Asianet Suvarna News Asianet Suvarna News

ದಕ್ಷಿಣ ರಾಜ್ಯಗಳ ಸಮರ ತೀವ್ರ: ಕರ್ನಾಟಕ ಬಳಿಕ ಈಗ ಕೇಂದ್ರದ ವಿರುದ್ಧ ತ.ನಾಡು ಸುಪ್ರೀಂಗೆ

18 ಸಾವಿರ ಕೋಟಿ ರು. ಬರ ಪರಿಹಾರ ಬಿಡುಗಡೆ ಮಾಡಲು ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಬೆನ್ನಲ್ಲೇ, ನೆರೆ ಪರಿಹಾರ ಕೊಡಿಸುವಂತೆ ತಮಿಳುನಾಡು ಸರ್ಕಾರ ಕೂಡ ಈಗ ಸರ್ವೋಚ್ಚ ನ್ಯಾಯಾಲಯದ ಕದ ಬಡಿದಿದೆ. 
 

Tamil Nadu moves Supreme Court against Centres delay in releasing disaster relief funds gvd
Author
First Published Apr 4, 2024, 7:43 AM IST

ನವದೆಹಲಿ (ಏ.04): 18 ಸಾವಿರ ಕೋಟಿ ರು. ಬರ ಪರಿಹಾರ ಬಿಡುಗಡೆ ಮಾಡಲು ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಬೆನ್ನಲ್ಲೇ, ನೆರೆ ಪರಿಹಾರ ಕೊಡಿಸುವಂತೆ ತಮಿಳುನಾಡು ಸರ್ಕಾರ ಕೂಡ ಈಗ ಸರ್ವೋಚ್ಚ ನ್ಯಾಯಾಲಯದ ಕದ ಬಡಿದಿದೆ. ಈ ಮೂಲಕ ಕೇಂದ್ರ ಸರ್ಕಾರ ಅನುದಾನ ಹಾಗೂ ಪರಿಹಾರ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ತಾರತಮ್ಯ ಮಾಡುತ್ತಿದೆ ಎಂದು ದನಿ ಎತ್ತಿದ್ದ ದಕ್ಷಿಣ ರಾಜ್ಯಗಳು ಈಗ ಕಾನೂನು ಸಮರವನ್ನು ತೀವ್ರಗೊಳಿಸಿದಂತಾಗಿದೆ.

ನೈಸರ್ಗಿಕ ವಿಕೋಪಕ್ಕಾಗಿ ತನಗೆ ಬರಬೇಕಿರುವ ಅನುದಾನವನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ ಎಂದು ದೂರಿ ಎಂ.ಕೆ. ಸ್ಟಾಲಿನ್‌ ನೇತೃತ್ವದ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಸಂವಿಧಾನದ ಪರಿಚ್ಛೇದ 131ರಡಿ ಅದು ಅರ್ಜಿಯನ್ನು ಸಲ್ಲಿಸಿದೆ. ಇದರಡಿ ಕೇಂದ್ರ- ರಾಜ್ಯಗಳ ನಡುವೆ ಕಾನೂನು ಸಮರ ಉಂಟಾದಾಗ ನ್ಯಾಯಾಲಯದ ಮೆಟ್ಟಿಲೇರುವ ಅವಕಾಶವಿದೆ. 

ಇತ್ತೀಚೆಗೆ ಸಂಭವಿಸಿದ ಪ್ರವಾಹ ಹಾಗೂ ಮಿಚೌಂಗ್‌ ಚಂಡಮಾರುತದಿಂದಾದ ಹಾನಿಗೆ 37 ಸಾವಿರ ಕೋಟಿ ರು. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದೆ. ಕಳೆದ ಡಿಸೆಂಬರ್‌ನಲ್ಲಿ ಮಿಚೌಂಗ್‌ ಚಂಡಮಾರುತದಿಂದಾಗಿ 19,692 ಕೋಟಿ ರು. ನಷ್ಟವಾಗಿದೆ. ದಕ್ಷಿಣದ ಜಿಲ್ಲೆಗಳಲ್ಲಿ ಕಂಡು ಕೇಳರಿಯದ ಮಳೆಯಿಂದಾಗಿ 18 ಸಾವಿರ ಕೋಟಿ ರು. ಹಾನಿಯಾಗಿದೆ. ಹೀಗಾಗಿ ಈ ಪರಿಹಾರ ಕೊಡಿಸಬೇಕು. ಮಧ್ಯಂತರ ಪರಿಹಾರವಾಗಿ 2 ಸಾವಿರ ಕೋಟಿ ರು. ಬಿಡುಗಡೆ ಮಾಡಲು ಸೂಚಿಸಬೇಕು ಎಂದು ಮನವಿ ಮಾಡಿದೆ. 

ಘರ್ ಘರ್ ಗ್ಯಾರಂಟಿ: ಐದು ನ್ಯಾಯ, 25 ಭರವಸೆಗಳು: ಕಾಂಗ್ರೆಸ್‌ ಅಭಿಯಾನ ಆರಂಭ

ತನಗೆ ಬರ ಪರಿಹಾರವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ಮಾ.23ರಂದು ಕರ್ನಾಟಕ ಸರ್ಕಾರ ಕೂಡ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ತನ್ಮೂಲಕ ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ದೇಶದ ಮೊದಲ ರಾಜ್ಯ ಎನಿಸಿಕೊಂಡಿತ್ತು. ಇನ್ನೊಂದೆಡೆ ಕೇರಳ ಸರ್ಕಾರ ಕೂಡಾ, ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎಂದು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಈ ವಿಷಯದ ಇದೀಗ 5 ಸದಸ್ಯರ ಸಾಂವಿಧಾನ ಪೀಠಕ್ಕ ವರ್ಗಾವಣೆಯಾಗಿದೆ.

Follow Us:
Download App:
  • android
  • ios