Asianet Suvarna News Asianet Suvarna News

ರಾಜ್ಯಕ್ಕೆ ಸ್ವಾಯತ್ತತೆ ನೀಡುವ ವಿಚಾರಕ್ಕೆ ಮತ್ತೆ ಒತ್ತುಕೊಟ್ಟ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌

ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್‌ ಮತ್ತೊಮ್ಮೆ ಕಿಡಿಕಾರಿದ್ದಾರೆ. ಅದರೊಂದಿಗೆ ರಾಜ್ಯಕ್ಕೆ ಸ್ವಾಯತ್ತತೆ ನೀಡುವ ವಿಚಾರದಲ್ಲಿ ಮತ್ತೊಮ್ಮೆ ಅವರು ಮಾತನಾಡಿದ್ದಾರೆ.

Tamil Nadu Chief Minister M K Stalin Highlights State Autonomy Attacks BJP In New Podcast san
Author
First Published Nov 1, 2023, 10:59 PM IST


ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಾಗ್ದಾಳಿ ನಡೆಸಿದ್ದು, ಬಲಪಂಥೀಯ ಸರ್ಕಾರವು ರಾಜ್ಯಗಳ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರವು, ರಾಜ್ಯಗಳ ಸಂಪೂರ್ಣ ಆಡಳಿತವನ್ನು ರಾಜ್ಯಪಾಲರ ಭವನಗಳಿಗೆ ಸೀಮಿತವಾಗಿಸಿದೆ ಎಂದು ಸ್ಟಾಲಿನ್ ಅವರು ಹೊಸದಾಗಿ ಪ್ರಾರಂಭಿಸಿದ ಪಾಡ್‌ಕಾಸ್ಟ್‌ನಲ್ಲಿ ಆರೋಪಿಸಿದ್ದಾರೆ. ‘ತಮಿಳುನಾಡಿನ ಎಲ್ಲ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಅಂಗೀಕರಿಸಿದ 19 ವಿಧೇಯಕಗಳ ಅನುಮೋದನೆಯನ್ನು ತಡೆಯಲು ಬಿಜೆಪಿ ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. 'ರಾಜ್ಯ ಹಕ್ಕುಗಳು' ವಿಷಯದ ಕುರಿತು ತಮ್ಮ ಪಾಡ್‌ಕಾಸ್ಟ್‌ನ ಮೂರನೇ ಸಂಚಿಕೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಟುವಾದ ದಾಳಿಯನ್ನು ಮಾಡಿದ ಸ್ಟಾಲಿನ್, ಕೇಂದ್ರ ಸರ್ಕಾರವನ್ನು ಗುರಿಯಾಗಿಸಲು ಉದಾಹರಣೆಗಳನ್ನು ಪಟ್ಟಿ ಮಾಡಿದರು.

"ದೆಹಲಿಯ ಹಸ್ತಕ್ಷೇಪವಿಲ್ಲದೆ ರಾಜ್ಯಗಳಿಗೆ ಕಾರ್ಯಕ್ರಮಗಳನ್ನು ಯೋಜಿಸಲಾಗುವುದು ಎಂದು ಪ್ರಧಾನಿ ಹೇಳಿದ್ದರು. ಆದರೆ, ಅವರು ರಾಜ್ಯದ ಮುಖ್ಯಮಂತ್ರಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ನೀಡಬಹುದಾದ ಯೋಜನಾ ಸಮಿತಿಯನ್ನು ವಿಸರ್ಜಿಸಿದರು. ಅದರ ಬದಲು, "ನೀತಿ ಆಯೋಗ"ವನ್ನು ರಚಿಸಿದರು. ನಿಜವಾಗಿಯೂ ಯಾವುದೇ ಉದ್ದೇಶವನ್ನು ಇದು ಪೂರೈಸುವುದಿಲ್ಲ ಎಂದು ಎಂ.ಕೆ ಸ್ಟಾಲಿನ್ ಹೇಳಿದರು. ಬಿಜೆಪಿ ಸ್ಥಳೀಯ ಪಕ್ಷಗಳನ್ನು ಒಡೆದು ಶಾಸಕರನ್ನು ಖರೀದಿಸುತ್ತಿದೆ ಎಂದು ಅವರು ಆರೋಪಿಸಿದರು. ಸರಕು ಮತ್ತು ಸೇವಾ ತೆರಿಗೆಯನ್ನು ಸರ್ಕಾರ ಜಾರಿಗೆ ತಂದಿರುವುದನ್ನು ಕೂಡಾ ಸ್ಟಾಲಿನ್ ಟೀಕಿಸಿದರು.

"ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಆರ್ಥಿಕ ಅಧಿಕಾರ ನೀಡುವುದಾಗಿ ಪ್ರಧಾನಿ ಹೇಳಿದ್ದರು. ಆದರೆ ಜಿಎಸ್‌ಟಿಗೆ ಪರಿಹಾರದ ಅವಧಿಯನ್ನು ಸಹ ವಿಸ್ತರಿಸಿಲ್ಲ. ರಾಜ್ಯದ ಪಾಲು ಸಹ ನಿಯಮಿತವಾಗಿ ನೀಡುತ್ತಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಜಿಎಸ್‌ಟಿಯಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟ ರಾಜ್ಯಗಳು ಐಸಿಯುನಲ್ಲಿವೆ, ”ಎಂದು ಮುಖ್ಯಮಂತ್ರಿ ವಿಷಾದ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಫೆಡರಲಿಸಂ ಕುರಿತು ಚರ್ಚಿಸಿದ ಸ್ಟಾಲಿನ್, ಬಿಜೆಪಿ ಒಂದೇ ಪಕ್ಷ, ಏಕ ನಾಯಕತ್ವ ಮತ್ತು ಏಕ ಶಕ್ತಿಯ ಏಕೈಕ ಪ್ರಧಾನಿಯತ್ತ ಸಾಗುತ್ತಿದೆ ಮತ್ತು ಅದು ಭಾರತವನ್ನು ಛಿದ್ರಗೊಳಿಸಿ ನಾಶಪಡಿಸಲಿದೆ ಎಂದು ಎಚ್ಚರಿಸಿದರು. ರಾಜ್ಯಗಳಿಗೆ ಸ್ವಾಯತ್ತತೆ ನೀಡುವ ವಿಚಾರದಲ್ಲಿ ಸರ್ಕಾರವನ್ನು ಅವರು ಒತ್ತಾಯಿಸಿದರು. ವಿರೋಧ ಪಕ್ಷದ 'ಇಂಡಿಯಾ' ಮೈತ್ರಿಯು ಗೆಲುವು ಸಾಧಿಸಿದರೆ,  ರಾಜ್ಯಗಳಿಗೆ ಖಂಡಿತವಾಗಿ ಸ್ವಾಯತ್ತತೆ ನೀಡಲಾಗುತ್ತದೆ ಎಂದು ಹೇಳಿದರು. ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ‘ಇಂಡಿಯಾ’ ಒಕ್ಕೂಟವನ್ನು ಬೆಂಬಲಿಸುವಂತೆ ಅವರು ಮತದಾರರನ್ನು ವಿನಂತಿಸಿದರು.

Follow Us:
Download App:
  • android
  • ios