ಟಿಆರ್ಎಸ್ ತೀವ್ರ ಹಿನ್ನಡೆ, ಬಿಎಲ್ ಸಂತೋಷ್ಗೆ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆಯಾಜ್ಞೆ!
ಟಿಆರ್ಎಸ್ ನಾಯಕರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ್ದಾರೆ ಅನ್ನೋ ಪ್ರಕರಣದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಆರೋಪಿ ಎಂದು ಎಸ್ಐಟಿ ಘೋಷಿಸಿತ್ತು. ಬಳಿಕ ನೋಟಿಸ್ ಕೂಡ ನೀಡಿತ್ತು. ಆದರೆ ಈ ನೋಟಿಸ್ಗೆ ತೆಲಂಗಾಣ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದು ಸತ್ಯಕ್ಕೆ ಸಂದ ಜಯ ಎಂದು ಬಿಜೆಪಿ ಹೇಳಿದೆ.
ತೆಲಂಗಾಣ(ನ.25): ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ನಾಯಕರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿ ಸರ್ಕಾರ ಬೀಳಿಸುವ ಪ್ರಯತ್ನಕ್ಕೆ ಬಿಜೆಪಿ ಕೈಹಾಕಿದೆ ಅನ್ನೋ ಆರೋಪ ಭಾರಿ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಸೇರಿ ನಾಲ್ವರನ್ನು ಆರೋಪಿಗಳೆಂದು ವಿಶೇಷ ತನಿಖಾ ದಳ (ಎಸ್ಐಟಿ) ಘೋಷಿಸಿತ್ತು. ಇಷ್ಟೇ ಅಲ್ಲ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿತ್ತು. ಆದರೆ ಎಸ್ಐಟಿ ನೋಟಿಸ್ಗೆ ತೆಲಂಗಾಣ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಎಸ್ಐಟಿ ನೀಡಿದ್ದ ಎರಡೂ ನೋಟಿಸ್ಗೆ ತಡೆಯಾಜ್ಞೆ ನೀಡಲಾಗಿದೆ. ನೋಟಿಸ್ ನೀಡಲು ಈ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯ ಹಾಗೂ ಅನುಮಾನಗಳು ಇಲ್ಲ ಎಂದು ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದು ಸತ್ಯಕ್ಕೆ ಸಂದ ಜಯ ಎಂದು ಬಿಜೆಪಿ ಹೇಳಿದೆ.
ರಾಜಕೀಯ ದ್ವೇಷದಿಂದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ವಿರೋಧಿಗಳು ಸಂಚು ರೂಪಿಸಿದ್ದರು. ಆದರೆ ಎಸ್ಐಟಿ ಮೂಲಕ ಜಾರಿ ಮಾಡಿದ್ದ ನೋಟೀಸ್ಗೆ ಇಂದು ತೆಲಂಗಾಣ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಮೂಲಕ ನ್ಯಾಯಕ್ಕೆ ಜಯ ಸಿಕ್ಕಿದೆ. ರಾಜಕೀಯ ವಿರೋಧಿಗಳಿಗೆ ಕಪಾಳಮೋಕ್ಷವಾಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ಸಾವರ್ಕರ್ ವಿರೋಧಿಗಳಿಗೆ ಚಾಟಿಯೇಟು ಬೀಸಿದ ಬಿ.ಎಲ್.ಸಂತೋಷ್
ಆಪರೇಶನ್ ಕಮಲ ಪ್ರಕರಣದಲ್ಲಿ ಬಿಎಲ್ ಸಂತೋಷ್ಗೆ ನ.26 ಹಾಗೂ ನ.28ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಮೊದಲು ನೀಡಿದ್ದ ವಿಚಾರಣೆ ನೋಟಿಸ್ಗೆ ನ.21ರಂದು ಸಂತೋಷ್ ಹಾಜರಾಗಿರಲಿಲ್ಲ. ಹೀಗಾಗಿ ಹೊಸ ನೋಟಿಸ್ ನೀಡಲಾಗಿತ್ತು. ಬಿ.ಎಲ್.ಸಂತೋಷ್ ಹೊರತು ಪಡಿಸಿ ಜಗ್ಗು ಸ್ವಾಮಿ, ತುಷಾರ್ ವೆಲ್ಲಪಲ್ಲಿ, ಬಿ. ಶ್ರೀನಿವಾಸ ಎಂಬುವವರನ್ನು ಆರೋಪಿಗಳೆಂದು ಘೋಷಿಸಲಾಗಿದೆ. ಅ.26ರಂದು ಟಿಆರ್ಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಆಮಿಷ ಒಡ್ಡಿದೆ ಎಂದು ಟಿಆರ್ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿ ದೂರು ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂತೋಷ್ ಸೇರಿದಂತೆ ಇತರರಿಗೆ ನ.21ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ನೋಟಿಸ್ ನೀಡಿದ್ದರೂ ಸಹ ಸಂತೋಷ್ ವಿಚಾರಣೆಗೆ ಹಾಜರಾಗಿಲ್ಲ. ಅಲ್ಲದೇ ಪ್ರವಾಸಗಳು ನಿಗದಿಯಾಗಿರುವ ಕಾರಣ ಸಮಯಾವಕಾಶ ಕೋರಿದ್ದಾರೆ. ಆದರೆ ಯಾವಾಗ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಅವರು ಹೇಳಿಲ್ಲ ಎಂದು ಎಸ್ಐಟಿ ಪರ ವಕೀಲರು ಹೈಕೋರ್ಚ್ಗೆ ಮಾಹಿತಿ ನೀಡಿದರು.
ಬಿಜೆಪಿ ಟಿಕೆಟ್ಗಾಗಿ ಲಾಬಿ ಬೇಡ: ಬಿ.ಎಲ್.ಸಂತೋಷ
ಆಗ ಪ್ರತಿಕ್ರಿಯಿಸಿದ ಕೋರ್ಚ್, ಸಂತೋಷ್ಗೆ ಮತ್ತೊಮ್ಮೆ ನೋಟಿಸ್ ಕೊಟ್ಟು ಅಗತ್ಯ ಸಮಯಾವಕಾಶ ನೀಡಿ ಎಂದು ಸೂಚಿಸಿ ನ.29ಕ್ಕೆ ವಿಚಾರಣೆ ಮುಂದೂಡಿತ್ತು. ಇದೀಗ ತೆಲಂಗಾಣ ಹೈಕೋರ್ಟ್ ನೋಟಿಸ್ಗೆ ತಡೆಯಾಜ್ಞೆ ನೀಡಿದೆ.
ಟಿಆರ್ಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರೆ 100 ಕೋಟಿ ರು. ಹಣ ನೀಡಲಾಗುವುದು ಮತ್ತು ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಲಾಗುವುದು ಎಂದು ಇತ್ತೀಚೆಗೆ ಕೆಲ ಬಿಜೆಪಿ ಪರ ವ್ಯಕ್ತಿಗಳೂ ತಮಗೆ ಆಫರ್ ನೀಡಿದ್ದರು ಎಂದು ರೋಹಿತ್ ರೆಡ್ಡಿ ಇತ್ತೀಚೆಗೆ ಆರೋಪ ಮಾಡಿ, ಪ್ರಕರಣವನ್ನೂ ದಾಖಲಿಸಿದ್ದರು.