ಕೋವಿಡ್ನಿಂದ ಅನಾಥರಾದ ಮಕ್ಕಳ ಯೋಜನೆ ಮಾಹಿತಿ ಕೊಡಿ: ಸುಪ್ರೀಂ
* ಕೋವಿಡ್ನಿಂದ ಅನಾಥರಾದ ಮಕ್ಕಳ ಯೋಜನೆ ಮಾಹಿತಿ ಕೊಡಿ: ಸುಪ್ರೀಂ
* ಮಾಹಿತಿ ವಿನಿಮಯಕ್ಕೆ ನೋಡಲ್ ಅಧಿಕಾರಿ ನೇಮಿಸಿ
* ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ನಿರ್ದೇಶನ
ನವದೆಹಲಿ(ಜೂ.02): : ಮಹಾಮಾರಿ ಕೋವಿಡ್ನಿಂದಾಗಿ ತಂದೆ-ತಾಯಿ, ಬಂಧು ಬಳಗ ಮತ್ತು ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಕಲ್ಯಾಣಕ್ಕಾಗಿ ಕೈಗೊಳ್ಳಲಾಗಿರುವ ಯೋಜನೆಗಳ ಮಾಹಿತಿ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಅಲ್ಲದೆ ಈ ಯೋಜನೆಗಳ ಜಾರಿ ಮತ್ತು ನಿಗಾ ವಹಿಸಲು ಏನೆಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂಬುದರ ಮಾಹಿತಿಯನ್ನೂ ನೀಡಲು ಹೇಳಿದೆ.
ಚೀನಾ ಲ್ಯಾಬ್ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!
ಈ ಬಗ್ಗೆ ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಎಲ್. ನಾಗೇಶ್ವರ ರಾವ್ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠವು, ಅನಾಥ ಮಕ್ಕಳ ಮಾಹಿತಿ, ಅವರ ಗುರುತು ಮತ್ತು ಅವರ ಕಲ್ಯಾಣಕ್ಕಾಗಿ ಕೈಗೊಳ್ಳಲಾಗಿರುವ ಕ್ರಮಗಳ ವಿಸ್ತೃತ ಮಾಹಿತಿಯನ್ನು ತಮ್ಮ ಆಮಿಕಸ್ ಕ್ಯೂರಿ (ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲಹೆ ಮತ್ತು ಸೂಚನೆಗಳನ್ನು ನೀಡುವವರು) ಆಗಿರುವ ಗೌರವ್ ಅಗರ್ವಾಲ್ ಅವರಿಗೆ ಸಲ್ಲಿಸಲು ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿ ಹಂತದ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ.
ಉದ್ದಿಮೆಗಳಿಗೆ ಆಕ್ಸಿಜನ್ ನಿರ್ಬಂಧ 2 ದಿನದಲ್ಲಿ ತೆರವು ಸಾಧ್ಯತೆ!
ಕರ್ನಾಟಕ ಸೇರಿದಂತೆ ಅತಿಹೆಚ್ಚು ಅನಾಥರಾದ ಮಕ್ಕಳ ಹೊಂದಿದ 10 ರಾಜ್ಯಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಮುಂದಿನ ಸೋಮವಾರ ವಿಚಾರಣೆ ನಡೆಸುವುದಾಗಿ ಹೇಳಿದೆ.
9,346 ಮಕ್ಕಳು ಅನಾಥ:
ಈ ನಡುವೆ, ಕೊರೋನಾದಿಂದ 141 ಮಕ್ಕಳು ತಂದೆ-ತಾಯಿ ಕಳೆದುಕೊಂಡಿದ್ದಾರೆ. 4451 ಮಕ್ಕಳು ಒಬ್ಬ ಪಾಲಕರನ್ನು ಕಳೆದುಕೊಂಡಿದ್ದಾರೆ. ಇವರು ಸೇರಿ 9346 ಮಕ್ಕಳಿಗೆ ರಕ್ಷಣೆ ಬೇಕಿದೆ ಎಂದು ಮಕ್ಕಳ ಹಕ್ಕುಗಳ ಆಯೋಗವು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona