ತೆಲಂಗಾಣದಲ್ಲಿ ಈ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಆರ್ಎಸ್ ಪಕ್ಷದ ನಾಯಕ, ಮುಖ್ಯಮಂತ್ರಿ ಚಂದ್ರಶೇಖರ ರಾವ್ 119ರ ಪೈಕಿ 115 ಕ್ಷೇತ್ರಗಳಿಗೆ ಈಗಲೇ ಅಭ್ಯರ್ಥಿಗಳನ್ನು ಪ್ರಕಟಿಸಿದ್ದಾರೆ.
ಹೈದರಾಬಾದ್ (ಆ.22): ತೆಲಂಗಾಣದ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. 119 ಕ್ಷೇತ್ರಗಳ ಪೈಕಿ 115 ಕ್ಷೇತ್ರಗಳ ಅಭ್ಯರ್ಥಿಗಳು ಘೋಷಣೆ ಆಗಿದ್ದು, ಕೆಸಿಆರ್ ಎಂದೇ ಖ್ಯಾತರಾಗಿರುವ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (Chief Minister K Chandrashekar Rao) ಅವರು 2 ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.
ಕೆಸಿಆರ್ ತಾವು ಹಿಂದೆ ಗೆದ್ದಿದ್ದ ಗಜ್ವೇಲ್ ಕ್ಷೇತ್ರದ ಜತೆ ಕಾಮರೆಡ್ಡಿ ಕ್ಷೇತ್ರದಿಂದಲೂ ಕಣಕ್ಕಿಳಿಯಲಿದ್ದಾರೆ. ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದ್ದು, 7 ಮಂದಿಗೆ ಮಾತ್ರ ಟಿಕೆಟ್ ನಿರಾಕರಿಸಲಾಗಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಖುದ್ದು ಘೋಷಣೆ ಮಾಡಿದ ಕೆಸಿಆರ್, ತಮ್ಮ ಪಕ್ಷ 95ರಿಂದ 105 ಕ್ಷೇತ್ರಗಳಲ್ಲಿ ಸಲೀಸಾಗಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಆರ್ಎಸ್ ಈ ಸಲ ಗೆದ್ದರೆ ಹ್ಯಾಟ್ರಿಕ್ ವಿಜಯ ಸಾಧಿಸಿದಂತಾಗುತ್ತದೆ. ಇನ್ನು ಸಂಸದ ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಜೆಗೆ ಮೈತ್ರಿ ಮುಂದುವರಿಯಲಿದೆ ಎಂದು ಕೂಡ ಕೆಸಿಆರ್ ಇದೇ ವೇಳೆ ಘೋಷಿಸಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷ 95-105 ಸ್ಥಾನಗಳನ್ನು ಗಳಿಸಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು. ಘೋಷಿಸಿದ ಪಟ್ಟಿಯಲ್ಲಿ ಕೇವಲ ಏಳು ಬದಲಾವಣೆಗಳಿದ್ದು, ಅಕ್ಟೋಬರ್ 16 ರಂದು ವಾರಂಗಲ್ನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಸಿಎಂ ರಾವ್ ಹೇಳಿದರು. ನಾಂಪಲ್ಲಿ, ನರಸಾಪುರ, ಗೋಶಾಮಹಲ್ ಮತ್ತು ಜನಾಂವ್ 4 ಕ್ಷೇತ್ರಗಳ ಉಮೇದುವಾರಿಕೆಯನ್ನು ತಡೆಹಿಡಿಯಲಾಗಿದ್ದು, ನಂತರ ಪ್ರಕಟಿಸಲಾಗುವುದು.
ಬಹುಪತ್ನಿತ್ವ ನಿಷೇಧಕ್ಕೆ ಅಸ್ಸಾಂ ಮಹತ್ವದ ಹೆಜ್ಜೆ, ಜನಾಭಿಪ್ರಾಯಕ್ಕೆ ಆಹ್ವಾನ
ಈ ವರ್ಷದ ಕೊನೆಯಲ್ಲಿ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಬಿಆರ್ಎಸ್ಗೆ (Bharat Rashtra Samithi) ಈ ಸಲ ಕಾಂಗ್ರೆಸ್ ಮತ್ತು ಬಿಜೆಪಿ ಸಡ್ಡು ಹೊಡೆದಿವೆ. ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಸೋದರಿ ವೈ.ಎಸ್. ಶರ್ಮಿಳಾ ಕಾಂಗ್ರೆಸ್ ಸೇರಬಹುದು ಎನ್ನಲಾಗಿದೆ.
ಇತ್ತೀಚೆಗೆ ಬಿಜೆಪಿ ಕೂಡ ಬಿಆರ್ಎಸ್ ರೀತಿಯಲ್ಲೇ ಚುನಾವಣೆ ಘೋಷಣೆಗೂ ಮುನ್ನವೇ ಛತ್ತೀಸ್ಗಢ ಹಾಗೂ ಮಧ್ಯಪ್ರದೇಶದ ಕೆಲವು ಅಭ್ಯರ್ಥಿಗಳ ಹೆಸರು ಪ್ರಕಟಿಸಿತ್ತು.
ತೆಲಂಗಾಣದಲ್ಲಿ ಗೋಪಾಲಯ್ಯ ಬಿಜೆಪಿ ಸಂಘಟನೆ, ಅಸೆಂಬ್ಲಿ ಕ್ಷೇತ್ರವೊಂದರ ಹೊಣೆ ಹೊತ್ತ ಮಾಜಿ ಸಚಿವ
ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ಗೆ ವಲಸೆ ಹೋಗಬಹುದು ಎಂಬ ವದಂತಿಯನ್ನು ಹುಸಿಗೊಳಿಸಿರುವ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ಅವರು ತೆಲಂಗಾಣದಲ್ಲಿ ಪಕ್ಷದ ಪರ ವಿಧಾನಸಭಾ ಕ್ಷೇತ್ರವೊಂದರ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದಾರೆ.
ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ, ವಿಚಾರಣೆಗೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ
ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ಗೋಪಾಲಯ್ಯ ಅವರಿಗೆ ವಹಿಸಲಾಗಿದ್ದು, ಅವರು ಕ್ಷೇತ್ರದಲ್ಲಿನ ಪಕ್ಷದ ನಿರ್ವಹಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ತಮಗೆ ವಹಿಸಿರುವ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಗೋಪಾಲಯ್ಯ ಅವರು ರಾಜೇಂದ್ರನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಜತೆ ಸಭೆ ನಡೆಸಿದರು. ಈ ವೇಳೆ ಪಕ್ಷದ ಗೆಲುವಿಗೆ ರೂಪುರೇಷೆ ರೂಪಿಸುವ ಕುರಿತು ಸಮಾಲೋಚನೆ ನಡೆಸಿದರು. ನಂತರ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡು ಪರಿಸ್ಥಿತಿಯನ್ನು ಅವಲೋಕಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ತೆಲಂಗಾಣ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ತೆಲಂಗಾಣ ಮತ್ತು ಮಿಜೋರಂ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಐದು ರಾಜ್ಯಗಳ ಪ್ರತಿ ವಿಧಾನಸಭೆಯನ್ನು ವಿಜಯಿ ವಿಧಾನಸಭೆಯನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಶಾಸಕರ ಪ್ರವಾಸ ಅಭಿಯಾನವನ್ನು ಆಯೋಜಿಸಲಾಗಿದೆ. ಈ ಅಭಿಯಾನದಡಿ 18 ರಾಜ್ಯಗಳ ಹಿರಿಯ ಶಾಸಕರನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಶಾಸಕ ಗೋಪಾಲಯ್ಯ ಅವರನ್ನು ಸಹ ಅಭಿಯಾನದಲ್ಲಿ ಜೋಡಿಸಲಾಗಿದೆ.
