ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಈ ವೇಳೆ ರಾಜ್ಯದ ದಿನಪತ್ರಿಕೆಗಳಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ಜಾಹೀರಾತು ಪ್ರಕಟಿಸುವುದನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ. 

ನವದೆಹಲಿ: ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಈ ವೇಳೆ ರಾಜ್ಯದ ದಿನಪತ್ರಿಕೆಗಳಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ, ಜಾಹೀರಾತು ಪ್ರಕಟಿಸುವುದನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ. ಇಂಥ ಯಾವುದೇ ಜಾಹೀರಾತು ಪ್ರಕಟಿಸಬೇಕಿದ್ದರೆ, ತನ್ನ ಅನುಮತಿ ಕಡ್ಡಾಯ ಎಂದು ಅದು ತಾಕೀತು ಮಾಡಿದೆ. ಇದೇ ವೇಳೆ, ತನ್ನ ತನ್ನ ಅನುಮತಿ ಇಲ್ಲದೆ ಜಾಹೀರಾತು ಪ್ರಕಟಿಸಿದ್ದಕ್ಕೆ ಅದು ಕಿಡಿಕಾರಿದ್ದು, ಕರ್ನಾಟಕ ಮುಖ್ಯ ಕಾರ್ಯದರ್ಶಿಯಿಂದ ಸ್ಪಷ್ಟನೆ ಬಯಸಿದೆ.

Add Asianetnews Kannada as a Preferred SourcegooglePreferred

‘ಜಾಹೀರಾತುಗಳನ್ನು ಪ್ರಕಟಿಸಲು ರಾಜ್ಯ ಸರ್ಕಾರವು ಪೂರ್ವಾನುಮತಿ ಪಡೆದಿಲ್ಲ, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ತನ್ನ ಅಗತ್ಯ ಅನುಮೋದನೆಗಳನ್ನು ತೆಗೆದುಕೊಳ್ಳುವವರೆಗೆ ತೆಲಂಗಾಣದಲ್ಲಿ ಕರ್ನಾಟಕ ಸರ್ಕಾರವು ಜಾಹೀರಾತು ಪ್ರಕಟಣೆಯನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಅದು ನೋಟಿಸ್‌ನಲ್ಲಿ ಮುಖ್ಯ ಕಾರ್ಯದರ್ಶಿಗೆ (Chief Secretary of Karnataka) ತಿಳಿಸಿದೆ.

ಮದ್ರಾಸ್, ಬಾಂಬೆ ಬಳಿಕ ಹೈದರಾಬಾದ್ ಮರುನಾಮಕರಣ ಖಚಿತ; ಬಿಜೆಪಿ ರಾಜ್ಯಾಧ್ಯಕ್ಷ!

ತೆಲಂಗಾಣದಲ್ಲಿ ರಾಜ್ಯದಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ, ಸೋಮವಾರ ಬೆಳಗ್ಗೆ ಆಯೋಗಕ್ಕೆ ಕರ್ನಾಟಕ ಸರ್ಕಾರದ (government of Karnataka) ‘ಗ್ಯಾರಂಟಿ ಸ್ಕೀಂ’ ಜಾಹೀರಾತುಗಳ ವಿರುದ್ಧ ದೂರು ನೀಡಿತ್ತು. ಇದಕ್ಕೆ ಪ್ರತಿಯಾಗಿ ಆಯೋಗ ಈ ಕ್ರಮ ಜರುಗಿಸಿದೆ. ‘ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರ್ಕಾರ ತೆಲಂಗಾಣದಲ್ಲಿ ಜನರಿಗೆ ಪ್ರಚೋದಿಸಲೆಂದೇ ತನ್ನ ಸಾಧನೆಗಳ ಜಾಹೀರಾತುಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸುತ್ತಿದೆ. ರಾಷ್ಟ್ರದ ಎಲ್ಲ ಭಾಷೆಗಳಲ್ಲಿ ಜಾಹೀರಾತು ನೀಡದೆ ಚುನಾವಣೆ ನಡೆಯುತ್ತಿರುವ ತೆಲಂಗಾಣದಲ್ಲಿ ಮಾತ್ರ ಜಾಹೀರಾತು ನೀಡುವುದು ಜನಪ್ರತಿನಿಧಿ ಕಾಯ್ದೆ ಹಾಗೂ ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ. ಕರ್ನಾಟಕ ಸರ್ಕಾರ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ ಎಂದು ಬಿಜೆಪಿ ದೂರಿತ್ತು.

ತೆಲಂಗಾಣದ ರೈತ ಬಂಧು ಯೋಜನೆಗೆ ಆಯೋಗ ತಡೆ

ಹೈದರಾಬಾದ್‌: ಮಹತ್ವಾಕಾಂಕ್ಷಿ ಯೋಜನೆ ‘ರೈತ ಬಂಧು’ ಅಡಿ ನ.30ರ ಮತದಾನಕ್ಕೂ ಮುನ್ನ ರೈತರಿಗೆ 5000 ರು. ವರ್ಗಾವಣೆ ಮಾಡಲು ತೆಲಂಗಾಣ ಸರ್ಕಾರಕ್ಕೆ ನೀಡಿದ್ದ ಅನುಮತಿಯನ್ನು ಕೇಂದ್ರ ಚುನಾವಣಾ ಆಯೋಗ ದಿಢೀರ್ ಹಿಂಪಡೆದಿದೆ. ಈ ಬೆಳವಣಿಗೆ ಆಡಳಿತಾರೂಢ ಬಿಆರ್‌ಎಸ್‌ (BRS) ಹಾಗೂ ಕಾಂಗ್ರೆಸ್‌ (Congress) ನಡುವೆ ಭರ್ಜರಿ ವಾಕ್ಸಮರಕ್ಕೆ ಕಾರಣವಾಗಿದೆ.

ಸುಮ್ನೆ ಕೂತ್ಕೊಳ್ಳಿ, ಇಲ್ಲಾ ಎದ್ದೋಗಿ; ಕಾಂಗ್ರೆಸ್ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಗರಂ!

‘ರೈತ ಬಂಧು’ (Raita Bandhu) ಯೋಜನೆಯಡಿ ತೆಲಂಗಾಣ ಸರ್ಕಾರ ವರ್ಷಕ್ಕೆ ಎರಡು ಬಾರಿ ರೈತರಿಗೆ ಪ್ರತಿ ಎಕರೆಗೆ 5 ಸಾವಿರ ರು. ನೇರ ನಗದು ವರ್ಗಾವಣೆ ಮಾಡಿ ಬಿತ್ತನೆ ಕಾರ್ಯಕ್ಕೆ ನೆರವಾಗುತ್ತದೆ. ಮತದಾನಕ್ಕೆ ಕೆಲವೇ ದಿನಗಳು ಇರುವಾಗ ಈ ಕಂತು ಬಿಡುಗಡೆ ಮಾಡಿ ಹಾಗೂ ಅದನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳದಂತೆ ಸೂಚನೆ ನೀಡಬೇಕು ಎಂದು ಆಯೋಗಕ್ಕೆ ಕಾಂಗ್ರೆಸ್‌ ಮೊರೆ ಇಟ್ಟಿತ್ತು. ಚಾಲ್ತಿಯಲ್ಲಿರುವ ಯೋಜನೆಯ ಕಾರಣ ರೈತ ಬಂಧುವನ್ನು ಮುಂದುವರಿಸಲು ಅನುಮತಿ ನೀಡಿದ್ದ ಆಯೋಗ, ಅದನ್ನು ಪ್ರಚಾರಕ್ಕೆ ಬಳಸಿಕೊಳ್ಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು.

ಆದರೆ, ಸೋಮವಾರ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ತೆಲಂಗಾಣ ಹಣಕಾಸು ಸಚಿವ ಹರೀಶ್‌ ರಾವ್ (Harish Rao), ಕಾಂಗ್ರೆಸ್‌ ದೂರು ನೀಡಿದ್ದರೂ, ‘ಆಯೋಗ ರೈತ ಬಂಧು ಕಂತು ಬಿಡುಗಡೆಗೆ ಅನುಮತಿ ನೀಡಿದೆ. ಮಂಗಳವಾರ ಜನರು ತಿಂಡಿ ತಿಂದು ಚಹಾ ಸೇವಿಸುವುದರೊಂದಿಗೆ ಮೊಬೈಲ್‌ಗಳಿಗೆ ಟಿಣ್‌ ಟಿಣ್‌ ಎಂಬ ಸಂದೇಶ ಬರಲಿದೆ. ಹಣ ಸಂದಾಯವಾಗಲಿದೆ’ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಗಮನಿಸಿದ ಆಯೋಗ, ‘ಸೂಚನೆಯ ಹೊರತಾಗಿಯೂ ರೈತ ಬಂಧು ಯೋಜನೆಯನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ’ ಎಂಬ ಕಾರಣ ನೀಡಿ ಆ ಯೋಜನೆ ಮುಂದುವರಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆದಿದೆ.

ವಾಕ್ಸಮರ:

ಈ ಬೆಳವಣಿಗೆ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್‌, ಮುಖ್ಯಮಂತ್ರಿ ಕೆಸಿಆರ್‌ ಅವರ ಬೇಜವಾಬ್ದಾರಿಯುತ ಹಾಗೂ ಸ್ವಾರ್ಥ ನಡೆಯಿಂದಾಗಿ ಆಯೋಗ ಅನುಮತಿ ಹಿಂಪಡೆದಿದೆ ಎಂದಿದೆ. ಮತ್ತೊಂದೆಡೆ, ಡಿ.3ರಂದು ಅಧಿಕಾರಕ್ಕೆ ಬರುತ್ತಿದ್ದಂತೆ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಕೆಸಿಆರ್‌ ಅವರು ಘೋಷಿಸಿದ್ದಾರೆ.