ಅಫ್ಘಾನಿಸ್ತಾನ ನಿರಾಶ್ರಿತರಿಗೆ ನೆರವಾಗಿ: ಮೋದಿ ಮನವಿ!
* ಆಫ್ಘನ್ ಸಿಖ್, ಹಿಂದುಗಳಿಗೂ ನೆರವಾಗಿ: ಮೋದಿ
* ಆಫ್ಘನ್ನ ಸೋದರ, ಸೋದರಿಯರಿಗೂ ಸಹಾಯ ಹಸ್ತ ಚಾಚಿ
* ನೆರೆ ದೇಶದ ಬಿಕ್ಕಟ್ಟಿನ ಬೆನ್ನಲ್ಲೇ ಪ್ರಧಾನಿ ಉನ್ನತ ಮಟ್ಟದ ಸಭೆ
ನವದೆಹಲಿ(ಆ.18): ತಾಲಿಬಾನ್ ಭಯೋತ್ಪಾದಕರ ಹಾವಳಿಯಿಂದಾಗಿ ಅರಾಜಕತೆ ಮತ್ತು ಭಯಾನಕ ವಾತಾವರಣ ಸೃಷ್ಟಿಯಾದ ನೆರೆಯ ಆಷ್ಘಾನಿಸ್ತಾನದ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉನ್ನತ ಹಂತದ ಸಭೆ ನಡೆಸಿದರು.
ತಮ್ಮ ನೇತೃತ್ವದಲ್ಲಿ ನಡೆದ ಭದ್ರತೆ ಕುರಿತಾದ ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ ಮೋದಿ ಅವರು, ಅಷ್ಘಾನಿಸ್ತಾನದಲ್ಲಿ ನಿರಾಶ್ರಿತರಾದ ಭಾರತೀಯ ರಕ್ಷಣೆ ಜೊತೆಗೆ ಅಲ್ಲಿರುವ ಅಲ್ಪಸಂಖ್ಯಾತ ನಿರಾಶ್ರಿತರಾದ ಸಿಖ್ ಮತ್ತು ಹಿಂದೂಗಳ ನೆರವಿಗೂ ಧಾವಿಸಬೇಕು. ಅಲ್ಲದೆ ತಾಲಿಬಾನ್ ಉಗ್ರರಿಂದ ಸಂಕಷ್ಟಕ್ಕೆ ಸಿಲುಕಿದ ಅಷ್ಘಾನಿಸ್ತಾನ ಸೋದರ ಮತ್ತು ಸೋದರಿಯರಿಗೂ ನಾವು ಸಹಾಯದ ಹಸ್ತ ಚಾಚಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಭದ್ರತೆ ಕುರಿತಾದ ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹಾಗೂ ಆಷ್ಘಾನಿಸ್ತಾನ ರಾಯಭಾರಿ ರುದ್ರೇಂದ್ರ ಥಂಡನ್ ಅವರು ಇದ್ದರು.