ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಆಘಾತ
ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ದೇಶದ ದೂರಸಂಪರ್ಕ ಕಂಪನಿಗಳಿಗೆ ಸುಪ್ರೀಂ ಕೋರ್ಟ್ನಿಂದ ಮಹಾ ಹೊಡೆತ ಬಿದ್ದಿದೆ. ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ
ನವದೆಹಲಿ [ಅ.25]: ಜಿದ್ದಾಜಿದ್ದಿ ಪೈಪೋಟಿ ಎದುರಿಸುತ್ತಿರುವ ಹಾಗೂ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ದೇಶದ ದೂರಸಂಪರ್ಕ ಕಂಪನಿಗಳಿಗೆ ಸುಪ್ರೀಂ ಕೋರ್ಟ್ನಿಂದ ಮಹಾ ಹೊಡೆತ ಬಿದ್ದಿದೆ. ‘ಹೊಂದಾಯಿಸಲಾದ ನಿವ್ವಳ ಆದಾಯ’ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ನ್ಯಾಯಾಲಯ, 92 ಸಾವಿರ ಕೋಟಿ ರು. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿದೆ. ಇದಕ್ಕೆ ಬಡ್ಡಿ ಮತ್ತು ದಂಡ ಸೇರಿದರೆ ಅದು 1.40 ಲಕ್ಷ ಕೋಟಿ ರು.ವರೆಗೂ ತಲುಪಲಿದೆ ಎನ್ನಲಾಗಿದೆ.
ಇದೇ ವೇಳೆ, ಎಜಿಆರ್ ಕುರಿತು ದೂರಸಂಪರ್ಕ ಇಲಾಖೆ ರೂಪಿಸಿದ್ದ ವ್ಯಾಖ್ಯಾನವನ್ನು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಎತ್ತಿ ಹಿಡಿದಿದೆ. ಇದರಿಂದಾಗಿ ಟೆಲಿಕಾಂ ಕಂಪನಿಗಳು 92 ಸಾವಿರ ಕೋಟಿ ರು. ಪಾವತಿಸಬೇಕಾದ ಅನಿವಾರ್ಯತೆಗೆ ಸಿಲುಕಿವೆ.
ಮೊಬೈಲ್ ಇಂಟರ್ನೆಟ್ ಸ್ಪೀಡ್ ಚಾರ್ಟ್ ಪ್ರಕಟ; ಬಳಕೆದಾರನ ಪ್ರೀತಿಗೆ ಯಾರು ಪಾತ್ರ?...
ಭಾರತಿ ಏರ್ಟೆಲ್ 21,682 ಕೋಟಿ, ವೊಡಾಫೋನ್ 19,823 ಕೋಟಿ, ರಿಲಯನ್ಸ್ ಕಮ್ಯುನಿಕೇಷನ್ಸ್ 16,456 ಕೋಟಿ, ಬಿಎಸ್ಎನ್ಎಲ್ 2098 ಕೋಟಿ ಹಾಗೂ ಎಂಟಿಎನ್ಎಲ್ 2537 ಕೋಟಿ ರು. ಪಾವತಿಸಬೇಕಾಗಿದೆ.
2005ರಿಂದಲೂ ಇದ್ದ ವಿವಾದ ಇದಾಗಿತ್ತು. ನ್ಯಾಯಾಲಯದ ತೀರ್ಪಿನಿಂದ ಬೇಸರವಾಗಿದೆ. 15 ದೂರಸಂಪರ್ಕ ಕಂಪನಿಗಳಿಗೆ ಈ ತೀರ್ಪಿನ ಪರಿಣಾಮ ಬೀರುತ್ತದೆ. ಆದರೆ ಆ ಪೈಕಿ ಈಗ 2 ಕಂಪನಿಗಳು ಮಾತ್ರ ಸೇವೆ ನೀಡುತ್ತಿವೆ. ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಪುನಾಪರಿಶೀಲಿಸಬೇಕು. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಉದ್ಯಮವನ್ನು ಪಾರು ಮಾಡಲು ದಾರಿ ಹುಡುಕಬೇಕು ಎಂದು ಏರ್ಟೆಲ್ ವಕ್ತಾರರು ತಿಳಿಸಿದ್ದಾರೆ.
ಏನಿದು ಎಜಿಆರ್?: ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ನಿಶ್ಚಿತ ಠೇವಣಿಯಿಂದ ಬರುವ ಲಾಭ, ಲಾಭಾಂಶ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ಕಾರ್ಯಾಚರಣೆ ನಡೆಸುತ್ತಿರುವ ಕಂಪನಿಗಳು ತಮ್ಮ ಎಜಿಆರ್ನಲ್ಲಿ ಒಂದಷ್ಟುಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕು. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎನ್ನಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.