀಪಾರಾಗಿರುವ 26/11 ದಾಳಿಯ ಉಗ್ರ ತಹಾವ್ವುರ್ ರಾಣಾನನ್ನು ಎನ್ಐಎ 18 ದಿನ ತನ್ನ ಕಸ್ಟಡಿಗೆ ಪಡೆದಿದ್ದು, ಡಿಐಜಿ ಜಯ್ ರಾಯ್ ನೇತೃತ್ವದ ತಂಡ ಶುಕ್ರವಾರ ದೆಹಲಿಯ ಎನ್ಐಎ ಪ್ರಧಾನ ಕಚೇರಿಯಲ್ಲಿ ಬಿಗಿ ಭದ್ರತೆಯ ನಡುವೆ ವಿಚಾರಣೆ ಆರಂಭಿಸಿದೆ. ಆದರೆ, ವಿಚಾರಣೆಗೆ ರಾಣಾ ಸಹಕರಿಸುತ್ತಿಲ್ಲ. ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುತ್ತಿಲ್ಲ. ಹೀಗಾಗಿ ಕೇವಲ 3 ತಾಸು ಮಾತ್ರ ವಿಚಾರಣೆ ನಡೆಯಿತು ಎಂದು ಮೂಲಗಳು ಹೇಳಿವೆ.
ಇತರ ನಗರಗಳ ಮೇಲೂ ದಾಳಿಗೆ ರಾಣಾ ಸಂಚು: ಎನ್ಐಎ
ಮುಂಬೈ ಮಾತ್ರವಲ್ಲ ಭಾರತದ ಇತರ ನಗರಗಳ ಮೇಲೂ ದಾಳಿಗೆ 26/11 ದಾಳಿಕೋರ ಉಗ್ರ ತಹಾವುರ್ ರಾಣಾ ಸಂಚು ರೂಪಿಸಿದ್ದ ಎಂದು ದಿಲ್ಲಿ ಕೋರ್ಟ್ಗೆ ವಿಶೇಷ ತನಿಖಾ ತಂಡ (ಎನ್ಐಎ) ಹೇಳಿದೆ.ಗುರುವಾರ ದೆಹಲಿಯ ಕೋರ್ಟ್ನಲ್ಲಿ ವಿಶೇಷ ನ್ಯಾ। ಚಂದ್ರಜೀತ್ ಸಿಂಗ್ ಅವರ ಸಮ್ಮುಖದಲ್ಲಿ ವಾದ ಮಂಡಿಸಿದ ಎನ್ಐಎ, ‘ಮುಂಬೈನಲ್ಲಿ ಮಾಡಿದ ದಾಳಿಯಂತೆ ಭಾರತದ ಇತರ ನಗರಗಳ ಮೇಲೂ ವಿಧ್ವಂಸಕ ಕೃತ್ಯಗಳನ್ನು ನಡೆಸಲು ರಾಣಾ ಸಂಚು ರೂಪಿಸಿದ್ದ’ ಎಂದು ಹೇಳಿದೆ. ಇದರ ಬೆನ್ನಲ್ಲೇ ರಾಣಾನನ್ನು ಕೋರ್ಟು 18 ದಿನ ಕಾಲ ಎನ್ಐಎ ವಶಕ್ಕೆ ಒಪ್ಪಿಸಿದೆ.
ರಾಣಾ 2008ರಲ್ಲಿ ಮುಂಬೈ ದಾಳಿಗೆ ಮುನ್ನ ಮುಂಬೈ ಮಾತ್ರವಲ್ಲ, ಕೇರಳದ ಕೊಚ್ಚಿ ಹಾಗೂ ತಾಜ್ ಮಹಲ್ ಇರುವ ಆಗ್ರಾಗೆ ಭೇಟಿ ನೀಡಿದ್ದ ಎಂದು ತಿಳಿದುಬಂದಿತ್ತು. ಹೀಗಾಗಿ ಇಲ್ಲಿ ಕೂಡ ರಾಣಾ ದಾಳಿಗೆ ಸಂಚು ರೂಪಿಸಿದ್ದನೇ ಎಂಬುದು ಈಗ ವಿಚಾರಣೆ ವೇಳೆ ದೃಢಪಡುವ ಸಾಧ್ಯತೆ ಇದೆ.
ಉಗ್ರರಿಗೆ ಪಾಕ್ನ ಶೌರ್ಯ ಪ್ರಶಸ್ತಿ ನೀಡಿ ಎಂದಿದ್ದ ರಾಣಾ
26/11 ಮುಂಬೈ ದಾಳಿಯ ಉಗ್ರ ತಾಹಾವುರ್ ರಾಣಾ ಅಮೆರಿಕದಿಂದ ಭಾರತಕ್ಕೆ ಬರುತ್ತಿದ್ದಂತೆ ಆತನ ಕುರಿತ ಕೆಲ ಆಘಾತಕಾರಿ ಮಾಹಿತಿಗಳು ಬಹಿರಂಗವಾಗುತ್ತಿವೆ. ದಾಳಿ ಮಾಡಿದ ಉಗ್ರರಿಗೆ ಪಾಕ್ನ ಶೌರ್ಯ ಪ್ರಶಸ್ತಿ ನೀಡಬೇಕು ಎಂದಿದ್ದ ಆತ, ಮುಂಬೈ ದಾಳಿ ಬಳಿಕ ‘ಭಾರತೀಯರಿಗೆ ಶಾಸ್ತಿ ಆಗಿದೆ’ ಎಂದಿದ್ದ ಎಂದು ಅಮೆರಿಕ ಹೇಳಿದೆ.
ರಾಣಾನ ಹಸ್ತಾಂತರ ಕುರಿತ ಅಧಿಕೃತ ಹೇಳಿಕೆಯಲ್ಲಿ, ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಹೆಡ್ಲಿ ಹಾಗೂ ರಾಣಾನ ನಡುವಿನ ದೂರವಾಣಿ ಸಂಭಾಷಣೆಯ ಬಗ್ಗೆ ಅಮೆರಿಕ ಮಾಹಿತಿ ನೀಡಿದೆ.
‘ಮುಂಬೈನ 12 ಕಡೆಗಳಲ್ಲಿ 10 ಎಲ್ಇಟಿ ಉಗ್ರರು ನಡೆಸಿದ ದಾಳಿಗೆ 166 ಜನ ಸಾವನ್ನಪ್ಪಿದ ಬೆನ್ನಲ್ಲೇ, ‘ಭಾರತೀಯರಿಗೆ ಹೀಗೇ ಆಗಬೇಕಿತ್ತು. ತಕ್ಕ ಶಾಸ್ತಿ ಆಯಿತು’ ಎಂದು ರಾಣಾ ಹೇಳಿದ್ದ. ಜತೆಗೆ, ‘26/11ರ ಮುಂಬೈ ದಾಳಿಯಲ್ಲಿ ಸಾವನ್ನಪ್ಪಿದ 9 ಲಷ್ಕರ್ ಉಗ್ರರಿಗೆ ಪಾಕಿಸ್ತಾನದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ‘ನಿಶಾನ್ ಎ ಹೈದರ್’ ಅನ್ನು ನೀಡಬೇಕು’ ಎಂದು ರಾಣಾ, ಹೆಡ್ಲಿಗೆ ಹೇಳಿದ್ದ ಎಂಬ ವಿಷಯ ಅದರಲ್ಲಿದೆ.
ಇದನ್ನೂ ಓದಿ:
