ದೇಶದ ಆಕ್ಸಿಜನ್ ಕೊರತೆ ನೀಗಿಸಲು ಪಣತೊಟ್ಟ ಟಾಟಾ ಸಂಸ್ಛೆ; 24 ಕಂಟೈನರ್ ಆಮದು!
ಕೊರೋನಾ ವೈರಸ್ ಕಾರಣ ತಲೆದೋರಿರುವ ಆಕ್ಸಿಜನ್ ಸಮಸ್ಯೆ ನಿವಾರಿಸಲು ಟಾಟಾ ಗ್ರೂಪ್ ಮಹತ್ವದ ಹೆಜ್ಜೆ ಇಟ್ಟಿದೆ. ಈಗಾಗಲೇ 300 ಟನ್ ಆಕ್ಸಿಜನ್ ಪೂರೈಕೆ ಜವಾಬ್ದಾರಿ ಹೊತ್ತುಕೊಂಡಿರುವ ಟಾಟಾ ಗ್ರೂಪ್ ಇದೀಗ ದೇಶಾದ್ಯಂತ ಉಲ್ಬಣಿಸಿರುವ ಆಕ್ಸಿಜನ್ ಸಮಸ್ಯೆ ನಿವಾರಿಸಲು ವಿದೇಶದಿಂದ 24 ಕ್ರಯೊಜೆನಿಕ್ ಕಂಟೈನರ್ ಆಮದುಮಾಡಿಕೊಳ್ಳುತ್ತಿದೆ.
ಮುಂಬೈ(ಏ.21) ದೇಶದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಕೊರತೆಯಾಗುತ್ತಿದೆ. ಆಕ್ಸಿಜನ್ ಸಿಗದೆ ನರಳಾಡುತ್ತಿರುವ ಸೋಂಕಿತರು, ಮೂಕ ಪ್ರೇಕ್ಷರಾದ ಆಸ್ಪತ್ರೆ ಸೇರಿದಂತೆ ಹಲವು ಘಟನೆಗಳು ವರದಿಯಾಗಿದೆ. ಕೊರೋನಾ 2ನೇ ಅಲೆಯಲ್ಲಿ ದೇಶದಲ್ಲಿ ತೀವ್ರವಾಗಿ ಆಮ್ಲಜನಕ ಕೊರತೆ ಕಾಡುತ್ತಿದೆ. ಇದನ್ನು ನಿವಾರಿಸಲು ಟಾಟಾ ಸಮೂಹ ಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿದೆ. ವಿದೇಶದಿಂದ 24 ಕ್ರಯೋಜೆನಿಕ್ ಕಂಟೈನರ್ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ದೇಶಾದ್ಯಂತ ಆಕ್ಸಿಜನ್ ಪೂರೈಕೆ ಮಾಡಲು ಟಾಟಾ ಸಂಸ್ಥೆ ಮುಂದಾಗಿದೆ.
ಕೊರೋನಾ ವಿರುದ್ಧ ಹೋರಾಟಕ್ಕೆ ಟಾಟಾ ನೆರವು; ಚಿಕಿತ್ಸೆಗೆ 300 ಟನ್ ಆಕ್ಸಿಜನ್ ಪೂರೈಕೆ!
ಸೋಂಕಿತರ ಚಿಕಿತ್ಸೆಗೆ ಈಗಾಗಲೇ 300 ಟನ್ ಆಕ್ಸಿಜನ್ ಪೂರೈಕೆ ಜವಾಬ್ದಾರಿ ಹೊತ್ತುಕೊಂಡಿರುವ ಟಾಟಾ ಸಂಸ್ಥೆ, ಇದೀಗ ದೇಶಾದ್ಯಂತ ಎದ್ದಿರುವ ಆಕ್ಸಿಜನ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿದೆ. ಟಾಟಾ ಕಾರ್ಯಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಆಮ್ಲಜನಕವನ್ನು ದೇಶದ ಎಲ್ಲಾ ಆಸ್ಪತ್ರೆಗಳಿಗೆ ಸಾಗಿಸಲು ವಿದೇಶದಿಂದ 24 ಕ್ರಯೋಜೆನಿಕ ಕಂಟೈನರ್ ( ಅತ್ಯಂತ ಕಡಿಮೆ ತಾಪಮಾನದಲ್ಲೂ ಅನಿಲಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸಲು ಬಳಸುವ ದೊಡ್ಡ ಗಾತ್ರದ ಸಿಲಿಂಡರ್) ಆಮದು ಮಾಡಿಕೊಳ್ಳುತ್ತಿದೆ. ಈ ಸಿಲಿಂಡರ್ ದೇಶಾದ್ಯಂತ ವಿವಿಧ ರಾಜ್ಯಗಳಿಗೆ ಮತ್ತು ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ಸಹಾಯ ಮಾಡಲಿವೆ. ಈ ಬಗ್ಗೆ ತಮ್ಮ ಅಧಿಕೃತ ಖಾತೆಯಿಂದ ಟಾಟಾ ಸಂಸ್ಥೆ ಟ್ವೀಟ್ ಮಾಡಿದೆ.
ಸೋಂಕಿತರ ಚಿಕಿತ್ಸೆಗೆ ನೆರವಾದ ರಿಲಯನ್ಸ್; ಪ್ರತಿ ದಿನ 700 ಟನ್ ಆಮ್ಲಜನರ ಪೂರೈಕೆ!.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನರಿಗೆ ನೀಡಿರುವ ಸಂದೇಶ ನಿಜವಾಗಲೂ ಶ್ಲಾಘನಿಯವಾದದ್ದು. ಕೊರೊನಾ ವಿರುದ್ಧದ ಹೋರಾಟದಲ್ಲಿ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ. ಆಕ್ಸಿಜನ್ ಕೊರತೆಯನ್ನು ಅರಿತು ನಮ್ಮ ವೈದ್ಯಕೀಯ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಈ ಕಾರ್ಯವನ್ನು ಕೈಗೊಳ್ಳುತ್ತಿದ್ದೇವೆ. ಹಾಗಾಗಿ ದೇಶಾದ್ಯಂತ ಆಕ್ಸಿಜನ್ ಪೂರೈಸಲು 24 ಕ್ರಯೋಜೆನಿಕ ಕಂಟೈನರ್ ಆಮದು ಮಾಡಿಕೊಳ್ಳಲಿದ್ದೇವೆʼ ಎಂದು ಟಾಟಾ ಸಂಸ್ಥೆ ತಿಳಿಸಿದೆ.
ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡಿದ್ದಾರೆ. ಕೊರೊನಾದಂತಹ ಸಂಧಿಗ್ಧ ಸ್ಥಿತಿಯಲ್ಲಿ ಟಾಟಾ ಸಂಸ್ಥೆ ಮಾಡುತ್ತಿರುವ ಕೆಲಸಕ್ಕೆ ಮೋದಿ ಶ್ಲಾಘಿಸಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಕೊರೊನಾವನ್ನು ಗೆಲ್ಲೋಣ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ದಿನಕ್ಕೆ ಸುಮಾರು 300 ಟನ್ ಆಕ್ಸಿಜನ್ ಪೂರೈಕೆ ಮಾಡುತ್ತಿರುವ ಟಾಟಾ ಸ್ಟೀಲ್ ಸಂಸ್ಥೆ ಜಾರ್ಖಂಡ್, ಉತ್ತರಪ್ರದೇಶ, ಬಿಹಾರ ಮತ್ತು ಒರಿಸ್ಸಾ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಜೊತೆಗೆ ಕೇಂದ್ರದ ಸಹಾಯದೊಂದಿಗೆ ಪಶ್ಷಿಮ ಬಂಗಾಳಕ್ಕೂ ಆಕ್ಸಿಜನ್ ಪೂರೈಕೆಯಾಗುತ್ತಿದೆ ಎಂದು ಟಾಟಾ ಸ್ಟೀಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಟಿ.ವಿ ನರೇಂದ್ರರನ್ ತಿಳಿಸಿದ್ದಾರೆ.
ಕೊರೋನಾ ಮೊದಲ ಅಲೆಯಲ್ಲಿ ಟಾಟಾ ಗ್ರೂಪ್ ಒಟ್ಟು 1,500 ಕೋಟಿ ರೂಪಾಯಿ ದೇಣಿಗೆ ನೀಡಿತ್ತು. ಈ ಮೂಲಕ ಈ ದೇಶದ ಮೇಲಿನ ಪ್ರೀತಿ ಹಾಗೂ ಸಾಮಾಜಿಕ ಬದ್ಧತೆಯನ್ನು ಎತ್ತಿ ಹಿಡಿದಿತ್ತು. ಇದೀಗ ಆಕ್ಸಿಜನ್ ಸಮಸ್ಯೆಯನ್ನೇ ನಿವಾರಿಸಲು ಹೆಜ್ಜೆ ಇಟ್ಟಿದೆ.
ಆಕ್ಸಿಜನ್ ಕೊರತೆ ನಿವಾರಣೆಗೆ ಕರ್ನಾಟಕದಲ್ಲಿ ಎಮರ್ಜನ್ಸಿ ಸೂತ್ರ
ಇತ್ತಿಚೆಗೆ ಮುಕೇಶ್ ಅಂಬಾನಿ ಮಾಲೀಕತ್ವದ ರೀಲಯನ್ಸ ಇಂಡಸ್ಟ್ರೀಸ್ ಲಿಮಿಟೆಟ್ ಮಹಾರಾಷ್ಟ್ರಕ್ಕೆ 100 ಟನ್ ಆಕ್ಸಿಜನ್ ಪೂರೈಕೆ ಮಾಡುವುದಾಗಿ ಹೇಳಿದೆ. ಜೊತೆಗೆ ಭಾರತದ ಅತಿ ದೊಡ್ಡ ಸ್ಟೀಲ್ ಉತ್ಪಾದಿಸುವ ಸ್ಟೀಲ್ ಆಥೋರಿಟಿ ಆಫ್ ಇಂಡಿಯಾ ( SAIL) ಕೂಡ ಕೊರೊನಾ ಚಿಕಿತ್ಸೆಗಾಗಿ 33,300 ಟನ್ ಆಕ್ಸಿಜನ್ ಪೂರೈಕೆ ಮಾಡಿರುವುದಾಗಿ ತಿಳಿಸಿದೆ. ಆರ್ಸೆಲೋರಮಿತ್ತಲ್ ನಿಪ್ಪೋನ್(AMNS India) ಕೂಡ ಗುಜರಾತ್ನಲ್ಲಿ ಕೊರೊನಾ ಚಿಕಿತ್ಸೆಗಾಗಿ 200 ಟನ್ ಆಕ್ಸಿಜನ್ ಪೂರೈಕೆ ಮಾಡುತ್ತಿರುವುದಾಗಿ ತಿಳಿಸಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಆಕ್ಸಿಜನ್ ಪೂರೈಕೆ ಕಡಿಮೆಯಾಗದಂತೆ ನೋಡಿಕೊಳ್ಳುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಯಾಗಿದೆ. ಈ ಪರಿಸ್ಥಿತಿಯಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ಖಾಸಗಿ ಕಂಪನಿಗಳು ಕೂಡ ಸರಕಾರದ ಜೊತೆ ಕೈ ಜೋಡಿಸಿರುವುದು ಶ್ಲಾಘನೀಯವಾಗಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ(ಏಪ್ರಿಲ್ 20) ಭಾ 2,94,355 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು 2000ಕ್ಕೂ ಅಧಿಕ ಜನ ಕೊರೊನಾಗೆ ಬಲಿಯಾಗಿದ್ದಾರೆ